ಕೆಮ್ಮಣ್ಣುಗುಂಡಿಯಿಂದ ಹತ್ತಿರದಲ್ಲೇ ಇರುವ ಕಲ್ಲತ್ತಿ ಜಲಪಾತವೂ ಕೂಡ ಪ್ರವಾಸಿಗರು ನೋಡಲೇಬೇಕಾದಂತಹ ಸುಂದರ ತಾಣ ಎನ್ನಬಹುದು. ಕಲ್ಲತ್ತಿ ಜಲಪಾತಕ್ಕೆ ಕಾಳಹಸ್ತಿ ಜಲಪಾತ್, ಕಲ್ಲತ್ತಗಿರಿ ಜಲಪಾತ ಎಂಬುದಾಗಿಯೂ ಕರೆಯಲಾಗುತ್ತದೆ. ಸ್ಥಳೀಯ ಜನರ ಪ್ರಕಾರ, ಅಗಸ್ತ್ಯ ಋಷಿಯೊಂದಿಗೆ ಪೌರಾಣಿಕ ಹಿನ್ನೆಲೆಯನ್ನು ಈ ಕಲ್ಲತ್ತಿ ಜಲಪಾತವು ಹೊಂದಿದೆ ಎನ್ನಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿದೆಯೆನ್ನಲಾದ ಸುಂದರ ವೀರಭದ್ರೇಶ್ವರ ದೇವಸ್ಥಾನ ಇಲ್ಲಿದೆ. ದೇವಸ್ಥಾನದ ಪ್ರವೇಶಕ್ಕೆ ಸುಂದರ ಕೆತ್ತನೆಯುಳ್ಳ ಕಲ್ಲಿನ ಮೂರು ಆನೆಗಳನ್ನು ಸ್ಥಾಪಿಸಲಾಗಿದೆ. ಪ್ರತಿವರ್ಷದ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಇಲ್ಲಿ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಾರೆ. ಇದೇ ಸಮಯದಲ್ಲಿ ಇಲ್ಲಿ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಕೂಡ ಜರುಗುತ್ತದೆ. ಈ ಜಾತ್ರಾ ಮಹೋತ್ಸವಕ್ಕೆ ಹಿಂದು-ಮುಸ್ಲಿಂ ಬಾಂಧವರು ಭಾಗವಹಿಸುವುದು ಇಲ್ಲಿನ ವಿಶೇಷ ಎನ್ನಬಹುದು.