ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಬೆಂಗಳೂರಿನಿಂದ ರಸ್ತೆ ಮೂಲಕ 90 ನಿಮಿಷಗಳಲ್ಲಿ ಮುತ್ತತ್ತಿಯನ್ನು ತಲುಪಬಹುದು. ಮುತ್ತತ್ತಿ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಬರುವ ಒಂದು ಪ್ರದೇಶವಾಗಿದೆ ಎಂಬ ಪ್ರತೀತಿ ಇದೆ.
ಹನುಮಂತರಾಯ ದೇವಸ್ಥಾನ
PC: Karthik Prabhu
ಇಲ್ಲಿ ಪ್ರಸಿದ್ಧವಾದ ಹನುಮಾನ ಮಂದಿರವಿದೆ ಅದಕ್ಕೆ ಸ್ಥಳೀಯರು ಹನುಮಂತರಾಯ ದೇವಸ್ಥಾನವೆಂದು ಕರೆಯುತ್ತಾರೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ. ಕಾವೇರಿ ನದಿ ನೀರಿನಲ್ಲಿ ಭಾರಿ ಜನಪ್ರಿಯ ಸಾಹಸ ಕ್ರೀಡೆ ಕೋರಲ್ ರೈಡ್ ನ್ನು ಇಲ್ಲಿ ಪ್ರವಾಸಿಗರು ಆನಂದಿಸಬಹುದು.
ಕಾವೇರಿ ವನ್ಯಜೀವಿ ಧಾಮ
PC: Karthik Prabhu
ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿರುವ ಮುತ್ತತ್ತಿ ಗ್ರಾಮದ ಪ್ರಕೃತಿ ಸೌಂದರ್ಯ ಮನ ಸೆಳೆಯುತ್ತದೆ. ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳವುಳ್ಳ ಸಣ್ಣ ಹಳ್ಳಗಳು ಇಲ್ಲಿವೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಈ ಅರಣ್ಯದಲ್ಲಿ ನೆಲೆಸಿವೆ. ಒಂದರ ಮೇಲೊಂದರಂತೆ ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಕಾಡುಕೋಣ, ಕಾಡುಹಂದಿ, ವಿವಿಧ ತಳಿಯ ಅಳಿಲು, ಜಿಂಕೆ, ಸಾಂಬಾರ್ ಮುಂತಾದ ಪ್ರಾಣಿಗಳು ಈ ಕಾಡಿನಲ್ಲಿ ನೆಲೆಸಿವೆ.
ಚಾರಣ ಕೈಗೊಳ್ಳಬಹುದು
PC: Karthik Prabhu
ಮತ್ತೊಂದು ಪ್ರವಾಸಿ ತಾಣವಾಗಿರುವ ಭೀಮೇಶ್ವರಿ ಬಳಿ ಇರುವ ಮುತ್ತತ್ತಿ ಸುಂದರ ಪ್ರಾಕೃತಿಕ ಸೌಂದರ್ಯದೊಂದಿಗೆ ಚಾರಣಪ್ರಿಯರಿಗೆ ಸಂತಸ ಮೂಡಿಸುತ್ತದೆ. ಅದಕ್ಕೆಂದೇ ಅತೀ ಹೆಚ್ಚಿನ ಪ್ರಮಾಣದ ಚಾರಣಪ್ರಿಯರು ಇಲ್ಲಿಗೆ ಬರುತ್ತಾರೆ.ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಈ ಅರಣ್ಯದಲ್ಲಿ ಪ್ರವಾಸಿಗರು ಚಾರಣ ಕೈಗೊಳ್ಳಬಹುದು. ಇಲ್ಲಿರುವ ಸೊಲಿಗೆರೆ ಬೆಟ್ಟ ಸಮುದ್ರ ಮಟ್ಟದಿಂದ 1125 ಮೀ. ನಷ್ಟು ಎತ್ತರದಲ್ಲಿರುವ ಸೊಲಿಗೆರೆ ಬೆಟ್ಟದಿಂದ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಂದ ಚಾರಣ ಮಾಡುತ್ತ ನಿಸರ್ಗಧಾಮವನ್ನು ನೋಡುತ್ತ ಭೀಮೇಶ್ವರಿ ಮತ್ತು ಸಂಗಮ ತಲುಪಬಹುದು. ಬೆಂಗಳೂರಿನ ಜನತೆಗೆ ಮುತ್ತತ್ತಿಯು ಅಚ್ಚುಮೆಚ್ಚಿನ ಪಿಕ್ ನಿಕ್ ತಾಣವಾಗಿದೆ. ಪ್ರವಾಸಿಗರು ಇಲ್ಲಿ ಪ್ರಕೃತಿ ಸೌಂದರ್ಯ, ಕಾವೇರಿ ನದಿ, ಅರಣ್ಯ ಹಾಗೂ ಚಾರಣದಂತಹ ಸಾಹಸಕ್ರೀಡೆಯನ್ನು ಆನಂದಿಸಬಹುದು.
ತಲುಪುವುದು ಹೇಗೆ?
PC: Rayabhari
ರಸ್ತೆ ಮೂಲಕ: ಸಾತನೂರು ವರೆಗೆ ಕೆ.ಎಸ್.ಆರ್ .ಟಿ.ಸಿ ಹಾಗು ಇತರೆ ಖಾಸಗಿ ಬಸ್ಸುಗಳಿದ್ದು, ಅಲ್ಲಿಂದ ಬೇರೆ ಬಸ್ಸುಗಳ ಮೂಲಕ ಮುತ್ತತ್ತಿಗೆ ಹೋಗಬಹುದಾಗಿದೆ.
ರೈಲಿನ ಮೂಲಕ: ಮುತ್ತತ್ತಿಯಿಂದ ಬೆಂಗಳೂರು ರೈಲು ನಿಲ್ದಾಣವು 96 ಕಿ.ಮೀ. ದೂರದಲ್ಲಿದೆ. ಮುತ್ತತ್ತಿಯಲ್ಲಿ ರೈಲು ನಿಲ್ದಾಣವಿಲ್ಲ. ರೈಲಿನಲ್ಲಿ ಬರುವ ಪ್ರವಾಸಿಗರು ಬೆಂಗಳೂರು ರೈಲು ನಿಲ್ದಾಣದಲ್ಲಿ ಇಳಿದುಕೊಳ್ಳಬೇಕು. ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ರೈಲು ನಿಲ್ದಾಣ ದೇಶದ ವಿವಿಧೆಡೆಯಿಂದ ಬರುವ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಮುಂಬಯಿ, ಚೆನ್ನೈ, ಕೋಲ್ಕತ್ತಾ, ದೆಹಲಿಯಿಂದ ಬರುವ ಪ್ರವಾಸಿಗರಿಗೆ ಈ ರೈಲು ನಿಲ್ದಾಣವು ಅನುಕೂಲಕರವಾಗಿದೆ. ಇಲ್ಲಿಂದ ಪ್ರವಾಸಿಗರು ನೇರವಾಗಿ ಟ್ಯಾಕ್ಸಿ ಅಥವಾ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳಿಂದ ಸಾತನೂರು ವರೆಗೂ ಬಂದು ಅಲ್ಲಿಂದ ಮುತ್ತತ್ತಿ ಗ್ರಾಮಕ್ಕೆ ಬರಬಹುದಾಗಿದೆ.
ವಿಮಾನದ ಮೂಲಕ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮುತ್ತತ್ತಿಯಿಂದ 114 ಕಿ.ಮೀ. ಅಂತರದಲ್ಲಿದೆ. ಈ ವಿಮಾನ ನಿಲ್ದಾಣವು ದೇಶಿಯ ಮತ್ತು ವಿದೇಶಿ ಪ್ರವಾಸಿಗರಿಗೆ ಅನುಕೂಲಕರವಾಗಿದೆ.