ಹಾವುಗಳೆಂದರೆ ಯಾರಿಗೆ ಭಯವಿಲ್ಲ? ಹೌದು, ಹಾವು ಎಂಬ ಪದ ಕಿವಿಗೆ ಬಿದ್ದೊಡನೆಯೆ ಎಲ್ಲರಿಗೂ ಒಂದು ರೀತಿಯ ಭಯ, ಆಶ್ಚರ್ಯ ಗಳುಂಟಾಗುವುದರಲ್ಲಿ ಸಂಶಯವಿಲ್ಲ. ಅದರ ಮಹಿಮೆಯೆ ಹಾಗೆ ಆಕಾರದಲ್ಲಿ ಮಾನವನಿಗಿಂತ ಚಿಕ್ಕ ಎನಿಸಿದರೂ ಅದರ ವಿಷವು ಮಾತ್ರ ಆನೆಗಳಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ನಿಮಿಷಾರ್ಧದಲ್ಲೆ ಸಾಯಿಸಿಬಿಡಬಹುದು. ಆದರೆ ಗಮನದಲ್ಲಿಡಬೇಕಾದ ಒಂದು ಅಂಶವೆಂದರೆ ಎಲ್ಲ ಹಾವುಗಳು ವಿಷಕಾರಿಯಲ್ಲ. ಅದೇನೆ ಇರಲಿ...ಹಾವುಗಳು ಸಾಮಾನ್ಯವಾಗಿ ಖಾಸಗಿ ಸರಿಸೃಪಗಳಾಗಿದ್ದು ನೋಡಲು ಸಿಗುವುದು ಅಥವಾ ಕಣ್ಣಿಗೆ ಬೀಳುವುದು ಬಹು ಅಪರೂಪ. ಆದರೆ ಹಾವುಗಳನ್ನು ನೋಡುವುದು ಕೂಡ ಒಂದು ಮಜವಾದ ಅನುಭವ.
ಬುದ್ಧಿ ಜೀವಿಯಾದ ಮನುಷ್ಯನು ತನ್ನ ಆಸೆಗಳೆಲ್ಲವನ್ನು ಪೂರೈಸಿಕೊಳ್ಳುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಅದರಂತೆ ಹಾವುಗಳನ್ನು ಅವುಗಳ ಸಹಜ ಸ್ಥಿತಿಯಲ್ಲೆ ಕಾಣುವ ಹಂಬಲದಿಂದ ಅವುಗಳಿಗೆ ಪ್ರತ್ಯೇಕವಾಗಿ ಮೀಸಲಾದ ಉದ್ಯಾನಗಳನ್ನು ಭಾರತದಲ್ಲಿ ಕಾಣಬಹುದು. ನೋಡುವ ಹಂಬಲ ಅಷ್ಟೊಂದು ಮುಖ್ಯವಾದ ಅಂಶವಲ್ಲವಾದರೂ ಹಾವುಗಳ ಸಂತತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಉದ್ಯಾನಗಳು ನಿರ್ಮಿತವಾಗಿರುವುದಂತು ಸತ್ಯ ಸಂಗತಿ. ಈ ಲೇಖನದ ಮೂಲಕ ಭಾರತದ 5 ಪ್ರಮುಖ ಸರ್ಪ ಉದ್ಯಾನಗಳ ಕುರಿತು ತಿಳಿಯೋಣ.

ಗಿಂಡಿ ಸರ್ಪೋದ್ಯಾನ:
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿರುವ ಭಾರತದ ಅತಿ ಚಿಕ್ಕ ರಾಷ್ಟ್ರೀಯ ಉದ್ಯಾನವನವಾದ ಗಿಂಡಿ ರಾಷ್ಟ್ರೀಯ ಉದ್ಯಾನದ ಪಕ್ಕದಲ್ಲೆ ಗಿಂಡಿ ಸರ್ಪೋದ್ಯಾನವನ್ನು ಕಾಣಬಹುದು. ವಿಷಕಾರಿಯಾದ ಕಿಂಗ್ ಕೋಬ್ರಾ, ರಸೆಲ್ ವೈಪರ್ ಹಾಗು ಹೆಬ್ಬಾವುಗಳು ಮತ್ತು ಇತರೆ ಸರಿಸೃಪಗಳನ್ನು ಈ ಸರ್ಪೋದ್ಯಾನದಲ್ಲಿ ಕಾಣಬಹುದು. ಇದೊಂದು ಸುಂದರವಾದ ಪ್ರವಾಸಿ ಆಕರ್ಷಣೆಯೂ ಆಗಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Michael Allen Smith

ಕಾಟರಾಜ್ ಸರ್ಪೋದ್ಯಾನ:
ಮಹಾರಾಷ್ಟ್ರ ರಾಜ್ಯದ ಪುಣೆ ನಗರದ ಬಳಿಯಲ್ಲಿ ಈ ಉದ್ಯಾನವು ಸ್ಥಿತವಾಗಿದೆ. ಇತ್ತೀಚಿಗಷ್ಟೆ ಈ ಉದ್ಯಾನಕ್ಕೆ ರಾಜೀವ್ ಗಾಂಧಿ ಜೈವಿಕ ಉದ್ಯಾನವೆಂದು ಮರು ನಾಮಕರಣ ಮಾಡಲಾಗಿದೆ. 130 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ವ್ಯಾಪಿಸಿರುವ ಈ ಉದ್ಯಾನವನ್ನು ಅನಾಥ ಪ್ರಾಣಿಗಳ ಮನೆ, ಸರ್ಪೋದ್ಯಾನ ಹಾಗು ಪ್ರಾಣಿ ಸಂಗ್ರಹಾಲಯವೆಂಬ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಈ ಸರ್ಪೋದ್ಯಾನದಲ್ಲಿರುವ ಬಾಂಬೂ ಪಿಟ್ ವೈಪರ್ ಎಂಬ ತಳಿಯ ಹಾವಿನ ಚಿತ್ರ.
ಚಿತ್ರಕೃಪೆ: AshLin

ಬನ್ನೇರುಘಟ್ಟ ಸರ್ಪೋದ್ಯಾನ:
ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಈ ಸರ್ಪೋದ್ಯಾನವನ್ನು ಕಾಣಬಹುದು. 25,000 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ವ್ಯಾಪಿಸಿರುವ ಈ ರಾಷ್ಟ್ರೀಯ ಉದ್ಯಾನವು ಹಲವು ವಿಭಾಗಗಳನ್ನು ಒಳಗೊಂಡಿದ್ದು ಬೆಂಗಳೂರಿನ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. ಸರ್ಪೋದ್ಯಾನದಲ್ಲಿನ ಒಂದು ಬಗೆಯ ಹಾವು.
ಚಿತ್ರಕೃಪೆ: Saleem Hameed

ಪರಶಿನಿಕಡವು ಸರ್ಪೋದ್ಯಾನ:
ಕೇರಳದ ಕಣ್ಣೂರು ಪಟ್ಟಣದಲ್ಲಿ ಈ ಸರ್ಪೋದ್ಯಾನವಿದೆ. ಈ ಜನಪ್ರಿಯ ಸರ್ಪೋದ್ಯಾನದಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ವಿವಿಧ ಹಾವುಗಳು, ಇತರೆ ಸರಿಸೃಪಗಳು, ಪಕ್ಷಿಗಳು ಹಾಗು ಆಮೆಗಳನ್ನು ಕಾಣಬಹುದು. ವನ್ಯಜೀವಿ ಪ್ರಿಯರಿಗೆ ಈ ಸರ್ಪೋದ್ಯಾನವು ಒಂದು ಪ್ರಮುಖ ಆಕರ್ಷಣೆಯಾಗಿದೆ.
ಚಿತ್ರಕೃಪೆ: Vaikoovery

ಕಲ್ಕತ್ತಾ ಸರ್ಪೋದ್ಯಾನ:
ಪಶ್ಚಿಮ ಬಂಗಾಳ ರಾಜ್ಯದ ಬಾಡು ಪಟ್ಟಣದಲ್ಲಿದೆ ಈ ಸರ್ಪೋದ್ಯಾನ. ಮೂಲತಃ ದೀಪಕ್ ಮಿತ್ರಾ ಎಂಬ ವನ್ಯಜೀವಿ ಪ್ರಿಯರು ವೇಗವಾಗಿ ಅವನತಿಯ ದಾರಿಯಲ್ಲಿರುವ ಹಾವುಗಳಿಗೆ ರಕ್ಷಣೆಯನ್ನೊದಗಿಸುವ ದೃಷ್ಟಿಯಿಂದ ತಮ್ಮ ಪೂರ್ವಜರ ದೊಡ್ಡ ಮನೆಯಲ್ಲಿ ಪೆಟ್ಟಿಗೆಗಳನ್ನು ಇರಿಸಿ ಹಾವುಗಳನ್ನು ಸಾಕ ತೋಡಗಿದರು. ಕ್ರಮೇಣ ಜನರಿಂದ ಸಾಕಷ್ಟು ಉತ್ಸಾಹ ದೊರೆತ ಫಲವಾಗಿ ಇದು ಅಧಿಕೃತವಾಗಿ ಕಲ್ಕತ್ತಾ ಸರ್ಪೋದ್ಯಾನವಾಗಿ ಪರಿವರ್ತಿತವಾಯಿತು. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ


Click it and Unblock the Notifications



















