ಹಾಸನಾಂಬೆ ದೇವಾಲಯದ ಬಾಗಿಲು ಅಕ್ಟೋಬರ್ 24ಕ್ಕೆ ತೆರೆಯಲಿದ್ದು, ದೇವಿಯ ದರ್ಶನ ಪಡೆಯುವವರು ದೇವಸ್ಥಾನಕ್ಕೆ ಭೇಟಿ ನೀಡಬಹುದು. ಇದು ಬೆಂಗಳೂರಿನಿಂದ ಸುಮಾರು 180 ಕಿಮೀ ದೂರದಲ್ಲಿದೆ. ಅಂಬಾ ದೇವಿಗೆ ಸಮರ್ಪಿತವಾಗಿರುವ ಹಾಸನಾಂಬ ದೇವಾಲಯವನ್ನು 12 ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಹಾಸನಾಂಬೆಯನ್ನು ಹಾಸನದ ಪ್ರಧಾನ ದೇವತೆ ಎಂದು ಪರಿಗಣಿಸಲಾಗಿದ್ದು, ಹಾಸನಾಂಬೆ ದೇವತೆಯಿಂದ ಈ ನಗರಕ್ಕೆ ಹಾಸನ ಎಂಬ ಹೆಸರು ಬಂದಿದೆ. ಮೊದಲು ಹಾಸನವನ್ನು ಸಿಂಹಾಸನಪುರಿ ಎಂದು ಕರೆಯಲಾಗುತ್ತಿತ್ತು.
ಅಂದಹಾಗೆ ದೇವಾಲಯವು ತನ್ನದೇ ಆದ ವಿಶೇಷತೆಗಳನ್ನು ಮತ್ತು ದಂತಕಥೆಗಳನ್ನು ಹೊಂದಿದೆ. ಇಲ್ಲಿ ದೇವಿಯು ಭಕ್ತರಿಗೆ ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡಲಿದ್ದು, ದೇವಾಲಯದ ಬಾಗಿಲು ಒಂದು ವಾರದವರೆಗೆ ತೆರೆದಿರುತ್ತದೆ. ಹಾಗಾಗಿ ಇಂದು ನಾವು ದಕ್ಷಿಣ ಭಾರತದ ಈ ಪ್ರಸಿದ್ಧ ದೇವಾಲಯದ ಬಗ್ಗೆ ತಿಳಿಯೋಣ ಬನ್ನಿ...
ಮುಂದಿನ ವರ್ಷದವರೆಗೂ ತಾಜಾವಾಗಿರುತ್ತವೆ ಹೂಗಳು
ದೇವಾಲಯವು ದೀಪಾವಳಿಯ ಸಮಯದಲ್ಲಿ 7 ದಿನಗಳವರೆಗೆ ಮಾತ್ರ ಭಕ್ತರಿಗಾಗಿ ತೆರೆಯುತ್ತದೆ. ಬಲಿಪಾಡ್ಯಮಿ ಹಬ್ಬದ ನಂತರ ಮುಚ್ಚಲಾಗುತ್ತದೆ. ಈ ವರ್ಷ ನವೆಂಬರ್ 3ಕ್ಕೆ ದೇಗುಲದ ಬಾಗಿಲು ಮುಚ್ಚಲಾಗುವುದು. ದೀಪಾವಳಿಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇವಿಯ ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತಾರೆ. ದೇವಾಲಯವನ್ನು ಮುಚ್ಚುವಾಗ ಇಲ್ಲಿ ತುಪ್ಪದ ದೀಪವನ್ನು ಬೆಳಗಿಸಲಾಗುತ್ತದೆ ಮತ್ತು ಗರ್ಭಗುಡಿಯಲ್ಲಿ ಹೂವುಗಳು ಮತ್ತು ಬೇಯಿಸಿದ ಅನ್ನದ ನೈವೇದ್ಯವನ್ನು ಇರಿಸಲಾಗುತ್ತದೆ. ಸ್ಥಳೀಯ ಜನರ ಪ್ರಕಾರ, ಒಂದು ವರ್ಷದ ನಂತರ ದೀಪಾವಳಿಯ ದಿನದಂದು ದೇವಾಲಯದ ಬಾಗಿಲು ತೆರೆದಾಗ, ದೀಪವು ಉರಿಯುತ್ತಿರುವುದು ಕಂಡುಬರುತ್ತದೆ. ಹಾಸನಾಂಬೆ ದೇವಿಗೆ ಭಕ್ತರು ಅರ್ಪಿಸುವ ಹೂವುಗಳು ಕೂಡ ತಾಜಾವಾಗಿರುತ್ತವೆ. ಅಷ್ಟೇ ಅಲ್ಲ, ಇಲ್ಲಿ ನೀಡುವ ಪ್ರಸಾದವೂ ಮುಂದಿನ ವರ್ಷದವರೆಗೆ ತಾಜಾವಾಗಿರುತ್ತದೆ.

ಕಲ್ಲು ಪಾದಕಮಲ ತಲುಪಿದರೆ ಕಲಿಯುಗ ಅಂತ್ಯ
ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ದಂತಕಥೆಗಳಿವೆ. ದೇವಿಯು ತನ್ನ ಭಕ್ತೆಗೆ ಕಿರುಕುಳ ನೀಡುತ್ತಿದ್ದ ಅತ್ತೆಯನ್ನು ಕಲ್ಲಾಗಿಸಿದ್ದಳು ಎನ್ನಲಾಗಿದೆ. ಇದಲ್ಲದೇ ಹಾಸನಾಂಬೆಯ ಆಭರಣಗಳನ್ನು ಕದಿಯಲು ಯತ್ನಿಸಿದ ನಾಲ್ವರು ದರೋಡೆಕೋರರನ್ನು ಒಮ್ಮೆ ದೇವಿಯು ಕಲ್ಲುಗಳನ್ನಾಗಿ ಮಾಡಿದ್ದಾಳೆ. ಈ ನಾಲ್ಕು ಕಲ್ಲುಗಳು ಇಂದಿಗೂ ಕಾಳಪ್ಪ ಗುಡಿಯಲ್ಲಿ ಸಿಗುತ್ತವೆ. ಪ್ರತಿ ವರ್ಷ ಕಲ್ಲು ಒಂದು ಇಂಚು ಚಲಿಸುತ್ತದೆ ಎಂದು ನಂಬಲಾಗಿದೆ. ಈ ಕಲ್ಲು ಹಾಸನಾಂಬೆಯ ಪಾದಕಮಲವನ್ನು ತಲುಪಿದಾಗ ಕಲಿಯುಗ ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ.
ಆಕರ್ಷಕ ಫಲಪುಷ್ಪ ಪ್ರದರ್ಶನ
ಪ್ರತಿ ವರ್ಷದಂತೆ ಈ ವರ್ಷ ದಿನದ 24ಗಂಟೆಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ದರ್ಶನಕ್ಕೆ ಅವಶ್ಯವಿರುವ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ಪ್ರಮುಖ ಬೀದಿಗಳಲ್ಲಿ ಮತ್ತು ನಗರದ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿರುತ್ತದೆ. ದೇವಾಲಯದ ಆವರಣದಲ್ಲಿ ಆಕರ್ಷಕ ಹೂವಿನ ಅಲಂಕಾರವನ್ನು ನಿರ್ವಹಿಸಲು ಲಾಲ್ಬಾಗ್ ತಜ್ಞರ ಸಹಯೋಗ ಪಡೆಯಲಾಗಿದೆ. ಪ್ರತಿ ಎರಡು ದಿನಗಳಿಗೆ ಒಂದು ಬಾರಿ ಹೂವಿನ ಅಲಂಕಾರದ ಮಾದರಿಯನ್ನು ಬದಲಾವಣೆ ಮಾಡಲು ನಿರ್ದೇಶನ ನೀಡಲಾಗಿದೆ. ಸಿಲ್ವರ್ ಜುಬಿಲಿ ಪಾರ್ಕ್ ಆವರಣದಲ್ಲಿ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳು ಮತ್ತು ಇತರೆ ಮಾದರಿಗಳ ಆಕರ್ಷಕ ಫಲಪುಷ್ಪ ಪ್ರದರ್ಶನವನ್ನು ದಿನಾಂಕ: 26.10.2024 ರಿಂದ 29.10.2024 ರವರೆಗೆ ಒಟ್ಟು 4 ದಿನಗಳ ಕಾಲ ಆಯೋಜಿಸಲಾಗುವುದು.
ಲಡ್ಡು ಪ್ರಸಾದ ವಿತರಣೆ
ಭಕ್ತರಿಗೆ ಉತ್ತಮ ಗುಣಮಟ್ಟದ ಲಡ್ಡು ಪ್ರಸಾದವನ್ನು ಇಸ್ಕಾನ್ ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಹಾಸನದಲ್ಲಿಯೇ ತಯಾರಿಸಿ ವಿತರಿಸಲಾಗುವುದು. ಜೊನ್ನೆ ಪ್ರಸಾದ ಪೂರೈಕೆಗೆ ಇಸ್ಕಾನ್ ಸಹಯೋಗ ಪಡೆಯಲಾಗಿದೆ. ಲಡ್ಡು ತಯಾರಿಸಲು ಸ್ಥಳೀಯ ನಂದಿನಿ ತುಪ್ಪವನ್ನೇ ಬಳಸಲಾಗುವುದು. 60 ರೂ ಗೆ 2 ಲಡ್ಡುಗಳುಳ್ಳ ಒಂದು ಪೊಟ್ಟಣದ ಪ್ರಸಾದವನ್ನು ಭಕ್ತರು ಖರೀದಿ ಮಾಡಬಹುದು.

ಭಕ್ತಾದಿಗಳಿಗೆ ಸಕಲ ವ್ಯವಸ್ಥೆ
ದೇವಸ್ಥಾನದ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕುಡಿಯುವ ನೀರು, ಬಿಸಿಲಿನ ಅವಧಿಯಲ್ಲಿ ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ವಿವಿಧ ಸ್ಥಳಗಳಲ್ಲ 80 ಮೊಬೈಲ್ ಟಾಯ್ಲೆಟ್ ಅಳವಡಿಲಾಗಿದ್ದು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಭಕ್ತರ ಅನುಕೂಲಕ್ಕಾಗಿ ದೇವಾಲಯದ ಹೊರ ಆವರಣದ ರಸ್ತೆಗಳಲ್ಲಿ ಪ್ರತಿ ನೂರು ಮೀಟರ್ಗೆ ಒಂದರಂತೆ ಮ್ಯಾನೇಜ್ಮೆಂಟ್ ಕೇಂದ್ರಗಳನ್ನು ತೆರೆಯಲಾಗಿದ್ದು, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಯಾವುದೇ ಸಮಸ್ಯೆಗಳು ಉದ್ಭವಿಸಿದಲ್ಲಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲು 24*7 ವಾರ್ ರೂಂ ತೆರೆಯಲಾಗಿದೆ. ಪ್ಯಾರಗ್ರೇಡಿಂಗ್ ಮತ್ತು ಪ್ಯಾರಾಮೋಟಾರಿಂಗ್ ಹಾಟ್ ಏರ್ ಬಲೂನ್ ಭೂವನಹಳ್ಳಿ ಏರ್ ಪೋರ್ಟ್ನಲ್ಲಿ ನಡೆಸಲಾಗುವುದು. ನಗರದ ದೀಪಾಲಂಕಾರವನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಡಬಲ್ ಡೆಕರ್ ಬಸ್ ಸೇವೆ ಆರಂಭಿಸಲಾಗುವುದು. ದೇವಾಲಯದ ಸುತ್ತಮುತ್ತಲಿನ ನಿವಾಸಿಗಳಿಗೆ ದರ್ಶನಕ್ಕೆ ಅನುಕೂಲವಾಗುವಂತೆ ಹೋಮ್ ಪಾಸ್ ಸಹ ವಿತರಿಸಲಾಗಿದೆ.
ತೆರಳುವುದು ಹೇಗೆ?
ವಿಮಾನ- ಹಾಸನದಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ. ಆದರೆ ಬೆಂಗಳೂರು ವಿಮಾನ ನಿಲ್ದಾಣವು ಹತ್ತಿರದಲ್ಲಿದೆ.
ರೈಲು - ಹಾಸನದಲ್ಲಿ ರೈಲು ನಿಲ್ದಾಣವಿದ್ದು, ಇಲ್ಲಿಂದ ಸುಲಭವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಮಂಗಳೂರಿಗೆ ತೆರಳಬಹುದು.
ಬಸ್- ಹಾಸನವು ಬೆಂಗಳೂರಿನಿಂದ ಸುಮಾರು 187 ಕಿಲೋಮೀಟರ್ ಮತ್ತು ಮೈಸೂರಿನಿಂದ 115 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಂದ ಹಾಸನಕ್ಕೆ ಬಸ್ಸುಗಳು ಸುಲಭವಾಗಿ ಲಭ್ಯವಿವೆ.


Click it and Unblock the Notifications

















