ಕೈಲಾಶಹಾರ್ ತ್ರಿಪುರಾ ರಾಜ್ಯದ ಉತ್ತರ ತ್ರಿಪುರಾ ಜಿಲ್ಲೆಯ ಜಿಲ್ಲಾ ಕೇಂದ್ರ ಸ್ಥಳವಾಗಿದೆ. ಇದು ರಾಜ್ಯದ ಉತ್ತರ ಭಾಗದಲ್ಲಿದ್ದು ತನ್ನ ಗಡಿಯನ್ನು ಬಾಂಗ್ಲಾದೇಶದೊಂದಿಗೆ ಹೊಂದಿಕೊಂಡಿದೆ. ಕೈಲಾಶಹಾರ್ ಒಂದು ಇತಿಹಾಸ ಪ್ರಸಿದ್ಧ ನಗರವಾಗಿದೆ ಹಾಗೂ ಇದು ಏಳನೆಯ ಶತಮಾನದಿಂದಲೆ ಜನವಾಸ್ತವ್ಯ ಹೊಂದಿದೆ ಎಂದು ನಂಬಲಾಗಿದೆ. ಇದು ಉನಕೋಟಿ (ಕಲ್ಲುಗಳು ಹಾಗೂ ಕಲ್ಲಿನ ಮೇಲಿನ ಚಿತ್ರಗಳಿಗಾಗಿ ಶತಮಾನಗಳಿಂದ ಪ್ರಸಿದ್ಧವಾಗಿದೆ) ಜೊತೆ ನಂಟು ಹೊಂದಿದೆ. ಕೈಲಾಶಹಾರ್ ತ್ರಿಪುರಿ ರಾಜ್ಯದ ಪುರಾತನವಾದ ರಾಜಧಾನಿಯಾಗಿತ್ತು.
ಕೈಲಾಶಹಾರ್ ನ ಶ್ರೀಮಂತ ಪರಂಪರೆ
ಬಂಡೆ ಮತ್ತು ಕಲ್ಲುಗಳ ಮೇಲಿನ ಚಿತ್ರಗಳಿಗಾಗಿ ಪ್ರಸಿದ್ಧವಾಗಿರುವ ಉನಕೋಟಿ ಕೈಲಾಶಹಾರ್ ನೊಂದಿಗೆ ಬಹಳ ನಿಕಟವಾದ ಸಂಬಂಧ ಹೊಂದಿದೆ. ಇಲ್ಲಿನ ಸ್ಥಳೀಯರ ಪ್ರಕಾರ, ಜುಝಾರ್ ಫಾ ನ ರಾಜವಂಶದವರು (ತ್ರಿಪುರಾಬ್ದಾ ಅಥವಾ ತ್ರಿಪುರಿ ಕ್ಯಾಲೆಂಡರ್ ಅನ್ನು ಆರಂಭಿಸಿದವರು) ಶಿವ ದೇವರ ಭಕ್ತರಾಗಿದ್ದರು. ಆ ರಾಜ ಛಂಬುಲಂಗಾರ್ ನ ಮಾವು ನದಿಯ ದಡದಲ್ಲಿ ತಪಸ್ಸನ್ನಾಚರಿಸಿದ್ದನು. ಛಂಬುಲಂಗರ್ ಕೈಲಾಶಹಾರ್ ನ ಮೂಲ ಹೆಸರು ಎಂದು ಹೇಳಲಾಗುತ್ತದೆ.
ಇನ್ನೂ ಕೆಲವ್ರು ಕೈಲಾಶಹಾರ್ 'ಹರ' (ಶಿವ ದೇವರ ಇನ್ನೊಂದು ಹೆಸರು) ಹಾಗೂ ಕೈಲಾಶ ಪರ್ವತ (ಶಿವದೇವರ ವಾಸ ಸ್ಥಾನ) ಪದಗಳಿಂದ ವ್ಯುತ್ಪತ್ತಿಗೊಂಡಿತು ಎಂದೂ ಹೇಳುತ್ತಾರೆ. ಹೀಗೆ ಕೈಲಾಶ ಮತ್ತು ಹರ ಸೇರಿ ನಂತರ ಕೈಲಾಶಹಾರ್ ಆಯ್ತು ಎಂದು ಹೇಳಲಾಗುತ್ತದೆ. ಈ ಹೆಸರು ಏಳೆನಯ ಶತಮಾನದ ನಂತರ ಬಹಳ ಪ್ರಸಿದ್ಧವಾಯಿತು ಇದಕ್ಕೆ ಕಾರಣ ತ್ರಿಪುರಾ ರಾಜ ಆದಿ ಧರ್ಮಪ ಇಲ್ಲಿ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದನು.
ಕೈಲಾಶಹಾರ್ ಅನ್ನು ಇಂದು ಶ್ರೀಮಂತಗೊಳಿಸಿದವರು
ಕೈಲಾಶಹಾರ್ ಒಂದು ಸಣ್ಣ ಪಟ್ಟಣವಾಗಿದೆ, ಇದು ಇಂದಿಗೂ ನಗರ ಸಭೆಯಾಗಿಯೇ ಉಳಿದಿದೆ. ಆದರೆ ಇಲ್ಲಿನ ಭೌಗೋಳಿಕ ಇತಿ ಮಿತಿಗಳು ಇಲ್ಲಿನ ವೈವಿಧ್ಯಮಯ ಜನರಿಗೆ ಯಾವುದೇ ರೀತಿಯ ತೊಡಕು ಉಂಟು ಮಾಡಿಲ್ಲ. ಇಲ್ಲಿ ಬೆಂಗಾಲಿಗಳು ಬಹಳ ಸಮಯದಿಂದ ವಾಸವಾಗಿದ್ದಾರೆ ಹಾಗೂ ಇಲ್ಲಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜೀವನದ ಒಂದು ಬಹುಮುಖ್ಯ ಭಾಗವಾಗಿದ್ದಾರೆ. ಬೆಂಗಾಲಿಗಳನ್ನು ಹೊರತುಪಡಿಸಿ ಇಲ್ಲಿ ಗುಡ್ಡಗಾಡು ಮತ್ತು ದೇಶೀಯ ಜನಸಂಖ್ಯೆಯೂ ಇದೆ.
ಧರ್ಮ ಮತ್ತು ಹಬ್ಬಗಳು - ಕೈಲಾಶಹಾರ್ ಜೀವನದ ಒಂದು ಭಾಗ
ಧರ್ಮ, ಹಬ್ಬಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಕೈಲಾಶಹಾರ್ ಜೀವನ ಶೈಲಿಯ ಒಂದು ಭಾಗವೇ ಆಗಿದೆ. ವರ್ಷದ ಪ್ರತಿಯೊಂದು ತಿಂಗಳಿನಲ್ಲಿಯೂ ಒಂದಲ್ಲ ಒಂದು ಹಬ್ಬಕ್ಕೆ ಕೈಲಾಶಹಾರ್ ಸಿದ್ಧಗೊಳ್ಳುತ್ತದೆ. ಕೈಲಾಶಹಾರ್ ನಿಜವಾಗಿಯೂ ಒಂದು ಜಾತ್ಯಾತೀತ ನಗರವಾದ ಕಾರಣ ಇಲ್ಲಿ ಹಿಂದೂ, ಮುಸ್ಲೀಮರು, ಕ್ರಿಶ್ಚಿಯನ್ನರು ಹಾಗೂ ಬೌದ್ಧ ಧರ್ಮದ ಜನರು ಒಂದುಗೂಡಿ ಬಾಳುತ್ತಿದ್ದಾರೆ. ಇಲ್ಲಿ ಯಾವುದೇ ಭಾಗಕ್ಕೂ ಹೋದರೂ ಸಹಬಾಳ್ವೆಯಿಂದ ಬದುಕುವುದನ್ನು ಕಾಣಬಹುದು. ದುರ್ಗಾ ಪೂಜಾ ಮತ್ತು ಕಾಳಿ ಪೂಜಾ ಇಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಹಬ್ಬಗಳಾಗಿವೆ. ಆದರೂ ಎಲ್ಲಾ ಹಬ್ಬಗಳಿಗೂ ಇಲ್ಲಿ ಪ್ರಾಮುಖ್ಯತೆ ಇದೆ. ಕ್ರಿಸ್ ಮಸ್, ಈದ್, ಬುದ್ಧ ಪೂರ್ಣಿಮಾ ಹಾಗೂ ಇನ್ನಿತರ ಹಬ್ಬಗಳೂ ಇಲ್ಲಿ ಪ್ರಾಮುಖ್ಯತೆ ಪಡೆದಿವೆ.
ಪ್ರವಾಸಿ ಆಕರ್ಷಣೆಗಳು
ಕೈಲಾಶಹಾರ್ ಒಂದು ಸುಂದರವಾದ ನಗರವಾಗಿದೆ. ಇಲ್ಲಿನ ದೇವಾಲಯಗಳು ಹಾಗೂ ಹಚ್ಚಹಸುರಿನ ಪ್ರಕೃತಿ ಎಲ್ಲ ಆಕರ್ಷಣೆಯ ಮೂಲವಾಗಿದೆ. ಇಲ್ಲಿಗೆ ನಿಮ್ಮ ಭೇಟಿ ಲಖಿ ನಾರಾಯನ್ ಬಾರಿ ಗೆ ತೆರಳದೇ ಇದ್ದರೆ ಅಪೂರ್ಣವಾಗುವುದು. ಹದಿನಾಲ್ಕು ದೇವರ ದೇವಾಲಯ ಅಥವಾ ಚೌದೋ ದೇವೋತಾರ್ ಮಂದಿರ್ ಹಾಗೂ ಹದಿನಾರು ಚಹಾ ಎಸ್ಟೇಟ್ ಗಳು ಇಲ್ಲಿವೆ.
ಲಖಿ ನಾರಾಯಣ್ ಬಾರಿ: ಇದು ಸುಮಾರು (45 ವರ್ಷ) ಹಳೆಯದಾದ ಹಾಗೂ ಭಾರತದ ಒಂದು ಪುರಾತನ ಸ್ಮಾರಕ ಎಂದು ಪ್ರಸಿದ್ಧಿ ಪಡೆದಿದೆ. ಇದು ಕೃಷ್ಣ ದೇವರ ದೇವಾಲಯವಾಗಿದೆ. ಇಲ್ಲಿನ ವಿಗ್ರಹವನ್ನು ಕೃಷ್ಣಾನಂದ ಸೇವಾಯೆಟ್ ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
ಚೌದೋ ದೇವೋತಾರ್ ಮಂದಿರ್: 14 ದೇವರ ದೇವಾಲಯ ಅಥವಾ ಚೌಡೋ ದೇವೋತಾರ್ ಮಂದಿರ್ ಹದಿನಾಲ್ಕು ದೇವರ ವಿಗ್ರಹಗಳನ್ನು ಹೊಂದಿದೆ. ಇದು ಸುಮಾರು 14 ಕಿ.ಮೀ ದೂರದಲ್ಲಿದೆ ಹಾಗೂ ಜುಲೈ ನಲ್ಲಿ ನಡೆಯುವ ಖಾರ್ಚಿ ಪೂಜಾ ಸಮಯದಲ್ಲಿ ಬಹಳ ಜನಸಂದಣಿಯಿಂದ ತುಂಬಿರುತ್ತದೆ.
ಚಹಾ ಎಸ್ಟೇಟ್ ಗಳು: ದೇವಸ್ಥಾನಗಳನ್ನು ಹೊರತು ಪಡಿಸಿ ನಿಮ್ಮ ಮನೋಲ್ಲಾಸಕ್ಕಾಗಿ ಇಲ್ಲಿ ಹಲವಾರು ಚಹಾ ಎಸ್ಟೇಟ್ ಗಳು ಇವೆ. ಇವುಗಳಲ್ಲಿ ಹೆಚ್ಚಿನವು ಖಾಸಗಿ ಒಡೆತನದಲ್ಲಿವೆ. ಇಲ್ಲಿ ಬೆಳೆಯುವ ಚಹಾ ಎಲೆಗಳಿಗೆ ಬಹಳ ಬೇಡಿಕೆ ಇದೆ.
ಇಲ್ಲಿಗೆ ಬಂದ ನಂತರ ನಾಲ್ಕಾರಾದರೂ ನೆನಪಿನ ಕಾಣಿಕೆಗಳು ಅಥವಾ ಸ್ಮಾರಕಗಳನ್ನು ಸಂಗ್ರಹಿಸದೇ ಹೋದರೆ ನಿಮ್ಮ ಭೇಟಿ ವ್ಯರ್ಥವಾದಂತೆ. ಹೆಚ್ಚಿನ ಈಶಾನ್ಯ ರಾಜ್ಯಗಳಂತೆ ಇಲ್ಲಿಯೂ ಕೂಡ ಗುಡ್ಡಗಾಡು ಜನರು ತಯಾರಿಸಿದ ಕರಕುಶಲ ವಸ್ತುಗಳನ್ನು ಇಲ್ಲಿ ಖರೀದಿಸಬಹುದು. ಪ್ರವಾಸಿ ತಾಣವಾಗಿ ರಾಜ್ಯದ ಜನಪ್ರಿಯತೆಯನ್ನು ಗಮನಿಸಿ ಕೈಲಾಶಹಾರ್ ಅನ್ನೂ ಒಂದು ಪ್ರಮುಖ ಪ್ರವಾಸಿ ತಾಣವಾಗಿ ಬಿಂಬಿಸಲಾಗುತ್ತದೆ. ಇಂದು ಇಲ್ಲಿ ದೊಡ್ಡ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ಇವರಲ್ಲಿ ಹೆಚ್ಚಿನ ಜನರು ಶ್ರೀಕೃಷ್ಣ ಮತ್ತು ಹದಿನಾಲ್ಕು ದೇವರ ಆಶೀರ್ವಾದವನ್ನು ಪಡ್ಶೆಯಲು ಆಗಮಿಸುತ್ತಾರೆ.