Search
  • Follow NativePlanet
Share
» »ಮಾನವ ಮುಖದ ಗಣೇಶ ಪ್ರತಿಮೆ ಹೊಂದಿರುವ ವಿಶ್ವದ ಏಕೈಕ ದೇವಾಲಯವಿದು!

ಮಾನವ ಮುಖದ ಗಣೇಶ ಪ್ರತಿಮೆ ಹೊಂದಿರುವ ವಿಶ್ವದ ಏಕೈಕ ದೇವಾಲಯವಿದು!

ದೇಶಾದ್ಯಂತ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟ ಮತ್ತು ಪ್ರಸಿದ್ಧವಾದ ಅನೇಕ ದೇವಾಲಯಗಳನ್ನು ಕಾಣಬಹುದು. ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶೇಷತೆ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಈ ದೇವಾಲಯಗಳಲ್ಲಿ ಒಂದು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ. ಇಲ್ಲಿ ಸ್ಥಾಪಿಸಲಾಗಿರುವ ಗಣೇಶ ದೇವಾಲಯವು ದೇಶದ ಇತರ ದೇವಾಲಯಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಗಣೇಶನ ವಿಗ್ರಹ ಗಜ ರೂಪದಲ್ಲಿ ಇರುತ್ತದೆ.

ಆದರೆ ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಮಾನವ ಮುಖ (ನರ ಮುಖ ವಿನಾಯಕ) ಹೊಂದಿದೆ. ಈ ವಿಶೇಷತೆಯಿಂದಾಗಿ ಈ ದೇವಾಲಯವು ಎಷ್ಟು ಪ್ರಸಿದ್ಧವಾಗಿದೆ ಎಂದರೆ ಇಲ್ಲಿಗೆ ಭೇಟಿ ನೀಡಲು ದೂರದೂರುಗಳಿಂದ ಜನರು ಬರುತ್ತಾರೆ. ಇದಲ್ಲದೆ, ಪೂರ್ವಜರ ಶಾಂತಿಗಾಗಿ ಜನರು ಈ ದೇವಾಲಯಕ್ಕೆ ಬರುತ್ತಾರೆ. ಹಾಗಾಗಿ ಈ ದೇವಾಲಯದ ವಿಶೇಷತೆ ಮತ್ತು ಗಣೇಶನ ವಿಗ್ರಹ ಮಾನವ ರೂಪದಲ್ಲಿರುವ ಹಿಂದಿನ ಕಥೆ ತಿಳಿಯೋಣ...

ganesha4-1530256722-1661153974.jpg -Properties

ಮಾನವ ಮುಖದ ಗಣೇಶ ಪ್ರತಿಮೆಯ ಕಥೆ

ತಿಲತರ್ಪಣಪುರಿಯು ತಮಿಳುನಾಡಿನ ಕೊತ್ತನೂರಿನಿಂದ ಸುಮಾರು 3 ಕಿಮೀ ದೂರದಲ್ಲಿದ್ದು, ಈ ಸ್ಥಳವು ಮುಕ್ತೇಶ್ವರರ್ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರಸಿದ್ಧ ದೇಗುಲದ ಹೊರಗೆ ಮಾನವ ಮುಖದ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟವಾದ ದೇವಾಲಯವಿದೆ. ಈ ದೇವಾಲಯವನ್ನು ಆದಿ ವಿನಾಯಕ ದೇವಸ್ಥಾನ ಅಥವಾ ನರಮುಗ ವಿನಾಯಕ ದೇವಸ್ಥಾನ ಎಂದು ಕರೆಯಲಾಗುತ್ತದೆ. ಮಾನವ ಮುಖ ಹೊಂದಿರುವ ಕಾರಣ, ಈ ಆದಿ ವಿನಾಯಕನನ್ನು 'ನರ ಮುಖ' ವಿನಾಯಕ ಎಂದೂ ಕರೆಯುತ್ತಾರೆ.

ಶಿವನು ಕೋಪಗೊಂಡು ಗಣೇಶನ ಶಿರವನ್ನು ಕತ್ತರಿಸಿದ ಕಥೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಈ ಘಟನೆಯ ನಂತರ ಗಣೇಶನ ಮುಖ ಗಜ ರೂಪದಲ್ಲಿ ಇದೆ. ಅಂದಿನಿಂದ ಪ್ರತಿ ದೇವಾಲಯದಲ್ಲಿ ಗಣೇಶನ ವಿಗ್ರಹವನ್ನು ಇದೇ ರೂಪದಲ್ಲಿ ಸ್ಥಾಪಿಸಲಾಗಿದೆ. ಆದರೆ ಆದಿ ವಿನಾಯಕನ ದೇವಸ್ಥಾನದಲ್ಲಿ ಗಣಪತಿಯು ಮಾನವ ಮುಖವನ್ನು ಹೊಂದಲು ಕಾರಣವೇನೆಂದರೆ, ಗಜ ಮುಖವನ್ನು ಹೊಂದುವ ಮೊದಲು, ಗಣೇಶನ ಮುಖವು ಮಾನವನ ಮುಖವಾಗಿತ್ತು. ಆದ್ದರಿಂದ ಅವನನ್ನು ಇಲ್ಲಿ ಇದೇ ರೂಪದಲ್ಲಿ ಪೂಜಿಸಲಾಗುತ್ತದೆ.

ಇಲ್ಲಿ ಪೂರ್ವಜರ ಶಾಂತಿಗಾಗಿ ಪೂಜೆ ನಡೆಯುತ್ತದೆ

ರಾಮನು ಒಮ್ಮೆ ತಮ್ಮ ಪೂರ್ವಜರ ಆತ್ಮಗಳನ್ನು ಆದಿ ವಿನಾಯಕ ದೇವಾಲಯದಲ್ಲಿ ಪೂಜಿಸುತ್ತಾನೆ. ಅಂದಿನಿಂದ ಜನರು ತಮ್ಮ ಪೂರ್ವಜರ ಶಾಂತಿಗಾಗಿ ಈ ದೇವಾಲಯದಲ್ಲಿ ಪೂಜಿಸುತ್ತಾರೆ. ಇದೇ ಕಾರಣಕ್ಕೆ ಈ ದೇವಾಲಯವನ್ನು ತಿಲತರ್ಪಣಪುರಿ ಎಂದೂ ಕರೆಯುತ್ತಾರೆ. ಪೂರ್ವಜರ ಶಾಂತಿಗಾಗಿ ಪೂಜೆಯನ್ನು ನದಿಯ ದಡದಲ್ಲಿ ಮಾಡಲಾಗುತ್ತದೆ. ದೇವಾಲಯದ ಒಳಗೆ ಧಾರ್ಮಿಕ ಆಚರಣೆಗಳನ್ನು ಮಾಡಲಾಗುತ್ತದೆ. ಈ ದೇವಾಲಯ ನೋಡಲು ಸರಳವಾಗಿ ಕಂಡರೂ, ಸಾಕಷ್ಟು ಮಹತ್ವ ಹೊಂದಿದೆ. ತಿಲತರ್ಪಣ ಎಂದರೆ ಪೂರ್ವಜರಿಗೆ ಸಮರ್ಪಿತ ಮತ್ತು ಪುರಿ ಎಂದರೆ ನಗರ. ಹಾಗಾಗಿ ಇದನ್ನು ತಿಲತರ್ಪಣಪುರಿ ಎಂದು ಕರೆಯಲಾಗುತ್ತದೆ. ಈ ಎಲ್ಲಾ ವಿಶಿಷ್ಟ ಸಂಗತಿಗಳಿಂದಾಗಿ ಜನರು ಪ್ರತಿದಿನ ಇಲ್ಲಿಗೆ ಬಂದು ದೇವರ ದರ್ಶನ ಮಾಡಿ ಪೂಜೆ ಮಾಡುತ್ತಾರೆ.

ಇಲ್ಲಿ ಶಿವ ಮತ್ತು ಸರಸ್ವತಿಯನ್ನೂ ಪೂಜಿಸಲಾಗುತ್ತದೆ

ಆದಿ ವಿನಾಯಕನ ದೇವಸ್ಥಾನದಲ್ಲಿ ಶ್ರೀ ಗಣೇಶನನ್ನು ಮಾತ್ರ ಪೂಜಿಸಲಾಗುವುದಿಲ್ಲ, ಇಲ್ಲಿ ಶಿವ ಮತ್ತು ಸರಸ್ವತಿಯನ್ನೂ ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ಶಿವನನ್ನು ವಿಶೇಷವಾಗಿ ಪೂಜಿಸಿದರೂ, ಇಲ್ಲಿಗೆ ಬರುವ ಭಕ್ತರು ಆದಿ ವಿನಾಯಕನ ಜೊತೆಗೆ ಸರಸ್ವತಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.

september-1630756430-1661153983.jpg -Properties

ದಂತಕಥೆಯ ಪ್ರಕಾರ...

ದೇವಾಲಯಕ್ಕೆ ಸಂಬಂಧಿಸಿದ ದಂತಕಥೆಯ ಪ್ರಕಾರ, ರಾಮನು ತನ್ನ ತಂದೆಯ ಶಾಂತಿಗಾಗಿ ಪ್ರಾರ್ಥಿಸುತ್ತಿದ್ದಾಗ, ಅವನ ಮುಂದೆ ಇಟ್ಟಿದ್ದ ನಾಲ್ಕು ಅಕ್ಕಿ ಉಂಡೆಗಳು (ಪಿಂಡಂ ಎಂದು ಕರೆಯಲ್ಪಡುತ್ತವೆ) ಹುಳುಗಳಾಗಿ ಮಾರ್ಪಟ್ಟವು. ಇದರಿಂದ ನಿರಾಶೆಗೊಂಡ ರಾಮನು ಶಿವನನ್ನು ಪ್ರಾರ್ಥಿಸಿದನು. ಶಿವನು ರಾಮನನ್ನು ಮಂಥರವನಕ್ಕೆ (ಈ ಸ್ಥಳದ ಹಿಂದಿನ ಹೆಸರು) ಹೋಗಿ ಅಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡಿದರು. ಅಂತೆಯೇ ರಾಮನು ಈ ದೇವಾಲಯಕ್ಕೆ ಭೇಟಿ ನೀಡಿ ತಂದೆ ದಶರಥನ ಆತ್ಮದ ಮೋಕ್ಷಕ್ಕಾಗಿ ಶಿವಪೂಜೆಯನ್ನು ಮಾಡಿದನು. ಆಶ್ಚರ್ಯದ ಸಂಗತಿಯೆಂದರೆ ನಾಲ್ಕು ಪಿಂಡಗಳು ನಾಲ್ಕು ಲಿಂಗಗಳಾದವು. ಈ ಲಿಂಗಗಳನ್ನು ಇಲ್ಲಿ ಆದಿ ವಿನಾಯಕ ದೇವಸ್ಥಾನದ ಬಳಿ ಇರುವ ಮುಕ್ತೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದೆ.

ಜನರ ನಂಬಿಕೆಗಳು

ಈ ಸ್ಥಳವನ್ನು ಕಾಶಿ ಅಥವಾ ರಾಮೇಶ್ವರಂಗೆ ಸಮಾನವೆಂದು ಪರಿಗಣಿಸಲಾಗಿದೆ. ಅಮವಾಸ್ಯೆಯ ದಿನ ಇಲ್ಲಿ ತರ್ಪಣ ಮಾಡುವುದು ವಿಶೇಷವೆಂದು ಪರಿಗಣಿಸಲಾಗಿದೆ. ಇದೊಂದು ಮುಕ್ತಿಕ್ಷೇತ್ರ. ಆದಿ ವಿನಾಯಕನ ಗುಡಿಯು ಮುಖ್ಯ ದೇವಾಲಯದ ಹೊರಭಾಗದಲ್ಲಿದೆ. ಅಷ್ಟೇ ಅಲ್ಲ, ಪ್ರತಿ ಸಂಕಷ್ಟ ಚತುರ್ಥಿಯಂದು ಮಹಾ ಗುರು ಅಗಸ್ತ್ಯರು ಆದಿ ವಿನಾಯಕನನ್ನು ಪೂಜಿಸುತ್ತಾರೆ ಎಂದು ಭಕ್ತರು ನಂಬುತ್ತಾರೆ. ಇಲ್ಲಿ ಗಣೇಶನನ್ನು ಪೂಜಿಸುವುದರಿಂದ ಕೌಟುಂಬಿಕ ಸಂಬಂಧಗಳಲ್ಲಿ ಶಾಂತಿ ನೆಲೆಸುತ್ತದೆ ಮತ್ತು ವಿನಾಯಕನ ಆಶೀರ್ವಾದದಿಂದ ಮಕ್ಕಳ ಬುದ್ಧಿಶಕ್ತಿ ಚುರುಕುಗೊಳ್ಳುತ್ತದೆ ಎಂಬ ನಂಬಿಕೆಯೂ ಇದೆ.

27-1482839181-chamundeshwari-1661153991.jpg -Properties

ದೇವಸ್ಥಾನ ಎಲ್ಲಿದೆ?

ತಿಲತರ್ಪಣಪುರಿಯು ತಮಿಳುನಾಡಿನ ಕೊತ್ತನೂರಿನಿಂದ ಸುಮಾರು 3 ಕಿಮೀ ದೂರದಲ್ಲಿದೆ. ಕೊತ್ತನೂರು ತಿರುವರೂರ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ಪಟ್ಟಣವಾಗಿದೆ. ಕೊತ್ತನೂರು ತಿರುವರೂರಿನಿಂದ 25 ಕಿಲೋಮೀಟರ್ ದೂರದಲ್ಲಿದೆ. ತಿರುವರೂರ್ ರಾಜ್ಯದ ಇತರ ಭಾಗಗಳಿಂದ ರಸ್ತೆ ಮತ್ತು ರೈಲು ಸಂಪರ್ಕ ಹೊಂದಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ತಿರುಚಿರಾಪಳ್ಳಿ ಇಂಟರ್ ನ್ಯಾಷನಲ್ ಏರ್ ಪೋರ್ಟ್.

ತಿರುವರೂರಿಗೆ ಹೋಗುವ ಮುನ್ನ...

ಇದು ಚಿಕ್ಕ ಪಟ್ಟಣವಾಗಿರುವುದರಿಂದ, ಇತರ ದೊಡ್ಡ ನಗರಗಳಂತೆ ಕೆಲವು ಮೂಲಭೂತ ಸೌಕರ್ಯಗಳು ಅಥವಾ ವಸ್ತುಗಳು ಇಲ್ಲಿ ಲಭ್ಯವಿಲ್ಲದಿರಬಹುದು. ತಿರುವರೂರ್ ದೇವಾಲಯದ ಪಟ್ಟಣವಾಗಿರುವುದರಿಂದ ಸಂಪ್ರದಾಯಬದ್ಧವಾಗಿ ಉಡುಗೆ ಧರಿಸುವುದು ಉತ್ತಮ. ಕತ್ತಲಾದ ನಂತರ ಪಟ್ಟಣವನ್ನು ಅನ್ವೇಷಿಸುವುದು ಸೂಕ್ತವಲ್ಲ, ಏಕೆಂದರೆ ಸ್ಥಳೀಯರು ಬೇಗನೆ ಮನೆಗೆ ಹೋಗುತ್ತಾರೆ ಮತ್ತು ಬೀದಿಗಳು ಸಂಪೂರ್ಣವಾಗಿ ನಿರ್ಜನವಾಗುತ್ತವೆ.

ಭೇಟಿ ನೀಡುವ ಸಮಯ

ಪ್ರವಾಸಿಗರು ವರ್ಷವಿಡೀ ಈ ದೇವಾಲಯದ ಪಟ್ಟಣಕ್ಕೆ ಬರುತ್ತಾರೆಯಾದರೂ, ತಿರುವರೂರ್ ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಡಿಸೆಂಬರ್ ಮತ್ತು ಮಾರ್ಚ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X