ನಾಶಿಕ್ ಮಹಾರಾಷ್ಟ್ರದ ಒಂದು ಜಿಲ್ಲೆ. ಮೂಲತಃ ಈ ಪಟ್ಟಣದಲ್ಲಿ ದೇಶದಲ್ಲೆ ಅತಿ ಹೆಚ್ಚು ದ್ರಾಕ್ಷಿಯನ್ನು ಬೆಳೆಯಲಾಗುತ್ತದೆ. ಆದ್ದರಿಂದ ಇದು ದೇಶದ "ದ್ರಾಕ್ಷಿ ರಾಜಧಾನಿ" ಎಮ್ಬ ಬಿರುದು ಪಡೆದಿದೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿದೆ ಮತ್ತು ಪುಣೆಗೆ ಸುಮಾರು 200 ಕಿ.ಮೀ ದೂರದಲ್ಲಿದೆ ನಾಶಿಕ್ ಪಟ್ಟಣ. ಪಟ್ಟಣದ ಇತಿಹಾಸವು ಶಾತವಾಹನರ ಕಾಲಕ್ಕೆ ಕರೆದೊಯ್ಯುತ್ತದೆ. ಆ ಸಂದರ್ಭದಲ್ಲಿ ಇದು ಅವರ ರಾಜಧಾನಿ ಪಟ್ಟಣವಾಗಿ ಮೆರೆಯುತ್ತಿತ್ತು.
ಸುಮಾರು 16 ನೇಯ ಶತಮಾನದಲ್ಲಿ ನಾಶಿಕ್ ಪಟ್ಟಣವು ಮೊಘಲರ ಆಳ್ವಿಕೆಗೆ ಒಳಪಟ್ಟು ನಂತರದಲ್ಲಿ ಗುಲ್ಷನಾಬಾದ್ ಎಂಬ ಹೆಸರಿನಿಂದ ಪರಿಚಿತವಾಗಿತ್ತು. ಕಾಲ ಉರುಳಿದಂತೆ ಮತ್ತೆ ಪೇಶ್ವೆ ರಾಜವಂಶದವರ ಕೈವಶ ವಾಯಿತು ನಾಶಿಕ್. ಇವರು 19 ನೇ ಶತಮಾನದಲ್ಲಿ ಅಂತಿಮವಾಗಿ ಬ್ರಿಟೀಷರೊಂದಿಗೆ ಸೋತು ನಾಶಿಕ್ ಪಟ್ಟಣವನ್ನು ಬಿಟ್ಟುಕೊಟ್ಟರು. ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ವೀರ ಸಾವರ್ಕರ್, ನಾಶಿಕ್ ಪಟ್ಟಣದವರಾಗಿದ್ದರು.
ವಿಶೇಷ ಲೇಖನ : ಪುಣೆ ಜಿಲ್ಲೆಯ ಆಕರ್ಷಣೆಗಳು
ಸ್ಥಳ ಪುರಾಣದ ಪ್ರಕಾರ, ರಾಮ 14 ವರ್ಷ ವನವಾಸದಲ್ಲಿ ಅಲೆದಾಡುತ್ತಿದ್ದಾಗ ನಾಶಿಕ್ ಪಟ್ಟಣದ ಸಮೀಪದಲ್ಲಿನ ತಪೋವನದಲ್ಲಿ ಇಳಿದುಕೊಂಡಿದ್ದ ಎನ್ನಲಾಗುತ್ತದೆ. ಅಲ್ಲದೆ ಈ ಒಂದು ಪ್ರದೇಶದಲ್ಲೆ, ಲಕ್ಷ್ಮಣನು ಶೂರ್ಪನಖಿಯ ಮೂಗನ್ನು ಕತ್ತರಿಸಿದ ಎಂಬ ಐತಿಹ್ಯವಿದ್ದು, ಇದರಿಂದಾಗಿಯೇ ನಾಶಿಕ್ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ.
ಪ್ರಖ್ಯಾತ ಕವಿ, ಕವಿ ರತ್ನ ಕಾಳಿದಾಸ ಹಾಗೂ ರಾಮಾಯಣದ ಕರ್ತೃ ವಾಲ್ಮೀಕಿಯರು ನಾಶಿಕ್ ಪಟ್ಟಣದ ಕುರಿತು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಜನಪ್ರಿಯ ತತ್ವಶಾಸ್ತ್ರಜ್ಞ ಪ್ಲೊಟೆಮಿಯೂ ಕೂಡಾ ಕ್ರಿ.ಪೂ 150 ರಲ್ಲಿ ನಾಶಿಕ್ ಬಗ್ಗೆ ಉಲ್ಲೇಖಿಸಿದ್ದಾನೆ. ನಾಶಿಕ್ ಸದ್ಯ ಮಹಾರಾಷ್ಟ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ. ಮೂಲಭೂತ ಸೌಲಭ್ಯ, ಶಿಕ್ಷಣ, ಉದ್ಯಮ ಮತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ನಾಶಿಕ್ ಪಟ್ಟಣವು ವೇಗವಾಗಿ ಬೆಳೆಯುತ್ತಿದೆ. ಇಲ್ಲಿರುವ ಕೆಲ ಪ್ರಮುಖ ಆಕರ್ಷಣೆಗಳನ್ನು ಸ್ಲೈಡುಗಳ ಮೂಲಕ ತಿಳಿಯಿರಿ.
ನಾಶಿಕ್:
ಶೀಘ್ರವಾಗಿ ಬೆಳೆಯುತ್ತಿರುವ ನಾಶಿಕ್ ನಗರದ ಒಂದು ನೋಟ. ನಾಶಿಕ್ ಮುಂಬೈ ಹಾಗೂ ಪುಣೆಗಳೊಂದಿಗೆ ಉತ್ತಮ ಬಸ್ಸಿನ ಸಂಪರ್ಕ ಹೊಂದಿದ್ದು ಸುಲಭವಾಗಿ ತಲುಪಬಹುದಾಗಿದೆ. ಪುಣೆಯು ನಾಶಿಕ್ನಿಂದ ಸುಮಾರು 220 ಕಿ.ಮೀ ದೂರವಿದೆ. ಇಲ್ಲಿ ಹಲವಾರು ರಾಜ್ಯ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್ಗಳು ನಾಶಿಕ್ಗೆ ಹಲವು ನಗರಗಳಿಂದ ಸಂಪರ್ಕವನ್ನು ಕಲ್ಪಿಸಿವೆ.
ಚಿತ್ರಕೃಪೆ: Marco Zanferrari
ಸುಲಾ ದ್ರಾಕ್ಷಿ ತೋಟವು ನಾಶಿಕ್ನಲ್ಲಿದೆ. ನಾಗ್ಪುರ ಕಿತ್ತಳೆ ಹಣ್ಣಿಗೆ ಪ್ರಖ್ಯಾತವಾದಂತೆಯೇ ನಾಶಿಕ್ ದ್ರಾಕ್ಷಿಗೆ ಜನಪ್ರಿಯ. ಭಾರತದಲ್ಲಿ ದ್ರಾಕ್ಷಿ ಬೆಳೆಯಲ್ಲಿ ನಾಶಿಕ್ ಪ್ರಮುಖ ಸ್ಥಾನದಲ್ಲಿದೆ. ಈ ನಗರದ ವಾತಾವರಣವು ದ್ರಾಕ್ಷಿ ಬೆಳೆಗೆ ಸೂಕ್ತವಾದದ್ದಾಗಿದೆ. ಇಲ್ಲಿನ ದ್ರಾಕ್ಷಿ ತೋಟಗಳಲ್ಲಿ ಸುಲಾ ದ್ರಾಕ್ಷಿ ತೋಟವು ಪ್ರಸಿದ್ಧವಾದದ್ದು.
ನಾಶಿಕ್ನಲ್ಲಿ ಕಾಲಾರಾಮ್ ದೇವಸ್ಥಾನವು ಪ್ರಮುಖ ಆಕರ್ಷಣೆಯ ಕ್ಷೇತ್ರ. 1794 ರಲ್ಲಿ ಗೋಪಿಕಾಬಾಯಿ ಪೇಶ್ವಾರಿಂದ ಈ ದೇವಸ್ಥಾನ ನಿರ್ಮಾಣವಾಯಿತು. ಈ ದೇವಸ್ಥಾನವು ತನ್ನ ವಾಸ್ತುಶಿಲ್ಪ ಶೈಲಿಯಲ್ಲಿ, ಕೆಲವೇ ಮೈಲುಗಳ ದೂರದಲ್ಲಿರುವ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಹೋಲುತ್ತದೆ. ಇದನ್ನು ಸಂಪೂರ್ಣವಾಗಿ ಕಪ್ಪು ಕಲ್ಲಿನಿಂದ ನಿರ್ಮಿಸಲಾಗಿದೆ.
ನಾಶಿಕ್ನಲ್ಲಿರುವ ಪ್ರಸಿದ್ಧ ಪಾಂಡವಲೇನಿ ಗುಹೆಗಳು ಕಲಾತ್ಮಕತೆಯಿಂದ ಕೂಡಿದ್ದು ವಾಸ್ತುಶಿಲ್ಪ ಪ್ರಿಯರಿಗೆ ಇಷ್ಟವಾಗುತ್ತದೆ. ತ್ರಿವಶ್ಮಿ ಗುಡ್ಡದ ಬುಡದಲ್ಲಿರುವ ಈ ಗುಹೆಯು 20 ಶತಮಾನಗಳ ಹಿಂದಿನದು. ಇಲ್ಲಿನ ಗುಹೆಗಳ ಸಂಖ್ಯೆ ಒಟ್ಟು 24. ಇದನ್ನು ಜೈನ ರಾಜರು ನಿರ್ಮಿಸಿದ್ದರು ಎಂದು ನಂಬಲಾಗಿದೆ. ಅಂಬಿಕಾದೇವಿ, ವೀರ ಮನಿಭದ್ರಾಜಿ ಮತ್ತು ತೀರ್ಥಂಕರ ವೃಷಭದೇವ ಇಲ್ಲಿ ವಾಸವಾಗಿದ್ದರು.
ಚಿತ್ರಕೃಪೆ: Katyare
ತ್ರಿಂಬಕೇಶ್ವರವು ಪ್ರಖ್ಯಾತ ಪುಣ್ಯಕ್ಷೇತ್ರಗಳಲ್ಲೊಂದಾಗಿದ್ದು, ಕೇವಲ ಮಹಾರಾಷ್ಟ್ರವಲ್ಲದೆ ಇಡೀ ಭಾರತದಲ್ಲೆ ಪ್ರಸಿದ್ಧವಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಈ ತ್ರಿಂಬಕೇಶ್ವರವನ್ನು ನಾಶಿಕ್ ನ ಹತ್ತಿರದಲ್ಲೆ ಕಾಣಬಹುದಾಗಿದೆ. ಎಲ್ಲ ಹನ್ನೆರಡು ಜ್ಯೋತಿರ್ಲಿಂಗಗಳು ಒಂದೆ ಪಥದಲ್ಲಿ ನೆಲೆಗೊಂಡಿದ್ದು, ಪ್ರಾಯಶಃ ಒಂದೆ ದಿನದಲ್ಲಿ ದರುಶನ ಮಾಡಬಹುದಾಗಿದೆ. ತ್ರಿಂಬಕೇಶ್ವರನ ದರುಶನ ಮಾಡಿದವನು ಮೋಕ್ಷ ಹೊಂದುತ್ತಾನೆ ಎಂದು ನಂಬಲಾಗಿದೆ.
ಚಿತ್ರಕೃಪೆ: Marco Zanferrari
ಇಗತ್ಪುರಿಯು ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿದ್ದು, ಅತ್ಯಾಕರ್ಷಕ ಪೃಕೃತಿ ಸೌಂದರ್ಯ ಒಳಗೊಂಡ ಗಿರಿಧಾಮ ಪ್ರದೇಶವಾಗಿದೆ. ಮಹಾರಾಷ್ಟ್ರ ರಾಜ್ಯದ ನಾಶಿಕ್ ಜಿಲ್ಲೆಗೆ ಸೇರಿರುವ ಈ ತಾಣ ಆಕರ್ಷಣೀಯ ಪರ್ವತ ಹೊಂದಿದ ಜನಪ್ರಿಯ ಗಿರಿಧಾಮವಾಗಿ ಬೆಳೆದಿದೆ.
ಚಿತ್ರಕೃಪೆ: Kashif Pathan
ನಾಶಿಕ್ ಜಿಲ್ಲೆಯ ಇಗತ್ಪುರಿಯ ಬತ್ಸಾ ನದಿ ಕಣಿವೆ ಪ್ರದೇಶಕ್ಕೆ ಅತ್ಯಂತ ಸಮೀಪದಲ್ಲಿದೆ ಕ್ಯಾಮೆಲ್ ಕಣಿವೆ. ಅತ್ಯಾಕರ್ಷಕ ಜಲಪಾತವನ್ನು ಇದು ಒಳಗೊಂಡಿದೆ. ಇದನ್ನು ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಸಾವಿರ ಅಡಿ ಎತ್ತರದಿಂದ ನೀರು ಧರೆಗೆ ಧುಮ್ಮಿಕ್ಕುತ್ತದೆ. ಈ ನೋಟ ಸವಿಯುವುದೇ ಅಂದ.
ಚಿತ್ರಕೃಪೆ: Kashif Pathan