ಇಂದಿಗೂ ದೇವಿ ಇಟ್ಟುಕ್ಕೈ ಅಮ್ಮನ (ಕೊಲ್ಲಿಪಾವೈ) ರಕ್ಷಣೆಯಲ್ಲಿರುವ, ಆ ದೇವಿಯ ಹೆಸರನ್ನೇ ತನ್ನ ನಾಮಧೇಯವಾಗಿಸಿಕೊಂಡಿರುವ ಪರ್ವತ ಶ್ರೇಣಿ, ಕೊಲ್ಲಿಮಲೈ. ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿರುವ ಇದು ಪಶ್ಚಿಮಘಟ್ಟಗಳ ಒಂದು ಭಾಗ. ಸುಮಾರು 280 ಚದರ ಕಿಲೋಮೀಟರ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಕೊಲ್ಲಿಮಲೈ ಶ್ರೇಣಿಯ ಪರ್ವತಗಳ ಎತ್ತರ ಸುಮಾರು 1000 ದಿಂದ 1300 ಮೀಟರುಗಳೆಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ ಪೂರ್ವತೀರದ ಸಮಾನಾಂತರವಾಗಿ ಸಾಗುವ ಈ ಪರ್ವತ ಶ್ರೇಣಿಯ ತಪ್ಪಲನ್ನು ತಲುಪಬೇಕಾದರೆ ಸುಮಾರು 70 ಸುದೀರ್ಘ ಹೊರಳುಗಳನ್ನು ದಾಟಬೇಕಾಗುತ್ತದೆ. ದೈವೀ ಶಕ್ತಿಯಿಂದ ರಕ್ಷಿತ ಪ್ರದೇಶವಾದ್ದರಿಂದ ಅದೃಷ್ಠವಶಾತಃ ಮಾನವ ಚಟುವಟಿಕೆಗಳು ಹಾಗೂ ವಾಣಿಜ್ಯ ಶೋಷಣೆಗಳಿಂದ ದೂರ ಉಳಿದಿದ್ದು, ತನ್ನ ನೈಸರ್ಗಿಕ ಸೊಬಗನ್ನು ಉಳಿಸಿಕೊಂಡಿದೆ.
ಇಲ್ಲಿರುವ ಅರಪಲೇಶ್ವರರ್ ದೇವಾಲಯದಿಂದಾಗಿ ಕೊಲ್ಲಿಮಲೈ ಒಂದು ಯಾತ್ರಾ ಸ್ಥಳವಾಗಿ ಪರಿಣಮಿಸಿದೆ. ಅರಪಲೇಶ್ವರರ್ ದೇವಾಲಯದಿಂದ ರಾಸಿಪುರಂನಲ್ಲಿರುವ ಶಿವನ ದೇವಾಲಯಕ್ಕೆ ರಹಸ್ಯ ಮಾರ್ಗವೊಂದಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಕೊಲ್ಲಿಪರ್ವತದ ಆಸು ಪಾಸಿನ ಪ್ರವಾಸಿ ತಾಣಗಳು
ಪಾದಯಾತ್ರಿಗಳು, ಚಾರಣ ಪ್ರಿಯರು ಹಾಗು ಪ್ರಕೃತಿ ಪ್ರಿಯರು ವರ್ಷದ ಎಲ್ಲಾ ಕಾಲದಲ್ಲಿಯೂ ಕೊಲ್ಲಿಮಲೈಗೆ ಬೇಟಿನೀಡುವದನ್ನು ಕಾಣಬಹುದು. ಅದರಲ್ಲೂ ಅರಪಲೇಶ್ವರರ್ ದೇವಾಲಯದ ಹತ್ತಿರದಲ್ಲೇ ಇರುವ ಅಗಯ ಗಂಗೈ ಜಲಪಾತವು ಕೊಲ್ಲಿಪರ್ವತದ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ.
ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ "ಓರಿ" ಉತ್ಸವವು ಇಲ್ಲಿನ ಪ್ರಸಿದ್ದ ಹಾಗೂ ಜನಾಕರ್ಷಕ ಉತ್ಸವವಾಗಿದೆ. ತಮಿಳ್ನಾಡು ಸರಕಾರವು, ಕೊಲ್ಲಿಮಲೈನಲ್ಲಿ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೇಕುಪರೈ ಹಾಗು ಸೆಲುರ್ ನಾಡುಗಳಲ್ಲಿ ಎರಡು ನಿರೀಕ್ಷಣಾತಾಣಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಮಸಿಲಾ ಜಲಪಾತ ಮತ್ತು ಸ್ವಾಮಿ ಪ್ರಣವಾನಂದರ ಆಶ್ರಮ, ಇವು ಇಲ್ಲಿನ ಇತರ ಆಕರ್ಷಕ ತಾಣಗಳಾಗಿವೆ.
ತಲುಪಲು ಹೇಗೆ -
ಕೊಲ್ಲಿಮಲೈಯನ್ನು ರೈಲು ಮತ್ತು ರಸ್ತೆ ಮಾರ್ಗವಾಗಿ ಸಂಪರ್ಕಿಸಬಹುದು.
ಹವಾಮಾನ -
ಕೊಲ್ಲಿಮಲೈ ಬೇಸಿಗೆಯಲ್ಲಿ ಆಹ್ಲಾದಕರ ವಾತಾವರಣ ಹೊಂದಿರುತ್ತದೆ. ಇಲ್ಲಿ ಚಳಿಗಾಲದಲ್ಲಿ ಹೆಚ್ಚು ಚಳಿ ಇರುತ್ತಿದ್ದು, ಮಳೆಗಾಲದಲ್ಲಿ ಧಾರಾಕಾರ ಮಳೆಯಾಗುತ್ತದೆ. ಕಾರಣ ಮಳೆಗಾಲದಲ್ಲಿ ಇಲ್ಲಿನ ಬೆಟ್ಟಗಳಿಗೆ ಪ್ರಯಾಣ ಬೆಳೆಸುವುದು ಅಷ್ಟೇನೂ ಸೂಕ್ತವಲ್ಲ.