ಸುರೇಂದ್ರಪುರಿ ಎಂಬುದು ಒಂದು ಸುಂದರವಾದ ವಸ್ತು ಸಂಗ್ರಹಾಲಯವಾಗಿದ್ದು, ಹೈದರಬಾದಿನ ಹೊರವಲಯದಲ್ಲಿ ನೆಲೆಗೊಂಡಿದೆ. ಈ ವಸ್ತು ಸಂಗ್ರಹಾಲಯವು ಪೌರಾಣಿಕ ಜಾಗೃತಿ ಕೇಂದ್ರವೆಂದು ಖ್ಯಾತಿ ಪಡೆದಿದೆ. ಈ ವಸ್ತು ಸಂಗ್ರಹಾಲಯವನ್ನು ಭಾರತೀಯ ಪುರಾಣಗಳ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ನಿರ್ಮಿಸಾಯಿತು. ಸುರೇಂದ್ರಪುರಿ ವಸ್ತು ಸಂಗ್ರಹಾಲಯವು ಕುಂದ ಸತ್ಯನಾರಾಯಣರ ಮಗನಾದ ಸುರೇಂದ್ರ ಅವರಿಂದಾಗಿ ಈ ಹೆಸರು ಪಡೆದಿದೆ. ಇದನ್ನು ಸ್ಥಾಪಿಸಿದ ಕುಂದ ಸತ್ಯನಾರಾಯಣರು ತಮ್ಮ ಮಗನ ಹೆಸರನ್ನು ಶಾಶ್ವತಗೊಳಿಸುವ ಸಲುವಾಗಿ ಈ ವಸ್ತು ಸಂಗ್ರಹಾಲಯಕ್ಕೆ ಈ ಹೆಸರನ್ನು ಇಟ್ಟಿದ್ದಾರೆ.
ಈ ವಸ್ತು ಸಂಗ್ರಹಾಲಯದಲ್ಲಿ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರಗಳ ಮಿನಿಯೇಚರ್ ಮಾದರಿಗಳನ್ನು ಇಡಲಾಗಿದ್ದು, ಅವುಗಳೆಲ್ಲವು ಈ ಸಂಗ್ರಹಾಲಯಕ್ಕೆ ವಿಶಿಷ್ಟತೆಯ ಮೆರಗನ್ನು ತಂದುಕೊಟ್ಟಿವೆ. ಈ ಮಾದರಿಗಳನ್ನು ನಿರ್ಮಿಸಲು ವಿಶೇಷ ಮುತುವರ್ಜಿಯನ್ನು ವಹಿಸಲಾಗಿರುವುದನ್ನು ನಾವು ಇಲ್ಲಿ ಗಮನಿಸಬಹುದು. ಆ ಮಾದರಿ ದೇವಾಲಯಗಳಲ್ಲಿ ಮೂಲ ದೇವಾಲಯದ ಕಲೆ ಮತ್ತು ವಾಸ್ತುಶಿಲ್ಪಗಳನ್ನು ಯಥಾವತ್ತಾಗಿ ಕಾಣಬಹುದು. ಈ ಸಂಗ್ರಹಾಲಯದಲ್ಲಿ ಹಿಂದೂ ದೇವಾನುದೇವತೆಗಳ ಜೀವನದ ಕುರಿತಾದ ವರ್ಣಚಿತ್ರಗಳನ್ನು ಮತ್ತು ಶಿಲ್ಪಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಸ್ಥಳಕ್ಕೆ ಒಮ್ಮೆ ಭೇಟಿಕೊಟ್ಟರು ಸಾಕು ಹಿಂದೂ ಪುರಾಣಗಳ ಕುರಿತಾಗಿ ಹಲವಾರು ವಿಚಾರಗಳನ್ನು ತಿಳಿಯಬಹುದು.