ಚಾಲುಕ್ಯರ ಕಾಲದಿಂದಲೂ ಬಾದಾಮಿ ಶ್ರೀ ಬನಶಂಕರಿ ದೇವಿಯ ಆರಾಧನೆ ನಡೆದುಕೊಂಡು ಬಂದಿದೆ. ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಬನಶಂಕರಿ ದೇವಸ್ಥಾನವು ಉತ್ತರ ಕರ್ನಾಟಕದ ಪ್ರಸಿದ್ಧ ಶಕ್ತಿಪೀಠವಾಗಿದೆ. ಲಕ್ಷಾಂತರ ಭಕ್ತರು ಇಲ್ಲಿಗೆ ಬಂದು ಬನಶಂಕರಿ ಮಾತೆಯನ್ನು ತಮ್ಮ ಕುಲದೇವತೆ ಎಂದು ಪೂಜಿಸುತ್ತಾರೆ. ಕ್ರಿ.ಶ 603 ರಲ್ಲಿ ರಾಜ ಜಗದೇಕಮಲ್ಲ III ಈ ದೇವಾಲಯವನ್ನು ನಿರ್ಮಿಸಿ, ಬನಶಂಕರಿ ದೇವಿಯ ವಿಗ್ರಹವನ್ನು ಸ್ಥಾಪಿಸಿದನು.
ಬನಶಂಕರಿ ದೇವಿಯನ್ನು ಕಲ್ಯಾಣಿ ಚಾಲುಕ್ಯ ರಾಜವಂಶದ ಕುಲದೇವತೆ ಎಂದು ಪರಿಗಣಿಸಲಾಗಿದೆ. 1750ರಲ್ಲಿ ಈ ದೇವಸ್ಥಾನವನ್ನು ಪುನಃ ನಿರ್ಮಿಸಲಾಯಿತು. ನವರಾತ್ರಿಯ ಸಂದರ್ಭದಲ್ಲಿ ಬನಶಂಕರಿ ದೇವಿಯನ್ನು ವಿಶೇಷ ಆಭರಣ ಮತ್ತು ಬಟ್ಟೆಗಳಿಂದ ಅಲಂಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಒಂಬತ್ತು ಅದ್ಭುತ ರೂಪಗಳ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ.
ಬಾದಾಮಿ ಬನಶಂಕರಿಯ ಐತಿಹಾಸಿಕ ಮಹತ್ವ
ಬಾದಾಮಿ ಬನಶಂಕರಿ ದೇವಸ್ಥಾನವು ತನ್ನದೇ ಆದ ಐತಿಹಾಸಿಕ ಹೆಜ್ಜೆಗುರುತುಗಳನ್ನು ಹೊಂದಿದೆ. ಸ್ಕಂದ ಪುರಾಣವು ಬಾದಾಮಿ ಬನಶಂಕರಿ ಚಾಲುಕ್ಯ ಮತ್ತು ನೆರೆಯ ರಾಜ್ಯಗಳ ರಾಜರ ಪೋಷಕ ದೇವತೆ ಎಂದು ಉಲ್ಲೇಖಿಸುತ್ತದೆ. ಪ್ರಾಚೀನ ಕಾಲದಲ್ಲಿ ದುರ್ಗಮಾಸುರ ಎಂಬ ಕ್ರೂರ ರಾಕ್ಷಸನು ತಿಲಕಾರಣ್ಯ ಎಂಬ ಕಾಡಿನಲ್ಲಿ ವಾಸಿಸುತ್ತಿದ್ದನು. ಅವನು ಕಾಡಿನಲ್ಲಿ ಧ್ಯಾನ ಮಾಡುವ ಸಾಧುಗಳಿಗೆ ಮತ್ತು ಹತ್ತಿರದ ಗ್ರಾಮಸ್ಥರಿಗೆ ನಿರಂತರವಾಗಿ ತೊಂದರೆ ಕೊಡುತ್ತಿದ್ದರು. ದುರ್ಗಮಾಸುರನ ಕ್ರೌರ್ಯದಿಂದ ಬೇಸತ್ತ ಋಷಿಗಳೆಲ್ಲರೂ ಸಹಾಯ ಕೋರಿ ದೇವತೆಗಳ ಬಳಿಗೆ ಬಂದರು. ಪಾರ್ವತಿ ದೇವಿಯ ರೂಪವಾದ ಆದಿಶಕ್ತಿಯು ದುರ್ಗಮಾಸುರನನ್ನು ಕೊಂದಳು.

ಅಮ್ಮನವರ ವಿವಿಧ ಹೆಸರುಗಳು
ಬನ ಎಂದರೆ ಕಾಡು, ಶಂಕರಿ ಎಂದರೆ ಪಾರ್ವತಿಯ ರೂಪ ಅಥವಾ ಶಿವನ ಶಕ್ತಿ. ಈ ಕಾರಣಕ್ಕಾಗಿ ಬನಶಂಕರಿ ಎಂದು ಹೆಸರಿಸಲಾಯಿತು. ಬನಶಂಕರಿ ಅಮ್ಮನ ಇನ್ನೊಂದು ಹೆಸರು ಶಾಕಾಂಬರಿ. ಇದರ ಹಿಂದೆ ಒಂದು ಕುತೂಹಲಕಾರಿ ಕಥೆಯೂ ಇದೆ. ಒಂದಾನೊಂದು ಕಾಲದಲ್ಲಿ ನಗರವೊಂದು ಬರಗಾಲದ ಸುಳಿಯಲ್ಲಿತ್ತು. ಅಲ್ಲಿನ ನಿವಾಸಿಗಳಿಗೆ ಜೀವನೋಪಾಯಕ್ಕೆ ಏನೂ ಉಳಿದಿರಲಿಲ್ಲ. ಇದರಿಂದ ನಾಗರಿಕರು ದೇವತೆ ಬಳಿ ಕೋರಿದರು. ಬನಶಂಕರಿ ದೇವಿಯು ತನ್ನ ಕಣ್ಣೀರಿನಿಂದ ಭೂಮಿ ತಾಯಿಯ ದಾಹವನ್ನು ನೀಗಿಸಿ ತನ್ನ ಭಕ್ತರಿಗೆ ಜೀವ ನೀಡಿದಳು. ಭಕ್ತರ ಹಸಿವು ನೀಗಿಸಲು ದೇವಿಯು ತರಕಾರಿಗಳನ್ನು ಸೃಷ್ಟಿಸಿದಳು.
ದೇವಸ್ಥಾನದ ಸುತ್ತಲಿನ ಕಾಡುಗಳಲ್ಲಿ ಇಂದಿಗೂ ತೆಂಗು, ಬಾಳೆ ಇತ್ಯಾದಿ ಮರಗಳಿರುವುದು ಕೂಡ ಇದನ್ನು ಸೂಚಿಸುತ್ತದೆ. ಈ ದಂತಕಥೆಯಿಂದಾಗಿ ದೇವಿಯನ್ನು ದೇವಿ ಶಾಕಾಂಬರಿ ಎಂದೂ ಕರೆಯುತ್ತಾರೆ. ಶಾಕಾಂಬರಿ ದೇವಿಯನ್ನು ದುರ್ಗಾ ಸಪ್ತಶತಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಭಕ್ತರು ಬನಶಂಕರಿ ದೇವಿಯನ್ನು ಬಾಳವ್ವ, ಬಾಣದವ್ವ, ಶಿರವಂತಿ, ಚೌಡಮ್ಮ, ಚೌಡೇಶ್ವರಿ, ಸಂಕವ್ವ, ವನದುರ್ಗೆ, ವನಶಂಕರಿ ಹೀಗೆ ಹಲವು ಹೆಸರುಗಳಿಂದ ಪೂಜಿಸುತ್ತಾರೆ. ದೇವಿಯು ಸಿಂಹಾರೂಢಳು. ಅಂದರೆ ಸಿಂಹವಾಹನದ ಮೇಲೆ ಏರಿದ್ದಾಳೆ.

ದೇವಾಲಯದ ವಾಸ್ತುಶಿಲ್ಪ
ದೇವಾಲಯದ ಒಳಗೆ ಕಪ್ಪು ಬಂಡೆಯಲ್ಲಿ ಕೆತ್ತಿದ ಅಮ್ಮನ ಪ್ರತಿಮೆ ಬಹಳ ಆಕರ್ಷಕವಾಗಿದೆ. ಲಕ್ಷ್ಮಿ ಮತ್ತು ಸರಸ್ವತಿಯ ಸಂಯೋಜಿತ ರೂಪದಲ್ಲಿರುವ ಬನಶಂಕರಿ ದೇವಿಯನ್ನು ಮುಖ್ಯವಾಗಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಪೂಜಿಸಲಾಗುತ್ತದೆ. ಬನಶಂಕರಿ ದೇವಿಯ ದೇವಾಲಯದ ಪ್ರಸ್ತುತ ರೂಪವನ್ನು ವಿಜಯನಗರದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮೂಲ ದೇವಾಲಯವನ್ನು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಸುತ್ತಲೂ ಎತ್ತರದ ಸಸ್ಯವರ್ಗವಿದೆ.
ದೇವಾಲಯವು ಚೌಕಾಕಾರದ ಮಂಟಪವನ್ನು ಹೊಂದಿದೆ. ದೇವಾಲಯದ ಮುಂಭಾಗದಲ್ಲಿ, ಪ್ರವೇಶ ದ್ವಾರದ ಮೇಲೆ ಎತ್ತರದ ಗೋಪುರವಿದ್ದು, ಅದರ ಮೇಲೆ ಅನೇಕ ದೇವರು ಮತ್ತು ದೇವತೆಗಳ ಶಿಲ್ಪಗಳಿವೆ. ಅನೇಕ ಪೌರಾಣಿಕ ಪಾತ್ರಗಳನ್ನೂ ಕೆತ್ತಲಾಗಿದೆ. ಗರ್ಭಗುಡಿಯ ಮುಂಭಾಗದಲ್ಲಿ ಮುಖ ಮಂಟಪ ಮತ್ತು ಅರ್ಧ ಮಂಟಪವಿದೆ. ಗರ್ಭಗುಡಿಯ ಮೇಲೆ ಶಿಖರ ಅಥವಾ ವಿಮಾನವಿದೆ. ಗರ್ಭಗುಡಿಯ ಒಳಗೆ ದೇವಿಯು ತನ್ನ ವಾಹನವಾದ ಸಿಂಹದ ಮೇಲೆ ಕುಳಿತಿದ್ದಾಳೆ ಮತ್ತು ರಾಕ್ಷಸನ ತಲೆಯಿಲ್ಲದ ಮುಂಡವನ್ನು ತನ್ನ ಪಾದಗಳ ಕೆಳಗೆ ಹಿಡಿದಿದ್ದಾಳೆ. ಎಂಟು ತೋಳುಗಳುಳ್ಳ ಬನಶಂಕರಿ ಅಮ್ಮನವರ ಕೈಯಲ್ಲಿ ತ್ರಿಶೂಲ, ಗಂಟೆ, ಡಮರು, ಖಡ್ಗ, ಗುರಾಣಿ ಮತ್ತು ರಾಕ್ಷಸ ತಲೆಗಳಿವೆ.

ತರಕಾರಿ ಹಬ್ಬ, ಬನಶಂಕರಿ ಜಾತ್ರೆ ಜನಪ್ರಿಯ
ದೇವಾಲಯದ ಮುಂಭಾಗದಲ್ಲಿ ಹರಿದ್ರಾತೀರ್ಥ ಎಂಬ ಹೆಸರಿನ ಚದರ ನೀರಿನ ತೊಟ್ಟಿ ಅಥವಾ ಕಲ್ಯಾಣಿ ಇದೆ. ಈ ಕಲ್ಯಾಣಿಗೆ ಸಂಬಂಧಿಸಿದಂತೆ ಒಂದು ವಿಶಿಷ್ಟ ಆಚರಣೆಯೂ ಇದೆ. ದೇವಿಯು ರಾಹುವಿನ ಅಚ್ಚುಮೆಚ್ಚಿನ ದೇವತೆ. ಅದಕ್ಕಾಗಿಯೇ ಭಕ್ತರು ಇಲ್ಲಿ ರಾಹುಕಾಲದಲ್ಲಿ ನಿಂಬೆ ದೀಪಗಳನ್ನು ಹಚ್ಚುತ್ತಾರೆ. ಈ ಆಚರಣೆಯ ಮೂಲಕ ರಾಹುದೋಷದಿಂದ ಮುಕ್ತಿ ಸಿಗುತ್ತದೆ ಎಂದು ನಂಬುತ್ತಾರೆ. ಈ ದೇವಾಲಯದ ವಿಶಿಷ್ಟ ಹಬ್ಬವೆಂದರೆ ಪಲ್ಲದ ಹಬ್ಬ ಅಥವಾ ತರಕಾರಿ ಹಬ್ಬ. ಹಬ್ಬದಲ್ಲಿ ಭಕ್ತರು ದೇವಿಯನ್ನು ವಿವಿಧ ತರಕಾರಿಗಳಿಂದ ಅಲಂಕರಿಸುತ್ತಾರೆ.
ಬನಶಂಕರಿ ದೇವಿಗೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡುತ್ತಾರೆ. ಈ ಆಚರಣೆಯನ್ನು ಹಲವು ದಶಕಗಳಿಂದ ನಿರಂತರವಾಗಿ ಅನುಸರಿಸಲಾಗುತ್ತಿದೆ. ಈ ಹಬ್ಬದಲ್ಲಿ ವಿವಿಧ ತರಕಾರಿಗಳನ್ನು ಬಳಸಿ ಒಟ್ಟು 108 ಬಗೆಯ ಖಾದ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಮಾಡಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ನಡೆಯುವ ಮತ್ತೊಂದು ಜನಪ್ರಿಯ ಸಾಂಸ್ಕೃತಿಕ ಕಾರ್ಯಕ್ರಮವೆಂದರೆ ಬನಶಂಕರಿ ಜಾತ್ರೆ. ಇದು 3 ವಾರಗಳ ಕಾಲ ನಡೆಯುವ ವಾರ್ಷಿಕ ಜಾತ್ರೆಯಾಗಿದೆ.
ದೇವಸ್ಥಾನ ತಲುಪುವುದು ಹೇಗೆ?
ದೇವಸ್ಥಾನವು ಪಟ್ಟಣದ ಹೊರವಲಯದಲ್ಲಿದೆಯಾದರೂ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಬಾದಾಮಿಯನ್ನು ತಲುಪಿದ ಕೂಡಲೇ ಅಲ್ಲಿಂದ ಸುಮಾರು 4 ಕಿಮೀ ದೂರದಲ್ಲಿರುವ ಬನಶಂಕರಿಗೆ ಹೋಗಬೇಕು. ಬಾದಾಮಿಗೆ ಹತ್ತಿರದ ವಿಮಾನ ನಿಲ್ದಾಣಗಳು ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳು, 110 ಕಿಮೀ ಮತ್ತು 130 ಕಿಮೀ ದೂರದಲ್ಲಿದೆ. ರೈಲು ಪ್ರಯಾಣವನ್ನು ಇಷ್ಟಪಡುವವರು ಬಾದಾಮಿಗೆ ರೈಲಿನಲ್ಲಿ ಹೋಗಬಹುದು. ಬಾದಾಮಿ ತಲುಪಿದಾಗ KSRTC ಬಸ್ಸುಗಳು ಬನಶಂಕರಿ ಕಡೆಗೆ ಹೋಗುತ್ತವೆ. ಇಲ್ಲದಿದ್ದರೆ ಆಟೋ ಅಥವಾ ಟಾಂಗಾ ಸವಾರಿ (ಕುದುರೆ ಬಂಡಿ)ಯಲ್ಲಿ ಸಹ ಹೋಗಬಹುದು.


Click it and Unblock the Notifications

















