ಸುಮಾರು ಎಳುನೂರು ವರ್ಷಗಳ ಇತಿಹಾಸವಿರುವ ಈ ದೇವಾಲಯ ತಿರುನೆಲ್ವೇಲಿಯಿಂದ ಅಂಬಸಮುದ್ರಂ ಹೆದ್ದಾರಿಯಲ್ಲಿ ಹದಿನಾರು ಕಿ.ಮೀ ದೂರದ ಮೆಲಸೇವಲ್ ಗ್ರಾಮದಲ್ಲಿದೆ. ಈ ದೇವಾಲಯವನ್ನು ತಿರುವಾಂಕೂರು ರಾಜರು ಕಟ್ಟಿಸಿದ್ದ ಬಗ್ಗೆ ಮಾಹಿತಿಯಿದೆ. ಈ ದೇವಾಲಯದಲ್ಲಿ ನವನೀತ ಕೃಷ್ಣ ನಿಂತೇ ತನ್ನ ಭಕ್ತರಿಗೆ ಎರಡೂ ಕೈಗಳಲ್ಲಿ ತುಪ್ಪ ಹಿಡಿದು ಆಶೀರ್ವದಿಸುವ ಗ್ರಾನೈಟ್ ಕಲ್ಲಿನ ವಿಗ್ರಹವಿದೆ. ಶ್ರೀಕೃಷ್ಣನ ನಿಂತಿರುವ ಭಂಗಿ ಇದೊಂದೇ ದೇವಾಲಯದಲ್ಲಿ ಕಂಡುಬರುತ್ತದೆ. ದೇವಾಲಯದ ಗೋಡೆಗಳಲ್ಲಿ ರಾಮಾಯಣ, ಭಾಗವತ ಮತ್ತು ದಶಾವತಾರದ ದೃಶ್ಯಗಳನ್ನು ಕೆತ್ತಲಾಗಿದೆ. ಈ ದೇವಾಲಯವನ್ನು ಸಂದರ್ಶಿಸುವುದರಿಂದ ಸಂತಾನಪ್ರಾಪ್ತಿಯಾಗುವ ನಂಬಿಕೆಯಿಂದ ಸಹಸ್ರಾರು ದಂಪತಿಗಳು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಪ್ರತಿವರ್ಷ ಕೃಷ್ಣಾಷ್ಠಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ.