ಸ್ಕಂದ ಹಾಗೂ ಪದ್ಮ ಪುರಾಣದಲ್ಲಿ ಹೇಳಲಾಗಿರುವಂತೆ, ದುರ್ಗಮಾಸುರನೆಂಬ ರಾಕ್ಷಸ ಜನರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಚಿಂತಾಕ್ರಾಂತರಾಗಿದ್ದ ಜನರು ದೇವತೆಗಳ ಮೊರೆ ಹೊಕ್ಕರು. ಆದರೆ ಆ ರಾಕ್ಷಸ ಎಷ್ಟೊಂದು ಬಲಶಾಲಿಯಾಗಿದ್ದನೆಂದರೆ ದೇವತೆಗಳಿಂದಲೂ ಸಹ ಅವನನ್ನು ಸೋಲಿಸಲಾಗಲಿಲ್ಲ.
ಎಂದಿಗೂ ಮರೆಯಲಾಗದ ಬಾದಾಮಿ
ಹೀಗೆ ದಿನದಿಂದ ದಿನಕ್ಕೆ ತನ್ನ ಕ್ರೂರತನವನ್ನು ಹೆಚ್ಚಿಸಿದ ಆ ಅಸುರನಿಂದ ದೇವತೆಗಳೂ ಸಹ ಭಯಭೀತರಾದರು ಹಾಗೂ ಕೊನೆಗೆ ಶಿವನ ಮೊರೆ ಹೋದರು. ಶಿವನ ಅಣತಿಯಂತೆ ಯಜ್ಞ ಮಾಡಲು ಪ್ರಾರಂಭಿಸಿದರು. ಹೀಗೆ ಯಜ್ಞ ನಡೆಯುವ ಸಂದರ್ಭದಲ್ಲಿಯೆ ಯಜ್ಞ ಕುಂಡದ ಅಗ್ನಿಯಿಂದ ದೇವಿಯೊಬ್ಬಳು ಪ್ರಕಟವಾದಳು. ಆಕೆಯೆ ಬನಶಂಕರಿ ದೇವಿ.
ಬನಶಂಕರಿ ದೇವಿಯು ದುರ್ಗಮಾಸುರನೊಂದಿಗೆ ಯುದ್ಧ ಮಾಡಿ ಆತನನ್ನು ಸಂಹರಿಸಿದಳು. ಪಾರ್ವತಿಯ ಅವತಾರವೆ ಆದ ಬನಶಂಕರಿಯು ಅಂದಿನಿಂದ ಜನರ ಕಷ್ಟಗಳನ್ನು ನಿವಾರಿಸುವ ದೇವಿಯಾಗಿ ಪೂಜಿಸಲ್ಪಡಹತ್ತಿದಳು. ಇವಳನ್ನು ಶಾಖಾಂಬರಿ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.
ಬನಶಂಕರಿ ಹೊಸ ದೇವಾಲಯ, ಚಿತ್ರಕೃಪೆ: Rangakuvara
ಇನ್ನೊಂದು ಮೂಲದಂತೆ ಜನರು ಆಹಾರವಿಲ್ಲದೆ ತತ್ತರಿಸಿದ್ದಾಗ ಅವರ ಹಸಿವನ್ನು ನೀಗಿಸಲೆಂದು ಆಹಾರ ಧಾನ್ಯಗಳ ಬೆಳೆಗಳನ್ನು ಎಲ್ಲೆಡೆ ಬೆಳೆಯುವಂತೆ ಮಾಡಿ, ಮತ್ತೆ ಎಲ್ಲೆಡೆ ಕಾಡುಗಳು ಹಣ್ಣುಗಳ ಗಿಡ ಮರಗಳಿಂದ ತುಂಬುವಂತೆ ಮಾಡಿದ ದೇವಿಯೆ ಬನಶಂಕರಿ ಅಥವಾ ವನಶಂಕರಿ. ಇನ್ನೂ ಬೆಂಗಳೂರಿನ ಬನಶಂಕರಿ ದೇವಾಲಯದ ವಿಷಯಕ್ಕೆ ಬರೋಣ.
1915 ರಲ್ಲಿ ಬೆಂಗಳೂರಿನಲ್ಲಿ ವಾಸವಿದ್ದ ಸೋಮಣ್ಣ ಶೆಟ್ಟಿ ಎಂಬ ಬನಶಂಕರಿ ದೇವಿಯ ಪರಮ ಭಕ್ತರೊಬ್ಬರು ಬಾದಾಮಿಯ ಬನಶಂಕರಿ ದೇವಾಲಯದಿಂದ ದೇವಿಯ ವಿಗ್ರಹವನ್ನು ತಂದು ಇಲ್ಲಿ ಪ್ರತಿಷ್ಠಾಪಿಸಿದರು. ಅಂದಿನಿಂದ ನಿಧಾನವಾಗಿ ಈ ದೇವಿಯ ದೇವಾಲಯ ಜನಪ್ರೀಯವಾಗತೊಡಗಿತು ಕೊನೆಗೆ ಆ ಸ್ಥಳಕ್ಕೆ (ಬಡಾವಣೆ) ಬನಶಂಕರಿ ಎಂದೆ ಹೆಸರು ಬಂದಿತು.
ಬನಶಂಕರಿ ಹೊಸ ದೇವಾಲಯ, ಚಿತ್ರಕೃಪೆ: Rangakuvara
ಈ ಬನಶಂಕರಿ ದೇವಾಲಯದ ಮತ್ತೊಂದು ವಿಶೇಷತೆ ಎಂದರೆ ರಾಹು ಕಾಲದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಹೌದು, ಸಾಮಾನ್ಯವಾಗಿ ರಾಹು ಕಾಲ ಉತ್ತಮವಲ್ಲವೆಂದು ಯಾವ ಶುಭ ಕಾರ್ಯವನ್ನು ಆ ಸಮಯದಲ್ಲಿ ಮಾಡಲಾಗುವುದಿಲ್ಲ. ಆದರೆ ಈ ಬನಶಂಕರಿ ದೇವಾಲಯದಲ್ಲಿ ದೇವಿಯನ್ನು ರಾಹು ಕಾಲದಲ್ಲಿಯೆ ಪೂಜಿಸಲಾಗುತ್ತದೆ.
ಬನಶಂಕರಿ ಪುರಾತನ ದೇವಾಲಯ, ಚಿತ್ರಕೃಪೆ: Naane.naanu
ಹಿಂದೊಮ್ಮೆ ಮೂರು ಪತಿವೃತೆಯರು ಈ ದೇವಾಲಯಕ್ಕೆ ಬಂದು ಇಲ್ಲಿರುವ ಅರ್ಚಕರನ್ನು ರಾಹು ಕಾಲದಲ್ಲೆ ದೇವಿಯನ್ನು ಪೂಜಿಸಲು ಒತ್ತಡ ಹೇರಿದರು. ಅದರಂತೆ ಅರ್ಚಕ ಹಾಗೆ ದೇವಿಗೆ ಪೂಜೆ ಸಲ್ಲಿಸಿ ಹೊರಬರುವಷ್ಟರಲ್ಲೆ ಎಲ್ಲೂ ಕಾಣದ ಹಾಗೆ ಆ ಪತಿವೃತೆಯರು ಮಾಯವಾಗಿದ್ದರು. ಸ್ವತಃ ದೇವಿಯರೆ ರಾಹು ಕಾಲದಲ್ಲಿ ದೇವಿಯನ್ನು ಪೂಜಿಸಿದರೆ ಏನೂ ಆಗುವುದಿಲ್ಲವೆಂದು ತೋರಿಸಿರಬಹುದೆಂದು ನಂಬಲಾಗಿ ಅಂದಿನಿಂದ ಇಲ್ಲಿ ರಾಹು ಕಾಲದಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ.
ಕರ್ನಾಟಕದಲ್ಲಿರುವ ದೇವಿಗೆ ಮುಡಿಪಾದ ಸುಂದರ ದೇವಾಲಯಗಳು
ಇಲ್ಲಿ ಕಾಣಬಹುದಾದ ಮತ್ತೊಂದು ವಿಶೇಷವೆಂದರೆ ನಿಂಬೆ ಹಣ್ಣಿನಲ್ಲಿ ಜ್ಯೋತಿ ಬೆಳಗಿಸಿ ದೇವಿಗೆ ಭಕ್ತರೆ ಆರತಿ ಬೆಳಗುವುದು. ನಿಂಬೆ ಹಣ್ಣನ್ನು ಎರಡು ತುಂಡು ಮಾಡಿ ಅದರೊಳಗಿನ ಎಲ್ಲ ತಿರುಳನ್ನು ತೆಗೆದು ಅದರಲ್ಲಿ ಬತ್ತಿ ಹಾಗೂ ಎಣ್ಣೆ ಹಾಕಿ ದೀಪ ಬೆಳಗಿಸಿ ಆ ದೀಪದಿಂದಲೆ ದೇವಿಗೆ ಆರತಿಯನ್ನು ಭೇಟಿ ನೀಡುವ ಭಕ್ತರು ಮಾಡುತ್ತಾರೆ.