ತಮಿಳುನಾಡಿನ ರಾಜಧಾನಿ ನಗರವಾದ ಚೆನ್ನೈ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾಗಿದೆ ಅಣ್ಣಾ ನಗರ. ಹೆಚ್ಚು ಕಡಿಮೆ ಬೆಂಗಳೂರಿನ ಜಯನಗರ ಹೇಗೋ ಅದೆ ರೀತಿಯಾಗಿದೆ ಅಣ್ಣಾ ನಗರ. ಈ ಬಡಾವಣೆಯು ವಾಸಿಸಲು ಯೋಗ್ಯವಾಗಿರುವುದಲ್ಲದೆ ಆಕರ್ಷಕ ಉದ್ಯಾನಗಳು ಹಾಗೂ ವಿಶಿಷ್ಟವಾದ ದೇವಾಲಯಗಳಿಂದ ಕೂಡಿರುವುದರಿಂದ ಭೇಟಿ ನೀಡಲು ನೆಚ್ಚಿನ ಸ್ಥಳವಾಗಿ ಕಂಡುಬರುತ್ತದೆ.
ವಿಶೇಷವೆಂದರೆ ಈ ಬಡಾವಣೆಯಲ್ಲಿರುವ ಒಂದು ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದಿದ್ದು ಪ್ರತಿನಿತ್ಯವೂ ನೂರಾರು ಜನರಿಂದ ಭೇಟಿ ನೀಡಲ್ಪಡುತ್ತದೆ. ಇದೆ ಅಯ್ಯಪ್ಪನ ದೇವಾಲಯ. ಅಯ್ಯಪ್ಪನನ್ನು ಸಾಮಾನ್ಯವಾಗಿ ಕೇರಳದಲ್ಲಿ ಬಲು ಪ್ರಮುಖವಾಗಿ ಆರಾಧಿಸಲಾಗುತ್ತದೆ. ಹರಿಹರನ ಮಗನಾಗಿ ಅಯ್ಯಪ್ಪ ಸಾಕಷ್ಟು ಪ್ರಸಿದ್ಧಿಗಳಿಸಿದ.
ಚಿತ್ರಕೃಪೆ: Rasnaboy
ಕೇರಳ ರಾಜ್ಯದಲ್ಲಿ ವಿಶೇಷವಾಗಿ ಅಯ್ಯಪ್ಪನ ದೇವಾಲಯಗಳನ್ನು ಕಾಣಬಹುದು. ಅದರಲ್ಲೂ ಪಥನಂತಿಟ್ಟ ಜಿಲ್ಲೆಯ ಶಬರಿಮಲೆಯಲ್ಲಿರುವ ಅಯ್ಯಪ್ಪನ ದೇವಾಲಯವು ಜಗದ್ವಿಖ್ಯಾತಿಯನ್ನೆ ಗಳಿಸಿದೆ. ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಕೋಟಿ ಕೋಟಿ ಜನ ಇಲ್ಲಿ ನೆರೆಯುತ್ತಾರೆ.
ಶಬರಿಮಲೆ: ಸ್ವಾಮಿಯೇ ಶರಣಂ ಅಯ್ಯಪ್ಪ
ಇನ್ನೂ ಅಯ್ಯಪ್ಪನ ದೇವಲಾಯಗಳ ರಚನೆಯೂ ಬಲು ವಿಶೇಷವಾಗಿರುತ್ತದೆ. ಹಲವಾರು ಶಾಸ್ತ್ರಗಳನನುಸರಿಸಿ ಈ ದೇವಾಲಯ ನಿರ್ಮಾಣ ಮಾಡಲಾಗುತ್ತದೆ. ಇದೆ ರೀತಿಯಾಗಿ ಚೆನ್ನೈನ ಅಣ್ಣಾನಗರದ ಈ ಅಯ್ಯಪ್ಪನ ದೇವಾಲಯವನ್ನು ಕೇರಳ ಶೈಲಿಯಲ್ಲಿ ವಿಶಿಷ್ಟವಾಗಿ ನಿರ್ಮಿಸಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.
60 ರ ದಶಕದಲ್ಲಿ ಅಣ್ಣಾನಗರವು ಒಂದು ಮಾದರಿ ಪ್ರದೇಶವಾಗಿ ಅಭಿವೃದ್ಧಿಗೊಂಡಾಗ ಅಲ್ಲಿನ ಶಾಂತಿ ಕಾಲೋನಿಯಲ್ಲಿ ಸಾಕಷ್ಟು ಕೇರಳದಿಂದ ಬಂದು ನೆಲೆಸಿದ್ದ ಅಯ್ಯಪ್ಪನ ಭಕ್ತರಿದ್ದರು. ಪ್ರತಿ ಮಕರವಿಳಕ್ಕು ಸಂದರ್ಭದಲ್ಲಿ ಅವರು ಅಯ್ಯಪ್ಪನನ್ನು ಬಲು ಭಕ್ತಿ-ಶೃದ್ಧೆಗಳಿಂದ ಪೂಜಿಸುತ್ತಿದ್ದರು.
ಚಿತ್ರಕೃಪೆ: Karthy shty
ಹೀಗೆ ಸಮಾನ ಮನಸ್ಕ ಭಕ್ತರ ಸಮೂಹವೊಂದು ರಚಿತವಾಗಿ ಅಯ್ಯಪ್ಪನ ಸೇವೆಯ ಭಾಗವಾಗಿ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುವ ಕಾರ್ಯಕೈಗೊಂಡರು. ಹೀಗೆ ಕೆಲವು ವ್ಯಕ್ತಿಗಳಿಂದ ಪ್ರಾರಂಭವಾದ ಈ ಉನ್ನತ ಕಾರ್ಯವು ಕೆಲವೆ ಸಮಯದಲ್ಲಿ ಸಾಕಷ್ಟು ಪ್ರಬುದ್ಧವಾಗಿ ಬೆಳೆದು ಅಯ್ಯಪ್ಪನ ದೇವಾಲಯ ನಿರ್ಮಾಣ ಮಾಡುವ ನಿರ್ಧಾರ ಮಾಡಲಾಯಿತು.
ಅದರಂತೆ ಎಲ್ಲ ಸದಸ್ಯರು ತಮ್ಮ ತಮ್ಮ ಸ್ವಂತ ಪ್ರಯತ್ನ ಹಾಗೂ ಖರ್ಚುಗಳಿಂದ ಪ್ರಸ್ತುತ ದೇವಾಲಯವಿರುವ ಸ್ಥಳವನ್ನು ತಮಿಳುನಾಡು ಸರ್ಕಾರದಿಂದ ಪಡೆಯಲು ಸಫಲರಾದರು. ಮೊದ ಮೊದಲು ತಾತ್ಕಾಲಿಕ ಶೆಡ್ ಇರುವ ದೇವಾಲಯ ನಿರ್ಮಿಸಲಾಯಿತಾದರೂ ಮುಂದೆ ಕಾಲ ಕ್ರಮೇಣ ದೇವಾಲಯಕ್ಕೆ ಬಂದ ದೇಣಿಗೆಗಳಿಂದ ಅದ್ಭುತವಾದ ಅಯ್ಯಪ್ಪನ ದೇವಾಲಯವನ್ನು ನಿರ್ಮಿಸಲಾಯಿತು.
ಚಿತ್ರಕೃಪೆ: Rasnaboy
ಇಲ್ಲಿ ಪ್ರಧಾನ ದೇವತೆಯಾಗಿ ಅಯ್ಯಪ್ಪ ನೆಲೆಸಿದ್ದರೆ ಸಹ ದೇವತೆಗಳಾಗಿ ಮುರುಗನ್, ಗಣೇಶ, ಸುಬ್ರಹ್ಮಣ್ಯ ಹಾಗೂ ದುರ್ಗಾ ದೇವಿಯ ಸನ್ನಿಧಾನಗಳೂ ಇವೆ. ಅಲ್ಲದೆ ನವಗೃಹ ದೇವಾಲಯವನ್ನೂ ಸಹ ಇಲ್ಲಿ ನಿರ್ಮಿಸಲಾಗಿದೆ. ದಿನಕ್ಕೆ ಆರು ಬಾರಿ ವಿಶೇಷವಾಗಿ ಕೇರಳದ ನಂಬೂದಿರಿ ಅರ್ಚಕರಿಂದ ಶಾಸ್ತ್ರೋಕ್ತವಾಗಿ ಸ್ವಾಮಿಗೆ ಅರ್ಚೆನೆ, ಪೂಜಾದಿಗಳನ್ನು ಸಲ್ಲಿಸಲಾಗುತ್ತದೆ.
ಮೈಲಾಪುರದ ಕಾಪಾಲೀಶ್ವರನ ಸನ್ನಿಧಿ
ಹಲವಾರು ವಿಶೇಷ ಅರಚನೆಗಳು, ಪೂಜೆಗಳು ಹಾಗೂ ಹೋಮ ಹವನಾದಿಗಳ ಸೇವೆಗಳನ್ನು ಭಕ್ತಾದಿಗಳು ಇಲ್ಲಿ ಸಲ್ಲಿಸಬಹುದು. ಅದಕ್ಕಾಗಿ ಮುಂಚಿತವಾಗಿಯೆ ಅಯ್ಯಪ್ಪ ಸೇವಾ ಸಮಾಜವನ್ನು ಸಮ್ಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು. ಕೇರಳದ ಸಾಂಸ್ಕೃತಿಕ ಪ್ರಭಾವ ಬೀರುವ ವಿಶೇಷ ದೇವಾಲಯವಾಗಿ ಅಣ್ಣಾನಗರದ ಅಯ್ಯಪ್ಪ ಎಲ್ಲರನ್ನು ಹರಸುತ್ತಿದ್ದಾನೆ.