Search
  • Follow NativePlanet
Share
» »ಶ್! ಮಾತನಾಡಬಾರದು, ಧ್ಯಾನ ಮಾಡಿ...

ಶ್! ಮಾತನಾಡಬಾರದು, ಧ್ಯಾನ ಮಾಡಿ...

By Divya Pandit

ಜೀವನದಲ್ಲಿ ದುಃಖ ಇರಲಿ, ಸಂತೋಷವೇ ಇರಲಿ, ಮನಸ್ಸು ಮಾತ್ರ ಆಗಾಗ ಮೌನವಾಗಿರಲು ಬಯಸುತ್ತದೆ. ಆದರೆ ನಮ್ಮ ಗಡಿಬಿಡಿಯ ದಿನಚರಿಯಲ್ಲಿ ಮನಸ್ಸಿನ ಮಾತು ಲೆಕ್ಕಕ್ಕೇ ಬರುವುದಿಲ್ಲ. ಕೆಲವೊಮ್ಮೆ ಮೌನವಾಗಿರಬೇಕೆಂದು ದೃಢ ಸಂಕಲ್ಪ ಮಾಡಿಕೊಂಡರು ಆಗುವುದಿಲ್ಲ. ನಿಜ, ಮನಸ್ಸಿಗೂ ಸ್ವಲ್ಪ ಸಾಂತ್ವನ ನೀಡಬಹುದಾದಂತಹ ಸ್ಥಳವಿದೆ. ಅದೆಲ್ಲಿ ಅಂತೀರ..? ಅಷ್ಟೇನೂ ದೂರವಲ್ಲ. ಬೆಂಗಳೂರಿನಲ್ಲೇ ಇದೆ. ಬೆಳಗ್ಗೆ ಹೋದರೆ ಸಂಜೆಯವರೆಗೂ ಅಲ್ಲೇ ಸಮಯ ಕಳೆಯಬಹುದು.

ಪಿರಾಮಿಡ್ ವ್ಯಾಲಿ

ಪಿರಾಮಿಡ್ ವ್ಯಾಲಿ

ಇದೊಂದು ಅಂತಾರಾಷ್ಟ್ರೀಯ ಧ್ಯಾನ ಮಂದಿರ. ಸುಮಾರು 5000 ಮಂದಿ ಒಮ್ಮೆಲೆ ಕುಳಿತು ಧ್ಯಾನದಲ್ಲಿ ಲೀನರಾಗಬಹುದು. ಈ ವ್ಯಾಲಿಯಲ್ಲಿ ಮೌನಕ್ಕೆ ಪ್ರತೀಕವಾದ ಬುದ್ಧನ ಮೂರ್ತಿಯನ್ನು ಇಡಲಾಗಿದೆ. ಏಷ್ಯಾದಲ್ಲಿ ಇರುವ ಅತ್ಯಂತ ದೊಡ್ಡ ಪಿರಾಮಿಡ್ ವ್ಯಾಲಿ ಎಂಬ ಹೆಗ್ಗಳಿಕೆ ಇದರದ್ದು. ಪಿರಾಮಿಡ್ ಆಕೃತಿಯಲ್ಲೇ ನಿರ್ಮಿಸಲಾದ ಈ ಧ್ಯಾನ ಮಂದಿರ 101 ಅಡಿ ಎತ್ತರವನ್ನು ಹೊಂದಿದೆ. ಜಿಝಾ ಪಿರಾಮಿಡ್ ಸಿದ್ಧಾಂತ ಆಧರಿಸಿಯೇ ಈ ಪಿರಾಮಿಡ್‍ಅನ್ನು ನಿರ್ಮಿಸಲಾಗಿದೆ. ಪಿರಾಮಿಡ್‍ನ ಮಧ್ಯ ಭಾಗದಲ್ಲಿ ರಾಜಾ ಸೀಟ್ (ಕಿಂಗ್ಸ್ ಚೇಂಬರ್) ಮಾಡಲಾಗಿದೆ. ಇದರ ಮೇಲೆ ಕುಳಿತು ಸಹ ಧ್ಯಾನ ಮಾಡಬಹುದು.

ಪಿರಾಮಿಡ್ ಪರಿಸರ

ಪಿರಾಮಿಡ್ ಪರಿಸರ

ಬೆಂಗಳೂರಿನ 7 ಅದ್ಭುತದಲ್ಲಿ ಒಂದಾದ ಈ ಪಿರಾಮಿಡ್ ವ್ಯಾಲಿ ಸುತ್ತಲೂ ಹಸಿರು ತೋಟಗಳಿಂದ ಕೂಡಿದೆ. ನಗರ ಪ್ರದೇಶದಿಂದ ಬಹಳ ಒಳ ಭಾಗದಲ್ಲಿರುವುದರಿಂದ ಧ್ಯಾನ ಮಂದಿರದ ಒಳಭಾಗದಲ್ಲಿ ಇರುವಷ್ಟೇ ಮೌನವನ್ನು ಹೊರಭಾಗದಲ್ಲೂ ಕಾಣಬಹುದು. ಹತ್ತಿರದಲ್ಲೇ ಇರುವ ಚಿಕ್ಕ ಹೊಳೆ ಮತ್ತು ಕೆರೆ ಇದರ ಸೌಂದರ್ಯಕ್ಕೊಂದು ಕಿರೀಟ ಇದ್ದಂತೆ.

ಪಿರಾಮಿಡ್ ಆಕರ್ಷಣೆ

ಪಿರಾಮಿಡ್ ಆಕರ್ಷಣೆ

ಪಿರಾಮಿಡ್‍ನ ಒಳಗೆ ಕಾಲಿಡುತ್ತಿದ್ದಂತೆ ಕಮಲದ ಮೇಲೆ ಧ್ಯಾನ ಮಗ್ನನಾದ ಬುದ್ಧನನ್ನು ಕಾಣಬಹುದು. ಆ ಮೂರ್ತಿಯನ್ನು ನೋಡುತ್ತಿದ್ದರೆ ನಾವಿಲ್ಲಿ ಶಾಂತಿಯನ್ನು ಕಾಪಾಡಬೇಕು ಎನ್ನುವ ಸಂದೇಶ ನಮ್ಮ ಮನಸ್ಸಿಗೆ ರವಾನೆ ಆಗುತ್ತದೆ. ಮಂದಿರದ ಒಳಭಾಗದಲ್ಲೂ ಕುಳಿತಿರುವ ಬುದ್ಧ ಹಾಗೂ ಮಲಗಿರುವ ಬುದ್ಧನ ಮೂರ್ತಿಯನ್ನು ನೋಡಬಹುದು. ಪಿರಾಮಿಡ್‍ನ ನೆಲ ಮಾಳಿಗೆಯಲ್ಲಿ ವಿವಿಧ ವಿಚಾರವನ್ನು ಒಳಗೊಂಡ ಸಿದ್ಧಾಂತ ಪುಸ್ತಕ ಮಳಿಗೆ ಹಾಗೂ ವಿವಿಧ ವಿನ್ಯಾಸದಲ್ಲಿ ಕೆತ್ತಲಾದ ಮೂರ್ತಿ ಚಿತ್ರಗಳನ್ನು ಕಣ್ತುಂಬಿಸಿಕೊಳ್ಳಬಹುದು. ಇಲ್ಲೇ ಹತ್ತಿರದಲ್ಲಿ ಒಂದು ಚಿಕ್ಕ ಶಿವನ ದೇಗುಲ ಇರುವುದು ವಿಶೇಷ.

ಇಲ್ಲಿಯ ವಿಶೇಷ

ಇಲ್ಲಿಯ ವಿಶೇಷ

ಪಿರಾಮಿಡ್‍ನ ಸುತ್ತ ಇರುವ ಹೂದೋಟಗಳ ಮಧ್ಯೆ ಧ್ವನಿವರ್ಧಕಗಳನ್ನು ಇಡಲಾಗಿದೆ. ಪ್ರತಿದಿನ ಮುಂಜಾನೆ ಹಾಗೂ ಮುಸ್ಸಂಜೆ ಹೊತ್ತಿನಲ್ಲಿ ಕೊಳಲು ನಾದವನ್ನು ಹಾಕುತ್ತಾರೆ. ಮೆಲು ಧ್ವನಿಯಲ್ಲಿ ನುಡಿಸುವ ಕೊಳಲು ವಾದನವನ್ನು ಕೇಳುತ್ತಿದ್ದರೆ ಮನಸ್ಸು ಹಗುರವಾಗುವುದರಲ್ಲಿ ಸಂದೇಹವಿಲ್ಲ. ಸಂಜೆ ಸಮಯದಲ್ಲಿ ವಿದ್ಯುತ್ ಬೆಳಕಿನಲ್ಲಿ ಕಾಣುವ ವ್ಯಾಲಿಯ ಸೌಂದರ್ಯ ಕಣ್ಮನ ಸೆಳೆಯುತ್ತದೆ.

ನಮ್ಮ ಅನುಕೂಲಕ್ಕೆ

ನಮ್ಮ ಅನುಕೂಲಕ್ಕೆ

ಇಲ್ಲಿ ಯಾವುದೇ ಪ್ರವೇಶ ಶುಲ್ಕವಿಲ್ಲ. ವಾಹನ ನಿಲುಗಡೆಗೂ ಸ್ಥಳ ವ್ಯವಸ್ಥೆಯಿದೆ. ಪಿರಾಮಿಡ್ ತೋಟದ ಮಧ್ಯೆಯೇ ಒಂದು ಹೊಟೇಲ್ ಇದೆ. ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ವಿಶೇಷ ಶೌಚಾಲಯವೂ ಇದೆ. ತೋಟದಲ್ಲಿ ದಿನವಿಡೀ ಕುಳಿತು ವಿಶ್ರಮಿಸಬಹುದು. ತಂಪಾದ ಗಾಳಿ, ನಿಶ್ಯಬ್ದದ ಪರಿಸರ ಎಲ್ಲವೂ ನಮಗಾಗಿಯೇ ಮಾಡಿದಂತಿದೆ.

ಹೋಗುವ ದಾರಿ

ಹೋಗುವ ದಾರಿ

ಬೆಂಗಳೂರಿನ ಬನಶಂಕರಿ ದೇಗುಲದಿಂದ 30 ಕಿ.ಮೀ. ದೂರದಲ್ಲಿದೆ. ಹೊರಹಳ್ಳಿಗಿಂತ 4 ಕಿ.ಮೀ. ಮುಂಚೆ, ಕನಕಪುರ ರಸ್ತೆ ಮಾರ್ಗದಲ್ಲಿ ಹೋದರೆ ಕೆಬ್ಬೆದೊಡ್ಡ ಬಸ್ ನಿಲ್ದಾಣದ ನಂತರ 1.2 ಕಿ.ಮೀ. ದೂರದಲ್ಲಿ ಪಿರಾಮಿಡ್ ವ್ಯಾಲಿ ಸಿಗುತ್ತದೆ.

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X