ಉತ್ತುಂಗದಲ್ಲಿರುವ ಬೆಟ್ಟವನ್ನು ಹತ್ತಲು ಬಯಸುವವರು, ಟೀ ತೋಟದ ಹಸಿರು ಸಿರಿಯಲ್ಲಿ ಮೈ ಮರೆಯಬೇಕೆಂದುಕೊಂಡವರು, ಪಕೃತಿಯ ಮಡಿಲಲ್ಲಿ ತಾನೊಬ್ಬನಾಗಿ ಅದರ ಸೌಂದರ್ಯವನ್ನು ಸವಿಯುವ ಆಸೆ ಇದ್ದವರು ನೋಡಲೇಬೇಕಾದ ಒಂದು ಸುಂದರ ತಾಣ ವಯನಾಡು. ನಮ್ಮ ದೇಶದಲ್ಲಿರುವ ಅತ್ಯಂತ ಸುಂದರ ತಾಣಗಳಲ್ಲಿ ಇದು ಒಂದು. ಈ ಭವ್ಯ ತಾಣಕ್ಕೆ ಸ್ನೇಹಿತರನ್ನೊಡಗೂಡಿ ಒಮ್ಮೆ ಭೇಟಿ ನೀಡಲೇಬೇಕು ಎನ್ನುವ ನಿರ್ಧಾರಕ್ಕೆ ಬಂದಿದೆದ್ದೆ...

PC: wikimedia.org
ಬಯಕೆಯಂತೆ ಆಗ ಮಾತ್ರ ಮಳೆಗಾಲದ ಆರಂಭ. ಬೆಂಗಳೂರು ಅಲ್ಲಲ್ಲಿ ಮಳೆ ನೀರಿನಲ್ಲಿ ನೆನೆಯಲು ಆರಂಭಿಸಿತ್ತು ಅಷ್ಟೆ. ಟ್ರಾಫಿಕ್ ಕಿರಿಕಿರಿ, ಕೆಲಸದ ಜಂಜಾಟದಿಂದ ಎರಡು ದಿನದ ಮಟ್ಟಿಗೆ ಪಾರಾರಿಯಾಗಿ ಬಿಟ್ಟೆ. ಶುಕ್ರವಾರದ ಮುಂಜಾನೆ ಹೊರಟು, ಭಾನುವಾರದ ಸಂಜೆ ಮನೆಗೆ ಬಂದುಬಿಡುವ ತಯಾರಿಯಾಗಿತ್ತು.
ಮಾರ್ಗದ ವಿವರ
ಬೆಂಗಳೂರು-ರಾಮನಗರ-ಮೈಸೂರು-ಬಂಡೀಪುರ-ಗುಡಲೂರ್-ವೈನಾಡ್

ಮೊದಲ ದಿನ
ಶುಕ್ರವಾರ ಮುಂಜಾನೆ 5.30ಕ್ಕೆ ನಾನು ನನ್ನ ಸ್ನೇಹಿತರನ್ನು ಒಡಗೂಡಿ ವಯನಾಡು ಸೌಂದರ್ಯ ನೋಡಲು ಹೊರಟೆ. ಮುಂಜಾನೆಯಿಂದ ಆರಂಭವಾದ ನಮ್ಮ ಪಯಣದ ಮೊದಲ ನಿಲ್ದಾಣ ಹೊಟ್ಟೆಯನ್ನು ತಂಪು ಮಾಡಿಕೊಳ್ಳುವುದಾಗಿತ್ತು. ಅದಕ್ಕಾಗಿ ರಾಮನಗರದ ಹೋಟೆಲ್ ಒಂದರಲ್ಲಿ ತಿಂಡಿಯನ್ನು ಮುಗಿಸಿ 5-10 ನಿಮಿಷ ಅಲ್ಲೇ ಅಡ್ಡಾಡಿ ನಂತರ ಮತ್ತೆ ನಮ್ಮ ಕಾರ್ ಹತ್ತಿ ಕುಳಿತೆವು. ಅಲ್ಲಿಂದ ಮುಂದೆ ಹೋಗುವುದು ರಾಜರಾಳಿದ ನಾಡು ಮೈಸೂರು ಮಾರ್ಗದಲ್ಲಿ ತೆರಳುವುದಾಗಿತ್ತು. ಆಗಷ್ಟೇ ನಿರ್ಮಾಣಗೊಂಡ ರಿಂಗ್ ರೋಡ್ ಮೇಲೆ ಹೋದೆವು. ಸಿಟಿಯ ಒಳಗೆ ಸಿಗುವ ಟ್ರಾಫಿಕ್ನಿಂದ ಮುಕ್ತರಾಗಿದ್ದರಿಂದ ಒಂದೇ ಸಮನೆ ಬಂಡೀಪುರ ನ್ಯಾಷನಲ್ ಪಾರ್ಕ್ ಹತ್ತಿರ ಬಂದೆವು.
ಅಲ್ಲಿ ಪ್ರಾಣಿಗಳ ಓಡಾಟಗಳು ಇರುವುದನ್ನು ಅರಿತ ನಾವು ಸ್ವಲ್ಪ ನಿಧಾನವಾಗಿ ಹೋಗೋಣ ಎನ್ನುವ ನಿರ್ಧಾರಕ್ಕೆ ಬಂದೆವು. ದಾರಿಯಲ್ಲಿ ಯಾವುದಾದರೂ ವನ್ಯ ಪ್ರಾಣಿ ಸಿಗಬೇಕಿತ್ತು ಎನ್ನುವ ಮನಸ್ಸಾಗುತ್ತಿತ್ತು. ನಮ್ಮ ಬಯಕೆಗೆ ಮೊದಲು ಸ್ವಾಗತಿಸಿದ್ದು ನಮ್ಮ ಪೂರ್ವಜರಾದ ಮಂಗಗಳು. ಹಾಗೆ ಸಾಗುತ್ತಿದ್ದಂತೆ ಜಿಂಕೆಗಳ ದಂಡು, ಕುಣಿಯುತ್ತಿರುವ ನವಿಲು ಮತ್ತು ನನ್ನ ಪ್ರೀತಿಯ ಆನೆಯನ್ನು ನೋಡಿದೆವು.

PC: wikimedia.org
ಈ ರಸ್ತೆಯಲ್ಲಿ ಹೋಗುವಾಗ ವಾಹನದಿಂದ ಇಳಿದು ಪ್ರಾಣಿಗಳ ಫೋಟೋ ಕ್ಲಿಕ್ಕಿಸುವುದು ನಿಷೇಧಿತ ವಿಚಾರವಾದ್ದರಿಂದ ನಾವು ನಿಧಾನವಾಗಿಯೇ ಮುಂದೆ ಸಾಗಿದೆವು. ಇಲ್ಲವಾದರೆ ವನ್ಯ ಜೀವಿಗಳು ನಮ್ಮ ಮೇಲೆ ಎರಗುವ ಸಾಧ್ಯತೆಗಳಿರುತ್ತವೆ ಎನ್ನುವುದು ನಾವು ಮನಗಂಡಿದ್ದೆವು. ಹಾಗೇ ಬಂಡೀಪುರದಿಂದ ಮುಂದೆ ಸಾಗಿ ಬರುತ್ತಿದ್ದಂತೆಯೇ ಗುಡಲೂರು ಪ್ರವೇಶಿಸಿದೆವು.

PC: wikipedia.org
ಆ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆಯೇ ಏನೋ ಒಂದು ರೀತಿಯ ಝೇಂಕಾರ ಮನದಲ್ಲಿ. ಇನ್ನೇನು ವಯನಾಡಿಗೆ ಬಂದು ಬಿಡುತ್ತಿದ್ದೇವೆ ಎನ್ನುವ ಖುಷಿ... ಹಾಗೆ ಮುಂದೆ ಸಾಗಿ ಬರುತ್ತಿದ್ದಂತೆ ನಮ್ಮ ಫೋನ್ಗಳಿಗೆ ಮೆಸೇಜ್ ಬರಲು ಆರಂಭಿಸಿತು. ನೀವು ಕೇರಳಕ್ಕೆ ಪ್ರವೇಶಿಸುತ್ತಿದ್ದೀರಿ ಎನ್ನುವ ಸೂಚನೆ. ಮೊಬೈಲ್ನಲ್ಲಿ ಒಂದು ಸಂದೇಶವಾದರೆ, ಸುತ್ತಲು ಪರಿಸರದ ಭಿನ್ನತೆಯೂ ಇನ್ನೊಂದು ಅರಿವನ್ನು ಮೂಡಿಸಿತು.

PC: wikimedia.org
ಒಣ ಪ್ರದೇಶದಿಂದ ಒಂದೇ ಸಮನೆ ಹಚ್ಚ ಹಸಿರಿನ ಪರಿಸರ. ವಯನಾಡಿಗೆ ಹೋಗಿ ಇಳಿಯುತ್ತಿದ್ದಂತೆ ತುಂತುರು ಹನಿಯ ಮಳೆ ನಮ್ಮನ್ನು ಸ್ವಾಗತಿಸಿತ್ತು. ಇಲ್ಲಿಗೆ ಬರುವ ಮೊದಲೇ ರೆಸಾರ್ಟ್ ಒಂದರಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಹಾಗಾಗಿ ಯಾವುದೇ ತೊಂದರೆ ಇಲ್ಲದೆ ಬ್ಯಾಗ್ಗಳನ್ನು ರೆಸಾರ್ಟ್ನಲ್ಲಿ ಇಟ್ಟು, ಫ್ರೆಶ್ಅಪ್ ಆಗಿ ಕೇರಳ ಶೈಲಿಯ ಊಟವನ್ನು ಸವಿದೆವು. ನಂತರ ಅಲ್ಲಿಂದ ಪೂಕುಡೆ ಲೇಕ್ಗೆ ಬಂದೆವು. ಸುಂದರವಾದ ಈ ಲೇಕ್ ಪ್ರವಾಸಿಗರಿಗೊಂದು ಭವ್ಯ ತಾಣ. ಯಾತ್ರಿಕರು ಇಲ್ಲಿ ಬೋಟಿಂಗ್ ಮಾಡುವ ಅವಕಾಶ ಇರುವುದರಿಂದ ಸಂಜೆಯವರೆಗೆ ಕಾಲಕಳೆಯಬಹುದು. ನಂತರ ಚೈನ್ ಟ್ರೀ ನೋಡಿಕೊಂಡು ಸ್ವಲ್ಪ ಸಮಯ ಅಲ್ಲಿ ಅಡ್ಡಾಡಿ, ಪುನಃ ರೆಸಾರ್ಟ್ಗೆ ಹಿಂತಿರುಗಿದೆವು.

PC: wikimedia.org
ಎರಡನೇ ದಿನ
ಮರುದಿನ ಬೆಳಗ್ಗೆ ಕೇರಳದ ವಿಶೇಷ ತಿಂಡಿ ಹಾಟ್ ಪುಟ್ಟು ಮತ್ತು ಕಡಲಾ ಕರ್ರಿಯನ್ನು ತಿಂದು ಎಡಕಲ್ಲು ಬೆಟ್ಟಕ್ಕೆ ಹೋದೆವು. ಬಹಳ ಎತ್ತರದಲ್ಲಿರುವ ಈ ಬೆಟ್ಟ ವಯನಾಡಿನ ಒಂದು ವಿಶೇಷವಾದ ಸ್ಥಳ. ಈ ಬೆಟ್ಟ ಹತ್ತಿದ ಮೇಲೆ ಒಂದು ಗುಹೆ ಸಿಗುತ್ತದೆ. ವಿಸ್ಮಯವಾದ ಈ ಗುಹೆಯಲ್ಲಿ ಅನೇಕ ಚಲನಚಿತ್ರಗಳ ಚಿತ್ರೀಕರಣ ನಡೆದಿತ್ತು ಎಂದು ಹೇಳುತ್ತಾರೆ. ಎರಡು ಕಲ್ಲುಗಳ ವಿಭಜನೆಯಿಂದ ಉಂಟಾದ ಈ ಗುಹೆ, ತನ್ನದೇ ಆದ ಇತಿಹಾಸವನ್ನು ಹೊಂದಿದೆ.

PC: wikimedia.org
ಗುಹೆಯ ವಿಸ್ಮಯ ತಿಳಿದ ನಂತರ ಬಂದಿದ್ದು ಬಾನಸುರ ಸಾಗರ ಅಣೆಕಟ್ಟಿಗೆ. ಕಬಿನಿ ನದಿಗೆ ಕಟ್ಟಲಾದ ಈ ಅಣೆಕಟ್ಟು ಭಾರತದಲ್ಲೇ ಅತಿ ದೊಡ್ಡದು ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ಅಣೆಕಟ್ಟು ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಇಲ್ಲಿಯೂ ಸಹ ಬೋಟ್, ಸ್ಪೀಡ್ ಬೋಟ್ಗಳಲ್ಲಿ ಸಂಚರಿಸಬಹುದು. ಹೀಗೆ ಸಂಚರಿಸುವಾಗ, ಅಲ್ಲಿರುವ ಚೇಂಬ್ರಾ ಪೀಕ್ನ ಸೌಂದರ್ಯವನ್ನೂ ಕಣ್ತುಂಬಿಕೊಳ್ಳಬಹುದು.

PC: wikimedia.org
ಅಲ್ಲಿಂದ ನಂತರ ಚುರಮ್ ಘಟ್ಟಕ್ಕೆ ಹೊರೆಟೆವು. ದಾರಿಯಲ್ಲಿ ಸಿಕ್ಕ ಚಿಕ್ಕ ಹೋಟೆಲ್ ಒಂದರಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಮುಂದೆ ಸಾಗಿದೆವು. ಈ ಘಟ್ಟ ವಯನಾಡಿನ ಗಡಿ ಘಟ್ಟ. ಈ ಘಟ್ಟದ ಮೇಲೆ ನಿಂತು ನೋಡಿದರೆ ಸುಂದರವಾದ ಪರಿಸರದ ದೃಶ್ಯವನ್ನು ಸೆರೆ ಹಿಡಿಯಬಹುದು. ಇಲ್ಲಿಂದ ನಂತರ ಹೊರಟಿದ್ದು ವಯನಾಡಿನ ಹೆರಿಟೇಜ್ ಮ್ಯೂಸಿಯಂಗೆ. ಇಲ್ಲಿಯ ವಿಶೇಷ ಹಾಗೂ ಹಿನ್ನೆಲೆಯನ್ನು ಅರಿತೆವು. ಆಗಲೇ ಸ್ವಲ್ಪ ದಣಿವಿನ ಅನುಭವ ಆಗುತ್ತಿತ್ತು. ನಂತರ ಪುನಃ ರೆಸಾರ್ಟ್ಗೆ ಹೋಗಿ ತಂಗಿದೆವು.

PC: wikimedia.org
ಮೂರನೇ ದಿನ
ಬೆಳಗ್ಗೆ ಬೇಗ ಎದ್ದು ಪ್ರಯಾಣ ಮುಂದುವರಿಸಿ ಮುತ್ತಂಗಾ ವನ್ಯ ಜೀವಿ ದಾಮ ನೋಡಿಕೊಂಡು ಬೆಂಗಳೂರು ಹಾದಿ ಹಿಡಿಯಬೇಕೆಂದು ನಿರ್ಧರಿಸಿದ್ದೆವು. ನಮ್ಮ ಆಲೋಚನೆಯಂತೆ ಬೆಳಗ್ಗೆ ತಿಂಡಿ ಮುಗಿಸಿ, ರೂಮಿನ ಕೀಯನ್ನು ಹಿಂತಿರುಗಿಸಿದೆವು. ವನ್ಯ ಜೀವಿ ದಾಮ ನೋಡಿಕೊಂಡು ಬೆಂಗೂರಿಗೆ ಹಿಂತಿರುಗಿದೆವು. ಅಂತೆಯೇ ಅದೇ ಟ್ರಾಫಿಕ್, ನಗರದ ಕಿರಿಕಿರಿ ನಮ್ಮನ್ನು ಕಾಯುತ್ತಿತ್ತು.


Click it and Unblock the Notifications

















