ಗುಜರಾತ್ ನ ಹೊಸ ರಾಜಧಾನಿಯಾದ ಗಾಂಧಿನಗರ್, ಸಬರ್ಮತಿ ನದಿಯ ಪಶ್ಚಿಮ ತೀರದಲ್ಲಿದೆ. ಸ್ವಾತಂತ್ರಾನಂತರ, 1960 ರಲ್ಲಿ ಹಳೆಯ ಬಾಂಬೆ ರಾಜ್ಯವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಆಗಿ ವಿಂಗಡಿಸಲಾಯಿತು. ಈ ಸಂದರ್ಭದಲ್ಲಿ, ಗಾಂಧಿನಗರವನ್ನು ಗುಜರಾತ್ ನ ರಾಜಧಾನಿಯಾಗಿ ಆರಿಸಲಾಯಿತು. ಗಾಂಧೀನಗರವು ವಾಸ್ತುಪ್ರಕಾರವಾಗಿ ಸುಯೋಜಿತ ಪಟ್ಟಣವಾಗಿದ್ದು, ರಸ್ತೆ, ಮಾರುಕಟ್ಟೆ ಹಾಗೂ ವಾಸಕ್ಕೆ ಯೋಗ್ಯವಾದ ಸ್ಥಳಗಳನ್ನು ಸರಿಯಾದ ಕ್ರಮದಲ್ಲಿ ರೂಪಿಸಲಾಗಿದೆ.
ಈ ಸುವ್ಯವಸ್ಥಿತ ನಗರದ ನಿರ್ಮಾಣವನ್ನು ಹೆಚ್. ಕೆ ಮೆವಡ ಹಾಗೂ ಪ್ರಕಾಶ್ ಎಮ್ ಆಪ್ಟೆ ಎಂಬ ಇಬ್ಬರು ವಾಸ್ತುಶಿಲ್ಪಿಗಳ ನೇತೃತ್ವದಲ್ಲಿ ಮಾಡಲಾಯಿತು. ಭಾರತದಲ್ಲಿನ ಸುವ್ಯವಸ್ಥಿತ ನಗರಗಳ ಪಟ್ಟಿಯಲ್ಲಿ ಗಾಂಧೀನಗರ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಚಂಡೀಘರ್ ಇದೆ.
ಚರಿತ್ರೆ
ಈಗ ಗಾಂಧೀನಗರವಿರುವ ಸ್ಥಳವು, 13 ನೇ ಶತಮಾನದಲ್ಲಿ ರಾಜ ಪೀಥಸಿಂಹ್ ಅವರ ಆಧಿಪತ್ಯದಲ್ಲಿತ್ತು. ಆಗ ಈ ಸ್ಥಳದ ಹೆಸರು ಪೀಥಪುರ್ ಎಂದಾಗಿತ್ತು. ಸ್ವಾತಂತ್ರಾನಂತರ ಈ ಸ್ಥಳವನ್ನು ನಮ್ಮ ರಾಷ್ಟ್ರಪಿತ ಗಾಂಧೀಜಿ ಅವರ ನಾಮಾಂಕಿತ ಗಾಂಧೀನಗರವೆಂದು ಬದಲಿಸಲಾಯಿತು.
ಭೂ ವಿವರಣೆ
ಗಾಂಧೀನಗರವು ಗುಜರಾತ್ ನ ಈಶಾನ್ಯ ಮಧ್ಯ ಭಾಗದಲ್ಲಿದೆ. ಇದು ಅಹಮದಾಬಾದ್ ನಿಂದ ಕೇವಲ 27 ಕಿ. ಮೀ ದೂರದಲ್ಲಿದೆ. ಈ ನಗರವು ಸಬರಮತಿ ನದಿಯ ತೀರದಲ್ಲಿದೆ. ಬೇಸಗೆಕಾಲದಲ್ಲಿ ಈ ನದಿಯು ಬತ್ತಿ ಹೋಗಿ, ಕೇವಲ ಒಂದು ಸಣ್ಣ ತೊರೆ ಮಾತ್ರ ಕಾಣಸಿಗುತ್ತದೆ.
ಹವಾಮಾನ
ಗಾಂಧೀನಗರದ ಹವಾಮಾನ ಸಾಧಾರಣವಾಗಿ ಶುಷ್ಕ ಹಾಗೂ ಕಾವಿನಿಂದ ಕೂಡಿರುತ್ತದೆ. ಬೇಸಗೆ, ಮಳೆ ಹಾಗೂ ಚಳಿ ಇಲ್ಲಿನ ಮೂರು ಋತುಗಳಾಗಿವೆ. ನೈಋತ್ಯ ಮಾರುತದಿಂದ ಮಳೆಗಾಲದಲ್ಲಿ ಗಾಂಧೀನಗರದಲ್ಲಿ ಹೇರಳ ಮಳೆಯಾಗುತ್ತದೆ. ಚಳಿಗಾಲವು ಮಿತವಾಗಿರುತ್ತದೆ.
ಜನಸಂಖ್ಯೆ
ಗಾಂಧೀನಗರದ ಜನಸಂಖ್ಯೆಯ ಸುಮಾರು 95% ಹಿಂದೂ ಜನಾಂಗದವರಾಗಿದ್ದು, ಇವರು ವಿವಿಧ ರಾಜ್ಯಗಳಿಂದ ಕೆಲಸವನ್ನು ಹುಡುಕಿಕ್ಕೊಂಡು ಈ ಪಟ್ಟಣಕ್ಕೆ ವಲಸೆ ಬಂದವರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಗಾಂಧೀನಗರವು ಎಲ್ಲಾ ಧರ್ಮ ಹಾಗೂ ಎಲ್ಲಾ ಹಿನ್ನೆಲೆಯಿಂದ ಬಂದ ವ್ಯಕ್ತಿಗಳನ್ನು ಆದರಿಸುತ್ತಿದ್ದು, ಜಗದ್ವ್ಯಾಪಕವಾಗಿ ಬೆಳೆಯುತ್ತಿದೆ.
ಸಾರಿಗೆ ಸಂಪರ್ಕ
ಅಹಮದಾಬಾದ್ ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ದೇಶೀಯ ಹಾಗೂ ವಿದೇಶೀ ಯಾತ್ರಿಗಳಿಗೆ ಗಾಂಧೀನಗರದ ಜೊತೆಗೆ ಸಂಪರ್ಕ ಕಲ್ಪಿಸುತ್ತದೆ. ಗಾಂಧೀನಗರದ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗಗಳು ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಹಾಗೂ ಒಡನೆಯೇ ಪೂರ್ತಿಗೊಳ್ಳುವ ಗಾಂಧಿನಗರ್ ಮೆಟ್ರೋ ಆಗಿವೆ. ಇದಲ್ಲದೆ ಗಾಂಧೀನಗರದಲ್ಲಿ CNG ಇಂಧನ ಹಾಗೂ VTCOS ಬಳಸಿ ಓಡಾಡುವ ಖಾಸಗಿ ಬಸ್ ಗಳನ್ನೂ ಕಾಣಬಹುದು. ರಾಷ್ಟ್ರೀಯ ಹೆದ್ದಾರಿ ಮೂಲಕ ಗಾಂಧೀನಗರವು ಮುಂಬೈ ಜೊತೆ ಸಂಪರ್ಕ ಹೊಂದಿದೆ. ಹತ್ತಿರದ ರೈಲು ನಿಲ್ದಾಣವಾದ ಅಹಮದಾಬಾದ್ ರೈಲು ನಿಲ್ದಾಣದ ಮೂಲಕ ಈ ಪಟ್ಟಣವು ದೇಶದ ವಿವಿಧ ನಗರಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.
ಸುತ್ತಲಿನ ಆಕರ್ಷಣೀಯ ಸ್ಥಳಗಳು
ಮಹಾತ್ಮಾ ಮಂದಿರ್, ಅಕ್ಷರಧಾಮ ದೇವಸ್ಥಾನ, ಇಂದ್ರೋದ ಡೈನೋಸಾರ್ ಮತ್ತು ಪಳೆಯುಳಿಕೆ ಪಾರ್ಕ್, ಸರಿತಾ ಉದ್ಯಾನ್ ಇತ್ಯಾದಿಗಳು ಗಾಂಧೀನಗರದಲ್ಲಿನ ಮುಖ್ಯ ಸ್ಥಳಗಳು. ಮಹಾತ್ಮಾ ಮಂದಿರ್, ಬಾಪೂಜಿಯ ಜೀವನದ ಬಗ್ಗೆಯುಳ್ಳ ಎಲ್ಲಾ ಕೃತಿ ಹಾಗೂ ಮಾಹಿತಿಗಳನ್ನು ಒಳಗೊಂಡ ಒಂದು ಸಮಾವೇಶ ಕೇಂದ್ರವಾಗಿದೆ. ಈ ಕಟ್ಟಡದಲ್ಲಿ ಒಂದು ಸಭಾಂಗಣ, ಪ್ರಾರ್ಥನಾ ಭವನ, ಧ್ಯಾನ ಕೇಂದ್ರ ಹಾಗೂ ಒಂದು ದೊಡ್ಡ ತಿರುಗುವ ಚಕ್ರವಿದೆ.
ಗಾಂಧೀನಗರದಿಂದ 18 ಕಿ. ಮೀ ದೂರದಲ್ಲಿರುವ ಅಡಾಲಜ್ ಸ್ಟೆಪ್ ವೆಲ್ ಕೂಡ ಒಂದು ಯಾತ್ರಾ ಸ್ಥಳವಾಗಿದೆ. ಇದು ಐದು ಅಂತಸ್ತಿನ ಕಟ್ಟಡವಾಗಿದ್ದು, ಇದರ ಗೋಡೆಯ ತುಂಬಾ ಜೈನ ಹಾಗೂ ಹಿಂದೂ ಧರ್ಮ ಹಾಗೂ ಪೌರಾಣಿಕ ಅರ್ಥ ಬರುವಂಥಹ ಕಲ್ಲಿನ ಕೆತ್ತನೆ ಹಾಗೂ ಮೂರ್ತಿಗಳಿವೆ. ಇನ್ನೊಂದು ಕುತೂಹಲಕಾರಿ ಪ್ರವಾಸಿ ಸ್ಥಳವೆಂದರೆ, ಇಂದ್ರೋದ ಡೈನೋಸಾರ್ ಹಾಗೂ ಫಾಸಿಲ್ ಪಾರ್ಕ್. ಇದನ್ನು ಭಾರತದ ಜುರಾಸಿಕ್ ಪಾರ್ಕ್ ಎಂದು ಕರೆಯಲಾಗುತ್ತದೆ. ಇದು ಡೈನೋಸಾರ್ ಮೊಟ್ಟೆಗಳಿಗೆ ಸಂರಕ್ಷಣೆ ಕೊಡುವ ಪ್ರಪಂಚದ ಎರಡನೇ ದೊಡ್ಡ ಸ್ಥಳವಾಗಿದೆ.
ಇದಲ್ಲದೆ ಈ ಪಾರ್ಕ್ ನಲ್ಲಿ ಜಿಂಕೆಗಳ ಪಾರ್ಕ್, ಹಕ್ಕಿಗಳ ಪಾರ್ಕ್, ಹಾವುಗಳ ಪಾರ್ಕ್ ಹೀಗೆ ಹಲವಾರು ವಿಭಾಗಗಳೂ ಇವೆ. ಈ ಶೈಕ್ಷಣಿಕ ಪಾರ್ಕ್ ನಲ್ಲಿ ದೊಡ್ಡ ಸಮುದ್ರ ಸಸ್ತನಿಗಳ ಅಸ್ತಿಪಂಜರಗಳು ಕೂಡಾ ಇವೆ. ಪಾರ್ಕ್ ನ ಒಳಗಿರುವ ಕಾಡಿನಲ್ಲಿ ವನ್ಯ ಪ್ರಾಣಿಗಳಾದ ಸರೀಸೃಪ, ಸಾರಂಗ, ಲಂಗೂರ್ ಹಾಗೂ ಫೆಸೆಂಟ್ ಇತ್ಯಾದಿಗಳನ್ನು ಕಾಣಬಹುದು. ಈ ಪಾರ್ಕ್, ಗುಜರಾತ್ ಎಕೋಲಾಜಿಕಲ್ ಎಜುಕೇಶನ್ ಆಂಡ್ ರಿಸರ್ಚ್ ಫೌಂಡೇಶನ್ ನ ಪ್ರಾಧಿಕಾರದಲ್ಲಿದೆ.