ಪ್ರವಾಸಕ್ಕೆ ನಾವಂದುಕೊಂಡ ಸಮಯ, ಸ್ಥಳಕ್ಕೆ ಹೋಗಬಹುದು. ಆದರೆ ಆ ಸ್ಥಳಗಳ ಬಗ್ಗೆ ನಮಗೆ ಚಿಕ್ಕ ಪುಟ್ಟ ಮಾಹಿತಿಯಾದರೂ ಇರಬೇಕು. ಏಕೆಂದರೆ ಕೆಲವು ಸ್ಥಳಗಳು, ಕೆಲವು ಸೀಸನ್ಗಳಲ್ಲಿ ಹೋಗಲು ಯೋಗ್ಯವಲ್ಲ. ಆದರೆ ಹಲವು ಪ್ರವಾಸಿ ತಾಣಗಳಿಗೆ ವರ್ಷಪೂರ್ತಿ ಭೇಟಿ ಕೊಡಬಹುದು. ನೀವು ವರ್ಷದ ಯಾವುದೇ ಸಮಯದಲ್ಲಿ ತೆರಳಲು ಸಮಯ ಮಾಡಿಕೊಳ್ಳಬಹುದು. ಅಂದಹಾಗೆ ಇಂದು ನಾವು ಕರ್ನಾಟಕದ ಅಂತಹ ನಾಲ್ಕು ಸ್ಥಳಗಳ ಬಗ್ಗೆ ಮಾಹಿತಿ ಕೊಡಲಿದ್ದು, ಮೂಲಭೂತ ಸೌಕರ್ಯಗಳು ಸೇರಿದಂತೆ ನೀವಂದುಕೊಂಡ ಹಾಗೆ ನೀವಿಲ್ಲಿ ಎಂಜಾಯ್ ಮಾಡಲು ಎಲ್ಲಾ ರೀತಿಯಲ್ಲೂ ಅವಕಾಶಗಳಿವೆ. ಹಾಗಾದರೆ ಬನ್ನಿ ಆ ತಾಣಗಳು ಯಾವುವು?, ಭೇಟಿ ನೀಡಲು ಅನುಕೂಲಕರ ಸಮಯ, ತಲುಪುವ ಮಾರ್ಗಗಳು ಮತ್ತು ಅಲ್ಲಿನ ಆಕರ್ಷಕ ಸ್ಥಳಗಳ ಬಗ್ಗೆ ತಿಳಿಯೋಣ...
ಶಿವಮೊಗ್ಗ
ಪ್ರವಾಸೋದ್ಯಮದ ದೃಷ್ಟಿಯಲ್ಲಿ ಶಿವಮೊಗ್ಗ ಅಪ್ಪಟ ರತ್ನ. ಇಲ್ಲಿ ಜೀವನ ಕೂಡ ಬಹಳ ಸರಳ. ಈ ಸ್ಥಳದಲ್ಲಿ ಭವ್ಯವಾದ ಗಿರಿಧಾಮಗಳು, ಕಣಿವೆಗಳು ಏನುಂಟು, ಏನಿಲ್ಲ?. ಸುತ್ತಲೂ ಹಸಿರಿನಿಂದ ಕೂಡಿದ ಬೆಟ್ಟಗಳು, ದಟ್ಟವಾದ ಕಾಡುಗಳು ಮತ್ತು ವನ್ಯಜೀವಿಗಳಿಂದ ತುಂಬಿರುವ ಶಿವಮೊಗ್ಗವನ್ನು ನೀವು ನೋಡಿದರೆ ನಿಸರ್ಗದ ಮಡಿಲಲ್ಲಿರುವಂತೆ ಭಾಸವಾಗುತ್ತದೆ.

ಭೇಟಿ ನೀಡಲು ಉತ್ತಮ ಸಮಯ: ವರ್ಷಪೂರ್ತಿಯಾದರೂ ಕೆಲವು ಸ್ಥಳಗಳಿಗೆ ಮಾರ್ಚ್-ಜೂನ್
ಪ್ರಮುಖ ಪ್ರವಾಸಿ ಆಕರ್ಷಣೆಗಳು: ಜೋಗ ಜಲಪಾತ, ಕವಿಶೈಲ, ದಬ್ಬೆ ಫಾಲ್ಸ್, ಬಿಆರ್ಪಿ, ಕೆಳದಿ, ಇಕ್ಕೇರಿ, ಲಿಂಗನಮಕ್ಕಿ ಡ್ಯಾಂ, ಕೊಡಚಾದ್ರಿ, ಕುಂದಾದ್ರಿ, ಆಗುಂಬೆ, ಸಕ್ರೆಬೈಲು, ಶರಾವತಿ ನದಿ, ಹಿಂಡ್ಲು ಮನೆ, ಮತ್ತೂರು ಲೇಕ್, ಗಾಜನೂರು ಡ್ಯಾಂ, ಕುಂಚಿಕಲ್ ಫಾಲ್ಸ್, ನಾಗರ ಫೋರ್ಟ್, ಗುಡವಿ ಪಕ್ಷಿಧಾಮ, ಹುಲಿ ಮತ್ತು ಸಿಂಹಧಾಮ ಇತ್ಯಾದಿ.
ತಲುಪುವುದು ಹೇಗೆ?
ಶಿವಮೊಗ್ಗಕ್ಕೆ ರೈಲು, ವಿಮಾನ, ರಸ್ತೆ ಮಾರ್ಗದ ಮೂಲಕ ತಲುಪಬಹುದು. ರಸ್ತೆಯ ಮೂಲಕವಾದರೆ ಭದ್ರಾವತಿ, ಕಡೂರು, ಬಾಣವಾರ, ತುಮಕೂರು, ಬೆಂಗಳೂರು ಮತ್ತು ಗೋವಾಗಳಿಗೆ ರಸ್ತೆಯ ಮೂಲಕ ಶಿವಮೊಗ್ಗ ಉತ್ತಮ ಸಂಪರ್ಕ ಹೊಂದಿದೆ. ಇಲ್ಲಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಸಹ ತೆರಳಬಹುದು.

ಆಗುಂಬೆ
ಶಿವಮೊಗ್ಗ ಸಮೀಪದಲ್ಲೇ ಇರುವ ಆಗುಂಬೆ ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಬರ್ಕಾನಾ, ಒನಕೆ ಅಬ್ಬಿ ಮತ್ತು ಜೋಗಿ ಗುಂಡಿಯಂತಹ ಅನೇಕ ಆಕರ್ಷಕ ಜಲಪಾತಗಳಿವೆ. ಸನ್ಸೆಟ್ ಪಾಯಿಂಟ್ನಿಂದ ನೀವು ಸೂರ್ಯಾಸ್ತದ ಸುಂದರವಾದ ದೃಶ್ಯವನ್ನು ನೋಡಬಹುದು. ಅದು ನಿಮ್ಮ ಸಂಜೆಯನ್ನು ಮತ್ತಷ್ಟು ಸುಂದರಗೊಳಿಸುತ್ತದೆ. ನೀವು ವನ್ಯಜೀವಿಗಳ ಬಗ್ಗೆ ಒಲವು ಹೊಂದಿದ್ದರೆ ಕಾಳಿಂಗ ಸರ್ಪ, ಚಿರತೆ ಮತ್ತು ಹುಲಿ ಹೀಗೆ ಅನೇಕ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದು.
ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್ ನಿಂದ ಫೆಬ್ರವರಿ
ಪ್ರಮುಖ ಪ್ರವಾಸಿ ಆಕರ್ಷಣೆಗಳು: ಆಕರ್ಷಕ ಜಲಪಾತಗಳು, ಸನ್ಸೆಟ್ ಪಾಯಿಂಟ್, ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನ
ತಲುಪುವುದು ಹೇಗೆ?
ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ಮತ್ತು ಶಿವಮೊಗ್ಗ. ಹತ್ತಿರದ ರೈಲು ನಿಲ್ದಾಣ- ಶಿವಮೊಗ್ಗ ಮತ್ತು ಉಡುಪಿ. ರಸ್ತೆಯ ಮೂಲಕವಾದರೆ ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಆಗುಂಬೆಗೆ ಹೋಗಬಹುದು.

ಕೂರ್ಗ್
ಕರ್ನಾಟಕದ ಒಂದು ಸುಂದರ, ಆಕರ್ಷಕ ಗಿರಿಧಾಮ ಕೂರ್ಗ್. ಇದು ಪ್ರವಾಸಿ ಪ್ರಿಯರಿಗೆ ದೇಶದ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ. ಬಿಡುವಿಲ್ಲದೆ ಜೀವನ ಕಳೆಯುತ್ತಿರುವವರು ಶಾಂತಿಯ ಕೆಲವು ಕ್ಷಣಗಳನ್ನು ಕಳೆಯಲು ಖಂಡಿತವಾಗಿಯೂ ಇಲ್ಲಿಗೆ ಹೋಗೇ ಹೋಗುತ್ತಾರೆ. ಇಲ್ಲಿಗೆ ಪ್ರಯಾಣಿಸುವ ಮೂಲಕ, ಜನರು ಮತ್ತೊಮ್ಮೆ ರಿಫ್ರೆಶ್ ಆಗುತ್ತಾರೆ.
ಭೇಟಿ ನೀಡುವ ಸಮಯ: ಅಕ್ಟೋಬರ್ ನಿಂದ ಮಾರ್ಚ್
ಪ್ರಮುಖ ಪ್ರವಾಸಿ ಆಕರ್ಷಣೆಗಳು: ಅಬ್ಬೆ ಜಲಪಾತ, ನಾಲ್ಕನಾಡ್ ಅರಮನೆ, ಬಾರಾಪೋಲ್ ನದಿ, ಬ್ರಹ್ಮಗಿರಿ ಶಿಖರ, ಇರುಪ್ಪು ಜಲಪಾತ, ನಾಮ್ಡ್ರೋಲಿಂಗ್ ಮಠ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಚೆಲ್ವಾರದಲ್ಲಿ ಮೈಕ್ರೋಲೈಟ್ ವಿಮಾನ, ಕಾವೇರಿ ನದಿ
ತಲುಪುವುದು ಹೇಗೆ?
ಹತ್ತಿರದ ದೇಶೀಯ ವಿಮಾನ ನಿಲ್ದಾಣ ಮೈಸೂರು. ರೈಲಿನ ಮೂಲಕವಾದರೆ ಮೈಸೂರು ಜಂಕ್ಷನ್. ಬೆಂಗಳೂರಿನಿಂದ 238 ಕಿಮೀ ರಸ್ತೆ ಪ್ರಯಾಣದ ಮೂಲಕ ಮೈಸೂರು ತಲುಪಬಹುದು.

ಗೋಕರ್ಣ
ಗೋಕರ್ಣ ಹಿಂದೂ ಯಾತ್ರಾ ಸ್ಥಳವಾಗಿದ್ದು, ಮಹಾಬಲೇಶ್ವರ ದೇವಸ್ಥಾನ ಮತ್ತು ಕೋಟಿ ತೀರ್ಥ ಸೇರಿದಂತೆ ಹಲವಾರು ಪವಿತ್ರ ಸ್ಥಳಗಳನ್ನು ಹೊಂದಿದೆ. ಕಡಿಮೆ ಜನಸಂದಣಿ ಇರುವ ಗೋಕರ್ಣವನ್ನು ಗೋವಾ ಎಂದೂ ಕರೆಯುತ್ತಾರೆ. ಕಾರಣ ಇಲ್ಲಿ ಅನೇಕ ಆಕರ್ಷಕ ಕಡಲತೀರಗಳಿದ್ದು, ಅಲ್ಲಿ ನೀವು ಸ್ವಲ್ಪ ಸಮಯವನ್ನು ಶಾಂತಿಯುತವಾಗಿ ಕಳೆಯಬಹುದು. ಇಲ್ಲಿನ ಕಡಲತೀರಗಳು ವಿಶ್ರಾಂತಿಗಾಗಿ ಆಕರ್ಷಣೆಯ ಕೇಂದ್ರವಾಗಿದೆ.
ಭೇಟಿ ನೀಡುವ ಸಮಯ: ನೀವು ವರ್ಷದ ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.
ಪ್ರಮುಖ ಆಕರ್ಷಣೆಗಳು: ಓಂ ಬೀಚ್, ಮಹಾಬಲೇಶ್ವರ ದೇವಸ್ಥಾನ, ಕುಡ್ಲೆ ಬೀಚ್, ಗೋಕರ್ಣ ಬೀಚ್, ಯಾಣ, ಹಾಫ್ ಮೂನ್ ಬೀಚ್, ಕೋಟಿ ತೀರ್ಥ, ಪ್ಯಾರಡೈಸ್ ಬೀಚ್
ತಲುಪುವುದು ಹೇಗೆ?
ಹತ್ತಿರದ ವಿಮಾನ ನಿಲ್ದಾಣ ದಾಬೋಲಿಮ್, ಗೋವಾ. ಇಲ್ಲಿಂದ ಟ್ಯಾಕ್ಸಿ ಅಥವಾ ರೈಲಿನ ಮೂಲಕ ಹೋಗಬಹುದು. ಹತ್ತಿರದ ರೈಲು ನಿಲ್ದಾಣ- ಗೋಕರ್ಣ ರಸ್ತೆ. ರಸ್ತೆಯ ಮೂಲಕ ಗೋಕರ್ಣವು ಭಾರತದ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ.


Click it and Unblock the Notifications


















