ಕೇರಳದಲ್ಲಿ ಪ್ರವಾಹ ಉಂಟಾಗಿ ಎಷ್ಟೆಲ್ಲಾ ಅನಾಹುತಗಳಾಗಿವೆ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಈಗಷ್ಟೇ ಜನರು ಸುಧಾರಿಸಿಕೊಳ್ಳುತ್ತಿದ್ದಾರೆ. ಕೇರಳ ನೆರೆಯಿಂದಾಗಿ ಭಕ್ತರಿಗೆ ಶಬರಿಮಲೆಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ ಈಗ ಆ ಸಮಸ್ಯೆ ಯಾವುದು ಇಲ್ಲ. ಭಕ್ತರ ಪ್ರವೇಶಕ್ಕೆ ಶಬರಿಮಲೆ ಬಾಗಿಲು ತೆರೆಯಲಾಗಿದೆ.

ಕನ್ನಿಮಾಸ ಪೂಜೆ
ಸೆ. 16ರಂದು ಸಂಜೆ5 ಗಂಟೆಗೆ ಕನ್ನಿಮಾಸ ಪೂಜೆಗೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಆದರೆ ಶಬರಿಮಲೆಗೆ ಭೇಟಿ ನೀಡುವ ಭಕ್ತರಿಗೆ ಕೆಲವು ಸೂಚನೆಯನ್ನು ನೀಡಲಾಗಗಿದೆ. ಭಕ್ತರು ಇದನ್ನು ಅನುಸರಿಸುವ ಮೂಲಕ ಶಬರಿಮಲೆ ದರ್ಶನ ಮಾಡಬಹುದು.

ಹೊಸ ಬದಲಾವಣೆಗಳು
ನೆರೆ ಬಂದು ಹೋದ ಮೇಲೆ ಇಲ್ಲಿನ ರೂಲ್ಸ್ನಲ್ಲಿ ಕೆಲವು ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದಾರೆ.ಅವುಗಳು ಯಾವುವು ಎನ್ನುವುದನ್ನು ಈ ಕೆಳಗೆ ನೀಡಲಾಗಿದೆ. ಭಕ್ತರು ಅದನ್ನು ಅನುಸರಿಸಿದರೆ ಒಳಿತು.

ವಾಹನಗಳ ಪಾರ್ಕಿಂಗ್
ನಿಲಯಕ್ಕಲ್ ವರೆಗೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನಿಲಯಕ್ಕಲ್ನಿಂದ ಕೇರಳ ಸಾರಿಗೆ ಬಸ್ ಸಿಗುತ್ತದೆ. ಈ ಬಸ್ನಲ್ಲಿ ಕಂಡೆಕ್ಟರ್ ಇರೋದಿಲ್ಲ. ಹಾಗಾಗಿ ಕೂಪನ್ ವ್ಯವಸ್ಥೆ ಮಾಡಲಾಗಿದೆ. ಈ ಕೂಪನ್ನ್ನು ಪ್ರವಾಸಿಗರು ನಿಲಯಕ್ಕಲ್ನಲ್ಲಿರುವ ಕೂಪನ್ ಕೌಂಟರ್ನಲ್ಲಿ ಪಡೆದುಕೊಳ್ಳಬೇಕು.

ಪಂಪಾ
ಶಬರಿ ಮಲೆಗೆ ಭೇಟಿ ನೀಡುವ ಭಕ್ತರು ಪಂಪ ಬ್ರಿಡ್ಜ್ ಮೂಲಕ ಹೋಗುವಂತಿಲ್ಲ. ಭಕ್ತರು ಅಯ್ಯಪ್ಪ ಸೇತು ಮೂಲಕ ತ್ರಿವೇಣಿ ಬ್ರಿಡ್ಜ್ನಿಂದಾಗಿ ಶಬರಿಮಲೆಗೆ ಹೋಗಬಹುದು.

ನೀರಿನಲ್ಲಿ ಇಳಿಯಬೇಡಿ
ನೀರಿನಲ್ಲಿ, ಮರಳು, ಮಣ್ಣಿನಲ್ಲಿ ಇಳಿಯಬಾರದೆಂದು ಪೊಲೀಸರು ತಿಳಿಸಿದ್ದಾರೆ. ಮಣ್ಣು ಕುಸಿಯುವುದರಿಂದ ನೀರಿಗೆ ಇಳಿಯಬಾರದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ. ಇನ್ನು ಭಕ್ತರಿಗೆ ಸ್ನಾನ ಮಾಡಲು ಬೇರೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರವೇಶ ನಿಷೇಧ
ಭೂ ಕುಸಿತವಾಗುತ್ತಿರುವ ಕಾರಣದಿಂದಾಗಿ ಬೆಟ್ಟಗಳಿಗೆ, ತ್ರಿವೇಣಿಯಿಂದ ಅರಟು ಕಡವು ಮಾರ್ಗದಲ್ಲಿ ಸಂಚರಿಸದಂತೆ ಹಾಗೂ ನೀರಿನ ಕೆಲವು ಪ್ರದೇಶಗಳಿಗೆ ಪ್ರವೇಶ ನಿಷೇಧಿಸಲಾಗಿದೆ.

ಕುಡಿಯುವ ನೀರನ್ನು ಕೊಂಡೊಯ್ಯಿರಿ
ಪಂಪದಲ್ಲಿನ ಅಧಿಕ ನೀರಿನ ಪ್ರವಾಹದಿಂದಾಗಿ ನೀರಿನ ವ್ಯವಸ್ಥೆ ಹಾಳಾಗಿದ್ದು, ಕುಡಿಯುವ ನೀರಿನ ಕೊರೆತೆಯಿದೆ. ಹಾಗಾಗಿ ಭಕ್ತರು ತಮ್ಮ ಕುಡಿಯುವ ನೀರನ್ನು ತಮ್ಮೊಂದಿಗೆ ತರುವಂತೆ ಸೂಚಿಸಲಾಗಿದೆ. ಆದರೆ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತರುವಂತಿಲ್ಲ. ಅಲ್ಲಿ ಅಂಗಡಿ ಮುಗ್ಗಟ್ಟುಗಳು ಇಲ್ಲದ ಕಾರಣ ತಿಂಡಿ, ತಿನಿಸುಗಳನ್ನು ಜೊತೆಗೆ ತರುವಂತೆ ಸೂಚಿಸಲಾಗಿದೆ.

ಶೌಚಾಲಯ ಎಲ್ಲಿ?
ಆಹಾರ ಹಾಗೂ ಶೌಚಾಲಯಕ್ಕಾಗಿ ಭಕ್ತರು ನಿಲಯಕ್ಕಲ್ಗೆ ಬರಬೇಕು. ಇಲ್ಲಿ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಪಂಪದಲ್ಲಿ ಶೌಚಾಲಯಗಳನ್ನು ಇನ್ನೂ ಪುನಃನಿರ್ಮಿಸಲಾಗಿಲ್ಲ. ಹಾಗಾಗಿ ನಿಲಯಕ್ಕಲ್ಗೆ ಹೋಗಬೇಕು.

ರಸ್ತೆ ಬದಿಯಲ್ಲಿ ಪಾರ್ಕಿಂಗ್ ಇಲ್ಲ
ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ. ಪೂಂಕಾವನಮ್ ಹಾಗು ಪಂಪೆಯ ನಡುವೆ ಯಾವುದೇ ಪಾರ್ಕಿಂಗ್ ವ್ಯವಸ್ಥೇ ಇರೋದಿಲ್ಲ. ನಿಲಯಕ್ಕಲ್ನಿಂದ ಪಂಪದ ನಡುವೆ ೧೬ ಕಡೆಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಯಾವುದೇ ಖಾಸಗಿ ವಾಹನಗಳಿಗೆ ಪಂಪೆಗೆ ಪ್ರವೇಶವಿಲ್ಲ. ಭಕ್ತರು ಶಬರಿಮಲೆಗೆ ಹಳೆಯ ರಸ್ತೆಯನ್ನು ಬಳಸಬಹುದು. ಇರುಮೆಲಿ-ಕರಿಮಲ-ಪಂಪ ರಸ್ತೆಯನ್ನು ಬಳಸಬಹುದು.


Click it and Unblock the Notifications
















