ನಮ್ಮ ದೇಶದಲ್ಲಿರುವ ದೇವಾಲಯಗಳಲ್ಲಿ ಅನೇಕ ವಿಶೇಷ ಆಚರಣೆಗಳಿವೆ. ಕೆಲವು ತುಂಬಾನೇ ಸುಲಭದ್ದಾಗಿದ್ದರೆ ಇನ್ನೂ ಕೆಲವು ಬಹಳ ಕಠಿಣವಾದ ಆಚರಣೆಗಳಾಗಿರುತ್ತವೆ. ಇಂದು ನಾವು ಒಂದು ವಿಚಿತ್ರ ಆಚರಣೆಯುಳ್ಳ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಈ ಆಚರಣೆ ನೋಡುಗರಿಗೆ ಮಜಾ ನೀಡುತ್ತದೆ. ಆದರೆ ಅದರಲ್ಲಿ ಪಾಲ್ಗೊಂಡಿರುವವರಿಗೆ ಸ್ವಲ್ಪ ಅಪಾಯಕಾರಿಯಾಗಿದೆ. ಅದುವೇ ಅಗ್ನಿ ಕೇಲಿ ಆಚರಣೆ. ಅಗ್ನಿ ಕೇಲಿ ಆಚರಣೆ ಬಗ್ಗೆ ಕೇಳಿದ್ದೀರಾ? ಇದೊಂದು ವಿಶೇಷ ಆಚರಣೆಯಾಗಿದೆ. ಅಗ್ನಿ ಕೇಲಿ ಎಂದರೆ ಪಂಜನ್ನು ಒಬ್ಬರು ಇನ್ನೊಬ್ಬರ ಮೇಲೆ ಎಸೆಯುವುದು.

ಏನಿದೇ ಈ ಆಚರಣೆಯಲ್ಲಿ
ಅಗ್ನಿ ಕೇಲಿ ಆಚರಣೆಯನ್ನು ಬೆಂಕಿ ಕಾಳಗ ಎಂದೂ ಕರೆಯಲಾಗುತ್ತದೆ. ಇಲ್ಲಿ ಪುರುಷರು ಬರೀ ಮೈಯಲ್ಲಿ ಬೆಂಕಿ ಕಾಳಗ ನಡೆಸ್ತಾರೆ. ಒಬ್ಬರು ಇನ್ನೊಬ್ಬರ ಮೇಲೆ ಬೆಂಕಿಯನ್ನು ಎರಚುತ್ತಾರೆ. ಪಂಜನ್ನು ಎಸೆಯುತ್ತಾರೆ.

ಎಲ್ಲಿ ನಡೆಯುತ್ತೆ ಈ ಆಚರಣೆ?
ಈ ವಿಶೇಷ ಆಚರಣೆ ನಡೆಯುವುದು ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ. ದುರ್ಗಾ ಪರಮೇಶ್ವರಿಯ ದೇವಸ್ಥಾನ ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಗಾಯಗಳಾಗುವುದು ಸಾಮಾನ್ಯ
ಪುರುಷರು ಬರೀ ಮೈಯಲ್ಲೇ ಈ ಆಚರಣೆಯನ್ನು ನಡೆಸಬೇಕು. ದೇಹದ ಕೆಳಭಾಗಕ್ಕೆ ಬಟ್ಟೆಯನ್ನು ಧರಿಸಬಹುದು. ಕೆಲವೊಮ್ಮೆ ಈ ಬೆಂಕಿಗೆ ದೀವಿಗೆಯನ್ನು ಎಸೆಯುವಾಗ ಮೈಗೆ ಗಾಯವಾಗುವುದೂ ಇದೆ. ಸಣ್ಣ ಪುಟ್ಟ ಗಾಯಗಳು ಇಲ್ಲಿ ಕಾಮನ್. ಆದರೆ ಕೆಲವೊಮ್ಮೆ ತೀವೃ ಗಾಯಗಳೂ ಉಂಟಾಗುತ್ತದೆ.

ಕುಂಕುಮಾರ್ಚನೆಯ ನೀರು
ತೀವ್ರ ರೀತಿಯ ಗಾಯಗಳಾದಾಗ ಆ ವ್ಯಕ್ತಿಯ ಗಾಯಕ್ಕೆ ದೇವಿಯ ಕುಂಕುಮಾರ್ಚನೆಯ ನೀರನ್ನು ಸಿಂಪಡಿಸಲಾಗುತ್ತದೆ. ಇದರಿಂದ ಆರಾಮ ಸಿಗುತ್ತದೆ. ಜೊತೆಗೆ ಗಾಯ ಬೇಗನೆ ಗುಣಮುಖವಾಗುತ್ತದೆ ಎನ್ನಲಾಗುತ್ತದೆ.

8 ದಿನಗಳ ಉತ್ಸವ
ಈ ಆಚರಣೆಯನ್ನು ಪ್ರವಿವರ್ಷ ಎಪ್ರಿಲ್ನಲ್ಲಿ 8 ದಿನಗಳ ಕಾಲ ಆಚರಿಸಲಾಗುತ್ತದೆ. ಮೇಷ ಸಂಕ್ರಮಣದ ಹಿಂದಿನ ದಿನ ಈ ಆಚರಣೆಯನ್ನು ನಡೆಸಲಾಗುತ್ತದೆ. ಈ ಉತ್ಸವದ ಎರಡನೇ ದಿನ ನೂರಾರು ಭಕ್ತರು ದೇವಸ್ಥಾನದ ಆವರಣದಲ್ಲಿ ಸೇರುತ್ತಾರೆ. ತಲತಲಾಂತರದಿಂದ ನಡೆದುಕೊಂಡು ಬರುತ್ತಿರುವ ಬೆಂಕಿ ಕಾಳಗ ಅಂದರೆ ಒಬ್ಬರ ಮೈ ಮೇಲೆ ಒಬ್ಬರು ಬೆಂಕಿಯ ಪಂಜನ್ನು ಎಸೆಯುವ ಆಚರಣೆಯನ್ನು ನಡೆಸುತ್ತಾರೆ.

15ಮೀ. ದೂರದಿಂದ ಎಸೆಯಬೇಕು
ಅಗ್ನಿ ಕೇಲಿಯಲ್ಲಿ ಭಾಗವಹಿಸುವ ಭಕ್ತರಿಗೆ ಒಂದು ನಿಯಮಗಳಿವೆ. ಬೆಂಕಿಯ ಕಾಳಗದಲ್ಲಿ ಪಾಲ್ಗೊಳ್ಳುವ ಭಕ್ತರು ಎರಡು ಗುಂಪುಗಳಾಗಿ ವಿಭಜನೆಯಾಗುತ್ತಾರೆ ಮತ್ತು 10 ರಿಂದ 15 ಮೀಟರ್ ದೂರದಿಂದ ಪರಸ್ಪರ ಪಂಜನ್ನುಎಸೆಯುತ್ತಾರೆ.

ಒಬ್ಬರಿಗೆ ಕೇವಲ 5 ಎಸೆತ
ಈ ಆಚರಣೆಯಲ್ಲಿ ಒಬ್ಬರಿಗೆ ಕೇವಲ ಐದು ಎಸೆತಗಳಿಗೆ ಮಾತ್ರ ಅವಕಾಶ. ಹಾಗಾಗಿ ಎಲ್ಲರೂ ತಮ್ಮ ಎಸೆತಗಳನ್ನು ಲೆಕ್ಕಹಿಡಿಯಬೇಕು. ಇದು ಕೇವಲ ಹದಿನೈದು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ.

ತಲುಪುವುದು ಹೇಗೆ?
ವಿಮಾನದ ಮೂಲಕ : ಮಂಗಳೂರು ಅಂತರಾಷ್ಟ್ರೀಯ ವಿಮಾನಕ್ಕೆ ಬಂದಿ ಅಲ್ಲಿಂದ ಟ್ಯಾಕ್ಸಿ ಮೂಲಕ ತಲುಪಬಹುದು.
ರೈಲು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದು ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ತಲುಪಬಹುದು.
ಬಸ್: ಇನ್ನು ನೀವು ಬಸ್ ಮೂಲಕ ಬರುವುದಾದರೆ ದೇಶದ ವಿವಿಧ ನಗರಗಳಿಂದ ಮಂಗಳೂರಿಗೆ ಸಾಕಷ್ಟು ಬಸ್ ವ್ಯವಸ್ಥೆ ಇದೆ. ಮಂಗಳೂರನ್ನು ತಲುಪಿ ಅಲ್ಲಿಂದ ಲೋಕಲ್ ಬಸ್ ಮೂಲಕ ತಲುಪಬಹುದು.


Click it and Unblock the Notifications

















