ಮನಸ್ಸಿನ ಒತ್ತಡ ಹೆಚ್ಚಾದಾಗ ಅಥವಾ ದುಃಖದಲ್ಲಿದ್ದಾಗ ಬಯಸುವುದು ಶಾಂತಿಯನ್ನ, ಹಿಡಿ ಪ್ರೀತಿಯನ್ನ. ಅಂತಹ ಒಂದು ಸಮಾಧಾನ ನೀಡುವಂತಹ ದೇವಸ್ಥಾನವೆಂದರೆ ಹಲಸೂರಿನ ಸೋಮೇಶ್ವರ ದೇಗುಲ. ಬೆಂಗಳೂರಿನ ಪುರಾತನ ದೇವಾಲಯದ ಸಾಲಿನಲ್ಲಿ ನಿಲ್ಲುವ ಈ ಗುಡಿ ಪ್ರಸಿದ್ಧ ಪವಿತ್ರ ಕ್ಷೇತ್ರ.
ಮನೋಹರವಾದ ವಾಸ್ತು ಶಿಲ್ಪವನ್ನು ಹೊಂದಿರುವ ಈ ದೇಗುಲಕ್ಕೆ ವಾರದ ರಜೆಯಲ್ಲಿ ಬರಬಹುದು. ಇತಿಹಾಸದ ಪ್ರಕಾರ ಚೋಳರ ಕಾಲದಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದರು. ನಂತರದ ದಿನಗಳಲ್ಲಿ ನಾಡಪ್ರಭು ಕೆಂಪೇ ಗೌಡರು ದೇವಾಲಯದ ಆವರಣದ ಗೋಡೆ ಹಾಗೂ ಗೋಪುರವನ್ನು ಕಟ್ಟಿಸಿದರು ಎನ್ನಲಾಗುತ್ತದೆ.
PC: wikipedia.org
ದೇಗುಲದ ಒಳಗೆ
ದೇವಸ್ಥಾನದ ಗರ್ಭ ಗುಡಿಯಲ್ಲಿ ಶಿವನು ಸೋಮೇಶ್ವರನ ರೂಪದಲ್ಲಿ ಲಿಂಗರೂಪಿಯಾಗಿ ನೆಲೆಸಿದ್ದಾನೆ. ಭೀಮೇಶ್ವರ, ಪಂಚಲಿಂಗೇಶ್ವರ, ನಂಜುಂಡೇಶ್ವರ ಹಾಗೂ ಅರುಣಾಚಲೇಶ್ವರ ಮೂರ್ತಿಗಳಿವೆ. ಅಲ್ಲದೆ ಗಣಪತಿ, ಆಂಜನೇಯ ಹಾಗೂ ಕಾಮಾಕ್ಷಿ ದೇವರಿಗೆ ಪ್ರತ್ಯೇಕವಾದ ಗುಡಿಗಳನ್ನು ನಿರ್ಮಿಸಲಾಗಿದೆ. ಇಲ್ಲಿಯ ಇನ್ನೊಂದು ವಿಶೇಷವೆಂದರೆ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರಾದ ತ್ರಿಮೂರ್ತಿಗಳಿಗೆ ಪೂಜೆ ಸಲ್ಲಿಸುವುದು.
PC: wikipedia.org
ಮನೋಹರ ವಿನ್ಯಾಸ
ಚೋಳರ ಕಾಲದ ವಾಸ್ತು ಶಿಲ್ಪಕ್ಕೆ ಕನ್ನಡಿ ಹಿಡಿಯುವ ಈ ದೇಗುಲದಲ್ಲಿ ಮುಖಮಂಟಪ ಹೆಚ್ಚು ಆಕರ್ಷಣೆಯಿಂದ ಕೂಡಿದೆ. ಗರ್ಭಗೃಹ, ಸುಖನಾಸಿ, ನವರಂಗ, ಎತ್ತರವಾದ ಶಿಲಾ ಸ್ತಂಭ ಹಾಗೂ ರಾಜಗೋಪುರಗಳಿರುವುದನ್ನು ಕಾಣಬಹುದು.
ಈ ದೇಗುಲದ ಗೋಡೆಗಳ ಮೇಲೆ ಆನೆ, ಕನ್ನಿಕೆಯರು, ಗಿರಿಜಾ ಕಲ್ಯಾಣ, ಶಿವ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ಋಷಿಮುನಿಗಳು ಸೇರಿದಂತೆ ಹಲವಾರು ಸೂಕ್ಷ್ಮ ಕೆತ್ತನೆಗಳಿರುವುದನ್ನು ಗಮನಿಸಬಹುದು.
PC: wikipedia.org
ವಿಶೇಷ ಪೂಜೆ
ಪ್ರತಿ ವರ್ಷ ಶಿವರಾತ್ರಿ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ಚಂದ್ರಮಾನ ಯುಗಾದಿಯಂದು ವಿಶೇಷ ಅಲಂಕಾರ ಪೂಜೆಯನ್ನು ನಡೆಸಿಕೊಡುತ್ತಾರೆ. ಭಕ್ತರು ವಿಶೇಷ ಪೂಜೆಯನ್ನು ಮಾಡಿಸಬಹುದು.