ಏಳು ಹೊಳೆಗಳು ಭೇಟಿಯಾಗುವ ಸ್ಥಳದಲ್ಲಿದೆ ಒಂದು ಅದ್ಭುತ ದೇವಾಲಯ. ದೇವಾಲಯದ ಸುತ್ತಮುತ್ತ ಹರಿಯುವ ಹೊಳೆಗಳು ಏಳು ಋಷಿ ಮುನಿಗಳಿಗೆ ಸಂಬಂಧಿಸಿದ್ದಂತೆ. ಇಲ್ಲಿ ಜನರು ಕುರಿಯನ್ನು ಬಲಿ ನೀಡುವ ಮೂಲಕ ತಮ್ಮ ಇಚ್ಛೆಯನ್ನು ದೇವರ ಮುಂದಿಡುತ್ತಾರಂತೆ. ಅಂತಹ ಒಂದು ಅದ್ಭುತ ದೇವಾಲಯವೇ ತೆಲಂಗಾಣದಲ್ಲಿರುವ ದುರ್ಗಾ ದೇವಿ ದೇವಸ್ಥಾನ. ಇದು ತೆಲಂಗಾಣದ ಅತ್ಯಂತ ಪ್ರಸಿದ್ಧ ಮತ್ತು ಶಕ್ತಿಯುತವಾದ ದೇವಾಲಯವಾಗಿದೆ. ಹೈದರಾಬಾದ್ನಿಂದ ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ತಾಣ ಇದಾಗಿದೆ.ಹೈದರಾಬಾದ್ಗೆ ಹೋದರೆ ಈ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳೋದನ್ನು ಮರೆಯದಿರಿ.

ಎಲ್ಲಿದೆ ಈ ದೇವಾಲಯ?
ಶ್ರೀ ಎಡುಪಾಯಲಾ ವನ ದುರ್ಗಾ ಭವಾನಿ ದೇವಾಲಯವು ನಾಗಾಸನ್ಪಲ್ಲಿ, ಪಪಾನ್ನಪೇಟ್ ಮಂಡಲ್, ಮೆದಕ್ ಜಿಲ್ಲೆಯಲ್ಲಿದೆ ಮತ್ತು ಹೈದರಾಬಾದ್ನಿಂದ 112 ಕಿ.ಮೀ ಮತ್ತು ಮೆದಕ್ನಿಂದ ಕೇವಲ 18 ಕಿ.ಮೀ. ದೂರದಲ್ಲಿದೆ. ವಾಹನದ ಮೂಲಕ ಹೈದರಾಬಾದ್ನಿಂದ ಈ ಸ್ಥಳವನ್ನು 2 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ತಲುಪಬಹುದು. ಮಳೆಗಾಲದಲ್ಲಿ ಈ ಪ್ರದೇಶಕ್ಕೆ ಹೋಗಬೇಕು. ಅರಣ್ಯ ಮತ್ತು ಹಸಿರು ಕ್ಷೇತ್ರಗಳು ಈ ಪ್ರದೇಶವನ್ನು ಹೆಚ್ಚು ಸುಂದರವಾಗಿಸುತ್ತವೆ.

ಏಳು ಋಷಿಗಳ ಹೆಸರಲ್ಲಿ ರಚಿಸಿದೆ
PC: Facebook
ಈ ದೇವಸ್ಥಾನದ ವಿಶೇಷತೆಯು ಭಾರತೀಯ ಪುರಾಣದಲ್ಲಿ ಪ್ರಸಿದ್ಧವಾದ ಏಳು ಋಷಿಗಳ ಹೆಸರಿನೊಂದಿಗೆ ರಚನೆಯಾಗಿದೆ. 12 ನೇ ಶತಮಾನದಲ್ಲಿ ನಿರ್ಮಾಣಗೊಂಡ ಎಡುಪಾಯಲು ದೇವಸ್ಥಾನದ ಮಂಜೀರಾ ನದಿಯು ಏಳು ಪ್ರವಾಹಗಳಂತೆ ಹರಿಯುತ್ತದೆ. ದುರ್ಗಾ ದೇವತೆಗೆ ಮೀಸಲಾಗಿರುವ ಮಂಜೀರಾ ನದಿಯ ಏಳು ಹೊಳೆಗಳು ಜಮಾದಗ್ನಿ, ಅತ್ರಿ, ಕಸಪ, ವಿಶ್ವಾಮಿತ್ರ, ವಸಿಷ್ಠ ಭಾರದ್ವಾಜ ಮತ್ತು ಗೌತಮ ಎಂಬ ಏಳು ಪ್ರಾಚೀನ ಋಷಿಗಳ ಹೆಸರಿನೊಂದಿಗೆ ರಚಿಸಲ್ಪಟ್ಟವು.

ದೇವಾಲಯದ ಉತ್ಸವ
ಈ ದೇವಾಲಯದಲ್ಲಿ ಶಿವರಾತ್ರಿಯ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತದೆ. ಒಂದು ವಾರಗಳ ಕಾಲ ಆಚರಿಸಲಾಗುತ್ತದೆ. ಈ ಉತ್ಸವವು ಶಿವರಾತ್ರಿ ದಿನದಂದು ಆರಂಭವಾಗುತ್ತದೆ ಮತ್ತು ನಂತರ ಬಂಡಿ ಉತ್ಸವದಲ್ಲಿ 32 ಗ್ರಾಮಗಳಿಂದ ಎತ್ತಿನಗಾಡಿಗಳು ದೇವಸ್ಥಾನದ ಸುತ್ತಲೂ ತಿರುಗುತ್ತವೆ. ಈ ಮೂಲಕ ರಥೋತ್ಸವ ಮುಕ್ತಾಯವಾಗುತ್ತದೆ. ಇನ್ನು ಈ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ವನದುರ್ಗಾ ಉತ್ಸವ ನಡೆಯುತ್ತದೆ. ಆಗ ಸಾವಿರಾರು ಭಕ್ತರು ಇಲ್ಲಿ ಬಂದು ಕುರಿಯನ್ನು ಬಲಿ ಕೊಟ್ಟು ತಮ್ಮ ಬೇಡಿಕೆ ಈಡೇರುವಂತೆ ಪ್ರಾರ್ಥಿಸುತ್ತಾರೆ.

ಮಳೆಗಾಲದಲ್ಲಿ ದೇವಿಯ ಪಾದದವರೆಗೆ ಬರುವ ನೀರು
ಹಿಂದೆ ಈ ಸ್ಥಳದಲ್ಲಿ ಜನಸಂಖ್ಯೆ ಕಡಿಮೆ ಇತ್ತು. ದುರ್ಗಾ ದೇವಿ ದೇವಸ್ಥಾನ ಸ್ಥಾಪನೆಯಾದ ನಂತರ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಾಯಿತು. ಮಳೆಗಾಲದಲ್ಲಿ ಇಲ್ಲಿ ನೀರಿನ ಹರಿವು ಹೆಚ್ಚಾಗಿ ದೇವಿಯ ಪಾದದ ವರೆಗೆ ನೀರು ಬರುತ್ತದಂತೆ. ಇದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ದಂತಕಥೆ
PC: Facebook
ದಂತಕಥೆಯ ಪ್ರಕಾರ, ಅರ್ಜುನನ ಮೊಮ್ಮಗ ಮಹಾರಾಜ ಪರಿಕ್ಷಿತ್ ಇದೇ ಸ್ಥಳದಲ್ಲಿ ಸರ್ಪ ಯಜ್ಞವನ್ನು ಮಾಡಿ ಶಾಪವನ್ನು ತೊಡೆದುಹಾಕಲು ಪ್ರಯತ್ನಿಸಿದನು ಎನ್ನಲಾಗುತ್ತದೆ. ಗರುಡವು ಯಜ್ಞದಲ್ಲಿ ಬಳಸಿದ ಹಾವುಗಳನ್ನು ಸಾಗಿಸುತ್ತಿದ್ದಾಗ ಅದರ ರಕ್ತವು ಏಳು ವಿಭಿನ್ನ ಸ್ಥಳಗಳಲ್ಲಿ ಬಿದ್ದಿದೆ ಎಂದು ಹೇಳಲಾಗುತ್ತದೆ. ಮತ್ತು ರಕ್ತ ಚೆಲ್ಲಿದ ಸ್ಥಳಗಳು ಹೊಳೆಗಳಾಗಿ ಪರಿವರ್ತನೆಗೊಂಡವು ಎನ್ನಲಾಗುತ್ತದೆ. ಏಳು ಹೊಳೆಗಳು ಎಡುಪಾಯಲಾದಲ್ಲಿ ಇಲ್ಲಿಗೆ ಭೇಟಿಯಾಗುತ್ತವೆ. ಇದರಿಂದಾಗಿ ಮಂಜೀರಾ ನದಿಯನ್ನು ರೂಪಿಸಲಾಗಿದೆ. ಆದ್ದರಿಂದ ಎಡುಪಾಯಲಾ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಎಡುಪಾಯಲಾ ಎಂದರೆ ತೆಲುಗು ಭಾಷೆಯಲ್ಲಿ ಹೊಳೆ ಎಂದರ್ಥ.

ಮೇದಕ್ ಕೋಟೆ
PC: youtube
ಮೇದಕ್ ಬಸ್ ನಿಲ್ದಾಣದಿಂದ 2.3 ಕಿಮೀ ಮತ್ತು ಹೈದರಾಬಾದ್ನಿಂದ 95 ಕಿ.ಮೀ ದೂರದಲ್ಲಿರುವ ಮೇದಕ್ ಕೋಟೆಯು ತೆಲಂಗಾಣ ರಾಜ್ಯದ ಮೇದಕ್ ಪಟ್ಟಣದಲ್ಲಿದೆ. ಇದು ಹೈದರಾಬಾದ್ನ ಒಂದು ಪ್ರಮುಖ ಐತಿಹಾಸಿಕ ತಾಣವಾಗಿದೆ. ಕೋಟೆಯನ್ನು 12 ನೇ ಶತಮಾನದಲ್ಲಿ ಕಾಕತೀಯ ಆಡಳಿತಗಾರ ಪ್ರತಾಪ ರುದ್ರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಈ ಕೋಟೆಯನ್ನು ಮೂಲತಃ ಮೆದಕ್ ದುರ್ಗಾ ಎಂದು ಕರೆಯಲಾಗುತ್ತಿತ್ತು. ಈ ಕೋಟೆಯನ್ನು ತುದಿಯನ್ನು ತಲುಪಬೇಕಾದರೆ ಸುಮಾರು ೫೦೦ ಮೆಟ್ಟಿಲುಗಳನ್ನು ಏರಬೇಕು. ಈ ಕೋಟೆಯು ೧೦೦ ಎಕರೆ ಸ್ಥಳದಲ್ಲಿ ಆವರಿಸಿಕೊಂಡಿದೆ.

ಮೆದಕ್ ಕ್ಯಾಥೆಡ್ರಲ್
ಮೇದಕ್ ಬಸ್ ನಿಲ್ದಾಣದಿಂದ1.5ಕಿ.ಮೀ ದೂರದಲ್ಲಿರುವ ಮೆದಕ್ ಕ್ಯಾಥೆಡ್ರಲ್ ಇಡೀ ಏಷ್ಯಾದಲ್ಲೇ ಅತ್ಯಂತ ದೊಡ್ಡ ಚರ್ಚ್ ಮತ್ತು ವ್ಯಾಟಿಕನ್ ನಂತರ ಪ್ರಪಂಚದಲ್ಲೇ ಎರಡನೆಯ ಅತಿದೊಡ್ಡ ಚರ್ಚ್ ಆಗಿದೆ. ಗೋಥಿಕ್ ಶೈಲಿಯಲ್ಲಿರುವ ಈ ಚರ್ಚ್ ಸುಮಾರು 175 ಫೀಟ್ ಎತ್ತರದಲ್ಲಿರುವ ಈ ಚರ್ಚ್ನಲ್ಲಿ ಒಮ್ಮೆಗೆ 5ಸಾವಿರ ಜನರು ಸೇರಬಹುದು. ಈ ಚರ್ಚ್ ಹೈದರಾಬಾದ್ನ ಚಾರ್ಮಿನಾರ್ಗಿಂತಲೂ ಎತ್ತರವಾಗಿರಬಹುದು ಎನ್ನಲಾಗುತ್ತದೆ.

ಪೋಚರಾಮ್ ಅಣೆಕಟ್ಟು
ಪೋಚರಾಮ್ ಅಣೆಕಟ್ಟು ಮತ್ತು ವನ್ಯಜೀವಿ ಅಭಯಾರಣ್ಯವು ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿದೆ. ಮೇದಕ್ ಬಸ್ ನಿಲ್ದಾಣದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಹೈದರಾಬಾದ್ನಿಂದ ಭೇಟಿ ನೀಡಲು ಮತ್ತು ಕೆಲವು ಗಂಟೆಗಳ ಕಾಲ ಕಳೆಯಲು ಇದು ಸೂಕ್ತ ಪ್ರವಾಸಿ ತಾಣವಾಗಿದೆ. ಇದು ಹಿಂದೆ ಹೈದರಾಬಾದ್ ನಿಜಾಮರ ಭೇಟೆಯಾಡುವ ಮೈದಾನವಾಗಿತ್ತಂತೆ. ಈ ಡ್ಯಾಮ್ ಮಳೆಗಾಲದಲ್ಲಿ ಭೇಟಿ ನೀಡಲು ಉತ್ತಮವಾಗಿದ್ದು, ನೀರಿನಲ್ಲಿ ಆಟವಾಡಲೂ ಬಹುದು.


Click it and Unblock the Notifications

















