Search
  • Follow NativePlanet
Share
» »ನಾಸ್ತಿಕರನ್ನೂ ಬೆರುಗುಗೊಳಿಸುವ ಬೆಂಗಳೂರಿನ ಪುರಾತನ ದೇವಾಲಯಗಳು

ನಾಸ್ತಿಕರನ್ನೂ ಬೆರುಗುಗೊಳಿಸುವ ಬೆಂಗಳೂರಿನ ಪುರಾತನ ದೇವಾಲಯಗಳು

By Vijay

ಪ್ರಸ್ತುತ ಬೆಂಗಳೂರು ನಗರವು ಆಧುನಿಕ ಜೀವನ ಶೈಲಿಯತ್ತ ಭರ ಭರನೆ ಹೆಜ್ಜೆ ಇಡುತ್ತಿದೆ. ಎಲ್ಲೆಲ್ಲೂ ಭವ್ಯವಾದ ಕಟ್ಟಡಗಳು, ವೈಭವೋಪೇತ ಶಾಪಿಂಗ್ ಮಾಲ್‍ಗಳು, ಐಟಿ ಬಿಟಿ ಕಂಪನಿಗಳು ತಲೆ ಎತ್ತುತ್ತಿದ್ದರೆ, ಇನ್ನೊಂದೆಡೆ ಬಿರುಸಿನ ಚಟುವಟಿಕೆಯಲ್ಲಿ ತೊಡಗಿರುವ ಚಿತ್ರೋದ್ಯಮ, ರಭಸವಾಗಿ ಜೆಟ್ ಪ್ಲೇನ್‍ಗಳಂತೆ ನುಸುಳುತ್ತಿರುವ ಜೀವನ, ರಂಗುರಂಗಾದ ಬಣ್ಣದ ವಾತಾವರಣ ನಮ್ಮನ್ನು ಮತ್ತಷ್ಟು ಮಾಯಾಲೋಕದಲ್ಲಿ ಕಳೆದು ಹೋಗುವಂತೆ ಮಾಡುತ್ತಿದೆ.

ಇವೆಲ್ಲದರ ನಡುವೆ ಕೆಲಸದ ಒತ್ತಡ, ಜೀವನ ಸಾಗಿಸುವ ಒತ್ತಡಗಳು, ಒಬ್ಬ ಸುಮೊ ಕುಸ್ತಿ ಪಟು ತನ್ನ ಬಲಾಢ್ಯ ತೋಳುಗಳಿಂದ ನಮ್ಮನ್ನು ಬಿಗಿದಪ್ಪಿ ಇನ್ನಷ್ಟು ಕೃಶರನ್ನಾಗಿ ಮಾಡುತ್ತಿರುವ ಹಾಗೆ ಭಾಸವಾಗುತ್ತಿದೆ. ಆದರೂ ಮನುಷ್ಯ ಸ್ವಭಾವತಃ ಸೋಲುಣ್ಣುವವನಲ್ಲ. ಅವಶ್ಯಕತೆಯೆ ಸಂಶೋಧನೆಗೆ ದಾರಿ ಎಂಬಂತೆ, ಮನಸ್ಸಿನ ಶಾಂತಿ ನೆಮ್ಮದಿಗಳೆಂಬ ಅವಶ್ಯಕತೆಗೆ ನಾವು ಆಗಾಗ ಆಧ್ಯಾತ್ಮಿಕ ಪರಿಸರದಲ್ಲಿ ಮುಳುಗುವುದುಂಟು.

ಆಧ್ಯಾತ್ಮಿಕತೆ ಎಂಬುದು ಅವರವರ ಮನಸ್ಸಿನ ವಿಕಸನಕ್ಕೆ ಸಂಬಂಧಿಸಿದಾಗಿದ್ದು ಕೆಲವರಿಗೆ ಶಾಂತವಾದ ಪರಿಸರದಲ್ಲಿ ಅಲೌಕಿಕ ಅನುಭೂತಿ ಉಂಟಾದರೆ, ಇನ್ನು ಕೆಲವರಿಗೆ ಪ್ರಕೃತಿ ದೇವಿಯ ಮಡಿಲಲ್ಲಿ ಸಮಯ ಕಳೆದಾಗ ಆನಂದ , ನೆಮ್ಮದಿ ದೊರಕುತ್ತದೆ. ಆದರೆ ಬೆಂಗಳೂರಿನ ಜೀವನ ಹಾಯಾಗಿ ಸುತ್ತಾಡುತ್ತ ಕಾಲ ಕಳೆಯಲು ಅಷ್ಟೊಂದು ಸಮಯಾವಕಾಶ ಕೊಡಲು ದಯೆ ತೋರಿಸಬೇಕಲ್ಲ.

ಇಲ್ಲದಿದ್ದರೆ ಇಲ್ಲ...ಚಿಂತೆ ಬಿಡಿ. ಸಿಕ್ಕ ಕಡಿಮೆ ಸಮಯದಲ್ಲೆ ನೆಮ್ಮದಿ ಆನಂದವನ್ನು ಪಡೆಯುವಂತಹ ದೇವಾಲಗಳೇನು ಕಡಿಮೆಯಿಲ್ಲ ನಮ್ಮ ನಗರದಲ್ಲಿ. ಆಸ್ಥಿಕ ಮನೋಭಾವದವರಿಗೆ ದೇವಲಯ ದರ್ಶನವು ಜೀವನದ ಒಂದು ಅವಿಭಾಜ್ಯ ಅಂಗ. ಆ ಸರ್ವಶಕ್ತನನ್ನು ದರ್ಶಿಸಿ ಮಾನಸಿಕವಾಗಿ ಸದೃಢರಾಗಿ ಜೀವನ ಸಾಗಿಸುತ್ತಾರೆ.

ಅಲ್ಲದೆ ಈ ದೇವಾಲಯಗಳು ತಮ್ಮದೆ ಆದ ದಂತಕಥೆಗಳನ್ನು, ಅದ್ಭುತ ಐತಿಹ್ಯಗಳು ಮತ್ತು ವಾಸ್ತುಶಿಲ್ಪಗಳನ್ನು ಹೊಂದಿದ್ದು ನಮ್ಮ ಪುರಾತನ ಕಾಲದ ಸಂಸ್ಕೃತಿ ಸಂಪ್ರದಾಯಗಳನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತ ನಮಗೆ ವಿಶೀಷ್ಟವಾದ ಆನಂದಕರ ಅನುಭವವನ್ನು ಒದಗಿಸುವುದರಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಬನ್ನಿ...ಬೆಂಗಳೂರಿನ ಕೆಲವು ಅನನ್ಯ ದೇವಾಲಯಗಳನ್ನು ದರ್ಶಿಸಿ ಬರೋಣ.

ಬೇಗೂರು ನಾಗನಾಥೇಶ್ವರ ದೇವಾಲಯ, ಬೇಗೂರು

ಬೇಗೂರು ನಾಗನಾಥೇಶ್ವರ ದೇವಾಲಯ, ಬೇಗೂರು

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ (ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ) ನೆಲೆಸಿರುವ ಬೇಗೂರು ಎಂಬ ಹಳ್ಳಿಯಲ್ಲಿ ಈ ದೇವಾಲಯವಿದೆ. ಇದು ಸುಮಾರು 1300 ವರ್ಷಗಳಷ್ಟು ಪುರಾತನವದುದು. ಈ ದೇವಾಲಯವು ಚೋಳ ವಂಶದ ಮೊದಲನೇಯ ಕುಲಾತುಂಗ ರಾಜಾ ಹಾಗು ತಲಕಾಡ್ ಗಂಗಾ ವಂಶದ ರಾಜಸಿಂಹನಂದಿ ಅವರುಗಳಿಂದ ನಿರ್ಮಿಸಲ್ಪಟ್ಟಿದೆ.

ಈ ದೇವಾಲಯದಲ್ಲಿ ಐದು ಲಿಂಗಗಳಿರುವುದರಿಂದ ಇದನ್ನು ಪಂಚಲಿಂಗೇಶ್ವರ ದೇವಾಲಯ ಎಂತಲೂ ಕರೆಯಲಾಗುತ್ತದೆ. ಆ ಐದು ಲಿಂಗಗಳೆಂದರೆ ಶ್ರೀ ನಾಗೇಶ್ವರ, ಚೋಳೇಶ್ವರ, ಕಾಲಿ ಕಮಟೇಶ್ವರ, ನಗಾರೇಶ್ವರ ಹಾಗು ಕರಣೇಶ್ವರ.

ಅಲ್ಲದೆ ಪಾರ್ವತಿಗೆ ಮೀಸಲಾದ ದೇಗುಲವೂ ಇದ್ದು, ಪಶ್ಚಿಮಕ್ಕೆ ಮುಖ ಮಾಡಿದ ಸೂರ್ಯನ ಮೂರ್ತಿಯನ್ನು ಇಲ್ಲಿ ಕಾಣಬಹುದು. ಪ್ರತಿ ಶಿವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಾರೆ.

ಕೋಟೆ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ, ಸಿಟಿ ಮಾರ್ಕೆಟ್

ಕೋಟೆ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ, ಸಿಟಿ ಮಾರ್ಕೆಟ್

ಬೆಂಗಳೂರಿನ ಜನನಿಬಿಡ ಕೃಷ್ಣರಾಜೇಂದ್ರ ಮಾರುಕಟ್ಟೆ (ಕೆ.ಆರ್.ಮಾರ್ಕೆಟ್)ಯಲ್ಲಿರುವ ಟಿಪ್ಪು ಸುಲ್ತಾನ್ ಅರಮನೆಯ ಪಕ್ಕದಲ್ಲೆ ನೆಲೆಸಿದೆ ವೆಂಕಟೇಶ್ವರ ದೇವರಿಗೆ ಸಮರ್ಪಿಸಲಾದ ಈ ದೇವಾಲಯ. 1689 ರಲ್ಲಿ ನಿರ್ಮಾಣಗೊಂಡ ಈ ದೇಗುಲದಲ್ಲಿ ದ್ರಾವಿಡ ಹಾಗು ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ ಪ್ರಭಾವವನ್ನು ಕಾಣಬಹುದು. ಮೈಸೂರಿನ ದೊರೆ ಚಿಕ್ಕ ದೇವರಾಜ ಒಡೇಯರ್ ಅವರು ಇದನ್ನು ನಿರ್ಮಿಸಿದ್ದಾರೆ.

ಕೋಟೆ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ

ಕೋಟೆ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ

ಒಂದೊಮ್ಮೆ ಮೈಸೂರು ಅರಸರ ಅರಮನೆಯಾಗಿದ್ದು ನಂತರ ಟಿಪ್ಪುವಿನ ಕೋಟೆ ಅರಮನೆಯಾಗಿದ್ದ ಕಟ್ಟಡದ ಪಕ್ಕದಲ್ಲೆ ಇದಿರುವುದರಿಂದ ಇದಕ್ಕೆ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ ಎಂಬ ಹೆಸರು ಬಂದಿತು.

ಕೋಟೆ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ

ಕೋಟೆ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ

ಈ ದೇವಾಲಯದಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಯೆಂದರೆ ವೈಕುಂಠ ಏಕಾದಶಿ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತಾದಿಗಳು ವೆಂಕಟರಮಣನ ದರುಶನ ಪಡೆಯಲು ಈ ದೇವಸ್ಥಾನಕ್ಕೆ ತಂಡೋಪ ತಂಡವಾಗಿ ಆಗಮಿಸುತ್ತಾರೆ.

ಬನಶಂಕರಿ ದೇವಸ್ಥಾನ

ಬನಶಂಕರಿ ದೇವಸ್ಥಾನ

ಬೆಂಗಳೂರು ದಕ್ಷಿಣದಲ್ಲಿರುವ ಬನಶಂಕರಿ ಬೆಂಗಳೂರಿಗರಿಗೆ ಅತಿ ಚಿರಪರಿಚಿತವಿರುವ ಪ್ರದೇಶ. ಬೃಹತ್ತಾಗಿ ವಿಸ್ತರಿಸಿರುವ ಈ ಪ್ರದೇಶಕ್ಕೆ ಬನಶಂಕರಿ ಎಂಬ ಹೆಸರು ಬರಲು ಕಾರಣ ಇಲ್ಲಿನ ಕನಕಪುರ ರಸ್ತೆಯಲ್ಲಿರುವ ಬನಶಂಕರಿ ಅಮ್ಮನ ದೇವಸ್ಥಾನ. ಸೊಮಣ್ಯ ಶೆಟ್ಟಿ ಎಂಬ ಬನಶಂಕರಿ ಅಮ್ಮನ ಭಕ್ತರು ಈ ದೇವಸ್ಥಾನವನ್ನು 1915 ರಲ್ಲಿ ನಿರ್ಮಿಸಿದ್ದಾರೆ. ಇವರು ದೇವಿಯ ಮೂರ್ತಿಯನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ತೆಗೆದುಕೊಂಡು ಬಂದು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ.

ಈ ದೇವಸ್ಥಾನದ ವಿಶೇಷತೆಯೆಂದರೆ, ಹಿಂದೂಗಳಲ್ಲಿ ಸಾಮಾನ್ಯವಾಗಿ ಒಳ್ಳೆಯ ಘಳಿಗೆಯಲ್ಲ ಎಂದು ನಂಬಲ್ಪಡುವ ರಾಹು ಕಾಲದಲ್ಲಿ ದೇವಿಗೆ ಪೂಜೆಯನ್ನು ಮಾಡಲಾಗುತ್ತದೆ. ದೇವಿಯು ಎಲ್ಲ ವಿಘ್ನಗಳನ್ನು ಪರಿಹರಿಸುತ್ತಾಳೆ ಎಂಬುದು ಇದರ ಸಂಕೇತವಾಗಿದೆ. ಅರ್ಧ ಸಿಳಿದ ನಿಂಬೆ ಹಣ್ಣಿನ ತೊಗಟೆಯನ್ನು ಹಣತೆಯನ್ನಾಗಿ ಮಾಡಿ ಅದರಲ್ಲಿ ದೀಪ ಬೆಳಗಿ ಭಕ್ತರು ದೇವಿಯನ್ನು ಆರಾಧಿಸುತ್ತಾರೆ. ಬನಶಂಕರಿ ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಈ ದೇವಾಲಯವನ್ನು ಸುಲಭವಾಗಿ ತಲುಪಬಹುದು.

ಗವಿ ಗಂಗಾಧರೇಶ್ವರ ದೇವಸ್ಥಾನ

ಗವಿ ಗಂಗಾಧರೇಶ್ವರ ದೇವಸ್ಥಾನ

ಗವಿಪುರಂ ಗುಹಾ ದೇವಾಲಯ ಎಂತಲೂ ಕರೆಯಿಸಿಕೊಳ್ಳುವ ಈ ದೇವಸ್ಥಾನವು ಗವಿಪುರಂನ (ಗುಟ್ಟಹಳ್ಳಿ) ಕೆಂಪೇಗೌಡ ನಗರದಲ್ಲಿದ್ದು ಬಸವನಗುಡಿಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಭಾರತೀಯ ಶಿಲಾ ಕೆತ್ತನೆ ವಾಸ್ತುಶಿಲ್ಪ (ಇಂಡಿಯನ್ ರಾಕ್ ಕಟ್ ಆರ್ಕಿಟೆಕ್ಚರ್) ಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ದೇವಾಲಯದ ಅತಿ ಆಸಕ್ತಿದಾಯಕ ವಿಷಯವೆಂದರೆ ವರ್ಷದ ಒಂದು ನಿಗದಿತ ಸಮಯ (ಮಕರ ಸಂಕ್ರಾಂತಿ) ದಲ್ಲಿ ಸೂರ್ಯನ ಕಿರಣವು ಇಲ್ಲಿನ ಶಿವಲಿಂಗದ ಮೇಲೆ ಬೀಳುವ ಹಾಗೆ ವಿನ್ಯಾಸಗೊಳಿಸಲ್ಪಟ್ಟಿರುವುದು.

ಗವಿ ಗಂಗಾಧರೇಶ್ವರ ದೇವಸ್ಥಾನ

ಗವಿ ಗಂಗಾಧರೇಶ್ವರ ದೇವಸ್ಥಾನ

ಏಕಶಿಲೆಯಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಸುಮಾರು 9 ನೇಯ ಶತಮಾನಕ್ಕೆ ಸೇರಿದ್ದಾಗಿದೆ. ಇಲ್ಲಿ ಆರಧಿಸಲ್ಪಡುವ ಮುಖ್ಯ ಶಿವಲಿಂಗವಿದ್ದು ಜೊತೆಗೆ ನಂದಿ ಹಾಗು ಅಗ್ನಿ ದೇವತೆಗಳ ವಿಗ್ರಹವೂ ಇದೆ. ಇತರೆ ಕೆಲವು ದೇವತೆಗಳ ವಿಗ್ರಹಗಳನ್ನೂ ಕಾಣಬಹುದಾಗಿದ್ದು ಅಗ್ನಿಮೂರ್ತಿ ಎಂಬ ಎರಡು ತಲೆ, ಏಳು ಕೈ ಹಾಗು ಮೂರು ಕಾಲುಗಳುಳ್ಳ ವಿಗ್ರಹವಿದೆ. ಈ ದೇವತೆಯನ್ನು ಪೂಜಿಸುವ ಭಕ್ತರ ಕಣ್ಣಿನ ಎಲ್ಲ ದೋಷಗಳು ನಿವಾರಿಸಲ್ಪಡುತ್ತದೆ ಎಂದು ನಂಬಲಾಗಿದೆ.

ಬಸವನಗುಡಿ

ಬಸವನಗುಡಿ

ಬೆಂಗಳೂರಿನ ಒಂದು ಪ್ರಮುಖ ಹಾಗು ಜನಪ್ರಿಯ ಪ್ರದೇಶವಾದ ಬಸವನಗುಡಿ ತನ್ನ ಹೆಸರನ್ನು ಬಸವನ ಗುಡಿ (ದೇವಸ್ಥಾನ) ಯಿಂದಲೆ ಪಡೆದಿದೆ. ಬಸವ ಎಂದರೆ ಶಿವನ ವಾಹನ ನಂದಿಯಾಗಿದ್ದು ಅದಕ್ಕೆ ಸಮರ್ಪಿತವಾದ ದೇವಸ್ಥಾನ ಇದಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ನಿಂದ 4.8 ಕಿ.ಮೀ ದೂರದಲ್ಲಿ ನೆಲೆಸಿರುವ ಈ ದೇವಸ್ಥಾನವನ್ನು ಸುಲಭವಾಗಿ ತಲುಪಬಹುದಾಗಿದ್ದು ಮೆಜೆಸ್ಟಿಕ್ ನಿಲ್ದಾಣದಿಂದಲೂ ಸಹ ಬಿ.ಎಂ.ಟಿ.ಸಿ ಬಸ್ಸುಗಳ ಮೂಲಕ ತಲುಪಬಹುದು. ನಂದಿಗೆ ಸಮರ್ಪಿತವಾಗಿರುವ ಹಾಗು ನಂದಿಯ ಬೃಹತ್ ವಿಗ್ರಹವಿರುವ ಜಗತ್ತಿನ ಏಕಮಾತ್ರ ದೇವಸ್ಥಾನವೆಂದು ನಂಬಲಾಗಿದೆ.

ಬಸವನಗುಡಿ

ಬಸವನಗುಡಿ

ಇದರ ಹಿಂದಿರುವ ಸ್ವಾರಸ್ಯಕರ ಕಥೆ: ಒಂದೊಮ್ಮೆ ಈ ಪ್ರದೇಶದಲ್ಲಿದ್ದ ಎತ್ತೊಂದು ಮದಹಿಡಿದು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಡಲೆ ಬೀಜಗಳನ್ನು ನಾಶ ಮಾಡಹತ್ತಿತಂತೆ. ಇದರ ಉಪಟಳ ತಡೆಯಲಾರದೆ ಜನರು ದೇವಾಲಯವೊಂದನ್ನು ನಿರ್ಮಿಸಿದಾಗ ಇದು ಶಾಂತವಾಯಿತಂತೆ. ಅಂದಿನಿಂದ ಇಲ್ಲಿನ ರೈತರು ಇದರ ಜ್ಞಾಪಕಾರ್ಥವಾಗಿ ಕಡಲೆಕಾಯಿ ಉತ್ಸವವನ್ನು ಪ್ರತಿ ವರ್ಷ ಆಚರಿಸುತ್ತ ಬಂದರು. ಇದನ್ನೆ ಸ್ಥಳೀಯವಾಗಿ 'ಕಡಲೆಕಾಯಿ ಪರಿಷೆ' ಎಂದು ಕರೆಯಲಾಗುತ್ತದೆ. ಇದು ಪ್ರತಿ ವರ್ಷ ನವಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಲ್ಪಡುತ್ತದೆ.

ದೊಡ್ಡ ಗಣಪತಿ ದೇವಸ್ಥಾನ

ದೊಡ್ಡ ಗಣಪತಿ ದೇವಸ್ಥಾನ

ಬಸವನಗುಡಿಯ ಬುಲ್ ಟೆಂಪಲ್ ಪಕ್ಕದಲ್ಲೆ ಇರುವ ದೊಡ್ಡ ಗಣಪತಿ ದೇವಸ್ಥಾನವು ಬಹುವಾಗಿ ಭೇಟಿ ನೀಡಲ್ಪಡುವ ಒಂದು ಜನಪ್ರಿಯ ದೇವಸ್ಥಾನ. ಬಸವನಗುಡಿ ಮುಖ್ಯ ರಸ್ತೆಯ ಮೇಲೆ ನೆಲೆಸಿರುವ ಈ ದೇವಸ್ಥಾನವನ್ನು ನಗರದ ಯಾವುದೇ ಭಾಗದಿಂದ ಸುಲಭವಾಗಿ ರಿಕ್ಷಾ ಅಥವಾ ಬಸ್ ಮೂಲಕ ತಲುಪಬಹುದು.

ಈ ದೇವಸ್ಥಾನವು ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರಿಂದ ನಿರ್ಮಿಸಲ್ಪಟ್ಟಿದೆ. ಒಮ್ಮೆ ಕೆಂಪೇಗೌಡರು ವಿಹರಿಸುತ್ತಿದ್ದಾಗ ಹಲವು ಬಂಡೆಗಳಲ್ಲಿ ಒಂದು ಬಂಡೆಯು ಗಣಪತಿಯ ಆಕರವನ್ನು ಹೋಲುತ್ತಿದ್ದ ಹಾಗೆ ಕಂಡುಬಂದಿತು. ತಕ್ಷಣವೆ ಅವರು ತಮ್ಮ ಶಿಲ್ಪಿಗಳನ್ನು ಕರೆತಂದು ಅದನ್ನು ಒಂದು ಏಕಶಿಲಾ ಗಣಪತಿಯ ವಿಗ್ರಹದ ಹಾಗೆ ರೂಪಿಸಲು ಸೂಚಿಸಿದರು. ಈ ದೇವಸ್ಥಾನದ ವಿಶೇಷತೆ ಬೃಹತ್ತಾದ ಏಕಶಿಲಾ ಗಣೇಶ ವಿಗ್ರಹ. 18 ಅಡಿ ಎತ್ತರವಾಗಿದ್ದು, 16 ಅಡಿಗಳಷ್ಟು ಅಗಲವಾಗಿದೆ. ಇದನ್ನು ಶಕ್ತಿ ಅಥವಾ ಸತ್ಯ ಗಣಪತಿ ಎಂದು ಕರೆಯಲಾಗುತ್ತದೆ. ಈ ವಿಗ್ರಹವು ತನ್ನ ಬಲಭಾಗದಲ್ಲಿ ಇನ್ನೂ ಬೆಳೆಯುತ್ತಿದೆ ಎಂದು ನಂಬಲಾಗಿದೆ.

ದೇವಸ್ಥಾನ ತೆರೆದಿರುವ ಸಮಯ: ಬೆಳಿಗ್ಗೆ 7 ರಿಂದ ಮಧ್ಯಾಹ್ನ12.30 ರ ವರೆಗೆ. ಸಾಯಂಕಾಲ 5.30 ರಿಂದ 8.30 ರ ವರೆಗೆ.

ಪ್ರಸನ್ನ ವೀರಾಂಜನೇಯ ದೇವಸ್ಥಾನ

ಪ್ರಸನ್ನ ವೀರಾಂಜನೇಯ ದೇವಸ್ಥಾನ

ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲೊಂದಾದ ಮಹಾಲಕ್ಷ್ಮಿ ಬಡಾವಣೆಯಲ್ಲಿದೆ ಈ ದೇವಸ್ಥಾನ. ಬೆಂಗಳೂರಿನ ಇತರೆ ಜನಪ್ರಿಯ ನಗರಗಳಾದ ರಾಜಾಜಿ ನಗರ, ಬಸವೇಶ್ವರ ನಗರ ಮತ್ತು ಯಶವಂತಪುರಗಳಿಂದ ಇಲ್ಲಿಗೆ ಬಸ್ ಅಥವಾ ಆಟೊಗಳ ಮೂಲಕ ಸುಲಭವಾಗಿ ತಲುಪಬಹುದು. 7 ಜೂನ್ 1976 ರಲ್ಲಿ ಅಂದಿನ ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರಿಂದ ಈ ದೇವಸ್ಥಾನದ ಉದ್ಘಾಟನೆಯಾಯಿತು. ಏಕಶಿಲೆಯಲ್ಲಿ ಕೆತ್ತಲಾದ ಆಂಜನೇಯನ ಸುಂದರವಾದ ಪ್ರತಿಮೆಯನ್ನು ಇಲ್ಲಿ ಕಾಣಬಹುದು. ಸುತ್ತಲಿನ ಶಾಂತ ಪರಿಸರವು ಹಸಿರಿನಿಂದ ಕೂಡಿದ್ದು ಒಂದೊಳ್ಳೆ ಅನುಭವವನ್ನು ಭೇಟಿ ನೀಡಿದವರಿಗೆ ಕರುಣಿಸುತ್ತದೆ.

ಪ್ರಸನ್ನ ವೀರಾಂಜನೇಯ ದೇವಸ್ಥಾನ

ಪ್ರಸನ್ನ ವೀರಾಂಜನೇಯ ದೇವಸ್ಥಾನ

ಇಲ್ಲಿ ಧ್ಯಾನಮಂದಿರವೂ ಇದ್ದು, ರಾಮಾಂಜನೇಯರ ವಿಗ್ರಹಗಳು ಧ್ಯಾನಾಸಕ್ತರ ಮನಸೆಳೆಯುತ್ತವೆ. ಪ್ರತಿ ಅಗಸ್ಟ್ ತಿಂಗಳಲ್ಲಿ ಮಾಡಲಾಗುವ ಬೆಣ್ಣೆ ಅಲ್ಂಕಾರವು ಈ ದೇವಸ್ಥಾನದ ಪ್ರಮುಖ ಆಕರ್ಷಣೆ. ಇದಕ್ಕಾಗಿ 420 ಕೆ.ಜಿಯಷ್ಟು ಬೆಣ್ಣೆಯನ್ನು ವ್ಯಯಿಸಲಾಗುತ್ತದೆ. ಇದೊಂದು ಭೇಟಿ ನೀಡಲೇಬೇಕಾದ ದೇವಸ್ಥಾನವಾಗಿದೆ.

ಧರ್ಮರಾಯಸ್ವಾಮಿ ದೇವಸ್ಥಾನ

ಧರ್ಮರಾಯಸ್ವಾಮಿ ದೇವಸ್ಥಾನ

ಬೆಂಗಳೂರಿನ ತಿಗಳರಪೇಟ್ ನ ಒ.ಟಿ.ಸಿ ರಸ್ತೆಯಲ್ಲಿರುವ ಧರ್ಮರಾಯ ದೇವಸ್ಥಾನವು ಐತಿಹಾಸಿಕವಾಗಿ ಒಂದು ವಿಶೀಷ್ಟವಾದ ದೇವಸ್ಥಾನವಾಗಿದೆ. ಭಾರತ ದೇಶದಲ್ಲೆ ಪಾಂಡವರಿಗೆ ಸಮರ್ಪಿಸಲಾದ ಅನನ್ಯ ದೇವಾಲಯ ಇದಾಗಿದೆ. ಈ ದೇವಾಲಯವು ಗಂಗ ಅರಸು ಜನಾಂಗದವರಿಂದ ನಿರ್ಮಿಸಲ್ಪಟ್ಟಿದೆ ಎಂದು ತಿಳಿಯಲಾಗಿದೆ.

ಇವರು ಮೂಲತಃ ಉತ್ತರ ತಮಿಳುನಾಡಿನಿಂದ ದಕ್ಷಿಣ ಮೈಸೂರು ಪ್ರಾಂತ್ಯಕ್ಕೆ ವಲಸೆ ಬಂದವರಾಗಿದ್ದಾರೆ. ಪುರಾತತ್ವ ಇಲಾಖೆಯು ಈ ದೇಗುಲವು ಸುಮಾರು 800 ವರ್ಷಗಳಷ್ಟು ಪುರಾತನವಾದುದು ಎಂದು ದಾಖಲಿಸಿದೆ. ಈ ದೇವಸ್ಥಾನದಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವವೆಂದರೆ ಕರಗ.

ಹಲಸೂರು ಸೋಮೇಶ್ವರ ದೇವಾಲಯ

ಹಲಸೂರು ಸೋಮೇಶ್ವರ ದೇವಾಲಯ

ಬೆಂಗಳೂರಿನ ಹಲಸೂರು (ಅಲ್ಸೂರು) ಪ್ರದೇಶದಲ್ಲಿದೆ ಈ ಸೋಮೇಶ್ವರ ದೇವಾಲಯ. ಚೋಳರ ಕಾಲಕ್ಕೆ ಸಂಬಂಧಿಸಿದ ಈ ದೇವಾಲಯ ನಗರದಲ್ಲಿರು ಪುರಾತನ ದೇವಾಲಯಗಳ ಪೈಕಿ ಒಂದು. ಹೊಯ್ಸಳ, ಚೋಳ ಹಾಗು ವಿಜಯನಗರದ ವಾಸ್ತುಶಿಲ್ಪಗಳ ಪ್ರಭಾವವನ್ನು ಈ ದೇವಾಲಯದಲ್ಲಿ ಕಾಣಬಹುದು. ಸೋಮೇಶ್ವರ ಅಥವಾ ಶಿವನಿಗೆ ಸಮರ್ಪಿತವಾದ ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಬ್ರಹ್ಮ ಹಾಗು ವಿಷ್ಣು ದೇವರನ್ನೂ ಪೂಜಿಸಲಾಗುತ್ತದೆ.

ಅದ್ಭುತವಾದ ವಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯದ ರಾಜಗೋಪುರ ಹಾಗು ಧ್ವಜಸ್ಥಂಭಗಳು ನೋಡಲು ಆಕರ್ಷಕವಾಗಿವೆ. ಈ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ರಾಗಿಗುಡ್ಡ ಆಂಜನೇಯ ದೇವಾಲಯ

ರಾಗಿಗುಡ್ಡ ಆಂಜನೇಯ ದೇವಾಲಯ

ಬೆಂಗಳೂರಿನ ಜಯನಗರ 9 ನೇಯ ಬ್ಲಾಕಿನಲ್ಲಿರುವ ಪುಟ್ಟ ಬೆಟ್ಟದ ಮೇಲೆ ನೆಲೆಸಿದೆ ಈ ದೇವಾಲಯ. ದೇವಾಲಯ ಸಂಕೀರ್ಣವು ಐದು ಎಕರೆಯಷ್ಟು ವಿಸ್ತಾರವಾಗಿ ಹರಡಿದೆ. ಗುಡ್ಡದ ಮೇಲೆ ನೆಲೆಸಿರುವ ಆಂಜನೇಯನ ಜೊತೆಗೆ ಇಲ್ಲಿನ ದೇವಾಲಯ ಆವರಣದಲ್ಲಿ ಸೀತಾ ರಾಮಸ್ವಾಮಿ , ಭಗವತಿ, ಗಣೇಶ, ಶ್ರೀ ರಾಜರಾಜೇಶ್ವರಿ ಹಾಗು ನವಗ್ರಹ ದೇವಸ್ಥಾನಗಳನ್ನೂ ಕಾಣಬಹುದು.ಈ ದೇವಾಲಯಕ್ಕಿರುವ ದಂತಕಥೆಯೊಂದರ ಪ್ರಕಾರ, ಒಮ್ಮೆ ಬೆಟ್ಟದಷ್ಟು ತುಂಬಿದ್ದ ರಾಗಿಯು ಕಲ್ಲು ಗುಡ್ಡವಾಗಿ ಪರಿವರ್ತಿತವಾಯಿತು. ಆದ್ದರಿಂದ ಇದಕ್ಕೆ ರಾಗಿಗುಡ್ಡ ಎಂಬ ಹೆಸರು ಬಂದಿತು.

ಈ ದೇವಾಲಯದಲ್ಲಿ ಎರಡು ಕಾರ್ಯಾಲಯಗಳಿದ್ದು ಸಣ್ಣ ಕಾರ್ಯಾಲಯವನ್ನು ಉಪನಯನ, ಸೀಮಂತ ಮುಂತಾದ ಕಾರ್ಯಗಳಿಗೂ, ದೊಡ್ಡ ಕಾರ್ಯಾಲಯವನ್ನು ಮದುವೆಯಂತಹ ದೊಡ್ಡ ಸಮಾರಂಭಗಳಿಗೂ ಬಾಡಿಗೆಗೆ ಪಡೆಯಬಹುದಾಗಿದೆ.

ದೇವಸ್ಥಾನ ತೆರೆದಿರುವ ಸಮಯ: ಬೆಳಿಗ್ಗೆ 8 ರಿಂದ ಮಧ್ಯಾಹ್ನ11.30 ರ ವರೆಗೆ. ಸಾಯಂಕಾಲ 5 ರಿಂದ 8.30 ರ ವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X