ಮೊಘಲರ ಮೊದಲ ಚಕ್ರವರ್ತಿಯಾದ ಬಾಬರನು ಹಲವಾರು ಮಸೀದಿಗಳನ್ನು ನಿರ್ಮಿಸಿದನು. ಅವುಗಳಲ್ಲಿ ಕೆಲವನ್ನು ಹೊಸದಾಗಿ ನಿರ್ಮಿಸಲಾದರೆ, ಇನ್ನು ಕೆಲವನ್ನು ಅಯೋಧ್ಯೆಯಲ್ಲಿಯಂತೆ, ಹಿಂದೂ ದೇವಾಲಯಗಳನ್ನು ದ್ವಂಸ ಮಾಡಿ ನಿರ್ಮಿಸಲಾದವುಗಳಾಗಿವೆ. ಕರ್ನಾಲ್ನ ಬಾಬರ್ ಮಸೀದಿಯು ದೇಶದ ಇನ್ನಿತರ ಭಾಗಗಳಂತೆಯೇ ಸ್ಥಳೀಯ ಮತ್ತು ಮೊಘಲ್ ವಾಸ್ತುಶಿಲ್ಪ ಎರಡರ ಸಮ್ಮಿಲನದಿಂದ ನಿರ್ಮಾಣಗೊಂಡಿದೆ.
ಈ ಮಸೀದಿಯ ನಿರ್ಮಾಣವು 1527ರಲ್ಲಿ ಆರಂಭವಾಗಿ 1528ರಲ್ಲಿ ಪೂರ್ಣಗೊಂಡಿತು. ಬಾಬರ್ ಈ ಮಸೀದಿಯನ್ನು ಇಬ್ರಾಹಿಂ ಲೋಧಿಯ ಮೇಲೆ ಸಾಧಿಸಿದ ವಿಜಯದ ನೆನಪಿಗಾಗಿ ನಿರ್ಮಿಸಿದನು. ಇದು ಭಾರತದಲ್ಲಿ ಅವನ ಸಾಮ್ರಾಜ್ಯ ಸ್ಥಾಪಿಸುವ ಧ್ಯೋತಕವಾಗಿ ಸಹ ಗುರುತಿಸಲ್ಪಟ್ಟಿತು.
ವಿಶಾಲವಾಗಿರುವ ಈ ಮಸೀದಿಯು ವಿಸ್ತಾರವಾದ ಪ್ರದೇಶದಲ್ಲಿ ತಲೆ ಎತ್ತಿದೆ. ಇದರ ಸುತ್ತಲು ಒಂದು ಸುಂದರವಾದ ಉದ್ಯಾನವನವಿತ್ತಾದರು, ಅದು ಇಂದು ಕಾಲನ ಹೊಡೆತಕ್ಕೆ ಸಿಲುಕಿ ನಾಮಾವಶೇಷವಾಗಿದೆ.
ಈ ಮಸೀದಿಯ ಪ್ರಾರ್ಥನಾ ಸಂಭಾಂಗಣವು 53.75x16.5 ಮೀಟರ್ ವಿಸ್ತಾರವಿದ್ದು, ಮೇಲೆ ಒಂದು ಬೃಹತ್ ಗುಮ್ಮಟವನ್ನು ಹೊಂದಿದೆ. ಇದರ ಮೇಲೆ ಅಷ್ಟಾಭುಜಾಕೃತಿಯ ಗೋಪುರಗಳು ಮತ್ತು ಇಟ್ಟಿಗೆಯಿಂದ ಮಾಡಿದ ಗುಮ್ಮಟಗಳನ್ನು ನಾವು ಇಲ್ಲಿ ಕಾಣಬಹುದು. ಆದರೆ ಇವುಗಳಲ್ಲಿ ಇಂದು ಒಂದು ಮಾತ್ರ ಉಳಿದಿದೆ.
ಈ ಮಸೀದಿಯು ಮೂರು ಗುಮ್ಮಟಗಳನ್ನು ಹೊಂದಿದೆ. ಮುಖ್ಯವಾದ ಬೃಹತ್ ಗುಮ್ಮಟದ ಜೊತೆಗೆ ಎರಡು ಚಿಕ್ಕ ಗುಮ್ಮಟಗಳು ಇಲ್ಲಿವೆ. ಈ ಮಸೀದಿಯು ಸಮಾನಾಂತರವಾಗಿ ನಿರ್ಮಿಸಲಾಗಿರುವ ಎರಡು ದೊಡ್ಡ ಗೋಡೆಗಳಿಂದ ಆವೃತವಾಗಿದೆ. ಜೊತೆಗೆ ಇಲ್ಲಿ ಒಂದು ಆಳವಾದ ಬಾವಿ ಇದ್ದು, ಮಸೀದಿಗೆ ಬರುವವರಿಗೆ ತಣ್ಣನೆಯ ಮತ್ತು ಸಿಹಿಯಾದ ನೀರನ್ನು ಒದಗಿಸುತ್ತಿದೆ. ಇಲ್ಲಿ ಪರ್ಷಿಯನ್ ಭಾಷೆಯಲ್ಲಿರುವ ಶಿಲಾಶಾಸನವು ಈ ಮಸೀದಿಯನ್ನು ಮೀರ್ ಬಾಕಿ ಎಂಬ ವಾಸ್ತುಶಿಲ್ಪಿ ನಿರ್ಮಿಸಿದನು ಎಂದು ಸಾರುತ್ತಿದೆ. ಈ ಮಸೀದಿಯು ಕರ್ನಾಲ್ ನಗರದ ಹೃದಯ ಭಾಗದಲ್ಲಿ ನೆಲೆಗೊಂಡಿದೆ.