'ಲಕ್ನೋ' ಗೋಮತಿ ನದಿಯ ದಡದಲ್ಲಿ ನೆಲೆಗೊಂಡಿದೆ. ಉತ್ತರ ಪ್ರದೇಶದ ರಾಜಧಾನಿ ಮತ್ತು ಅತಿದೊಡ್ಡ ನಗರವಾದ ಲಕ್ನೋದ ವಾಸ್ತುಶಿಲ್ಪ, ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿ ಅತ್ಯಂತ ವಿಶಾಲವಾದುದು. ಅಂದಹಾಗೆ ನಿಮಗೆ ಲಕ್ನೋದಲ್ಲಿ ನೋಡಲು ಕಡಿಮೆ ಎಂದರೂ 12 ಸುಪ್ರಸಿದ್ಧ ಪ್ರವಾಸಿ ಸ್ಥಳಗಳು ಸಿಗುತ್ತವೆ. ಅದರಲ್ಲಿ ಒಂದು ದೊಡ್ಡ ಆಕರ್ಷಣೆಯೆಂದರೆ ನವಾಬ್ ಅಸಫ್-ಉದ್-ದೌಲಾ (1748-1797) ನಿರ್ಮಿಸಿದ ಇಮಾಂಬರ.
'ಬರ ಇಮಾಂಬರ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇದನ್ನು ಅವರ ನೆನಪಿಗಾಗಿ 'ಅಸಾಫಿ ಇಮಾಂಬರ' ಎಂದೂ ಕರೆಯುತ್ತಾರೆ. ಇದರ ವಾಸ್ತುಶಿಲ್ಪ ಅದ್ಭುತ. ಬರ ಇಮಾಂಬರಗೆ ಸಂಬಂಧಿಸಿದಂತೆ ಕೆಲವು ಆಸಕ್ತಿದಾಯಕ ಕಥೆಗಳೂ ಇದ್ದು, ಅದೇನೆಂದು ತಿಳಿಯೋಣ ಬನ್ನಿ.

ಇದನ್ನು ನಿರ್ಮಿಸುವ ಹಿಂದಿನ ಉದ್ದೇಶ
ಮೊಘಲ್ ಚಕ್ರವರ್ತಿಗಳು ಮತ್ತು ಅವರ ನಿಯೋಗಿಗಳಾದ ನವಾಬರು ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮದೇ ಆದ ಮಾರ್ಗಗಳನ್ನು ಹೊಂದಿದ್ದರು. ಬರ ಇಮಾಂಬರವನ್ನು ಸಹ ಕ್ಷಾಮ ನಿಭಾಯಿಸಲು ನಿರ್ಮಿಸಲಾಗಿದೆ. ಇದನ್ನು ನವಾಬ್ ಅಸಫ್-ಉದ್-ದೌಲಾ ನಿರ್ಮಿಸಿದ. ಇದನ್ನು ನಿರ್ಮಿಸುವ ಹಿಂದಿನ ಮುಖ್ಯ ಉದ್ದೇಶವೆಂದರೆ ಜನರಿಗೆ ಉದ್ಯೋಗವನ್ನು ಒದಗಿಸುವುದು. ಈ ರಚನೆಗೆ ಸಂಬಂಧಿಸಿದ ಹಲವಾರು ಆಸಕ್ತಿದಾಯಕ ಕಥೆಗಳಿವೆ. ಇದು ಉತ್ತರ ಪ್ರದೇಶದ ಲಕ್ನೋದಲ್ಲಿನ ಅತ್ಯಂತ ಸುಂದರವಾದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಮೂಲಗಳ ಪ್ರಕಾರ, ಸಾಮಾನ್ಯ ಜನರು ಇದನ್ನು ನಿರ್ಮಿಸಲು ಹಗಲಿನಲ್ಲಿ ಕೆಲಸ ಮಾಡಿದರು. ಆದರೆ ಶ್ರೀಮಂತರು ಮತ್ತು ಗಣ್ಯ ವರ್ಗದ ಇತರ ಸದಸ್ಯರು ರಾತ್ರಿಯಲ್ಲಿ ನಿರ್ಮಿಸಿದರು. ಕಾಮಗಾರಿಯ ಅವಧಿಯನ್ನು ಎಷ್ಟು ಸಾಧ್ಯವೋ ಅಷ್ಟು ಅಥವಾ ಕನಿಷ್ಠ ಕ್ಷಾಮ ಇರುವವರೆಗೆ ವಿಸ್ತರಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು.

ಕೂಲಿಯಾಗಿ ಆಹಾರ ಪಡೆದ ಜನರು
ಇಮಾಂಬರ ಮತ್ತು ಅದರ ಪಕ್ಕದ ರೂಮಿ ದರ್ವಾಜಾ ನಿರ್ಮಾಣವು 1784 ರಲ್ಲಿ ಕ್ಷಾಮ ಪರಿಹಾರದ ಭಾಗವಾಗಿ ಪ್ರಾರಂಭವಾಯಿತು. ಆ ಸಮಯದಲ್ಲಿ ಈ ಪ್ರದೇಶವು ಭೀಕರ ಬರಗಾಲ ಮತ್ತು ಆಹಾರದ ಕೊರತೆಯಿಂದ ನಲುಗಿತ್ತು. ಸುಮಾರು ಒಂದು ದಶಕ ಕಾಲ ಈ ಪ್ರದೇಶದಲ್ಲಿ ಕ್ಷಾಮವಿತ್ತು. ಇಮಾಂಬರ ನಿರ್ಮಾಣ ಮಾಡುತ್ತಿರುವ ಜನರು ಕೂಲಿಯಾಗಿ ಆಹಾರವನ್ನು ಪಡೆಯುತ್ತಾರೆ ಎಂದು ನವಾಬರು ಘೋಷಿಸಿದರು. ಈ ಮೊದಲೇ ಹೇಳಿದ ಹಾಗೆ ಉದ್ಯೋಗವನ್ನು ಒದಗಿಸುವುದು ನವಾಬನ ಉದ್ದೇಶವಾಗಿತ್ತು. ಆಗ ಹೆಚ್ಚಿನ ಜನರು ಕೆಲಸಕ್ಕೆ ಸೇರಿದರು. ಗಣ್ಯ ವರ್ಗದವರು ಮಾತ್ರ ದೈಹಿಕ ಶ್ರಮ ಸಾಧ್ಯವಿಲ್ಲ ಎಂದು ಹೊರಗುಳಿದರು. ಆದ್ದರಿಂದ ನವಾಬನು ಅವರನ್ನು ರಾತ್ರಿ ಕೆಲಸಕ್ಕೆ ಬರಲು ಆಹ್ವಾನಿಸಿದನು. ಹಗಲಿನಲ್ಲಿ ನಿರ್ಮಿಸಿದ್ದನ್ನು ಭಾಗಶಃ ಹಾನಿಗೊಳಿಸಿ ಅವರ ಪಾಲಿನ ಆಹಾರ ಅವರಿಗೆ ಸಿಗುವಂತೆ ಮಾಡಿ, ಬರಗಾಲದ ಅವಧಿಯಲ್ಲೂ ಕೆಲಸ ಇರುವಂತೆ ನೋಡಿಕೊಂಡರು.

ವಾಸ್ತುಶಿಲ್ಪಿ ತೆಗೆದುಕೊಂಡ ಸಂಭಾವನೆ
ಇಮಾಂಬರ ನಿರ್ಮಾಣ ಕ್ಷಾಮ ಪರಿಹಾರ ಯೋಜನೆಯ ಭಾಗವಾಗಿದ್ದರೂ, ನವಾಬ್ ಇಮಾಂಬರ ನಿರ್ಮಾಣಕ್ಕೆ ಭವ್ಯವಾದ ಯೋಜನೆಗಳನ್ನು ಯೋಜಿಸಿದ್ದರು. ಅಂತೆಯೇ ಅವರು ಅತ್ಯುತ್ತಮ ವಿನ್ಯಾಸಕ್ಕಾಗಿ ಸ್ಪರ್ಧೆಯನ್ನು ನಡೆಸಿ, ಹೆಸರಾಂತ ವಾಸ್ತುಶಿಲ್ಪಿ ಕಿಫಯಾತುಲ್ಲಾ ಅವರನ್ನು ಆಯ್ಕೆ ಮಾಡಿದರು. ಅವರಿಗೆ ತಾವು ಸಂಭಾವನೆ ಎಷ್ಟು ತೆಗೆದುಕೊಳ್ಳುತ್ತೀರಿ ಎಂದು ಕೇಳಿದಾಗ, ವಾಸ್ತುಶಿಲ್ಪಿ ಈ ಸ್ಮಾರಕದಲ್ಲಿ ತಮ್ಮ ಸಮಾಧಿಯೂ ಇರಲು ಬಯಸುವುದಾಗಿ ಹೇಳಿದರು. ನವಾಬನು ಅವನ ಆಸೆಯನ್ನು ಪೂರೈಸಿದನು. ವಾಸ್ತುಶಿಲ್ಪಿ ಕಿಫಯಾತುಲ್ಲಾ ಅವರ ಸಮಾಧಿಯನ್ನು ಇಮಾಂಬರಾದ ಮುಖ್ಯ ಸಭಾಂಗಣದಲ್ಲಿ ನೋಡಬಹುದು.

ತಾಜಿಯಾ ಬಗ್ಗೆಯೂ ಇದೆ ಕಥೆ
ಭವ್ಯವಾಗಿ ವಿನ್ಯಾಸಗೊಳಿಸಲಾದ ಇಮಾಂಬರವನ್ನು ನಿರ್ಮಿಸಲು ದೊಡ್ಡ ಪ್ರಮಾಣದ ಭೂಮಿಯನ್ನು ಮೀಸಲಿಡಲಾಯಿತು. ಆದರೆ ಅದರ ಮಧ್ಯದಲ್ಲಿ ಲಾಡೋ ಸಕುಮ್ ಎಂಬ ಮಹಿಳೆಗೆ ಸೇರಿದ ಗುಡಿಸಲು ಇತ್ತು. ಅವಳು ಗುಡಿಸಲನ್ನು ಪ್ರಾರ್ಥನೆ ಮಾಡಲು ಮತ್ತು ತಾಜಿಯಾವನ್ನು ಇರಿಸಲು ಬಳಸುತ್ತಿದ್ದರಿಂದ ಗುಡಿಸಲಿನಿಂದ ಕದಲಲು ನಿರಾಕರಿಸಿದಳು. ಇಮಾಂಬರ ಮುಗಿದ ನಂತರ ತಾಜಿಯಾವನ್ನು ಅದೇ ಸ್ಥಳಕ್ಕೆ ಹಿಂತಿರುಗಿಸುವುದಾಗಿ ಜೊತೆಗೆ ಮೆರವಣಿಗೆಯ ಸಮಯದಲ್ಲಿ ಅದನ್ನು ಮೊದಲು ತೆಗೆದುಕೊಂಡು ಹೋಗುವುದಾಗಿ ನವಾಬನು ಭರವಸೆ ನೀಡಿದನು. ಸ್ಥಳೀಯ ಜನರ ಪ್ರಕಾರ ಇಂದಿಗೂ ಆಚರಣೆಯನ್ನು ಅನುಸರಿಸಲಾಗುತ್ತದೆ. ಕೊನೆಗೆ ಮಹಿಳೆ ತನ್ನ ಭೂಮಿಯನ್ನು ಪವಿತ್ರ ಉದ್ದೇಶಕ್ಕಾಗಿ ದಾನ ಮಾಡಿದರು.

ಅದ್ಭುತ ಎಂಜಿನಿಯರಿಂಗ್
ಬಾರಾ ಇಮಾಂಬರದ ವಾಸ್ತುಶಿಲ್ಪದ ಶ್ರೇಷ್ಠತೆಯ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ನೀವು ಕೇಂದ್ರ ಸಭಾಂಗಣದ ಛಾವಣಿಯ ಕೆಳಗೆ ನಿಂತಾಗ ನಿಮಗೆ ಮಾತೇ ಹೊರಡುವುದಿಲ್ಲ. ಹೌದು, ಸ್ಮಾರಕದ ಒಳಗೆ ಒಟ್ಟು 9 ಸಭಾಂಗಣಗಳಿವೆ. ಅವುಗಳಲ್ಲಿ ಕೇಂದ್ರ ಸಭಾಂಗಣವು ದೊಡ್ಡದಾಗಿದೆ. ಇದರ ವಿಶೇಷವೆಂದರೆ ಸುಂದರವಾಗಿ ಅಲಂಕೃತಗೊಂಡಿರುವ ಕೇಂದ್ರ ಸಭಾಂಗಣದ ಬೃಹತ್ ಛಾವಣಿಯು ಯಾವುದೇ ಕಬ್ಬಿಣದ ರಾಡ್'ಗಳು, ಗರ್ಡರ್'ಗಳಿಲ್ಲದೆ ಬೆಂಬಲಿತವಾಗಿದೆ.
ಮೂಲಗಳ ಪ್ರಕಾರ, ಫ್ರೆಂಚ್ ವಾಸ್ತುಶಿಲ್ಪಿ ಮೇಜರ್ ಜನರಲ್ ಮಾರ್ಟಿನ್ ಅವರು ಬೆಂಬಲವಾಗಿ ನಿಂತಿರುವ ಚೌಕಟ್ಟನ್ನು ತೆಗೆದ ನಂತರ ಛಾವಣಿಯು ಕುಸಿಯುತ್ತದೆ ಎಂದು ಹೇಳಿದಾಗ, ಕಿಫಯಾತುಲ್ಲಾ ಇಮಾಂಬರ ತೆರೆಯುವ ಒಂದು ವಾರದ ಮೊದಲು ಛಾವಣಿಯ ಕೆಳಗೆ ಒಂದು ಮಂಚವನ್ನು ಇರಿಸಿದರು. ಎಲ್ಲಾ ಚೌಕಟ್ಟುಗಳನ್ನು ತೆಗೆದುಹಾಕಲು ಕೇಳಿದರು. ಯಾವುದೇ ಅಪಘಾತ ಸಂಭವಿಸದೆ, ಕಿಫಯಾತುಲ್ಲಾ ಯಶಸ್ವಿಯಾದರು. ತಜ್ಞರ ಪ್ರಕಾರ, ತೂಕವನ್ನು ಕಮಾನುಗಳಾದ್ಯಂತ ವಿತರಿಸಲಾಯಿತು. ಇದು ನಿಸ್ಸಂದೇಹವಾಗಿ ವಿಶ್ವದ ಅತಿ ದೊಡ್ಡ ಕಮಾನುಗಳಿಲ್ಲದ ಸಭಾಂಗಣವಾಗಿದೆ.

‘ಭೂಲ್ ಭುಲೈಯನ್’
ಇಮಾಂಬರಾದಲ್ಲಿ ಅತ್ಯಂತ ಜನಪ್ರಿಯ ಆಕರ್ಷಣೆಯೆಂದರೆ ‘ಭೂಲ್ ಭುಲೈಯನ್'. ಇಲ್ಲಿ ಕಮಾನಿನ ಹಾದಿಗಳು ಬಹಳ ಕಿರಿದಾಗಿದ್ದು, ಒಂದೇ ರೀತಿಯ ಬಾಗಿಲುಗಳನ್ನು ಹೊಂದಿದೆ. ಇದರ ನಿರ್ಮಾಣವು ಬಹಳ ಜಟಿಲವಾಗಿದೆ. ವಿವಿಧ ಹಂತದ ನಿರ್ಮಾಣದ ಕಾರಣದಿಂದಾಗಿ ಹೀಗಿದೆ ಎಂದು ಕೆಲವರು ಹೇಳುತ್ತಾರೆ, ಕೆಲವರು ಗಾಳಿಯ ಪರಿಚಲನೆಗಾಗಿ ಎಂದು ನಂಬುತ್ತಾರೆ. ಆದ್ದರಿಂದ ಇಲ್ಲಿಗೆ ಬಂದಾಗ ನಿಮ್ಮೊಂದಿಗೆ ಗೈಡ್ ಇದ್ದರೆ ಬಹಳ ಒಳ್ಳೆಯದು. ಆಗಾಗ್ಗೆ, ಗೈಡ್'ಗಳು ಸಂದರ್ಶಕರಿಗೆ ಹೇಗೆ ಹೊರಬರುವುದೆಂದು ತಿಳಿಸುತ್ತಾರೆ. ನೀವು ಹೊರಬರಲು ವಿಫಲವಾದರೆ, ಆತಂಕಪಡಬೇಡಿ ನಿಮ್ಮನ್ನು ಅವರು ಸುರಕ್ಷಿತವಾಗಿ ಕರೆತರುತ್ತಾರೆ. ಅನೇಕರು ಇದನ್ನು ಸುಲಭವಾಗಿ ನಿಭಾಯಿಸುತ್ತಾರೆ. ಆದರೆ ನೀವು ಕ್ಲಾಸ್ಟ್ರೋಫೋಬಿಯಾ ಹೊಂದಿದ್ದರೆ, ಇದನ್ನು ಪ್ರವೇಶಿಸುವ ಮೊದಲು ಎರಡು ಬಾರಿ ಯೋಚಿಸಿ.

ಗಮನಿಸಬೇಕಾದ ವಿಷಯ
ಬಾರಾ ಇಮಾಂಬರಾ ಲಕ್ನೋದ ಹಳೆಯ ಹುಸೇನಾಬಾದ್ ನೆರೆಹೊರೆಯಲ್ಲಿದೆ. ನೀವು ಬಾರಾ ಇಮಾಂಬರಾ ಮತ್ತು ನಗರದ ಇತರ ಸ್ಮಾರಕಗಳ ವಾಸ್ತುಶಿಲ್ಪದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ ಆರ್ಎಸ್ ಫೋನಿಯಾ ಬರೆದಿರುವ, ಭಾರತೀಯ ಪುರಾತತ್ವ ಸಮೀಕ್ಷೆಯಿಂದ ಪ್ರಕಟಿಸಲಾದ ‘ಮಾನ್ಯುಮೆಂಟ್ಸ್ ಆಫ್ ಲಕ್ನೋ' ಓದಿ.


Click it and Unblock the Notifications
















