ಉತ್ತರ ಕರ್ನಾಕದ ಕಡೆ ಹೋದರೆ ಯಾದಗಿರಿ ಜಿಲ್ಲೆಯನ್ನು ನೋಡಲೇ ಬೇಕು. ಕರ್ನಾಟಕದ 30ನೇ ಜಿಲ್ಲೆಯಾದ ಯಾದಗಿರಿ ಏಪ್ರಿಲ್ 2010ರಲ್ಲಿ ಅಸ್ತಿತ್ವಕ್ಕೆ ಬಂತು. ಶಹಾಪುರ ಮತ್ತು ಸುರಪುರ ಎಂಬ ಎರಡು ತಾಲೂಕು ಸೇರಿಸಿಕೊಂಡು ಯಾದಗಿರಿ ಜಿಲ್ಲೆ ಆಗಿದೆ. ಶಾತವಾಹನರು, ಚಾಲುಕ್ಯರು, ರಾಷ್ಟ್ರಕೂಟರು ಸೇರಿದಂತೆ ಅನೇಕ ರಾಜ ಮನೆತನದವರು ಈ ಪ್ರದೇಶವನ್ನು ಆಳಿರುವುದರಿಂದ ಅವರ ಕುರುಗಳು, ಶಾಸನಗಳು ಹಾಗೂ ವಿಶೇಷ ಕಲಾಕೃತಿಯಿಂದ ಕೂಡಿರುವ ದೇವಾಲಯಗಳನ್ನು ಕಾಣಬಹುದು. ಇದು ಮೊದಲು ಯಾದವ ರಾಜ್ಯದ ರಾಜ್ಯಧಾನಿಯಾಗಿತ್ತು. ನಂತರದ ದಿನಗಳಲ್ಲಿ ಯಾದವಗಿರಿ ಎಂದು ಕರೆಯಲಾಯಿತು. ಇದೀಗ ಯಾದಗಿರಿ ಎಂದು ಕರೆಯುತ್ತಾರೆ.
ವನದುರ್ಗ ಕೋಟೆ
ಹೆಸರೇ ಹೇಳುವಂತೆ ಹಸಿರು ಸಿರಿಯ ಮಧ್ಯೆ ಎದ್ದು ನಿಂತ ಕೋಟೆ ಇದು. ಪಿದ್ದನಾಯಕ ತನ್ನ ರಾಣಿ ವೆಂಕಾಂಬೆಯ ನೆನಪಿಗಾಗಿ ಈ ಕೋಟೆಯನ್ನು ನಿರ್ಮಿಸಿದ್ದಾನೆ ಎಂದು ಹೇಳಲಾಗುತ್ತದೆ. ಈ ಕೋಟೆಯ ಪ್ರವೇಶ ದ್ವಾರದಲ್ಲಿ ದೇವನಾಗರಿ ಪಿಲಿಯನ್ನು ನೋಡಬಹುದು. ಅರ್ಧ ಚಂದ್ರಾಕೃತಿಯ ಗೋಡೆ ಹಾಗೂ ಕೋಟೆ ಒಳಗಡೆ ಕೆಲವು ಅವಶೇಷಗಳನ್ನು ಕಾಣಬಹುದು.
ಚಿತ್ರಕೃಪೆ: Mahesh d k
ನಾರಾಯಣಪುರ ಅಣೆಕಟ್ಟು
ಕೃಷ್ಣ ನದಿಗೆ ಕಟ್ಟಲಾದ ಈ ಅಣೆಕಟ್ಟು ಬೆಟ್ಟದ ತುದಿಯಲ್ಲಿರುವುದೇ ಒಂದು ವಿಶೇಷ. ಇಲ್ಲಿಯ ನೀರನ್ನು ಹತ್ತಿರದ ಹಳ್ಳಿಯ ಜನರು ದಿನಬಳಕೆಗೆ ಉಪಯೋಗಿಸಿಕೊಳ್ಳುತ್ತಾರೆ. ಇಲ್ಲಿ ಬೀಳುವ ನೀರನ್ನು ನೋಡುವುದು ಹಾಗೂ ಬೆಟ್ಟದ ತುದಿಗೆ ಹೋಗುವುದೇ ಒಂದು ಖುಷಿ. 1962 ರಲ್ಲಿ ನಿರ್ಮಿಸಲಾದ ಈ ಅಣೆಕಟ್ಟು 106 ಹೆಕ್ಟೇರ್ ಭೂಮಿಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತಿದೆ.
ಚಿತ್ರಕೃಪೆ: wikimapia
ಶಿರವಾಳ ಹಳ್ಳಿ
ಈ ಹಳ್ಳಿಯ ವಿಶೇಷವೆಂದರೆ ಇಲ್ಲಿರುವ ಇಪ್ಪತ್ತು ದೇವಾಲಯಗಳು. ಶಾತವಾಹನರ ಕಾಲದ ಈ ಹಳ್ಳಿಯಲ್ಲಿ ಅನೇಕ ಶಾಸನಗಳನ್ನು ಕಾಣಬಹುದು. ಪ್ರತಿಯೊಂದು ದೇಗುಲವೂ ವಿಶಿಷ್ಟ ಕಲಾಕೃತಿ ಹಾಗೂ ವಾಸ್ತುಗಳನ್ನು ಹೊಂದಿರುವುದೇ ಹಿರಿಮೆ.
ತಿಂಥಣಿ ಮೌನೇಶ್ವರ ದೇವಾಲಯ
ಸುರಪುರದಿಂದ 20 ಕಿ.ಮೀ. ದೂರದಲ್ಲಿರುವ ಈ ದೇವಾಲಯ ದಕ್ಷಿಣ ದಿಕ್ಕಿನಲ್ಲಿದೆ. ವಿಕ್ರಮಾದಿತ್ಯನ ಕಾಲದಲ್ಲಿ ಇದು ದೇವಾಲಯದ ಜೊತೆಗೆ ಶಿಕ್ಷಣ ಕೇಂದ್ರವೂ ಆಗಿತ್ತು ಎನ್ನಲಾಗುತ್ತದೆ. ಈ ದೇವಾಲಯಕ್ಕೆ ಹಿಂದೂ ಹಾಗೂ ಮುಸ್ಲಿಂರು ಇಬ್ಬರೂ ಆರಾಧಿಸುತ್ತಾರೆ.
ಚಿತ್ರಕೃಪೆ: Dushan7k
ಮಲಗಿರುವ ಬುದ್ಧ
ಯಾದಗಿರಿಯಲ್ಲಿ ಬರುವ ಶಹಾಪುರ ನಗರದ ಹತ್ತಿರ ಬುದ್ಧ ಮಲಗಿರುವ ರೀತಿಯಲ್ಲಿ ಒಂದು ಬೆಟ್ಟವಿದೆ. ಇದು ಒಟ್ಟು ನಾಲ್ಕು ಬೆಟ್ಟಗಳಿಂದ ಕೂಡಿಕೊಂಡಿದೆ. ಅದನ್ನೇ ಮಲಗಿರುವ ಬುದ್ಧ ಎಂದು ಕರೆಯುತ್ತಾರೆ. ಇಲ್ಲಿ ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.
ಹತ್ತಿರದ ಆಕರ್ಷಣೆಯ ಪ್ರದೇಶಗಳು
ಸುರಪುರ ಅರಮನೆ, ಧಬ್ ಧಬಿ ಜಲಧಾರೆ, ಚಾಮುಂಡೇಶ್ವರಿ ದೇಗುಲ.
ಹೋಗುವ ದೂರ
ಬೆಂಗಳೂರಿನಿಂದ ಯಾದಗಿರಿಗೆ 520 ಕಿ.ಮೀ. ದೂರವಿದೆ. ಕಡಿಮೆ ಎಂದರೂ 9 ತಾಸುಗಳಕಾಲ ಪ್ರಯಾಣಿಸಬೇಕು.