ಮಳೆಗಾಲ ಪ್ರಾರಂಭವಾದ ತಕ್ಷಣ ಕರ್ನಾಟಕದ ಕೆಲವು ಸ್ಥಳಗಳ ಬಗ್ಗೆ ಪದಗಳಲ್ಲಿ ಹೇಳುವುದಕ್ಕಿಂತ ನೋಡುವುದೇ ಚೆಂದ. ಮಳೆಗಾಲದಲ್ಲಿ ಇಲ್ಲಿನ ಹಸಿರಿನ ಬಣ್ಣವೇ ಬೇರೆ. ಉಕ್ಕಿ ಹರಿಯುವ ನದಿಗಳು, ಧುಮ್ಮಿಕ್ಕುವ ಜಲಪಾತಗಳು, ಮಂಜು ಮುಸುಕಿದ ಬೆಟ್ಟಗಳು, ತೇವದ ರಸ್ತೆಗಳು ಇವೆಲ್ಲಾ ನಿಮ್ಮ ಮನಸ್ಸಿಗೆ ಮುದ ನೀಡದೆ ಇರಲಾರದು. ವಿಶೇಷವಾಗಿ ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗ ಮಳೆಗಾಲದ ಸಮಯದಲ್ಲಿ ಹೆಚ್ಚು ಬೇಡಿಕೆಯಿರುವ ಸ್ಥಳವಾಗಿದೆ. ಹಾಗಾಗಿ ಮಳೆಗಾಲ ಮುಗಿಯುವ ಮೊದಲು ನೀವು ಕರ್ನಾಟಕದ ಈ ಸ್ಥಳಗಳಿಗೆ ಭೇಟಿ ನೀಡಲೇಬೇಕು. ಬನ್ನಿ..ಆ ಸುಂದರ ಸ್ಥಳಗಳು ಯಾವುವು ಎಂದು ಒಂದೊಂದಾಗಿ ನೋಡೋಣ...

ಆಗುಂಬೆ
ಆಗುಂಬೆ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿರುವ ಒಂದು ಸಣ್ಣ ಹಳ್ಳಿ. ಇದನ್ನು ದಕ್ಷಿಣ ಭಾರತದ ಚಿರಾಪುಂಜಿ ಎಂದೂ ಕರೆಯುತ್ತಾರೆ. ಏಕೆಂದರೆ ಇದು ವಾರ್ಷಿಕವಾಗಿ 7,000 ಮಿಮೀಗಿಂತ ಹೆಚ್ಚು ಮಳೆಯನ್ನು ಪಡೆಯುತ್ತದೆ. ಪ್ರಕೃತಿ ಪ್ರಿಯರಿಗೆ ಆಗುಂಬೆ ಸೂಕ್ತ ಸ್ಥಳವಾಗಿದೆ. ಹಚ್ಚ ಹಸಿರಿನ ಕಾಡುಗಳು, ಹರಿಯುವ ನದಿಗಳು ಮತ್ತು ಅನೇಕ ಜಲಪಾತಗಳು ಇಲ್ಲಿವೆ. ಈ ಸ್ಥಳವು ಶಿವಮೊಗ್ಗ ಜಿಲ್ಲೆಯಲ್ಲಿದ್ದು, ಮಂಗಳೂರು, ಉಡುಪಿ ಮತ್ತು ಶಿವಮೊಗ್ಗದಿಂದ ಸುಲಭವಾಗಿ ತಲುಪಬಹುದು.

ಕೊಡಗು
ಇದನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ. ಕೊಡಗು ದೇಶದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಬೆಟ್ಟಗಳ ಮಧ್ಯೆ ಇರುವ ಈ ಸುಂದರವಾದ ಹಸಿರು ಜಿಲ್ಲೆ ಹೊರಾಂಗಣ ಚಟುವಟಿಕೆಗಳಿಗೆ ಬೆಸ್ಟ್. ಇಲ್ಲಿ ನೀವು ಟ್ರೆಕ್ಕಿಂಗ್, ಮೀನುಗಾರಿಕೆ ಮತ್ತು ವೈಟ್ ವಾಟರ್ ರಾಫ್ಟಿಂಗ್ ಅನ್ನು ಆನಂದಿಸಬಹುದು. ಗದ್ದಲದಿಂದ ಹೊರಬಂದು ಶಾಂತಿಯುತ ವಾತಾವರಣವನ್ನು ಬಯಸುವವರಿಗೆ ಇದು ಅತ್ಯುತ್ತಮ ತಾಣವಾಗಿದೆ. ದೇಶದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಇದು ಕೂಡ ಒಂದು. ಕೊಡಗಿನ ಹಸಿರು ಕಣಿವೆಗಳು, ಚಹಾ ತೋಟಗಳು, ಕಾಫಿ ಮರಗಳು ಮತ್ತು ಕಿತ್ತಳೆ ತೋಪುಗಳನ್ನು ಮಳೆಗಾಲದಲ್ಲಿ ನೋಡುವುದೇ ಚೆಂದ.
ದಾಂಡೇಲಿ
ದಾಂಡೇಲಿ ಅತ್ಯಂತ ಸುಂದರವಾದ ಪ್ರವಾಸಿ ತಾಣವಾಗಿದ್ದು, ನೀವು ಎಲ್ಲಾ ರೀತಿಯ ಸಾಹಸ ಚಟುವಟಿಕೆಗಳನ್ನು ಇಲ್ಲಿ ಮಾಡಬಹುದು. ಈ ಸ್ಥಳವು ಕರ್ನಾಟಕ ಮತ್ತು ಗೋವಾದ ಗಡಿಗೆ ಸಮೀಪದಲ್ಲಿರುವುದರಿಂದ ಇಲ್ಲಿ ವಿದೇಶಿ ಪ್ರವಾಸಿಗರ ದಂಡೇ ಇರುತ್ತದೆ. ಇಲ್ಲಿ ನೀವು ರಾಫ್ಟಿಂಗ್, ಬೋಟಿಂಗ್, ರಾಪ್ಪೆಲಿಂಗ್, ಟ್ರೆಕ್ಕಿಂಗ್, ಜಂಗಲ್ ಸಫಾರಿ, ನದಿ ಬದಿಯ ಮೀನುಗಾರಿಕೆ ಮುಂತಾದ ಅನೇಕ ಚಟುವಟಿಕೆಗಳನ್ನು ಮಾಡಬಹುದು. ಇದೆಲ್ಲದರ ಹೊರತಾಗಿ, ಹತ್ತಿರದಲ್ಲಿರುವ ಗುಹೆಗಳು ಮತ್ತು ದೇವಾಲಯಗಳನ್ನು ಸಹ ನೀವಿಲ್ಲಿ ಕಣ್ತುಂಬಿಕೊಳ್ಳಬಹುದು.

ಸಕಲೇಶಪುರ
ಸಕಲೇಶಪುರ ಕರ್ನಾಟಕದಲ್ಲಿರುವ ಒಂದು ಸಣ್ಣ ಪಟ್ಟಣ. ಕಾಫಿ, ಚಹಾ ಮತ್ತು ಮಸಾಲೆಗಳ ತೋಟಗಳಿಂದ ಆವೃತವಾಗಿರುವ ಸಕಲೇಶಪುರ ಹಾಸನದಿಂದ 44 ಕಿಲೋಮೀಟರ್ ದೂರದಲ್ಲಿದೆ. ವಾರಾಂತ್ಯದಲ್ಲಿ ಯಾವುದಾದರೂ ಸುಂದರವಾದ ಸ್ಥಳಕ್ಕೆ ಹೋಗಬೇಕೆಂದು ಯೋಚಿಸುತ್ತಿದ್ದರೆ, ಈ ಸ್ಥಳವು ಅತ್ಯುತ್ತಮವಾಗಿರುತ್ತದೆ. ಇಲ್ಲಿ ನೀವು ವಿಶ್ರಾಂತಿ ಪಡೆಯಬಹುದು ಮತ್ತು ನೈಸರ್ಗಿಕ ಸೌಂದರ್ಯವನ್ನು ಸಹ ನೋಡಬಹುದು. ಈ ಸ್ಥಳವನ್ನು ಬಡವರ ಊಟಿ ಎಂದು ಸಹ ಕರೆಯಲಾಗುತ್ತದೆ.
ಚಿಕ್ಕಮಗಳೂರು
3400 ಅಡಿ ಎತ್ತರದಲ್ಲಿರುವ ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ಶಾಂತ ಮತ್ತು ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇದು ಹೆಚ್ಚಾಗಿ ಕಾಫಿ ತೋಟಗಳು ಮತ್ತು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಚಿಕ್ಕಮಗಳೂರಿನ ಮತ್ತೊಂದು ಪ್ರಸಿದ್ಧ ಆಕರ್ಷಣೆ ಬಾಬಾಬುಡನ್ಗಿರಿ ಶ್ರೇಣಿ. ಹಚ್ಚ ಹಸಿರು, ಈ ಪ್ರದೇಶದ ಜಲಪಾತಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ. ಇಲ್ಲಿ ಪ್ರಸಿದ್ಧವಾದ ಹೆಬ್ಬೆ ಜಲಪಾತ ಸೇರಿದಂತೆ ನೋಡಲು ಅನೇಕ ಫಾಲ್ಸ್ಗಳಿವೆ. ಅಷ್ಟೇ ಏಕೆ ನೀವಿಲ್ಲಿ ಕೇಂದ್ರ ಕಾಫಿ ಸಂಶೋಧನಾ ಸಂಸ್ಥೆಯನ್ನು ಸಹ ಕಾಣಬಹುದು. ಚಿಕ್ಕಮಗಳೂರು ಅನೇಕ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು, ಬುದ್ಧಿಜೀವಿಗಳು, ಕವಿಗಳು ಮತ್ತು ರಾಜಕಾರಣಿಗಳ ಜನ್ಮಸ್ಥಳವಾಗಿದೆ.

ಜೋಗ ಜಲಪಾತ
ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೇ ಚೆಂದ. ಇನ್ನು ದೇಶದ ಎರಡನೇ ಅತಿ ಎತ್ತರದ ಜಲಪಾತವಾಗಿರುವ ಕರ್ನಾಟಕದ ಜೋಗ ಜಲಪಾತ ನೋಡಲು ಇನ್ನು ಚೆಂದ. ದಟ್ಟವಾದ ಕಾನನಗಳ ನಡುವೆ ಇರುವ ಈ ಜಲಪಾತ ವಿಶೇಷವಾಗಿ ಮಳೆಗಾಲದಲ್ಲಿ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಇಲ್ಲಿ 829 ಅಡಿ ಎತ್ತರದಿಂದ ಜಲಪಾತದ ನೀರು ಬೀಳುತ್ತದೆ. ಅಂದಹಾಗೆ ಜಲಪಾತದ ಸದ್ದು ಹಲವು ಕಿಲೋಮೀಟರ್ ದೂರದಿಂದಲೇ ಕೇಳಿಸುವುದನ್ನು ನೀವು ಗಮನಿಸಬಹುದು. ಈ ಜಲಪಾತದ ಸೌಂದರ್ಯವನ್ನು ನೋಡಲು ಮತ್ತು ಸುತ್ತಲಿನ ಪರಿಸರವನ್ನು ಆನಂದಿಸಲು ವೀಕ್ಷಣಾ ಗ್ಯಾಲರಿ ಸಹ ಇದೆ. ಫಾಲ್ಸ್ ಅನ್ನು ನೋಡಲು ದೇಶದ ಮೂಲೆ ಮೂಲೆಯಿಂದ ಬರುತ್ತಾರೆ ಪ್ರವಾಸಿಗರು.


Click it and Unblock the Notifications


















