PC: Kiran Madichetti
ಸಕಲೇಶಪುರವು ಬಹಳಷ್ಟು ಜನರ ನೆಚ್ಚಿನ ಪ್ರವಾಸಿತಾಣವಾಗಿದೆ. ಹಚ್ಚಹಸಿರಿನ ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ನೆಲೆನಿಂತಿರುವ ಇದೊಂದು ಆಕರ್ಷಕ ತಾಣವಾಗಿದೆ. ಸಕಲೇಶಪುರವು ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿದೆ. ಮಲೆನಾಡಿನ ಮಡಿಲಲ್ಲಿ ಸಕಲ ಐಶ್ವರ್ಯಗಳಿಂದ ಕೂಡಿದ ಹೇಮಾವತಿ ನದಿಯ ದಡದಲ್ಲಿರುವುದೇ ಈ ಸಕಲೇಶಪುರ.

ಕಾಫೀಯ ನಾಡು
ಇಲ್ಲಿ ಪ್ರಮುಖವಾಗಿ ಬೆಳೆಯುವ ಬೆಳೆಗಳು ಕಾಫಿ, ಅಕ್ಕಿ, ಮೆಣಸು, ಏಲಕ್ಕಿ, ಶುಂಠಿ ಮತ್ತು ಚಹಾ. ಕಾಫೀ ತೋಟಗಳು ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ಪ್ರದೇಶವನ್ನು ಕಾಫೀಯ ನಾಡು ಎಂದೇ ಕರೆಯಲಾಗುತ್ತಿದೆ.

ಸಕಲೇಶ್ವರ ಸ್ವಾಮಿ ದೇವಾಲಯ
ಸಕಲೇಶಪುರ ಬಸ್ ನಿಲ್ದಾಣದಿಂದ 1.5 ಕಿ.ಮೀ ದೂರದಲ್ಲಿರುವ ಸಕಲೇಶ್ವರ ಸ್ವಾಮಿ ದೇವಾಲಯವು ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನೆಲೆಗೊಂಡಿದೆ. ಇದು ಕರ್ನಾಟಕದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಸಕಲೇಶಪುರದಲ್ಲಿ ಭೇಟಿ ನೀಡಬಹುದಾದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.

ಹೇಮಾವತಿ ನದಿ ತೀರದಲ್ಲಿದೆ
ಹೇಮಾವತಿ ನದಿ ತೀರದಲ್ಲಿರುವ ಸಕಲೇಶ್ವರ ದೇವಸ್ಥಾನವು ಶಿವನಿಗೆ ಅರ್ಪಿತವಾಗಿದ್ದು, 11 ನೇ ಮತ್ತು 14 ನೇ ಶತಮಾನದ ನಡುವೆ ನಿರ್ಮಾಣಗೊಂಡಿದೆ ಎನ್ನಲಾಗುತ್ತದೆ. ಇಲ್ಲಿ ಹೊಯ್ಸಳ ವಾಸ್ತುಶೈಲಿಯ ಅತ್ಯುತ್ತಮ ಕಲೆಗಾರಿಕೆಯನ್ನು ಕಾಣಬಹುದು.

ಮಂಜರಾಬಾದ್ ಕೋಟೆ
ಮಂಜರಾಬಾದ್ ಕೋಟೆಯು ಟಿಪ್ಪು ಸುಲ್ತಾನ್ ನಿರ್ಮಿಸಿದ ನಕ್ಷತ್ರ ಆಕಾರದ ಕೋಟೆಯಾಗಿದ್ದು, ಫ್ರೆಂಚ್ ವಾಸ್ತುಶಿಲ್ಪಿ ಅಭಿವೃದ್ಧಿಪಡಿಸಿದ ಮಿಲಿಟರಿ ಕೋಟೆಗಳ ಮಾದರಿಯಲ್ಲಿದೆ. ಇದು ಹಾಸನ ಜಿಲ್ಲೆಯಲ್ಲಿದೆ.ಈ ಕೋಟೆಯು ಸಕಲೇಶಪುರದಿಂದ 10 ಕಿ.ಮೀ ದೂರದಲ್ಲಿದೆ. ಇದು ಹೇಮಾವತಿ ನದಿಯ ಬಲ ದಡದಲ್ಲಿದೆ.

988 ಮೀಟರ್ ಎತ್ತರದಲ್ಲಿದೆ
PC: uday shanbhag
ಮಂಜರಾಬಾದ್ ಕೋಟೆಯು ಹಾಸನದಿಂದ 37 ಕಿ.ಮೀ ದೂರದಲ್ಲಿದೆ. ಇದು ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48 ರಲ್ಲಿದೆ. ಮಂಜರಾಬಾದ್ ಕೋಟೆ 988 ಮೀಟರ್ ಎತ್ತರದಲ್ಲಿ ಬೆಟ್ಟದ ಮೇಲೆ ಇದೆ.

ಮಂಜೇಹಳ್ಳಿ ಜಲಪಾತ
PC: Alok Aparanji
ಮಂಜೇಹಳ್ಳಿ ಜಲಪಾತವು ಒಂದು ಪರಿಪೂರ್ಣ ಪ್ರವಾಸಿ ತಾಣವಾಗಿದ್ದು, ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಾಗಿದೆ. ಮಂಜೇಹಳ್ಳಿ ಜಲಪಾತ ಮಂಜೇ ಹಳ್ಳಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಮಂಜೇಹಳ್ಳಿ ಜಲಪಾತ ಸಕಲೇಶಪುರ ಬಸ್ ನಿಲ್ದಾಣದಿಂದ ಸುಮಾರು 8 ಕಿ.ಮೀ ದೂರವಿದೆ.

ಬಿಸಿಲೆಘಾಟ್
ಬಿಸೆಲೆಘಾಟ್ ಚಾರಣಕ್ಕೆ ಸೂಕ್ತವಾದ ಒಂದು ತಾಣವಾಗಿದೆ. ಬಿಸಿಲೆಘಾಟ್ ಮಾರ್ಗವಾಗಿ ಕುಮಾರ ಪರ್ವತಕ್ಕೆ ಚಾರಣ ಕೈಗೊಳ್ಳಬಹುದು. ಹಾಸನಕ್ಕೆ ತೆರಳುವ ಪ್ರವಾಸಿಗರು ಸಕಲೇಶಪುರಕ್ಕೆ ತೆರಳಿದರೆ ಅಲ್ಲಿಂದ 50 ಕಿ.ಮೀ. ದೂರ ಕ್ರಮಿಸಿದರೆ ಬಿಸಿಲೆಘಾಟ್ ತಲುಪಬಹುದು.

ತಲುಪುವುದು ಹೇಗೆ?
ರಸ್ತೆಮೂಲಕ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಹೆಚ್ಚಿನ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಇಲ್ಲಿಗೆ ಸಂಚರಿಸುತ್ತವೆ.
ರೈಲು ಮೂಲಕ: ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಲ್ಲಾ ರೈಲುಗಳು ಇಲ್ಲಿಗೆ ನಿಲುಗಡೆಯನ್ನು ಹೊಂದಿದೆ.
ವಿಮಾನದ ಮೂಲಕ: ಹತ್ತಿರದ ವಿಮಾನ ನಿಲ್ದಾಣ ಮಂಗಳೂರು ವಿಮಾನ ನಿಲ್ದಾಣವಾಗಿದೆ. ಮಂಗಳೂರಿನಿಂದ ಖಾಸಗಿ ಅಥವಾ ಸರ್ಕಾರಿ ಬಸ್ ಮೂಲಕ ಸಕಲೇಶ್ಪುರವನ್ನು ತಲುಪಬಹುದು.


Click it and Unblock the Notifications

















