ರಾಯರು ಮಂತ್ರಾಲಯದಲ್ಲಿ ಹೋಗಿ ನೆಲೆಸುವ ಮುನ್ನ ಹನ್ನೆರಡು ವರ್ಷಗಳ ಕಾಲ ತಪಸ್ಸು ಮಾಡಿರುವ ಸ್ಥಳ ಇಂದು ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಇಲ್ಲೇ ರಾಯರು ಹನುಮಂತನ ದರ್ಶನ ಪಡೆದಿದ್ದು. ಇಂದು ನಾವು ಆ ಪವಿತ್ರ ದೇವಸ್ಥಾನದ ಬಗ್ಗೆ ತಿಳಿಸಲಿದ್ದೇವೆ.

ಎಲ್ಲಿದೆ ಈ ದೇವಾಲಯ
ರಾಯರು ಹನ್ನೆರಡು ವರ್ಷಗಳ ಕಾಲ ತಪಸ್ಸನ್ನಾಚರಿಸಿ ಆಂಜನೆಯ ಪಂಚಮುಖಿಯಾಗಿ ದರ್ಶನ ನೀಡಿದಂತಹ ಪುಣ್ಯ ಕ್ಷೇತ್ರ ಇದಾಗಿದೆ. ಇಂತಹ ಪುಣ್ಯಕ್ಷೇತ್ರ ಇರುವುದು ರಾಯಚೂರಿನ ಗಾಂಧಲ್ ಗ್ರಾಮದಲ್ಲಿದೆ.

ಪಂಚಮುಖಿ ಆಂಜನೇಯ
ಇಲ್ಲಿ ಪಂಚಮುಖಿ ದೇವರ ದರ್ಶನವಾಗುತ್ತದೆ. ಹನುಮ, ಹಯಗ್ರೀವ, ವರಹಾ, ನರಸಿಂಹ, ಗರುಡ ಈ ಐದು ದೇವತೆಗಳನ್ನು ಒಂದೇ ಸ್ಥಳದಲ್ಲಿ ಕಾಣಬಹುದು.

ಹನ್ನೆರಡು ವರ್ಷಗಳ ಕಾಲ ತಪಸ್ಸು
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಹನ್ನೆರಡು ವರ್ಷಗಳ ಕಾಲ ತಪಸ್ಸು ಆಚರಿಸಿದ ಗುಹೆಯು ಒಂದು ಗುಡ್ಡದ ಮೇಲಿದೆ. ಗುಡ್ಡದ ಸುತ್ತಲಿನ ಕಲ್ಲಿನ ರಚನೆಗಳು ನೋಡಲು ಅದ್ಭುತವಾಗಿವೆ. ಇಲ್ಲಿ ಕಲ್ಲಿನ ಮೇಲೆ ಮೂಡಿ ಬಂದಿದ್ದಾನೆ ಆಂಜನೇಯ.

ಬೆಟ್ಟದ ಮೇಲಿರುವ ದೇವಾಲಯ
ಒಮ್ಮೆ ನೀವು ಬೆಟ್ಟದ ತುದಿಗೆ ತಲುಪಿದರೆ ಅಲ್ಲಿ ಗುಹೆಯ ದೇವಾಲಯದ ಗರ್ಭಗುಡಿ ಕಾಣುತ್ತದೆ. ಗುಹೆಯೊಳಗೆ ಹೋಗುತ್ತಿದ್ದಂತೆ ಇದೊಂದು ಪವಿತ್ರ ಸ್ಥಳ ಎನ್ನುವುದು ನಿಮಗೆ ಭಾಸವಾಗುತ್ತದೆ. ಗುರು ರಾಘವೇಂದ್ರ ಸ್ವಾಮಿಗಳಯ ತಪಸ್ಸು ಮಾಡಲು ಈ ಗುಹೆಯನ್ನೇ ಆಯ್ಕೆ ಮಾಡಿರುವುದರಲ್ಲಿ ಆಶ್ಚರ್ಯವೇ ಇಲ್ಲ. ಏಕೆಂದರೆ ಈ ಸ್ಥಳವು ಅಷ್ಟೊಂದು ಪ್ರಶಾಂತವಾಗಿದೆ ಮತ್ತು ಈಗಲೂ ಪರಿಶುದ್ಧವಾಗಿದೆ.

ಪಂಚಮುಖಿ ಕ್ಷೇತ್ರ
ಶ್ರೀ ಹನುಮಾನ್ ಪಂಚ ಮುಖಿಯಾಗಿ ಗುರು ರಾಘವೇಂದ್ರರಿಗೆ ದರ್ಶನ ನೀಡಿದ್ದರಿಂದ ಈ ಸ್ಥಳವನ್ನು ಈಗ ಪಂಚಮುಖಿ ಕ್ಷೇತ್ರ ಎಂದು ಕರೆಯಲಾಗುತ್ತದೆ. ಇದೊಂದು ಧಾರ್ಮಿಕ ಸ್ಥಳವಾಗಿದೆ. ಈ ಸ್ಥಳದಲ್ಲಿ ಶ್ರೀ ಪಂಚಮುಖಿ ಹನುಮಾನ್ಗೆ ನಿಯಮಿತವಾಗಿ ಪ್ರಾರ್ಥನೆ ಮತ್ತು ಪೂಜೆಯನ್ನು ನಡೆಸಲಾಗುತ್ತದೆ.

ಗುಹಾ ದೇವಾಲಯ
ಕಲ್ಲಿನಲ್ಲಿ ಅವರಿಸಿರುವ ಆಂಜನೇಯನಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಹಿಂದಿನ ಕಾಲದಲ್ಲಿದ್ದ ಶ್ರೀ ಅನಂತಾಚಾರ್ಯ ಎಂಬ ಅರ್ಚಕರು ಈ ಸ್ಥಳದಲ್ಲಿ ರುದ್ರದೇವರು, ಗಣಪತಿ ಮತ್ತು ನಾಗ ವಿಗ್ರಹಗಳನ್ನು ಸ್ಥಾಪಿಸಿದರು.

ಆಂಜನೇಯ ಸ್ವಾಮಿ ಪಾದರಕ್ಷೆ
ಆಂಜನೇಯನಿಗೆ ಪ್ರತಿವರ್ಷ ಭಕ್ತರು ಪಾದರಕ್ಷೆಯನ್ನು ಮಾಡಿಕೊಡುತ್ತಾರೆ. ಆಂಜನೇಯ ಸ್ವಾಮಿ ಆ ಪಾದರಕ್ಷೆಯನ್ನು ಹಾಕಿಕೊಂಡು ಓಡಾಡುತ್ತಾರೆ ಹಾಗಾಗಿಪ್ರತಿವರ್ಷ ಆ ಚಪ್ಪಲಿ ಸವೆಯುತ್ತದೆ ಎನ್ನಲಾಗುತ್ತದೆ. ಆಂಜನೇಯ ವಿಶ್ರಾಂತಿಗೆ ಬಳಸುತ್ತಿದ್ದ ಕಲ್ಲು ಇಲ್ಲಿದೆ ಅದನ್ನು ಹಾಸಿಗೆ ದಿಂಬಾಗಿ ಬಳಸುತ್ತಿದ್ದರಯ ಎನ್ನುವುದು ನಂಬಿಕೆ.

ಗ್ರಾಮದೇವತೆ ಯೆರಕಲಮ್ಮ
ಇಲ್ಲಿಂದ ಸುಮಾರು ೫೦೦ ಮೀ ದೂರದಲ್ಲಿ ಗ್ರಾಮದೇವತೆ ಯೆರಕಲಮ್ಮ ದೇವಸ್ಥಾನವಿದೆ. ಇಲ್ಲಿನ ಮೂರ್ತಿಯನ್ನು ಉದ್ಭವ ಮೂರ್ತಿ ಎನ್ನಲಾಗುತ್ತದೆ. ಇಲ್ಲಿ ತಾಯತದಂತ ಯಂತ್ರವನ್ನು ಕಟ್ಟುತ್ತಾರೆ. ಮಕ್ಕಳಿಗೆ ಈ ಯಂತ್ರವನ್ನು ಕಟ್ಟುತ್ತಾರೆ. ಇದರಿಂದ ಅವರಲ್ಲಿ ಭಯ ಉಂಟಾಗೋದಿಲ್ಲ. ರೋಗಗಳು ನಿವಾರಣೆಯಾಗುತ್ತದೆ ಎನ್ನುವುದು ಜನರ ನಂಬಿಕೆ.

ಮಂತ್ರಾಲಯಕ್ಕೆ ಸಮೀಪದಲ್ಲಿದೆ
ಮಂತ್ರಾಲಯ ಎಂದು ಕರೆಯಲ್ಪಡುವ ಗ್ರಾಮ ಮಂಚಲೆ ಈಗ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿದೆ. ಗಾಂಧಲ್ ಗ್ರಾಮ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿದೆ. ಈ ಎರಡು ಸ್ಥಳಗಳ ನಡುವಿನ ಅಂತರವು ಮೂವತ್ತು ನಿಮಿಷಗಳಷ್ಟೇ.


Click it and Unblock the Notifications

















