ನಿಸರ್ಗಧಾಮವು ಕಾವೇರಿ ನದಿಯಲ್ಲಿನ ಒಂದು ದ್ವೀಪವಾಗಿದೆ. ಕೊಡಗು ಜಿಲ್ಲೆಯ ಕುಶಾಲ ನಗರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ. ಇದೊಂದು ಪಾರಂಪರಿಕ ಪಾರ್ಕ್ ಆಗಿದ್ದು ಸುಮಾರು 35 ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದೆ. 90 ಮೀಟರು ಉದ್ದದ ಸೇತುವೆಯನ್ನು ಮುಖ್ಯ ಭೂಮಿಗೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗಿದೆ. ಇದರ ಮೂಲಕ ಕಾವೇರಿಯ ನದಿಯನ್ನು ಪ್ರವಾಸಿಗರು ದಾಟಬಹುದು.
ಹಳೆಯ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆಯನ್ನು ಕೂಡಾ ನಿರ್ಮಿಸಲಾಗಿದೆ. ದಟ್ಟವಾದ ಹಸಿರು ಜೊತೆಗೆ ಯಥೇಚ್ಛವಾಗಿ ಬೆಳೆದಿರುವ ಬಿದಿರು ಮರಗಳು, ಗಂಧದ ಮರಗಳು, ತೇಗದ ಮರಗಳು ಮತ್ತು ಜಲಪಾತಗಳು ಕಾವೇರಿಯ ಎರಡೂ ಕಡೆ ಇದೆ. ಈ ಅಭಯಾರಣ್ಯವು ಪ್ರವಾಸಿಗರಲ್ಲಿ ತುಂಬಾ ಜನಪ್ರಿಯವಾಗಿದೆ. ಇಲ್ಲಿ ವಿವಿಧ ಪ್ರಾಣಿಗಳನ್ನು ನೋಡಬಹುದು. ಕರಡಿ, ಆನೆಗಳು, ಮೊಲಗಳು, ನವಿಲುಗಳು ಮತ್ತು ಇತರ ಪ್ರಾಣಿಗಳನ್ನು ಆಗಾಗ್ಗೆ ಕಾಣಬಹುದು. ನಿಸರ್ಗಧಾಮದಲ್ಲಿ ಆನೆ ನೋಡುವುದಕ್ಕೆ ಮತ್ತು ಬೋಟಿಂಗ್ಗೆ ಪ್ರತ್ಯೇಕ ವ್ಯವಸ್ಥೆ ಇದೆ. ಅಲ್ಲಿ ಮರದ ಮೇಲೆ ಬಿದಿರು ಹಾಸಿಗೆಗಳು ಮತ್ತು ಅರಣ್ಯ ಇಲಾಖೆಯು ನಡೆಸುವ ಪ್ರವಾಸಿ ಮಂದಿರವಿದೆ. ಪ್ರವಾಸಿಗರಲ್ಲಿ ಇದು ತುಂಬಾ ಜನಪ್ರಿಯವಾದ ಪಿಕ್ನಿಕ್ ತಾಣವಾಗಿದ್ದು, ಈ ಪ್ರದೇಶದ ನಿಸರ್ಗ ಸೌಂದರ್ಯದಿಂದಾಗಿ ಮರೆಯಲಾರದ ಅನುಭವ ಉಂಟಾಗುತ್ತದೆ.