ಸ್ಥಳ : ತೊಟ್ಟದ
ಜಿಲ್ಲೆ : ಕಣ್ಣೂರು
ರಾಜ್ಯ : ಕೇರಳ
ವಿಶೇಷತೆ : ತೊಟ್ಟದ ಸ್ಥಳವು ಭಾರತದಲ್ಲೇ ಏಕೆ ವಿಶ್ವದಲ್ಲೆ ಅತ್ಯಂತ ಅನನ್ಯವಾದ ಹಾಗೂ ಬಹುಶಃ ಏಕೈಕ ದೇವಾಲಯಕ್ಕೆ ಮನೆಯಾಗಿದ್ದು ಆ ದೇವಾಲಯವೆ ಇರುವೆಯ ದೇವಾಲಯ.
ದೇವಾಲಯ ಕುರಿತು
ನೀವು ಕೇಳುತ್ತಿರುವುದು ಬಲು ಅಚ್ಚರಿಯ ಸಂಗತಿ ಎನಿಸಿದರೂ ಸಹ ಇದು ಶತಪ್ರತಿಶತ ನಿಜ. ಇದೊಂದು ವಿಶಿಷ್ಟವಾದ ದೇವಾಲಯ. ದೇವಾಲಯ ಎಂದಾಕ್ಷಣ ಗೋಪುರ ಇರಲೇಬೇಕಲ್ಲವೆ? ಎಂಬುದು ನಿಮಗೆ ಸಾಮಾನ್ಯವಾಗಿ ಅನಿಸಿದರೂ ಇಲ್ಲಿ ಆ ರೀತಿಯ ಯಾವುದೆ ಗೋಪುರವಾಗಲಿ ಅಥವಾ ಗೋಡೆಗಳಾಗಲಿ ಇಲ್ಲವೆ ಇಲ್ಲ. ಆದರೂ ಇದೊಂದು ದೇವಾಲಯ.
ಈ ದೇವಾಲಯವನ್ನು ಉರುಂಬಚನ್ ಕೊಟ್ಟಂ ಎಂದು ಕರೆಯುತ್ತಾರೆ. ಮಲಯಾಳಂನಲ್ಲಿ ಉರುಂಬ ಎಂದರೆ ಇರುವೆ ಹಾಗೂ ಅಚನ್ ಎಂದರೆ ಪಿತಾ ಅಥವಾ ತಂದೆ ಎಂಬರ್ಥವಿದೆ. ಹಾಗಾಗಿ ಇದು ಇರುವೆಗಳ ಪಿತನಿಗೆ ಮುಡಿಪಾದ ದೇವಾಲಯ. ಇರುವೆಗಳ ಕಾಟದಿಂದ ಬಳಲಿ ಬೆಂಡಾದವರು, ಕಟ್ಟಿರುವೆಯ ಕಡಿತದಿಂದ ಘಾಸಿಗೊಂಡವರು ಇಲ್ಲಿಗೆ ಭೇಟಿ ನೀಡುತ್ತಾರೆ.

ಸಾಂದರ್ಭಿಕ ಚಿತ್ರ, ಚಿತ್ರಕೃಪೆ: Steve Jurvetson
ಕೇವಲ ಇಂಥವರೆ ಬರಬೇಕೆಂದು ಯಾವ ನಿಯಮವೂ ಇಲ್ಲ. ಸಾಮಾನ್ಯರೂ ಸಹ ತಮಗೆಂದೂ ಇರುವೆ ಕಾಟ ಉಂಟಾಗಬಾರದೆಂದೂ ಸಹ ಇಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲದೆ ಕೆಲವರು ತಮ್ಮ ತಮ್ಮ ಮನೆಗಳಲ್ಲಿ ಪದೆ ಪದೆ ಉಂಟಾಗುವ ಇರುವೆ, ಗೊದ್ದಗಳ ಕಾಟದಿಂದ ಶಾಶ್ವತವಾಗಿ ಪರಿಹಾರ ಬಯಸಿ ಈ ದೇವಾಲಯಕ್ಕೆ ಭೇಟಿ ನೀಡಿ ಇರುವೆ ಪಿತನಲ್ಲಿ ಪ್ರಾರ್ಥಿಸುತ್ತಾರೆ.
ಈ ರೀತಿ ಬಂದು ಬೇಡಿಕೊಂಡು ಹೋದವರನೇಕರ ಮನೆಗಳಲ್ಲಿ ಇರುವೆ ತೊಂದರೆ ನಿಂತಿದೆ ಎಂದೂ ಸಹ ಹೇಳಲಾಗುತ್ತದೆ. ಸಾಮಾನ್ಯವಾಗಿ ಈ ದೇವಾಲಯಕ್ಕೆ ಭೇಟಿ ನೀಡುವವರು ಪ್ರಮುಖವಾಗಿ ತೆಂಗಿನ ಕಾಯಿಯನ್ನು ತಂದು ಇಲ್ಲಿರುವ ಒಂದು ನಿರ್ದಿಷ್ಟ ಕಟ್ಟೆಯ ಮೇಲೆ ಒಡೆದು ತೆಂಗಿನ ನೀರನ್ನು ಇರುವೆಗೆ ನೈವೇದ್ಯವಾಗಿ ಸಮರ್ಪಿಸುತ್ತಾರೆ.

ಉರುಂಬಚನ್ ದೇವಾಲಯ
ಈ ದೇವಾಲಯವು, ವಿಚಿತ್ರವೆಂದರೆ ದುಂಡಾಕಾರದಲ್ಲಿರುವ ಒಂದು ಕಟ್ಟೆಯಾಗಿದೆ. ಯಾವುದೆ ರೀತಿಯ ಗೋಪುರವಾಗಲಿ ಅಥವಾ ಗೋಡೆಯಾಗಲಿ ಇಲ್ಲ. ರಸ್ತೆಯ ಬದಿಯೊಂದರಲ್ಲಿ ಸ್ವಾಗತ ಕಮಾನುವೊಂದಿದ್ದು ಅದರ ಮೇಲೆ ಇದು ಯಾವ ದೇವಾಲಯವೆಂದು ಮಲಯಾಳಂನಲ್ಲಿ ಬರೆಯಲಾಗಿರುವುದನ್ನು ಕಾಣಬಹುದು. ಅದನ್ನು ಓದಿದಾಗಲೆ ಇದೂ ಒಂದು ದೇವಾಲಯ ಎಂದು ನಿಮಗೆ ಗೊತ್ತಾಗುತ್ತದಷ್ಟೆ!
ಸ್ಥಳ ಪುರಾಣದ ಪ್ರಕಾರ, ಹಿಂದೆ ಈ ದೇವಾಲಯವಿರುವ ಸ್ಥಳದಲ್ಲಿ ಬಡಿಗನೊಬ್ಬ, ಗಣೇಶ ದೇಗುಲವಿದು ಎಂದು ಕೆತ್ತಿದ ಹಲಗೆಯೊಂದನ್ನು ನೆಟ್ಟಿದ್ದ. ಮರುದಿನ ಅಲ್ಲಿ ಬಂದು ನೋಡಿದಾಗ ಆ ಫಲಕವೆ ಇರಲಿಲ್ಲ, ಬದಲಾಗಿ ಅಲ್ಲೊಂದು ಇರುವೆಗಳ ದೊಡ್ಡದಾದ ಹುತ್ತ ನಿರ್ಮಾಣವಾಗಿತ್ತು. ಆ ಸ್ಥಳದಿಂದ ಕೆಲವೆ ಅಣತಿಗಳಷ್ಟು ದೂರದಲ್ಲಿ ಗಣೇಶ ದೇವಾಲಯದ ಫಲಕ ಬಿದ್ದಿತ್ತು.

ಸಾಂದರ್ಭಿಕ ಚಿತ್ರ
ಇದೊಂದು ದೈವ ಸಂಕೇತ ಎಂದು ತಿಳಿದ ಊರ ಜನರು ಅಂದಿನಿಂದ ಇರುವೆಗಳ ಮೇಲೆ ಗೌರವಾದರಗಳನ್ನು ಹೊಂದಿದರು ಹಾಗೂ ಅಲ್ಲೊಂದು ಕಟ್ಟೆಯ ನಿರ್ಮಾಣ ಮಾಡಿ ಅದನ್ನು ಇರುವೆ ಪಿತನಿಗೆ ಮುಡಿಪಾಗಿಸಿದರು. ಇನ್ನೂ ಆ ಫಲಕ ಬಿದ್ದ ಸ್ಥಳದಲ್ಲಿ ಗಣೇಶ ದೇವಾಲಯವನ್ನು ನಿರ್ಮಿಸಲಾಯಿತು. ಅದೆ ಇಂದು ಉದಯಮಂಗಲಂ ಗಣೇಶ ದೇವಾಲಯ ಎಂದು ಹೆಸರುವಾಸಿಯಾಗಿದೆ.
ಕೇರಳದ ಏಳು ಆಶ್ಚರ್ಯಕರ ದೇವಸ್ಥಾನಗಳು
ತಲುಪುವ ಬಗೆ
ಕೇರಳದ ಕಣ್ಣೂರು-ತಲಶೇರಿ ರಸ್ತೆ ಮಾರ್ಗದಲ್ಲಿ ಕಣ್ಣೂರಿನಿಂದ ಸುಮಾರು ಎಂಟು ಕಿ.ಮೀ ಗಳಷ್ಟು ದೂರದಲ್ಲಿ ಸಿಗುವ ತೊಟ್ಟದ ಎಂಬ ಸ್ಥಳದಲ್ಲಿ ಈ ಉರಂಬಚನ್ ದೇವಾಲಯವಿದೆ. ಇದರ ಹತ್ತಿರದಲ್ಲೆ ಗಣೇಶನ ದೇವಾಲಯವೂ ಸಹ ಇದ್ದು ಭೇಟಿ ನೀಡಬಹುದು. ಪ್ರತಿ ದಿನ ರಾತ್ರಿ ಈ ದೇವಾಲಯದ ಕಟ್ಟೆಯ ಮೇಲೆ ದೀಪ ಬೆಳಗಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಉತ್ಸವ ಆಚರಿಸಲಾಗುತ್ತದೆ.


Click it and Unblock the Notifications
















