ಸದ್ಯ ಬಹುತೇಕ ಪೋಷಕರು ಮಕ್ಕಳ ಜೊತೆ ದಸರಾ ರಜೆಗೆಂದು ಪ್ರವಾಸಕ್ಕೆ ತೆರಳಿದ್ದಾರೆ. ಕೆಲವರು ಕರ್ನಾಟಕ ರಾಜ್ಯದೊಳಗೆ ಪ್ರವಾಸ ಹಮ್ಮಿಕೊಂಡರೆ, ಮತ್ತೆ ಕೆಲವರು ಹೊರ ರಾಜ್ಯಗಳಿಗೆ ಹೋಗಿದ್ದಾರೆ. ಅಕ್ಟೋಬರ್ ಸಮಯದಲ್ಲಿ ಬೀಚ್, ಗಿರಿಧಾಮ, ಉದ್ಯಾನವನಗಳತ್ತ ತೆರಳುವವರೇ ಹೆಚ್ಚು. ಆದರೆ ನಿನ್ನೆ ಬೆಳಗ್ಗೆಯಿಂದಲೂ ರಾಜ್ಯದ ಹಲವು ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಪ್ರವಾಸಕ್ಕೆಂದು ತೆರಳುವವರಿಗೆ ಅಡ್ಡಿಯಾಗಿದೆ. ಆದರೂ ಪ್ರವಾಸಿಗರು ಮಳೆಯನ್ನೂ ಲೆಕ್ಕಿಸದೆ ಬೀಚ್ಗಳತ್ತ ತೆರಳಿ ಮೋಜು ಮಾಡುತ್ತಿರುವ ವಿಡಿಯೋಗಳನ್ನು ನಾವು ನೋಡಬಹುದು. ಅಷ್ಟೇ ಅಲ್ಲ, ಕೆಲ ಜನಪ್ರಿಯ ಪ್ರವಾಸಿ ತಾಣಗಳತ್ತಲೂ ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ.
ಕರಾವಳಿ ತಾಣಗಳಲ್ಲಿ...
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ನಗರ, ಪಣಂಬೂರು ಬೀಚ್, ಮಲ್ಪೆ ಬೀಚ್, ಸೇಂಟ್ ಮೇರಿಸ್ ಐಲ್ಯಾಂಡ್, ಮರವಂತೆ, ತ್ರಾಸಿ, ಕೋಡಿ ಬೀಚ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಕಡಲತೀರಗಳಲ್ಲಿ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ.

ನಿರಂತರವಾಗಿ ಹೆಚ್ಚಿದೆ ಜನಸಂದಣಿ
ಮಂಗಳೂರಿನ ಕುದ್ರೋಳಿ ದೇವಸ್ಥಾನದ ದಸರಾ ಮೆರವಣಿಗೆ ಹಾಗೂ ಮಂಗಳಾ ದೇವಿ ದೇವಸ್ಥಾನದಲ್ಲಿ ನಡೆದ ನವರಾತ್ರಿ ರಥೋತ್ಸವಕ್ಕೂ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬಂದಿತ್ತು. ಪ್ರವಾಸಿಗರು ಹೆಚ್ಚುವರಿಯಾಗಿ ಈ ಸ್ಥಳಗಳಿಗೆ ಆಗಮಿಸಿದ್ದರು. ಇನ್ನು ಮಲ್ಪೆ ಬೀಚ್ಗೆ ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸಿದ್ದರಿಂದ ಸಂಚಾರ ದಟ್ಟಣೆಗೆ ಕಾರಣವಾಯಿತು. ಕಳೆದ ಮೂರ್ನಾಲ್ಕು ದಿನಗಳಿಂದ ಜನಸಂದಣಿ ನಿರಂತರವಾಗಿ ಹೆಚ್ಚುತ್ತಿದೆ.
ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮಲಯಾಳಂ ನಟ
ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭಾನುವಾರ 10 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರು. ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಮಲಯಾಳಂ ನಟ ಜಯಸೂರ್ಯ ಸೇರಿದಂತೆ ಗಣ್ಯರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕಮಲಶಿಲೆ ದೇವಸ್ಥಾನ, ಬೈಂದೂರು ಸಮೀಪದ ಸೋಮೇಶ್ವರ ಬೀಚ್, ಒಟ್ಟಿನೆಣೆ ನಿಸರ್ಗಧಾಮಕ್ಕೂ ಕುಂದಾಪುರ ಭಾಗದಿಂದ ಪ್ರವಾಸಿಗರು ಆಗಮಿಸಿದ್ದರು.

ಮಳೆಯಲ್ಲಿ ಕಂಗೊಳಿಸುತ್ತಿರುವ ಸ್ಮಾರಕಗಳು
ಶಾಲಾ ಮಕ್ಕಳಿಗೆ ರಜೆ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಯತ್ತ ಬರುತ್ತಿರುವ ಪ್ರವಾಸಿಗರು ಸ್ಮಾರಕಗಳನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಶ್ರೀವಿರೂಪಾಕ್ಷೇಶ್ವರ ದೇಗುಲ ವೀಕ್ಷಣೆಗೆ ದಿನಕ್ಕೆ ಅಂದಾಜು 30 ರಿಂದ 40 ಸಾವಿರ ಕ್ಕೂ ಅಧಿಕ ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡಿದ್ದಾರೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ಅಂದಾಜು ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ದಸರಾ ನಿಮಿತ್ತ ದೇಗುಲಕ್ಕೆ ಭೇಟಿ ನೀಡಿದ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಜತೆಗೆ ವಿಜಯವಿಠಲ ದೇಗುಲಕ್ಕೆ ಬ್ಯಾಟರಿ ಚಾಲಿತ ವಾಹನಗಳು ಕೊರತೆಯಿಂದ ನಡೆದುಕೊಂಡೆ ಪ್ರವಾಸಿಗರು ಕಲ್ಲಿನ ರಥ, ಸಂಗಿತ ಮಂಟಪ ವೀಕ್ಷಣೆ ಮಾಡಿದ್ದಾರೆ. ಪ್ರತಿ ದಿನ ಸಾವಿರಾರು ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಸೊಬಗನ್ನು ಕಣ್ಣುಂಬಿಕೊಳ್ಳುತ್ತಾರೆ. ಸದ್ಯ ಮಳೆಯಲ್ಲಿ ಹಂಪಿಯ ಸ್ಮಾರಕಗಳ ಸೊಬಗು ಇನ್ನಷ್ಟು ಕಂಗೊಳಿಸುತ್ತಿದೆ. ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ಹಂಪಿಯಲ್ಲಿ ಸ್ಮಾರಕಗಳು ಮಳೆಯಲ್ಲಿ ಕಂಗೊಳಿಸುತ್ತಿವೆ.

ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನದಲ್ಲೂ ಪ್ರವಾಸಿಗರು
ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡಿಪುರದಲ್ಲಿ ಅರಣ್ಯ ಸೌಂದರ್ಯ ಹಾಗೂ ಕಾಡುಪ್ರಾಣಿಗಳ ವೀಕ್ಷಣೆ ಮಾಡಲು ಪ್ರವಾಸಿಗರು ಸಫಾರಿ ಟಿಕೆಟ್ಗಾಗಿ ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದ್ದಾರೆ. ಬಳಿಕ ಸಫಾರಿ ವಾಹನಗಳನ್ನೇರಿ ತುಂತರು ಮಳೆಯ ಸಿಂಚನದ ಜೊತೆಗೆ ಹಸಿರಿನಿಂದ ಕಂಗೊಳಿಸುತ್ತಿರುವ ಕಾಡಿನ ಸೌಂದರ್ಯದ ಜೊತೆಗೆ ಕಾಡುಪ್ರಾಣಿಗಳನ್ನು ವೀಕ್ಷಣೆ ಮಾಡಿದ್ದಾರೆ. ಸಫಾರಿ ವೇಳೆ ಕೆಲವರಿಗೆ ಹುಲಿ ದರ್ಶನವಾಗಿದ್ದು ವಿಶೇಷವಾಗಿತ್ತು.
ಈ ವರ್ಷ ಉತ್ತಮ ಪ್ರಮಾಣದ ಮಳೆಯಾಗಿರುವುದರಿಂದ ಕಾಡು ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು ಕಾನನದೊಳಗಿರುವ ಕಟ್ಟೆ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ. ದಾಹ ತಣಿಸಿಕೊಳ್ಳಲು ಕೆರೆಗಳ ಬಳಿ ಪ್ರಾಣಿಗಳು ಹೆಚ್ಚಾಗಿ ಬರುತ್ತಿರುವುದರಿಂದ ಪ್ರವಾಸಿಗರು ಪ್ರಾಣಿಗಳನ್ನು ಕಂಡು ಪುಳಕಿತರಾಗುತ್ತಿದ್ದಾರೆ. ಗೋಪಾಲಸ್ವಾಮಿ ಬೆಟ್ಟದ ದೇವಸ್ಥಾನಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಟಿಕೆಟ್ ಪಡೆಯಲು ಸರತಿ ಸಾಲು ಕಂಡುಬಂತು. ತಾಲ್ಲೂಕು ಮತ್ತು ರಾಜ್ಯದ ನಾನಾ ಕಡೆಗಳಿಂದ ಭಕ್ತರು ಕಾರುಗಳು, ಮಿನಿ ಟೆಂಪೋ, ಖಾಸಗಿ ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ನೂರಾರು ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಆಗಮಿಸಿದ್ದರು.


Click it and Unblock the Notifications

















