ಭಾರತದಲ್ಲಿರುವ ವಿವಿಧ ರಾಜ್ಯಗಳಲ್ಲಿ ವಿಶೇಷವಾದ ಏನಾದರೊಂದು ರಚನೆಗಳು, ದೇವಾಲಯಗಳು ಇದ್ದೆ ಇರುತ್ತವೆ. ಪುಣ್ಯಕ್ಷೇತ್ರಗಳಾಗಲಿ ಅಥವಾ ತೀರ್ಥಕ್ಷೇತ್ರಗಳಾಗಲಿ ಭಾರತದಲ್ಲಿ ಕಮ್ಮಿ ಏನಿಲ್ಲ. ಆದಾಗ್ಯೂ ಕೆಲ ರಾಜ್ಯಗಳಲ್ಲಿ ಆಯಾ ಸಂಸ್ಕೃತಿಯ, ಸಮುದಾಯದವರ ಪಾಲಿಗೆ ಪವಿತ್ರವಾದ ಅದೆಷ್ಟೊ ದೇವಾಲಯ ಕ್ಷೇತ್ರಗಳಿರುವುದನ್ನು ಕಾಣಬಹುದು.
ಅಂತಹ ಒಂದು ತೀರ್ಥಕ್ಷೇತ್ರದ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಇದೆ ಆ ಬ್ರಹ್ಮಂಗರಿ ಕ್ಷೇತ್ರ ಮಠ. ಅದರಲ್ಲೂ ವಿಶೇಷವಾಗಿ ಇಲ್ಲಿರುವ ಈಶ್ವರಿ ದೇವಿಯ ದೇವಾಲಯ. ಈಶ್ವರಿ ದೇವಿಯು ಶಕ್ತಿ ದೇವಿಯ ರೂಪವೆ ಆಗಿದ್ದಾಳೆಂದು ಈಕೆಯನ್ನು ಅನುಸರಿಸುವ ಭಕ್ತಾದಿಗಳ ನಂಬಿಕೆ.
ಶ್ರೀಶೈಲಂ ಬಳಿಯಿರುವ ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ!
ಹಾಗಾದರೆ ಪ್ರಸ್ತುತ ಲೇಖನದ ಮೂಲಕ ಯಾರೀ ಈಶ್ವರಿ ದೇವಿ? ಈಕೆಯ ಮಹಿಮೆಯಾದರೂ ಏನು? ಎಲ್ಲಿದೆ ಬ್ರಹ್ಮಂಗಿರಿ? ಹೀಗೆ ಹತ್ತು ಹಲವು ವಿಚಾರಗಳ ಕುರಿತು ತಿಳಿಯಿರಿ. ಈ ಕ್ಷೇತ್ರವು ಧಾರ್ಮಿಕ ಪ್ರವಾಸಿ ದೃಷ್ಟಿಯಿಂದ ಸಾಕಷ್ಟು ಮಹತ್ವ ಹೊಂದಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಅಲ್ಲದೆ ಈಶ್ವರಿ ದೇವಿಯ ಪವಾಡಗಳು ಅಪಾರ ಎಂದು ಹೇಳಲಾಗುತ್ತದೆ.

ತೀರ್ಥಕ್ಷೇತ್ರ
ಬ್ರಹ್ಮಂಗರಿ ಮಠದಲ್ಲಿರುವ ಅತಿ ಪ್ರಮುಖ ಹಾಗೂ ಧಾರ್ಮಿಕ ಮಹತ್ವವುಳ್ಳ ದೇವಾಲಯ ಈಶ್ವರಿ ದೇವಿಗೆ ಮುಡಿಪಾದ ದೇವಾಲಯವೆ ಆಗಿದೆ. ಬ್ರಹ್ಮಂಗರಿಮಠಂ ಒಂದು ಮಂಡಲ ಪ್ರದೇಶವಾಗಿದ್ದು ಆಂಧ್ರಪ್ರದೇಶ ರಾಜ್ಯದ ವೈಎಸ್ಸಾರ್ ಕಡಪ ಜಿಲ್ಲೆಯಲ್ಲಿದೆ.
ಚಿತ್ರಕೃಪೆ: Raghuramacharya

ಕಡಪದ ಬಳಿ
ಅಧಿಕೃತವಾಗಿ ಈ ದೇವಾಲಯವು ಕಂಡಿಮಲ್ಲಯಪಲ್ಲೆ/ಕಂಡಿಮಲ್ಲಯಪಲ್ಲಿ ಎಂಬ ಹಳ್ಳಿಯಲ್ಲಿ ಸ್ಥಿತವಿದ್ದು ಇದು ಕಡಪ ಪಟ್ಟಣದಿಂದ ಸುಮಾರು 60 ಕಿ.ಮೀ ಗಳಷ್ಟು ದೂರದಲ್ಲಿದೆ ಹಾಗೂ ತೆರಳಲು ಬಸ್ಸುಗಳು ಕಡಪ ನಗರ ಬಸ್ಸು ನಿಲ್ದಾಣದಿಂದ ದೊರೆಯುತ್ತವೆ. ಜನಪ್ರೀಯವಾಗಿ ಈ ಹಳ್ಳಿಯನ್ನೆ ಇಂದು ಬ್ರಹ್ಮಂಗರಿ ಅಥವಾ ಬ್ರಹ್ಮಂ ಗರಿ ಮಠಂ ಎಂದು ಕರೆಯಲಾಗುತ್ತದೆ. ಅಪಾರ ಭಕ್ತವಲಯ.
ಚಿತ್ರಕೃಪೆ: Raghuramacharya

ಹದಿನಾರನೇಯ ಶತಮಾನದ ಸಂತರು
ಈ ಕ್ಷೇತ್ರವು ಮೂಲತಃ ತೆಲುಗು ಸಂಸ್ಕೃತಿಯ ಹದಿನಾರನೇಯ ಶತಮಾನದಲ್ಲಿದ್ದ ಪ್ರಖ್ಯಾತ ಸಂತರಾದ ಶ್ರೀ ಪೋತುಲುರಿ ವೀರಬ್ರಹ್ಮೇಂದ್ರ ಸ್ವಾಮಿಯವರ ಸಮಾಧಿ ಸ್ಥಳದಿಂದಾಗಿ ಹೆಚ್ಚು ಮಹತ್ವ ಪಡೆದಿದೆ. ನಂಬಿಕೆಯ ಪ್ರಕಾರ ಇಂದಿಗೂ ಅವರು ತಮ್ಮ ಸಮಾಧಿಯಲ್ಲಿ ನಿರಂತರವಾದ ಚಿಲುಮೆಯ ಶಕ್ತಿಯಾಗಿ ನೆಲೆಸಿದ್ದು ಸಾಕಷ್ಟು ಪವಾಡಗಳನ್ನು ಮಾಡುತ್ತಿದ್ದಾರೆನ್ನಲಾಗುತ್ತದೆ ಅವರ ಭಕ್ತರಿಂದ!

ಕಾಲಜ್ಞಾನಂ
ತೆಲುಗು ಭಾಷಿಕರು ಅಪಾರವಾಗಿ ನಂಬುವ ಹಾಗೂ ಗೌರವ ಹೊಂದಿರುವ ಕಾಲಜ್ಞಾನ ಗ್ರಂಥದ ರಚನಾಕಾರರಾದ ವೀರಬ್ರಹ್ಮೇಂದ್ರ ಸ್ವಾಮಿಗಳು ತಮ್ಮ ಕಾಲದಲ್ಲಿ ಭವಿಷ್ಯವನ್ನು ಗೋವಿಂದನ ವಾಕ್ಯಗಳಿರುವ ಕವನಗಳನ್ನು ರಚಿಸುವುದರ ಮೂಲಕ ಕರಾರುವಕ್ಕಾಗಿ ಹೇಳುತ್ತಿದ್ದರೆಂಬ ಖ್ಯಾತಿಗೆ ಪಾತ್ರರಾದವರು.
ಚಿತ್ರಕೃಪೆ: Raghuramacharya

ಸಜೀವ ಸಮಾಧಿ
ಇವರು ತಮ್ಮ 175 ನೇಯ ವಯಸ್ಸಿನಲ್ಲಿ ಸಜೀವ ಸಮಾಧಿ ಹೊಂದಿದ ಸ್ಥಳವೆ ಬ್ರಹಂಗರಿ ಮಠಂ ಕ್ಷೇತ್ರವಾಗಿದ್ದು ಇಲ್ಲಿಯೆ ಅವರ ಮೊಮ್ಮಗಳಾದ ಹಾಗೂ ದೈವಿಕ ಪ್ರಭಾವ ಹೊಂದಿದ್ದ ಈಶ್ವರಿ ದೇವಿಯವರ ಸಮಾಧಿಯೂ ಸ್ಥಿತವಿದೆ. ಹಾಗಾಗಿ ಎರಡೆರಡು ಪ್ರಭಾವಿ ಸ್ಥಳ ಹೊಂದಿರುವ ಈ ಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಅಪಾರ.
ಚಿತ್ರಕೃಪೆ: Raghuramacharya

ಅವರ ಹಿರೀಯ ಪುತ್ರಿ
ವೀರ ಬ್ರಹ್ಮೇಂದ್ರ ಸ್ವಾಮಿಗಳ ಹಿರೀಯ ಪುತ್ರರಾದ ಗೋವಿಂದಸ್ವಾಮಿಯವರ ಹಿರೀಯ ಮಗಳೆ ಈಶ್ವರಿ ದೇವಿ. ಈಶ್ವರಿ ಅಮ್ಮನವರಿಗೆ ಕಶಮಂಬಾ, ಕಲಮಂಬಾ, ಶರವಂಬಾ ಹಾಗೂ ಶಂಕರಮಂಬಾ ಎಂಬ ಸಹೋದರಿಯರಿದ್ದರು.
ಚಿತ್ರಕೃಪೆ: Raghuramacharya

ದೈವ ಭಕ್ತೆ
ತಾತ, ವೀರಬ್ರಹ್ಮೇಂದ್ರರಂತೆ ಈಶ್ವರಿ ದೇವಿಗೆ ಚಿಕ್ಕಂದಿನಿಂದಲೂ ದೈವ ಕಥೆಗಳಲ್ಲಿ ಅಪಾರ ಆಸಕ್ತಿ. ರಾಮಾಯಣ, ಮಹಾಭಾರತ ಹಾಗೂ ವೇದಾಧ್ಯಯನಗಳಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಳು. ಈ ಅಮ್ಮನವರೂ ಸಹ ತನ್ನ ತಾತನಂತೆ ಕಾಲಜ್ಞಾನವನ್ನು ರಚಿಸಿದ್ದಾರೆ. ಅಲ್ಲದೆ ಅವರು ತಮ್ಮ ಜೀವಿತಾವಧಿಯಲ್ಲಿ ದೇಶದೆಲ್ಲೆಡೆ ಸಂಚರಿಸುತ್ತ ಪ್ರವಚನಿತ್ಯಾದಿಗಳನ್ನು ಬೋಧಿಸುತ್ತಿದ್ದರು.

ಪಾವಿತ್ರ್ಯತೆ
ಇವರ ಪಾವಿತ್ರ್ಯತೆ ಹಾಗೂ ಸಿದ್ಧಶಕ್ತಿ ಎಷ್ಟಿತ್ತೆಂದರೆ ಹಲವಾರು ಪವಾಡಗಳನ್ನು ತಮ್ಮ ಜೀವಿತಾವಧಿಯಲ್ಲಿ ಮಾಡಿದ್ದರು. ಈಶ್ವರಿ ದೇವಿಯವರ ತಂದೆ ಗೋವಿಂದಸ್ವಾಮಿಯವರೂ ಸಹ ಸಾಧನೆ ಮಾರ್ಗದಲ್ಲಿ ನಿರತರಾಗಿದ್ದವರು. ತಮ್ಮ ತಂದೆಯವರಾದ ವೀರ ಬ್ರಹ್ಮೇಂದ್ರಸ್ವಾಮಿಯ ಆಶೀರ್ವಾದದಿಂದ ಅವರಿಗೆ ಈಶ್ವರಿ ದೇವಿ ಹುಟ್ಟಿದ್ದರೆಂದು ನಂಬಿದ್ದರು. ಕಾರಣ ಚಿಕ್ಕ ವಯಸ್ಸಿನಲ್ಲೆ ಈಶ್ವರಿ ದೇವಿಗಿದ್ದ ಅಪಾರ ದೈವ ನಂಬಿಕೆ ಹಾಗೂ ಜ್ಞಾನಶಕ್ತಿಗಳು.
ಚಿತ್ರಕೃಪೆ: Raghuramacharya

ತಂದೆಯಿಂದ
ಹಾಗಾಗಿ ಅವರು ಈಶ್ವರಿ ದೇವಿಗೆ ಸಕಲ ಯೋಗರಹಸ್ಯಗಳ ಪಾಠ ಹಾಗೂ ತಮಗೆ ತಿಳಿದ ಜ್ಞಾನವನ್ನು ಬೋಧಿಸಿದ್ದರು. ಹೀಗೆ ಕ್ರಮೇಣ ಈಶ್ವರಿ ಅಮ್ಮನವರ ದೈವಿ ಪ್ರಭಾವ ಹೆಚ್ಚಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರ ಜನಪ್ರೀಯತೆ ಏರತೊಡಗಿತು.
ಚಿತ್ರಕೃಪೆ: Raghuramacharya

ರಾಜಂಪೇಟೆ
ಈಶ್ವರಿ ದೇವಿಯಿದ್ದ ಸ್ಥಳದಿಂದ ಕೆಲ ಮೈಲಿಗಳಷ್ಟು ದೂರದಲ್ಲಿದ್ದ ಇಂದಿನ ಕಡಪ ಜಿಲ್ಲೆಯ ರಾಜಂಪೇಟೆಯಲ್ಲಿ ಕ್ಷತ್ರ್ಇಯ ಕುಲದವರಾದ ಜಗ್ಗರಾಜು-ಜಗ್ಗಮ್ಮ ದಂಪತಿಗಳಿಗೆ ರಂಗರಾಜು ಎಂಬ ಪುತ್ರನು ವೀರಬ್ರಹ್ಮೇಂದ್ರಸ್ವಾಮಿಯ ಆಶೀರ್ವಾದದಿಂದಲೆ ಜನಿಸಿದ್ದನು. ಜಗ್ಗರಾಜು ಬ್ರಹ್ಮೇಂದ್ರಸ್ವಾಮಿಯವರ ಪರಮ ಭಕ್ತನಾಗಿದ್ದನು ಹಾಗೂ ಸ್ವಾಮಿಯು ಅವನಿಗೆ ಒಂದು ತಾಮ್ರದ ಪತ್ರವನ್ನು ನೀಡಿ ಹರಸಿದ್ದರು.
ಚಿತ್ರಕೃಪೆ: Raghuramacharya

ತಂದೆ ಜಗ್ಗರಾಜು
ಚಿಕ್ಕವನಿದ್ದಾಗಲೆ ರಂಗರಾಜು ದೈವದಲ್ಲಿ ನಂಬಿಕೆಯಿಟ್ಟವನಾಗಿದ್ದನು ಹಾಗೂ ತನ್ನ ತಂದೆಯ ಬಳಿಯಿದ್ದ ಆ ತಾಮ್ರ ಪತ್ರ ಓದುತ್ತ ಅದರಲ್ಲಿರುವ ನಿಗೂಢ ಸಂದೇಶಗಳನ್ನು ಅರ್ಥೈಸಿಕೊಳ್ಳುತ್ತ ಕಂಡುಕೊಂಡ ವಿಷಯವೆಂದರೆ ಆತನು ಮದುವೆಯಾಗುವುದಾದರೆ ವೀರ ಬ್ರಹ್ಮೇಂದ್ರಸ್ವಾಮಿಗಳ ಕುಟುಂಬದಲ್ಲೆ ಎಂದು.
ಚಿತ್ರಕೃಪೆ: Raghuramacharya

ಬ್ರಹ್ಮೇಂದ್ರರ ಕುಟುಂಬದಲ್ಲೆ!
ಹೀಗೆ ಅವನು ತನ್ನ ತಂದೆಗೆ ಈ ವಿಚಾರ ತಿಳಿಸಿ ಬ್ರಹ್ಮಂಗರಿಗೆ ತಲುಪಿ ಅಲ್ಲಿ ಈಶ್ವರಿ ದೇವಿಯ ಕುರಿತು ತಿಳಿದು ಅವರ ಮನೆಗೆ ಹೋಗಿ ಆ ತಾಮ್ರ ಪತ್ರದ ವಿಷಯವನ್ನು ವಿವರಿಸುತ್ತ ಈಶ್ವರಿ ದೇವಿಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದನು. ಆದರೆ ಜಾತಿಗಳು ಬೇರೆ ಬೇರೆಯಾಗಿದ್ದರಿಂದ ಈಶ್ವರಿ ದೇವಿಯ ಚಿಕ್ಕಪ್ಪ ಹಾಗೂ ಇತರೆ ಸಂಬಂಧಿಗಳು ಆ ಮದುವೆಗೆ ಒಪ್ಪಲೆ ಇಲ್ಲ.
ಚಿತ್ರಕೃಪೆ: Raghuramacharya

ಪ್ರಾಣತ್ಯಾಗ
ಇದರಿಂದ ಬೇಸರಗೊಂಡ ರಂಗರಾಜು ಮನೆಗೆ ಹಿಂತಿರುಗಿ ತನ್ನನ್ನು ತಾನು ಅಗ್ನಿಗಾಹುತಿಯಾದನು. ಈ ವಿಚಾರ ಈಶ್ವರಿ ದೇವಿಗೆ ತಲುಪಿ ಆ ಕ್ಷಣದಿಂದಲೆ ಅವಳು ವಿವಾಹವಾಗದಿರುವ ನಿರ್ಣಯ ಮಾಡಿಕೊಂಡು ಜೀವನವನ್ನು ತಪಸ್ಸು ಮಾಡುವುದರ ಮೂಲಕ ಕಳೆಯುವ ನಿರ್ಧಾರ ಮಾಡಿಕೊಂಡಳು.
ಚಿತ್ರಕೃಪೆ: Raghuramacharya

ದಿನೆ ದಿನೆ ಪ್ರಸಿದ್ಧಿ
ಹೀಗೆ ಪ್ರತಿ ದಿನ ಹೆಚ್ಚು ಹೆಚ್ಚು ತಪಗೈದು ಸಾಧನೆಯ ಮಾರ್ಗದಲ್ಲಿ ಮುನ್ನುಗ್ಗತೊಡಗಿದರು. ಈಶ್ವರಿ ದೇವಿ. ಈ ಸಂದರ್ಭದಲ್ಲಿ ಅನೇಕ ಜನ ಸಮ್ಕಷ್ಟದಲ್ಲಿರುವವರಿಗೆ ಪವಾಡಗಳ ಮೂಲಕ ಸಾಕಷ್ಟು ಸಹಾಯ ಮಾಡಿದಳು. ನಿತ್ಯವೂ ಅಮ್ಮನವರ ಪ್ರಸಿದ್ಧಿ ಏರತೊಡಗಿತು.
ಚಿತ್ರಕೃಪೆ: Raghuramacharya

ಅಮ್ಮನ ತಮ್ಮ
ಹೀಗೆ ಸಾತ್ವಿಕ ಆಹಾರ, ಬ್ರಹ್ಮಚರ್ಯ ಹಾಗೂ ಶಿಸ್ತುಬದ್ಧ ಜೀವನದ ಈಶ್ವರಿ ದೇವಿಯದ್ದಾಗಿದ್ದರಿಂದ ಸಾಕಷ್ಟು ಸೌಂದರ್ಯ ಅಮ್ಮನವರ ಮುಖದಲ್ಲಿ ಪ್ರಕಾಶಿಸತೊಡಗಿತು. ಇವಳ ಸೌಂದರ್ಯಕ್ಕೆ ಮಾರು ಹೋದ ಈಶ್ವರಿಯ ಅಮ್ಮನ ತಮ್ಮ ಇವಳ ಮಾನಭಂಗ ಮಾಡಲು ಪ್ರಯತ್ನಿಸಿದಾಗ ಕ್ಷಣದಲ್ಲೆ ಅವಳಿಂದ ಶಾಪ ಪಡೆದು ಮಾರಣಾಂತಿಕ ಕಾಯಿಲೆಗೆ ತುತ್ತಾದನು. ಹೀಗೆ ವೀರ ಬ್ರಹ್ಮೇಂದ್ರರ ಮೊಮ್ಮಗಳಾಗಿ ಖ್ಯಾತಿಗಳಿಸಿದವಳೆ ಈಶ್ವರಿ ದೇವಿ. ಇಂದಿಗೂ ಬ್ರಹ್ಮೇಂದ್ರರ ಕಾಲಜ್ಞಾನದಲ್ಲಿ ಸಾಕಷ್ಟು ಭವಿಷ್ಯದ ವಿಷಯಗಳನ್ನು ಬರೆಯಲಾಗಿದೆ. ಅವರ ಭಕ್ತರ ನಂಬಿಕೆಯಂತೆ, ವೀರ ಬ್ರಹ್ಮೇಂದ್ರರು ಜಗತ್ತನ್ನುಳಿಸಲು ಮತ್ತೆ ಹುಟ್ಟಿ ಬರಲಿದ್ದಾರಂತೆ!


Click it and Unblock the Notifications
















