ಗಿಡ-ಮರಗಳ ತುಂಬಾ ಹೂಗಳ ರಾಶಿ, ಕಿವಿಗೆ ಇಂಪಾದ ಹಕ್ಕಿಗಳ ಕಲರವ, ಅಲ್ಲಲ್ಲಿ ಜಿಂಕೆಗಳ ಓಡಾಟ, ಸುತ್ತಲು ಕಣಿವೆಗಳು, ನಮ್ಮ ಜೊತೆ ಜೊತೆಗೆ ಬರುವ ಮೋಡದ ಸಾಲು... ಇವೆಲ್ಲವೂ ನೋಡಲು ಸಿಗುವುದು ಹಾರ್ಸ್ಲೆ ಬೆಟ್ಟದ ಮೇಲೆ. ಯಾವುದೇ ಮಾಲಿನ್ಯ ವಿಲ್ಲದೆ, ಮುಗ್ಧ ಹಸಿರು ಸಿರಿಯಿಂದ ಕಂಗೊಳಿಸುವ ಈ ಗಿರಿಧಾಮ ಒಂದು ದಿನದ ಪ್ರವಾಸಕ್ಕೆ ಸೂಕ್ತ ತಾಣ.
ಬೆಂಗಳೂರಿನಿಂದ ಹೊಸಕೋಟೆ-ಚಿಂತಾಮಣಿ ಮಾರ್ಗವಾಗಿ ಹೋದರೆ ಕೇವಲ 144.2 ಕಿ.ಮೀ. ದೂರವಷ್ಟೆ. 3-4 ತಾಸುಗಳ ಪ್ರಯಾಣ ಬೆಳೆಸಬೇಕಾದ ಈ ತಾಣಕ್ಕೆ ಬೈಕ್ ರೈಡಿಂಗ್ ಮೂಲಕವೂ ತಲುಪಬಹುದು. ರಸ್ತೆ ಮಾರ್ಗವು ಉತ್ತಮವಾಗಿರುವುದರಿಂದ ಯಾವುದೇ ಅಡೆ-ತಡೆ ಇಲ್ಲದೆ ಪ್ರಯಾಣ ಸುಖಕರವಾಗಿರುತ್ತದೆ.

PC: flickr.com
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲೇ ತಾಲೂಕಿನಲ್ಲಿ ಇರುವ ಈ ತಾಣ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಇದನ್ನು ಸ್ಥಳೀಯರು ಯೆನುಗು ಮಲ್ಲಮ ಕೊಂಡ ಎಂದು ಕರೆಯುತ್ತಾರೆ. ಇಲ್ಲಿ ಸದಾ ತಂಪು ವಾತಾವರಣ, ಉತ್ತಮ ಆಹಾರ ವ್ಯವಸ್ಥೆಯ ಸೌಲಭ್ಯ ಇರುವುದರಿಂದ ಪ್ರವಾಸಿಗರಿಗೊಂದು ಆಕರ್ಷಣೀಯ ತಾಣವಾಗಿದೆ. ಆಂಧ್ರ ಊಟಿ ಎಂತಲೂ ಕರೆಯಲ್ಪಡುವ ಈ ತಾಣದಲ್ಲಿ ಕಾಲಕ್ಕೆ ಅನುಗುಣವಾಗಿ 18 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ.

PC: flickr.com
ಹಾರ್ಸ್ಲೆ ಎನ್ನುವುದು ಬ್ರಿಟೀಷ್ ಅಧಿಕಾರಿಯೊಬ್ಬರ ಹೆಸರು. ಇವರು ಬೇಸಿಗೆ ಕಾಲದಲ್ಲಿ ತಂಪಾದ ತಾಣವನ್ನು ಹುಡುಕಿ ಹೊರಟರು. ಆ ಸಂದರ್ಭದಲ್ಲಿ ಅವರಿಗೆ ಸಿಕ್ಕಿದ್ದು ಈ ತಂಪಾದ ಗಿರಿಧಾಮ. ಈ ಹಿನ್ನೆಲೆಯಲ್ಲೇ ಹಾರ್ಸ್ಲೆ ಎನ್ನುವ ಹೆಸರು ಬಂತು ಎಂದು ಹೇಳಲಾಗುತ್ತದೆ. ಸಮುದ್ರ ಮಟ್ಟದಿಂದ 1,265 ಕಿ.ಮೀ. ಎತ್ತರದಲ್ಲಿರುವ ಈ ಹಾರ್ಸ್ಲೆ ಗಿರಿಧಾಮವನ್ನು ಹತ್ತುವುದೇ ಒಂದು ಸಾಹಸ.
ಚೆಂಚು ಬುಡಕಟ್ಟು ಜನರು ಇಲ್ಲಿ ವಾಸವಿದ್ದಾರೆ. ಇವರಲ್ಲಿ ಕೆಲವರು ಚಿಕ್ಕ-ಚಿಕ್ಕ ಹೋಟೆಲ್ಗಳನ್ನು ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವರು ಬೆಟ್ಟಹತ್ತಲು ಜೀಪ್ಗಳನ್ನು ಇಟ್ಟುಕೊಂಡು ಪ್ರವಾಸಿಗರಿಗೆ ಸಹಾಯಕರಾಗಿದ್ದಾರೆ. ಈ ಗಿರಿಧಾಮದಲ್ಲಿ ನೀಲಗಿರಿ, ಜಕರಂದ, ಬಾದಾಮಿ, ಗುಲ್ ಮೋಹರ್, ರೀಟಾ, ಸೀಗೆಕಾಯಿ, ನೆಲ್ಲಿಕಾಯಿ, ಲಾರೆಲ್, ಮಹಾಗನಿ, ಬಂಬೂ ಹಾಗೂ ಶ್ರೀಗಂಧ ಮರಗಳಿರುವುದನ್ನು ಕಾಣಬಹುದು.

PC: flickr.com
ಈ ಗಿರಿಧಾಮದಿಂದ 87 ಕಿ.ಮೀ. ದೂರದಲ್ಲಿ ಕೌಂಡಿನ್ಯ ವನ್ಯಮೃಗ ಸಂರಕ್ಷಣಾ ತಾಣವಿದೆ. ಅಲ್ಲಿ ಪ್ರವಾಸಿಗರಿಗೆ ಚಾರಣ ಮಾಡಲು ಅನುಕೂಲಕರ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಕಾಡು ಬೆಕ್ಕು, ಜಿಂಕೆ, ನರಿ, ಆನೆಗಳಂತಹ ವನ್ಯ ಪ್ರಾಣಿಗಳು ನೋಡಲು ಸಿಗುತ್ತವೆ. ಹಾರ್ಸ್ಲೆ ಹತ್ತಿರ ಇರುವ ಪ್ರವಾಸಿ ತಾಣವೆಂದರೆ ಮಲ್ಲಮ್ಮ ದೇಗುಲ, ವಿಂಡ್ ರಾಕ್ಸ್, ಹಾರ್ಸ್ಲೆ ಹಿಲ್ಸ್ ಪ್ರಾಣಿ ಸಂಗ್ರಹಾಲಯ, ಗಂಗೋತ್ರಿ ಲೇಕ್ ಹಾಗೂ ಚೆನ್ನಕೇಶವ ದೇಗುಲಗಳನ್ನು ನೋಡಬಹುದು.
ಸುಗಮ ಪ್ರಯಾಣಕ್ಕೆ ಮಾರ್ಗ ವಿವರ
ಬೆಂಗಳೂರು-ಹೊಸಕೋಟೆ-ಚಿಂತಾಮಣಿ-ಮದನಪಲ್ಲೇ- ಹಾರ್ಸ್ಲೆಬೆಟ್ಟ


Click it and Unblock the Notifications
















