Search
  • Follow NativePlanet
Share
» »ಕೈ ಬೀಸಿ ಕರೆಯುವ ಕೊಪ್ಪಳ ಪ್ರವಾಸ

ಕೈ ಬೀಸಿ ಕರೆಯುವ ಕೊಪ್ಪಳ ಪ್ರವಾಸ

ಉತ್ತರ ಕರ್ನಾಟಕ ಭಾಗದಲ್ಲಿ ಬರುವ ಕೊಪ್ಪಳವು ಒಂದು ಪುರಾತನ ಹಾಗೂ ಅತಿಹಾಸಿಕವಾಗಿ ಪ್ರಸಿದ್ಧವಾದ ಕ್ಷೇತ್ರವಾಗಿದೆ

By Divya

ಮನೆ ಮಂದಿಯ ಜೊತೆ ಪ್ರವಾಸಕ್ಕೆ ಹೋಗಬಹುದಾದಂತಹ ಪ್ರವಾಸ ತಾಣವೆಂದರೆ ಕೊಪ್ಪಳವೂ ಒಂದು. ಕರ್ನಾಟಕದ ಹೊಸ ಜಿಲ್ಲೆಗಳಲ್ಲಿ ಒಂದಾಗಿರುವ ಈ ಕೊಪ್ಪಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ ವಿಚಾರಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಕವಿರಾಜ ಮಾರ್ಗದಲ್ಲಿ ವಿದಿತ ಮಹಾ ಕೋಪಣ ನಗರ ಎಂದು ಉಲ್ಲೇಖವಿದೆ. ಅಶೋಕ ಚಕ್ರವರ್ತಿಯ ಶಿಲಾಶಾಸನಗಳಿಗೆ, ಶಿಲಾಯುಗದಲ್ಲಿ ಜನರು ವಾಸಿಸುತ್ತಿದ್ದ ಗವಿಗಳಿಗೆ, ಟಿಪ್ಪು ಸುಲ್ತಾನ ನಿರ್ಮಿಸಿರುವ ಕೊಪ್ಪಳ ಕೋಟೆಗೆ ಸೇರಿದಂತೆ ಅನೇಕ ವಿಚಾರಗಳಿಗೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಂತಹ ಪ್ರಸಿದ್ಧಿ ಪಡೆದ ಪುಣ್ಯ ಭೂಮಿಗೆ ಬಂದರೆ ಏನೆಲ್ಲಾ ಪ್ರದೇಶವನ್ನು ನೋಡಬಹುದು ಎಂದು ತಿಳಿಯೋಣ.

ಕೈ ಬೀಸಿ ಕರೆಯುವ ಕೊಪ್ಪಳ ಪ್ರವಾಸ

ಚಿತ್ರಕೃಪೆ:Ravibhalli

ಕೊಪ್ಪಳದ ಕೋಟೆ

ಇದು ಕೊಪ್ಪಳ ಜಿಲ್ಲೆಯ ಒಂದು ಆಕರ್ಷಣೆ. 400 ಅಡಿ ಎತ್ತರವನ್ನು ಹೊಂದಿರುವ ಈ ಕೋಟೆ ಇತಿಹಾಸ ಐತಿಹಾಸಿಕ ಕುರುಹು ಎನ್ನಲಾಗುತ್ತದೆ. 1786ರಲ್ಲಿ ನಿರ್ಮಾಣಗೊಂಡ ಈ ಕೋಟೆ ಫ್ರೆಂಚ್ ಎಂಜಿನಿಯರ್‌ಗಳ ಮಾರ್ಗದರ್ಶನದಿಂದ ನಿರ್ಮಿಸಲಾಗಿದೆ. ಭಾರತದಲ್ಲಿರುವ ಗಟ್ಟಿ ಮುಟ್ಟಾದ ಕೋಟೆಗಳಲ್ಲಿ ಇದು ಒಂದು.

ಹಮದೇವ ದೇಗುಲ

ಈ ದೇವಾಲಯ ಇಟಗಿಯಲ್ಲಿ ಬರುತ್ತದೆ. ಚಾಲುಕ್ಯರ ದೊರೆ ತ್ರಿಭುವನ ಮಲ್ಲ ವಿಕ್ರಮಾದಿತ್ಯ ನಿರ್ಮಿಸಿದ್ದನು ಎಂದು ಹೇಳಲಾಗುತ್ತದೆ. ಈ ದೇಗುಲದ ವಾಸ್ತು ಶಿಲ್ಪ ಬಹಳ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. 68 ಕಂಬಗಳನ್ನು ಒಳಗೊಂಡ ವಿಶಾಲವಾದ ಸಭಾಂಗಣವಿದೆ. ಉತ್ತಮ ಕೆತ್ತನೆಯನ್ನು ಹೊಂದಿರು ಈ ದೇಗುಲದಲ್ಲಿ ಈಶ್ವರನನ್ನು ಆರಾಧಿಸಲಾಗುತ್ತದೆ.

ಕೈ ಬೀಸಿ ಕರೆಯುವ ಕೊಪ್ಪಳ ಪ್ರವಾಸ

ಚಿತ್ರಕೃಪೆ: Ravibhalli

ಕೂಕನೂರು

ಯಲಬುರ್ಗ ತಾಲೂಕಿನಲ್ಲಿ ಬರುವ ಪುಟ್ಟ ಊರು ಕುಕನೂರು. ಇದು ಹುಬ್ಬಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಬನ್ನಿಕೊಪ್ಪದಿಂದ ಏಳು ಮೈಲಿ ದೂರದಲ್ಲಿದೆ. ಈ ಹಳ್ಳಿಯಲ್ಲಿ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಕಲ್ಲೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯವು ಬಹಳ ಪ್ರಸಿದ್ಧವಾದದ್ದು. ಕಲ್ಲೇಶ್ವರ ದೇವಾಲಯ ಆ ಕಾಲದಲ್ಲಿ ನಿರ್ಮಾಣಗೊಂಡ ಮೇಲೆ ಹೇಗಿದೆಯೋ ಹಾಗೇ ಇದೆ. ಮಲ್ಲಿಕಾರ್ಜುನ ದೇವಾಲಯಕ್ಕೆ ಕೆಲವು ಬದಲಾವಣೆಯನ್ನು ಇತ್ತೀಚಿನ ದಿನಗಳಲ್ಲಿ ಮಾಡಲಾಗಿದೆ.

ಕೈ ಬೀಸಿ ಕರೆಯುವ ಕೊಪ್ಪಳ ಪ್ರವಾಸ

ಚಿತ್ರಕೃಪೆ: wikipedia

ಕಿನ್ಹಾಲ್

ಕೊಪ್ಪಳದಿಂದ 13 ಕಿ. ಮೀ. ದೂರದಲ್ಲಿರುವ ಕಿನ್ಹಾಲ್‍ದಲ್ಲಿ ಗೊಂಬೆಗಳು ಹಾಗೂ ಕಸೂತಿ ವಸ್ತುಗಳ ತಯಾರಿಸುತ್ತಾರೆ. ಇಲ್ಲಿಯೇ ಇವುಗಳ ಉತ್ಪಾದನಾ ಕೇಂದ್ರ ಇರುವುದರಿಂದ ಮನಸ್ಸಿಗೆ ಇಷ್ಟವಾಗುವ ವಿಶೇಷ ಗೊಂಬೆಗಳನ್ನು ಖರೀದಿಸಬಹುದು.

ಕನಕಗಿರಿ

ಸ್ವರ್ಣಗಿರಿ ಎಂತಲೂ ಕರೆಯಲ್ಪಡುವ ಕನಕಗಿರಿ ಕೊಪ್ಪಳದಿಂದ 40 ಕಿ.ಮೀ. ದೂರದಲ್ಲಿದೆ. ಬೆಟ್ಟದ ಮೇಲಿರುವ ಈ ಪ್ರದೇಶದಲ್ಲಿ ಕನಕಾಚಲಪತಿ ದೇಗುಲವಿದೆ. ಇದನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನುವ ಇತಿಹಾಸವಿದೆ.

ಕೈ ಬೀಸಿ ಕರೆಯುವ ಕೊಪ್ಪಳ ಪ್ರವಾಸ

ಚಿತ್ರಕೃಪೆ: wikipedia

ಮುನಿರಬಾದ್

ನಗರದಿಂದ 32 ಕಿ.ಮೀ. ದೂರದಲ್ಲಿರುವ ಮುನಿರಬಾದ್‍‌ನಲ್ಲಿ ತುಂಗಭದ್ರಾ ನದಿಯು ತುಂಬಿ ಹರಿಯುತ್ತದೆ. ಇದೇ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ತಾಣ. ಅಲ್ಲಿ ಇರುವ ಪಂಪವನ ಉದ್ಯಾನವನವನ್ನು ನೋಡಬಹುದು.

ಹೋಗುವ ದೂರ

ಬೆಂಗಳೂರಿನಿಂದ ಕೊಪ್ಪಳಕ್ಕೆ 351.5 ಕಿ.ಮೀ. ದೂರ ಇರುವುದರಿಂದ ಕಡಿಮೆ ಎಂದರೂ 6 ರಿಂದ 7 ತಾಸುಗಳ ಕಾಲ ಪ್ರಯಾಣ ಮಾಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X