ಮೇಲುಕೋಟೆಯು ಕರ್ನಾಟಕದ ಅತ್ಯಂತ ಪ್ರಸಿದ್ದ ಧಾರ್ಮಿಕ ಸ್ಥಳಗಳಲ್ಲೊಂದಾಗಿದೆ. ಸಂತ ರಾಮಾನುಜಾಚಾರ್ಯರು ಇಲ್ಲಿ 12 ವರ್ಷಗಳ ಕಾಲ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಆದುದರಿಂದ ಇದು ವೈಷ್ಣವ ಸಂಪ್ರದಾಯದ ಕೇಂದ್ರ ಬಿಂದುವಾಯಿತು.
ಮಂಡ್ಯದ ಪಾಂಡವಪುರ ತಾಲೂಕಿನಲ್ಲಿರುವ ಪುರಾತನ ಪಟ್ಟಣವಾದ ಮೇಲುಕೋಟೆಯು ಇಲ್ಲಿಯ ಬೆಟ್ಟದ ಮೇಲಿರುವ ಶ್ರೀ ಚೆಲುವ ನಾರಾಯಣ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಮೇಲುಕೋಟೆಯು ಸಂಸ್ಕೃತ ಸಂಶೋಧನಾ ಅಕಾಡೆಮಿಯನ್ನು ಸಹ ಹೊಂದಿದ್ದು,ಇದು ಸಾವಿರಾರು ಪ್ರಾಚೀನ ಹಸ್ತಪ್ರತಿಗಳನ್ನು ಒಳಗೊಂಡಿದೆ. ದಂತಕಥೆಯ ಪ್ರಕಾರ, ಈ ಪಟ್ಟಣವು ಯಾದವಾದ್ರಿ, ತಿರುನಾರಾಯಣಪುರ, ನಾರಾಯಣಾದ್ರಿ ಮತ್ತು ವೇದಾದ್ರಿ ಎಂದು ವಿಭಿನ್ನ ಹೆಸರುಗಳನ್ನು ಹೊಂದಿತ್ತು. ಮೇಲುಕೋಟೆಯು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಜನ್ಮಸ್ಥಳವೂ ಆಗಿದೆ.
ಇಂದು, ಮೇಲುಕೋಟೆಯು ಮೈಸೂರು ಸಮೀಪವಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಮೇಲುಕೋಟೆ ಮತ್ತು ಅದರ ಸುತ್ತಮುತ್ತಲಿರುವ ಹಲವಾರು ಹಿಂದು ದೇವಾಲಯಗಳು ಪ್ರವಾಸಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು, ಹೆಸರುವಾಸಿಯಾಗಿದೆ. ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಯೋಗ ನರಸಿಂಹ ಸ್ವಾಮಿ ದೇವಸ್ಥಾನ, ರಾಯ ಗೋಪುರ, ಇಸ್ಕಾನ್ ದೇವಸ್ಥಾನ, ಮೇಲುಕೋಟೆ ದೇವಸ್ಥಾನ ವನ್ಯಜೀವಿ ಅಭಯಾರಣ್ಯ, ಪುಷ್ಕರಣಿ ಮತ್ತು ತೊಂಡನೂರು ಕೆರೆಗಳು ಮೇಲುಕೋಟೆಯ ಕೆಲವು ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ . ಮೈಸೂರು ನಗರವು ಮೇಲುಕೋಟೆಯಿಂದ ಸುಮಾರು 100 ಕಿಮೀ ದೂರದಲ್ಲಿದೆ.
ಜಾತ್ರೆಗಳು ಮತ್ತು ಹಬ್ಬಗಳು
ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಸಲಾಗುವ ವೈರಮುಡಿ ಬ್ರಹ್ಮೋತ್ಸವವು ಇಲ್ಲಿಯ ವಾರ್ಷಿಕ ಉತ್ಸವವಗಿದ್ದು, ಈ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಈ ದೇವಾಲಯದ ಉತ್ಸವದ ಸಮಯದಲ್ಲಿ ನಡೆಯುವ ಚೆಲುವನಾರಾಯಣ ಸ್ವಾಮಿಯ ಮೆರವಣಿಗೆಯು ಈ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಇಲ್ಲಿಗೆ ತಲುಪುವುದು ಹೇಗೆ?
ಮೇಲುಕೋಟೆಯು ಬೆಂಗಳೂರಿನಿಂದ ಸುಮಾರು 150ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ರಸ್ತೆಯ ಮೂಲಕ ಪ್ರಯಾಣಿಸುವವರಾಗಿದ್ದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯ ಮೂಲಕ ಪ್ರಯಾಣಿಸಬಹುದಾಗಿದೆ. ಬೆಂಗಳೂರಿನಿಂದ ನೇರವಾಗಿ ಮೇಲುಕೋಟೆಗೆ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಸೇವೆ ಇದ್ದರೂ ಸಹ ನಿರಂತರವಾಗಿ ಬಸ್ಸುಗಳ ಓಡಾಟವಿರುವುದಿಲ್ಲ. ಆದುದರಿಂದ ಮಂಡ್ಯದವರೆಗೆ ಬಸ್ಸಿನಲ್ಲಿ ಪ್ರಯಾಣಿಸಿ ಅಲ್ಲಿಂದ ಮೇಲುಕೋಟೆಗೆ ಪ್ರಯಾಣ ಬೆಳೆಸುವುದು ಸೂಕ್ತವಾದುದಾಗಿದೆ. ಮಂಡ್ಯದಿಂದ ಮೇಲುಕೋಟೆಗೆ ಕೇವಲ 40 ಕಿ.ಮೀ ಅಂತರದಲ್ಲಿದೆ.