"ದೇವರ ಸ್ವಂತ ನಾಡು" ಎಂಬ ಹಣೆಪಟ್ಟಿಯೊಂದಿಗೆ ಪ್ರವಾಸಿಗರನ್ನು ಆಕರ್ಷಿಸುವ ಕೇರಳ ರಾಜ್ಯವು ಕೇವಲ ಹಿನ್ನೀರು, ತೆಂಗಿನ ತೋಟಗಳು, ಕಾಫಿ ತೋಟಗಳು, ಗಿರಿಧಾಮಗಳಿಗಷ್ಟೆ ಹೆಸರುವಾಸಿಯಾಗಿಲ್ಲ. ಈ ರಾಜ್ಯವು ತನ್ನಲ್ಲಿರುವ ಅತಿ ಪ್ರಾಚೀನ ಹಾಗೂ ಪುರಾತನ ದೇವಾಲಯಗಳಿಂದಾಗಿಯೂ ಸಾಕಷ್ಟು ಹೆಸರುವಾಸಿಯಾಗಿದೆ.
ವಿಶೇಷವೆಂದರೆ ಕೇರಳದಲ್ಲಿ ಕಾಣಬಹುದಾದ ದೇವಾಲಯಗಳು ತಮ್ಮದೆ ಆದ ವಿಶಿಷ್ಟ ವಾಸ್ತುಶೈಲಿಯನ್ನು ಹೊಂದಿರುತ್ತವೆ. ಗೋಪುರವಿರಲಿ, ಮಂಟಪವಿರಲಿ ಅದರ ವಿನ್ಯಾಸಗಳು ವಿಶಿಷ್ಟವಾಗಿರುತ್ತವೆ. ಅಲ್ಲದೆ ಈ ರಾಜ್ಯದಲ್ಲಿ ಹೆಚ್ಚಾಗಿ ಭಗವತಿ ಅಂದರೆ ಶಕ್ತಿಸ್ವರೂಪಿಣಿಯ ದೇವಾಲಯಗಳನ್ನೆ ಹೆಚ್ಚಾಗಿ ಕಾಣಬಹುದು.
ಶಕ್ತಿಸ್ವರೂಪಿಣಿಯ ಶಕ್ತಿಶಾಲಿ ದೇವಾಲಯಗಳು!
ಇಲ್ಲಿರುವ ಬಹುತೇಕ ದೇವಿ ದೇವಾಲಯಗಳು ಏನಾದರೊಂದು ಅದ್ಭುತ ಹಿನ್ನಿಲೆ ಅಥವಾ ಕಥೆಯನ್ನೊಳಗೊಂಡಿರುವುದು ಮತ್ತೊಂದು ಗಮನಾರ್ಹವಾದ ವಿಷಯ. ಇಂತಹ ವಿಶಿಷ್ಟ ಕಥೆಗಳ ಹಿನ್ನಿಲೆ ಹೊಂದಿರುವ ಶಕ್ತಿಯ ದೇವಾಲಯಗಳನ್ನು ನೋಡಲು ಇಷ್ಟಪಡುವವರು ಒಮ್ಮೆ ಕೇರಳ ಪ್ರವಾಸ ಮಾಡಲೇಬೇಕು.
ಪ್ರಸ್ತುತ ಲೇಖನದಲ್ಲಿ ಅಂತಹ ಒಂದು ಅದ್ಭುತ ದೇವಿಯ ದೇವಾಲಯದ ಕುರಿತು ತಿಳಿಸಲಾಗಿದೆ. ಈಕೆಯನ್ನು ಪ್ರೀತಿಯಿಂದ "ಕೊಡುಂಗಲ್ಲೂರು ಅಮ್ಮ" ಎಂದೆ ಕರೆಯುತ್ತಾರೆ. ಕೇರಳದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲೊಂದಾದ ಕೊಂಡುಂಗಲ್ಲೂರು ಭದ್ರಕಾಳಿಯ ದೇವಾಲಯವು ಸಾಕಷ್ಟು ಪ್ರಸಿದ್ಧಿ ಪಡೆದಿರುವ ದೇವಸ್ಥಾನವಾಗಿದೆ.

ಎಂಟು ಕೈ ಇರುವಾಕೆ
ಕೊಡುಂಗಲ್ಲೂರು ಭದ್ರಕಾಳಿಯ ದೇವಾಲಯವು ಕಾಳಿ ದೇವಿಗೆ ಮುಡಿಪಾದ ದೇವಾಲಯವಾಗಿದ್ದು ಇಲ್ಲಿ ದೇವಿಯು ಎಂಟು ಕೈಗಳನ್ನು ಹೊಂದಿರುವ ಅವತಾರದಲ್ಲಿ ಭಕ್ತರಿಗೆ ದರ್ಶನ ಕೊಡುತ್ತಾಳೆ. ಸಾಂದರ್ಭಿಕ.
ಚಿತ್ರಕೃಪೆ: Arnab Dutta

ಕ್ರಮಬದ್ಧವಾದ ಪೂಜೆ
ಈ ದೇವಾಲಯವು ನಸುಕಿನ ಬ್ರಾಹ್ಮಿ ಕಾಲವಾದ ಮೂರು ಘಂಟೆಯ ಸಮಯಕ್ಕೆ ತೆರೆದು ದೇವಿಗೆ ಕ್ರಮಬದ್ಧವಾಗಿ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ ಹಾಗೂ ರಾತ್ರಿಯ ಒಂಭತ್ತು ಘಂಟೆಯವರೆಗೆ ದೇವಿಯು ಭಕ್ತರನ್ನು ಹರಸುತ್ತಾಳೆ.
ಚಿತ್ರಕೃಪೆ: Aruna

ಉಗ್ರರೂಪ
ಈ ದೇವಿಯನ್ನು ಭದ್ರಕಾಳಿಯ ಮೂಲ ಸ್ವರೂಪವೆಂದೆ ಹೇಳಲಾಗುತ್ತದೆ. ಆಯುಧಗಳು, ಅಸುರನ ರುಂಡ ಹಿಡಿದು ಉಗ್ರವಾಗಿ ನಿಂತಿರುವ ಈ ಭದ್ರಕಾಳಿಯು ಪ್ರಿಟಿಯಿಂದ, ನಂಬಿಕೆಯಿಂದ ಬರುವ್ವ ಭಕ್ತರಿಗೆ ಅಷ್ಟೆ ಸೌಮ್ಯತೆಯಿಂದ ಆಶೀರ್ವಾದಿಸುತ್ತಾಳೆ.
ಚಿತ್ರಕೃಪೆ: Aruna

ಮಲಯಾಳಿ ಭಗವತಿ
ಕೇರಳದ ಕೆಲ ಸ್ಥಲಗಳಲ್ಲಿ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳಿಗರು ವಾಸಿಸುತ್ತಾರೆ. ಈ ದೇವಾಲಯವು ಹೆಚ್ಚು ಮಲಯಾಳಿಗರೆ ಇರುವ ಪ್ರದೇಶದಲ್ಲಿರುವುದರಿಂದ ಆ ಪ್ರದೇಶದ ತಮಿಳಿಗರು ಈಕೆಯನ್ನು ಮಲಯಾಳ ಭಗವತಿ ದೇವಿ ಎಂದೆ ಕರೆಯುತ್ತಾರೆ.
ಚಿತ್ರಕೃಪೆ: Aruna

ವಿಶಿಷ್ಟವಾಗಿದೆ
ಅಲ್ಲದೆ ಇದೊಂದು ಪುರಾತನ ದೇವಾಲಯವಾಗಿರುವುದರಿಂದ ಇಲ್ಲಿ ಇಂದಿಗೂ ಅತಿ ಪ್ರಾಚೀನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಕೆಲವು ದ್ರಾವಿಡ ಆಚರಣೆಗಳನ್ನೆ ಮಾಡಿಕೊಂಡು ಬಂದಿರುವುದರಿಂದ ಇದು ವಿಶಿಷ್ಟವೆನಿಸುತ್ತದೆ. ಈ ಆಚರಣೆಗಳು ಇತ್ತೀಚಿನ ಹೊಸದಾದ ದೇವಾಲಯಗಳಲ್ಲಿ ಕಂಡುಬರುವುದಿಲ್ಲ.
ಚಿತ್ರಕೃಪೆ: Aruna

ದಾರೂಕ ಸಂಹಾರ
ಕಥೆಯ ಪ್ರಕಾರ, ವಿಷ್ಣುವಿನ ಆರನೇಯ ಅವತಾರವಾದ ಪ್ರಶುರಾಮರಿಂದ ಈ ದೇವಾಲಯ ನಿರ್ಮಾಣವಾಗಿದೆ ಎನ್ನಲಾಗಿದೆ. ಕೇರಳವನ್ನು ಸೃಷ್ಟಿಸಿದ ನಂತರ ಪರಶುರಾಮರಿಗೆ ದಾರೂಕ ಎಂಬ ರಾಕ್ಷಸನು ಪೀಡಿಸಹತ್ತಿದನು. ಅವನಿಗಿರುವ ವರದಾನದ ಪ್ರಭಾವದಿಂದಾಗಿ ಪರಶುರಾಮರಿಗೆ ಅವನನ್ನು ಸೋಲಿಸಲಾಗಲಿಲ್ಲ.
ಚಿತ್ರಕೃಪೆ: Aruna

ತಪಗೈದ ಪರಶುರಾಮರು
ಆದ್ದರಿಂದ ಅವರು ಶಿವನನ್ನು ಪ್ರಾರ್ಥಿಸಿದಾಗ ಶಿವನು ಪರಶುರಾಮರಿಗೆ ಭದ್ರಕಾಳಿಯ ಕುರಿತು ತಪಸ್ಸು ಮಾಡಲು ಸೂಚಿಸಿದನು. ಅದರಂತೆ ಪರಶುರಾಮರು ತಮ್ಮ ಪ್ರಾರ್ಥನೆಯ ಶಕ್ತಿಯಿಂದ ಭದ್ರಕಾಳಿಯನ್ನು ಪ್ರಸನ್ನಗೊಳಿಸಿ ಅವಳ ಮುಂದೆ ತಮ್ಮ ನೋವನ್ನು ತೋಡಿಕೊಂಡರು.
ಚಿತ್ರಕೃಪೆ: Aruna

ಸಂಹಾರ
ಸ್ವತಃ ಪರಾಶಕ್ತಿಯ ಸ್ವರೂಪಳಾದ ಭದ್ರಕಾಳಿಯು ತನ್ನ ಉಗ್ರ ರೂಪ ತಾಳಿ ಕ್ಷಣಾರ್ಧದಲ್ಲೆ ಆ ರಾಕ್ಷಸನನ್ನು ಸಂಹರಿಸಿ ಸಂಪೂರ್ಣ ಕ್ಷೇತ್ರವನ್ನು ಅವನ ಕ್ರೂರತ್ವದಿಂದ ಬಿಡುಗಡೆಗೊಳಿಸಿದಳು. ಇದರಿಂದ ಸಂತಸರಾದ ಪರಶುರಾಮರು ಅವಳನ್ನು ಕೊಂಡಾಡಿ ಮೆಚ್ಚಿಸಿ ಸದಾ ಇಲ್ಲಿಯೆ ನೆಲೆಸುವಂತೆ ಕೋರಿ ಅವಳಿಗಾಗಿ ಈ ದೇವಾಲಯ ನಿರ್ಮಿಸಿದರೆನ್ನಲಾಗಿದೆ.
ಚಿತ್ರಕೃಪೆ: Aruna Radhakrishnan

ರುರುಜಿತ್ ವಿಧಾನ
ವಿಶೇಷವೆಂದರೆ, ತಾಂತ್ರಿಕ ಆಚರಣೆಗಳಲ್ಲಿ ಹೆಚ್ಚಾಗಿ ಭದ್ರಕಾಳಿಯನ್ನು ಆರಾಧಿಸಲಾಗುತ್ತದೆ. ಹಾಗಾಗಿ ತಾಂತ್ರಿಕ ಶೈಲಿಯ ಒಂದು ವಿಧಾನವಾದ ರುರುಜಿತ್ ವಿಧಾನದ ಮೂಲಕ ಇಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದರಲ್ಲಿ ಶಿವನು ಕಾಳಿಯ ಒಂದು ಬದಿಯಲ್ಲಿ ನೆಲೆಸಿದ್ದರೆ ಇನ್ನೊಂದು ಬದಿಯಲ್ಲಿ ಗಣೇಶನಿದ್ದು ಇವರಿಬ್ಬರ ಮಧ್ಯೆ ಸಪ್ತ ಮಾತೃಕೆಯರಿರುತ್ತಾರೆ.
ಚಿತ್ರಕೃಪೆ: Sujithvv

ಭರಣಿ
ಭರಣಿ ಉತ್ಸವ, ಕಾವು ತಿಂಡಲ್ ಹಾಗೂ ತಲಪ್ಪೋಲಿ ಉತ್ಸವಗಳು ಇಲ್ಲಿ ವಿಶಿಷ್ಟವಾಗಿದ್ದು ಅದ್ಭುತವಾಗಿ ಆಚರಿಸಲ್ಪಡುತ್ತವೆ. ಸಾಮಾನ್ಯವಾಗಿ ಮಾರ್ಚ್ ಎಪ್ರಿಲ್ ಸಮಯದಲ್ಲಿ ಈ ಉತ್ಸವಗಳು ಆಚರಿಸಲ್ಪಡುತ್ತವೆ.
ಚಿತ್ರಕೃಪೆ: Ssriram mt

ಮೆಚ್ಚಿಸುವ ಬಗೆ
ಭರಣಿ ಉತ್ಸವದ ಸಂದರ್ಭದಲ್ಲಿ ಈ ದೇವಾಲಯದ ಸದಸ್ಯರು ಬಲಿ ಕೊಡುವ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಭದ್ರಕಾಳಿ ಹಾಗೂ ಆಕೆ ಸಾಕಿದ ರಾಕ್ಷಸರು ಸದಾ ರಕ್ತ ಬೇಡುವುದರಿಂದ ಈ ಉತ್ಸವದಲ್ಲಿ ಕೋಳಿಗಲನ್ನು ಬಲಿ ಕೋಡಲಾಗುತ್ತದೆ ಎಂದು ಹೇಳಲಾಗುತ್ತದೆ.
ಚಿತ್ರಕೃಪೆ: Sujithvv

ಬೈಗುಳ
ಇಲ್ಲಿ ನಡೆಯುವ ಇನ್ನೊಂದು ವಿಚಿತ್ರ ಉತ್ಸವವೆಂದರೆ ಕಾವು ತಿಂಡಲ್. ಇದರಲ್ಲಿ ದೇವ ಭಕ್ತರು ತಮ್ಮ ತಮ್ಮ ಖಡ್ಗಗಲನ್ನು ಹಿಡಿದು ದೇವಾಲಯದ ಸುತ್ತ ಅಬ್ಬರಿಸುತ್ತ ಓಡುತ್ತಾರೆ ಹಾಗೂ ಇನ್ನೊಂದು ಗುಂಪು ದೇವಿಗೆ ಹೊಲಸು ಬೈಗುಳಗಳನ್ನು ಬೈಯುತ್ತ ಅಳುತ್ತ ಓಡುತ್ತಾರೆ! ಮರುದಿನ ನಡೆಯುವ ಶುದ್ಧಿ ಕಾರ್ಯದಲ್ಲಿ ದೇವಿಯು ಇವರ ಬೈಗುಳಗಳನ್ನು ಸ್ವೀಕರಿಸುತ್ತಾರಂತೆ!
ಚಿತ್ರಕೃಪೆ: Sujithvv

ಭಕ್ತರಿಂದ ತುಂಬಿರುತ್ತದೆ
ಸಾಕಷ್ಟು ಸಾಂಪ್ರದಾಯಿಕತೆ, ವಿಶಿಷ್ಟ ಆಚರಣೆ ಹೊಂದಿರುವ ಈ ಪುರಾತನ ದೇವಾಲಯವು ಕೊಚ್ಚಿ ದೇವೋಸಂ ಬೋರ್ಡ್ ನ ಅಧೀನದಲ್ಲಿದ್ದು ಸಾಕಷ್ಟು ಧಾರ್ಮಿಕ ಪ್ರವಾಸಿಗರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Dinakarr

ತ್ರಿಶ್ಶೂರ್ ಜಿಲ್ಲೆ
ಇನ್ನೂ ಈ ದೇವಾಲಯವು ಕೇರಳದ ತ್ರಿಶ್ಶೂರ್ ಜಿಲ್ಲೆಯ ಕೊಡುಂಗಲ್ಲೂರು ಪಟ್ಟಣದಲ್ಲಿದೆ. ಕೊಡುಂಗಲ್ಲೂರು ತ್ರಿಶ್ಶೂರ್ ನಗರ ಕೇಂದ್ರದಿಂದ 40 ಕಿ.ಮೀ ಗಳಷ್ಟು ದೂರದಲ್ಲಿದ್ದು ತೆರಳಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.
ಚಿತ್ರಕೃಪೆ: Ssriram mt


Click it and Unblock the Notifications
















