"ಸ್ವಲ್ಪ ಹವಾ, ನೀರು ಬದಲಾಯಿಸಿ" ಅಂತ ಒಮ್ಮೊಮ್ಮೆ ಕುಟುಂಬ ವೈದ್ಯರು ಸಲಹೆ ನೀಡುವುದನ್ನು ನೀವು ಕೇಳಿರಲೇಬೇಕಲ್ಲವೆ. ಹೌದು, ಇದರ ಅರ್ಥ ಮಾನಸಿಕವಾಗಿ ಜರ್ಜರಿತರಾಗಿ ಅನಾರೋಗ್ಯದಿಂದ ಬಳಲುತ್ತಿರುವವರು ತಾವಿದ್ದ ಪ್ರದೇಶದಿಂದ ಬೇರೆಡೆಗೆ ಹೋದಾಗ ನಿಧಾನವಾಗಿ ಗುಣಮುಖರಾಗುವಂತೆ ಮಾಡುತ್ತದೆ ಹೊಸ ಪ್ರದೇಶ. ಇದಕ್ಕೆ ಉದಾಹರಣೆಗಳೂ ಸಹ ದೊರೆಯುತ್ತವೆ.
ಹೊಸ ಪ್ರದೇಶ, ಹೊಸ ವಾತಾವರಣ, ಖಂಡಿತವಾಗಿಯೂ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಇನ್ನೂ ನೀವು ತೆರಳುವ ಪ್ರದೇಶಗಳು ಹಸಿರಿನಿಂದ ಕೂಡಿದ ಗಿರಿಧಾಮಗಳಾಗಿದ್ದರೆ ಸಾಕು, ಮನಸ್ಸು ಪ್ರಫುಲ್ಲಗೊಂಡು ಮತ್ತೆ ನವಚೈತನ್ಯ ಉಕ್ಕಿ ಹರಿಯುತ್ತದೆ. ಈ ವಿಷಯದಲ್ಲಿ ಸಸ್ಯೋದ್ಯಾನಗಳು ಸಹ ತಮ್ಮದೆ ಆದ ವಿಶಿಷ್ಟ ಪ್ರಭಾವ ಬೀರುತ್ತವೆ.
ನಿಮಗಿಷ್ಟವಾಗಬಹುದಾದ : ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುವ ಕಾಡುದ್ಯಾನ
ಅಂತೆಯೆ ಮೊದಲಿನಿಂದಲೂ ಸಸ್ಯೋದ್ಯಾನಗಳು ಪ್ರವಾಸಿ ಆಕರ್ಷಣೆಗಳಾಗಿವೆ. ಇವುಗಳನ್ನು ಒಂದು ರೀತಿಯಲ್ಲಿ "ಪಟ್ಟಣದ ಕಾಡುಗಳು" ಎಂದು ಕರೆದರೂ ತಪ್ಪಾಗಲಿಕ್ಕಿಲ್ಲ. ವಿಶಾಲವಾದ ಪ್ರದೇಶ, ದಟ್ಟವಾಗಿ ಬೆಳೆದ ಗಿಡಮರಗಳು, ನೂರಾರು ಜಾತಿಯ ಸಸ್ಯಗಳು, ಹೂಬಳ್ಳಿಗಳು, ವೈವಿಧ್ಯಮಯ ಜೀವಸಂಕುಲ, ಕೊಳ ಇವೆಲ್ಲ ಸಸ್ಯೋದ್ಯಾನಗಳ ಗುಣಲಕ್ಷಣಗಳಾಗಿವೆ.
ಇವು ಮೂಲತಃ ಕಾಡುಗಳಷ್ಟು ದೊಡ್ಡದಲ್ಲದಿದ್ದರೂ ಪಟ್ಟಣದ ಮಟ್ಟಿಗೆ ಹೇಳುವುದಾದರೆ ಒಂದು ರೀತಿಯ ಕಾಡುಗಳೆ. ಇನ್ನೂ ರಜಾ ಸಮಯದಲ್ಲಿ ದಿಢೀರನೆ ಕುಟುಂಬ ಸಮೇತರಾಗಿ ಈ ಉದ್ಯಾನಗಳಿಗೆ ಭೇಟಿ ನೀಡಿ, ಆನಂದ ಅನುಭವಿಸಿ, ತಾಜಾ ಗಾಳಿ ಸೇವಿಸಿ ವಿಶ್ರಾಂತಿ ಪಡೆದು ಹಾಯಾಗಿ ಮನೆಗೆ ಬರಲು ನಗರವಾಸಿಗಳಿಗೆ ಈ ಸಸ್ಯೋದ್ಯಾನಗಳು ಮಾದರಿ ತಾಣಗಳು.
ಅಂತೆಯೆ ಭಾರತದಲ್ಲಿ ಕೆಲವು ವಿಶಿಷ್ಟ ಹಾಗೂ ಒಂದೊಮ್ಮೆಯಾದರೂ ಸರಿ ಭೇಟಿ ನೀಡಲೇಬೇಕಾದ ಕೆಲವು ಆಯ್ದ ಸುಂದರ ಸಸ್ಯೋದ್ಯಾನಗಳ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ನೀವು ಒಮ್ಮೆ ಇಲ್ಲಿ ಭೇಟಿ ಕೊಟ್ಟು ನೋಡಿ. ಭಾರತದಲ್ಲಿರುವ ಸಸ್ಯೋದ್ಯಾನಗಳು ಸಾಕಷ್ಟು ಹೆಸರುವಾಸಿಯಾಗಿವೆ.

ನಯನಮನೋಹರ ಸಸ್ಯೋದ್ಯಾನಗಳು:
ಆಚಾರ್ಯ ಜಗದೀಶಚಂದ್ರ ಬೋಸ್ ಭಾರತೀಯ ಸಸ್ಯೋದ್ಯಾನ : ಈ ಸುಂದರ ಸಸ್ಯೋದ್ಯಾನವಿರುವುದು ಕೊಲ್ಕತ್ತಾದಲ್ಲಿ. 109 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಿಸಿದ್ದು 12000 ಕ್ಕೂ ಅಧಿಕ ತಳಿಗಳ ಹುಬಳ್ಳಿಗಳು, ಸಸ್ಯಗಳು ಹಾಗೂ ಹೂಬಳ್ಳಿಗಳಿವೆ.
ಚಿತ್ರಕೃಪೆ: Abhi7300

ನಯನಮನೋಹರ ಸಸ್ಯೋದ್ಯಾನಗಳು:
ಭಾರತೀಯ ವನಸ್ಪತಿ ಸರ್ವೇಕ್ಷಣ (ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ) ದಿಂದ ಈ ಸಸ್ಯೋದ್ಯಾನವು ನಿರ್ವಹಿಸಪಡುತ್ತದೆ.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಬ್ರಿಟೀಷರ ಸಮಯದಲ್ಲಿ ನಿರ್ಮಾಣಗೊಂಡಿದ್ದ ಈ ಸಸ್ಯೋದ್ಯಾನವು ಮೊದಲಿಗೆ ಈಸ್ಟ್ ಇಂಡಿಯಾ ಕಂಪನಿ ಉದ್ಯಾನ, ಕಂಪನಿ ಉದ್ಯಾನ, ಕಲ್ಕತ್ತಾ ಉದ್ಯಾನ ಎಂಬೆಲ್ಲ ಹೆಸರುಗಳಿಂದ ಗುರುತಿಸಲ್ಪಡುತ್ತಿತ್ತು.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಕೊಲ್ಕತ್ತಾದ ಹೌರಾ ಬಳಿಯಿರುವ ಈ ಸಸ್ಯೋದ್ಯಾನದಲ್ಲಿ ಕೃತಕ ಕೆರೆಯಿದ್ದು ಅಲ್ಲಿ ದೋಣಿ ಸವಾರಿಯ ಸೌಲಭ್ಯವೂ ಸಹ ಇರುವುದು ವಿಶೇಷವಾಗಿದೆ. ನಗರದಲ್ಲೆ ಒಂದು ಕೃತಕ ಅರಣ್ಯ ಪ್ರವ್ರ್ಶಿಸಿದ ಅನುಭವ ಪ್ರವಾಸಿಗರಿಗೆ ಸಿಕ್ಕಂತಾಗುತ್ತದೆ.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಸೂಕ್ಷ್ಮವಾಗಿ ಗಮನಿಸಿ, ಇದು ಜಲ ನೈದಿಲೆ. ವಾಟರ್ ಲಿಲಿ ಎಂದು ಕರೆಯಲ್ಪಡುವ ಈ ಸಸ್ಯ ದೈತ್ಯಗಾತ್ರದ್ದು. ಇದು ಸಾಮಾನ್ಯವಾಗಿ ದಕ್ಷಿಣ ಅಮೇರಿಕದ ಅಮೇಜಾನ್ ನದಿಗಳಲ್ಲಿ ಕಂಡುಬರುತ್ತದೆ.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಇದರ ಎಲೆಗಳ ವ್ಯಾಸವು ಸುಮಾರು ಎರಡರಿಂದ ಮೂರು ಮೀ. ವರೆಗಿದ್ದು ಇವು ನೀರಿನ ಮೇಲ್ಮೈ ಮೇಲೆ ತೇಲುತ್ತಿರುತ್ತವೆ. ಇದೊಂದು ಅಪರೂಪದ ಸಸ್ಯವಾಗಿದ್ದು ಕೊಲ್ಕತ್ತಾದ ಈ ಉದ್ಯಾನದಲ್ಲಿ ನೋಡಬಹುದು. ಈ ಸಸ್ಯವಿರುವುದು ಉದ್ಯಾನದಲ್ಲಿರುವ ಜನಾರ್ಧನ ಕೆರೆಯಲ್ಲಿ.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಈ ಸಸ್ಯೋದ್ಯಾನದಲ್ಲಿರುವ ಮತ್ತೊಂದು ಸುಂದರ ಕೆರೆ. ಇದನ್ನು ಕಿಂಗ್ಸ್ ಕೆರೆ ಎಂಬ ಹೆಸರಿನಿಂದಲೆ ಕರೆಯಲಾಗುತ್ತದೆ. ಅದ್ಭುತವಾದ ಪ್ರಕೃತಿ ಸೌಂದರ್ಯವನ್ನು ಈ ಕೆರೆಯ ಸುತ್ತಮುತ್ತಲು ನೋಡಬಹುದಾಗಿದೆ.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಈ ಸಸ್ಯೋದ್ಯಾನದ ಕೆರೆಯಲ್ಲಿರುವ ಆಕರ್ಷಕ ಗುಲಾಬಿ ಬಣ್ಣದ ಕಮಲದ ಹೂವುಗಳು. ಈ ರೀತಿಯ ಅಂದ ಚೆಂದದ ಹೂಬಳ್ಳಿಗಳಿಂದ ಉದ್ಯಾನವು ಸಮ್ಪದ್ಭರಿತವಾಗಿದ್ದು ಸಾಕಷ್ಟು ಜನರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಈ ಉದ್ಯಾನದಲ್ಲಿರುವ ಇನ್ನೊಂದು ವಿಶಿಷ್ಟ ಆಕರ್ಷಣೆ. ಇದನ್ನು ರಾಕ್ಸ್ ಬರ್ಗ್ ಕಟ್ಟಡ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದು ಸುಮಾರು 200 ವರ್ಷಗಳಷ್ಟು ಹಳೆಯದಾದ ಕಟ್ಟಡವಾಗಿದೆ.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಈ ಉದ್ಯಾನವನ್ನು ಪ್ರವೇಶ ಶುಲ್ಕ ನೀಡಿ ಪ್ರವೇಶಿಸಿದ ನಂತರ ಮೊದಲು ಸಿಗುವುದೆ ಮಾಹಿತಿ ಫಲಕ. ಇದನ್ನೊಮ್ಮೆ ಸರಿಯಾಗಿ ನೋಡಿ ಅರ್ಥೈಸಿಕೊಂಡು ನಡೆದಾಡಲು ಪ್ರಾರಂಭಿಸಿದರೆ ಉತ್ತಮ. ಇಲ್ಲವಾದಲ್ಲಿ ನೀವು ಎಲ್ಲಿ ಹೋಗಬೇಕೆಂಬ ಗೊಂದಲದಲ್ಲಿ ಮುಳುಗಬಹುದು.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಬ್ರಿಟೀಷ್ ಅಧಿಕಾರಿ ಕರ್ನಲ್ ರಾಬರ್ಟ್ ಕಿಡ್ ಎಂಬಾತನು ಪ್ರಥಮವಾಗಿ ಈ ಸಸ್ಯೋದ್ಯಾನದ ಕಲ್ಪನೆ ಮಾಡಿ ನಂತರ ನಿರ್ಮಿಸಿದನು. ಕಿಡ್ ನ ಗೌರವಾರ್ಥವಾಗಿ ಉದ್ಯಾನದಲ್ಲಿರುವ ಈ ಸ್ಮಾರಕವನ್ನು ನೋಡಬಹುದು.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ವಿಧ ವಿಧವಾದ ಬಣ್ಣ ಬಣ್ಣದ ಹೂರಾಶಿಗಳನ್ನು ಈ ಸುಂದರ ಸಸ್ಯೋದ್ಯಾನದಲ್ಲಿ ಕಾಣಬಹುದು.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ವಿವಿಧ ಜಾತಿಯ, ಪ್ರಕಾರದ ದಟ್ಟವಾಗಿ ಬೆಳೆದ ಗಿಡ ಮರಗಳು ಸಸ್ಯೋದ್ಯಾನಕ್ಕೆ ಭೂಷಣದಂತಿದ್ದು ಭೇಟಿ ನೀಡುವವರಿಗೆ ತಾಜಾ ಗಾಳಿ ಹಾಗೂ ಉತ್ಸಾಹ ಕರುಣಿಸುತ್ತದೆ.
ಚಿತ್ರಕೃಪೆ: Biswarup Ganguly

ನಯನಮನೋಹರ ಸಸ್ಯೋದ್ಯಾನಗಳು:
ಜವಾಹರ್ ಲಾಲ್ ನೆಹರೂ ಸ್ಮಾರಕ ಸಸ್ಯೋದ್ಯಾನ : ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರದಲ್ಲಿದೆ ಈ ಸುಂದರ ಸಸ್ಯೋದ್ಯಾನ. ಭಾರತದ ಮೊದಲ ಪ್ರಧಾನಿಯ ನೆನಪಿನ ಕುರುಹಾಗಿ ಈ ಉದ್ಯಾನವನ್ನು 1969 ರಲ್ಲಿ ಸ್ಥಾಪಿಸಲಾಯಿತು.
ಚಿತ್ರಕೃಪೆ: Dvellakat

ನಯನಮನೋಹರ ಸಸ್ಯೋದ್ಯಾನಗಳು:
ಈ ಸಸ್ಯೋದ್ಯಾನದ ವಿಶೇಷತೆಯೆಂದರೆ ಅಂದ ಚೆಂದಕ್ಕಾಗಿ ಮನೆ ಮುಂದೆ ಬೆಳೆಸಲಾಗುವ ತರಹೇವಾರಿ ಸಸ್ಯಗಳ 1.5 ಲಕ್ಷಕ್ಕೂ ಹೆಚ್ಚು ಸಸ್ಯಗಳ ಸಂಗ್ರಹ ಇಲ್ಲಿದೆ ಹಾಗೂ ಓಕ್ ಜಾತಿಯ ಗಿಡ ಮರಗಳ ಭಂಡಾರವೆ ಈ ಸಸ್ಯೋದ್ಯಾನದಲ್ಲಿದೆ.
ಚಿತ್ರಕೃಪೆ: Dvellakat

ನಯನಮನೋಹರ ಸಸ್ಯೋದ್ಯಾನಗಳು:
ಮತ್ತೊಂದು ವಿಷಯವೆಂದರೆ ಚಶ್ಮಾ ಶಾಹಿ ಎಂಬ ನಯನಮನೋಹರ ಪರ್ವತದ ಪಕ್ಕದಲ್ಲಿ ಈ ಸಸ್ಯೋದ್ಯಾನವಿದ್ದು ಪ್ರಕೃತಿಯ ನೈಜ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.
ಚಿತ್ರಕೃಪೆ: Dvellakat

ನಯನಮನೋಹರ ಸಸ್ಯೋದ್ಯಾನಗಳು:
ಲಾಲ್ ಬಾಗ್ : ಕರ್ನಾಟಕದ ರಾಜಧಾನಿ ನಗರ ಬೆಂಗಳೂರಿನ ಪ್ರಮುಖ ಪ್ರವಾಸಿ ಆಕರ್ಷಣೆಯಾದ ಲಾಲ್ ಬಾಗ್ ಒಂದು ಸುಂದರ ಸಸ್ಯೋದ್ಯಾನವಾಗಿದೆ. ಮೂಲತ "ಬಾಗ್" ಎನ್ನುವುದು ಉರ್ದು ಹಾಗೂ ಹಿಂದಿ ಭಾಷೆಯಲ್ಲಿ ಬಳಸಲ್ಪಡುವ ಪದ. ಇದರ ಅರ್ಥ ಕನ್ನಡದಲ್ಲಿ ಉದ್ಯಾನ ಎಂದಾಗುತ್ತದೆ. ಬೆಂಗಳೂರು ನಗರದ ಹೃದಯ ಭಾಗದಲ್ಲಿ ನೆಲೆಸಿರುವ ಲಾಲ್ ಬಾಗ್ ಬೆಂಗಳೂರು ವಾಸಿಗಳಿಗೆ ಒಂದು ವರದಾನವಾಗಿ ಪರಿಣಮಿಸಿದೆ.
ಚಿತ್ರಕೃಪೆ: Nagesh Kamath

ನಯನಮನೋಹರ ಸಸ್ಯೋದ್ಯಾನಗಳು:
240 ಎಕರೆಗಳಷ್ಟು ವಿಶಾಲವಾಗಿ ಹರಡಿರುವ ಲಾಲ್ ಬಾಗ್ ಉದ್ಯಾನದ ನಿರ್ಮಾಣ ಅಂದಿನ ಮೈಸೂರು ಆಡಳಿತಗಾರ ಹೈದರ್ ಅಲಿ 1760 ರಲ್ಲಿ ಪ್ರಾಂಭಿಸಿದನಾದರೂ ಇದು ಪೂರ್ಣಗೊಂಡಿದ್ದು ಆತನ ಮಗ ಟಿಪ್ಪು ಸುಲ್ತಾನ್ ರಾಜ್ಯಭಾರ ನಡೆಸುತ್ತಿದ್ದಾಗ. ಉದ್ಯಾನದ ಬಹುತೇಕ ಭಾಗವವು ಕೆಂಪು ಬಣ್ಣದ ಗುಲಾಬಿ ಹೂಗಳಿಂದ ವರ್ಷಪೂರ್ತಿ ಕಂಗೊಳಿಸುತ್ತಿದ್ದುದರಿಂದ ಇದಕ್ಕೆ ಲಾಲ್ ಬಾಗ್ ಅಂದರೆ "ಕೆಂಪು ಉದ್ಯಾನ" ಎಂದು ಕರೆಯಲಾಯಿತು.
ಚಿತ್ರಕೃಪೆ: Ryan

ನಯನಮನೋಹರ ಸಸ್ಯೋದ್ಯಾನಗಳು:
ಪ್ರಸ್ತುತ, ತೋಟಗಾರಿಕೆ ಇಲಾಖೆಯ ಸುಪರ್ದಿಯಲ್ಲಿರುವ ಲಾಲ್ ಬಾಗ್ ಹಾಗೂ ಅದರ ಜೈವಿಕ ಉದ್ಯಾನವು ನಗರದ ಪ್ರಕೃತಿ ಪ್ರೇಮಿಗಳ ಬಹು ನೆಚ್ಚಿನ ತಾಣವಾಗಿದ್ದು ಮಕ್ಕಳೂ ಸಹ ಇಷ್ಟ ಪಡುವಂತಹ ಸುಂದರ ಉದ್ಯಾನವಾಗಿದೆ.
ಚಿತ್ರಕೃಪೆ: Riju K

ನಯನಮನೋಹರ ಸಸ್ಯೋದ್ಯಾನಗಳು:
ಉದ್ಯಾನದೊಳಗಿನ ಒಂದೊಂದೂ ಮೂಲೆಗಳೂ ಸಹ ಹಿತಕರವಾದ ಅನುಭವವನ್ನು ನೀಡುತ್ತವೆ. ಅಲ್ಲದೆ ಇಲ್ಲಿರುವ ಕೊಳಗಳು, ಶಾಂತ ಪರಿಸರ, ಪಕ್ಷಿಗಳ ಕಲರವ, ನೀವು ಬೆಂಗಳೂರು ಬಿಟ್ಟು ಹೊರಬಂದಿದ್ದೇರೇನೊ ಎಂಬ ಅನುಭವ ನೀಡುತ್ತವೆ. ಲಾಲ್ ಬಾಗ್ ಉದ್ಯಾನದಲ್ಲಿರುವ ಇಂಗಾಲೀಕರಿಸಿದ ಸುಮಾರು 20 ಮಿಲಿಯನ್ ವರ್ಷಗಳಷ್ಟು ಪುರಾತನವಾದ ಒಂದು ಮರದ ಕಾಂಡ.
ಚಿತ್ರಕೃಪೆ: Rishabh Mathur

ನಯನಮನೋಹರ ಸಸ್ಯೋದ್ಯಾನಗಳು:
ಕೋಟ್ಲಾ ವಿಜಯಭಾಸ್ಕರ ರೆಡ್ಡಿ ಸಸ್ಯೋದ್ಯಾನ : ತೆಲಂಗಾಣ ರಾಜ್ಯದ ರಾಜಧಾನಿ ನಗರ ಹೈದರಾಬಾದ್ ನಲ್ಲಿರುವ ಮಾಧಾಪುರದ ಬಳಿ ಈ ಸುಂದರವಾದ ಸಸ್ಯೋದ್ಯಾನವಿದೆ. ಹೈದರಾಬಾದ್ ರೈಲು ನಿಲ್ದಾಣದಿಂದ 16 ಕಿ.ಮೀ ದೂರದಲ್ಲಿರುವ ಈ ಸುಂದರ ಸಸ್ಯೋದ್ಯಾನ 120 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿದೆ.
ಚಿತ್ರಕೃಪೆ: J.M.Garg

ನಯನಮನೋಹರ ಸಸ್ಯೋದ್ಯಾನಗಳು:
ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿಯು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ತಾಣ. ಇಲ್ಲಿರುವ ಅರೋವಿಲ್ ಆಗಲಿ, ಪ್ರೊಮೆನೇಡ್ ಕಡಲ ತೀರವಾಗಲಿ ಅಥವಾ ಅರಬೊಂದೊ ಆಶ್ರಮವಾಗಲಿ ಸಾಕಷ್ಟು ಹೆಸರುವಾಸಿ. ಆದರೆ ಇವುಗಳೆಲ್ಲದರ ಜೊತೆ ಇಲ್ಲಿರುವ ಪುದುಚೆರಿ ಸಸ್ಯೋದ್ಯಾನವೂ ಸಹ ಅಷ್ಟೆ ಜನಪ್ರೀಯ. ಪಾಂಡಿಚೆರಿ ಹೊಸ್ ಬಸ್ ನಿಲ್ದಾಣದ ದಕ್ಷಿಣಕ್ಕೆ ಈ ಸುಂದರ ಸಸ್ಯೋದ್ಯಾನವಿದೆ.
ಚಿತ್ರಕೃಪೆ: Prabhupuducherry

ನಯನಮನೋಹರ ಸಸ್ಯೋದ್ಯಾನಗಳು:
ತಮಿಳುನಾಡಿನ ನೀಲ್ಗಿರಿಯಲ್ಲಿರುವ ಕುಣ್ಣೂರು ನಿಜವಾಗಿಯೂ ಒಂದು ಸುಂದರವಾದ ಹಿತಕರವಾದ ವಾತಾವರಣವುಳ್ಳ ಗಿರಿಧಾಮವಾಗಿದೆ. ಇಲ್ಲಿರುವ ಸಿಮ್ ಎಂಬ ಸಸ್ಯೋದ್ಯಾನವು ಈ ಗಿರಿಧಾಮಕ್ಕೆ ಭೂಷಣದಂತಿದ್ದು ಇದರ ಶೋಭೆಯನ್ನು ಇನ್ನಷ್ಟು ಹೆಚ್ಚಿಸಿದೆ. ನೀಲ್ಗಿರಿ ಜಿಲ್ಲೆಯಲ್ಲಿ ಊಟಿಯ ನಂತರ ಎರಡನೇಯ ಅತಿ ದೊಡ್ಡ ಗಿರಿಧಾಮವಾಗಿದೆ ಕುಣ್ಣೂರು.
ಚಿತ್ರಕೃಪೆ: Thangaraj Kumaravel

ನಯನಮನೋಹರ ಸಸ್ಯೋದ್ಯಾನಗಳು:
22 ಹೆಕ್ಟೇರ್ ವಿಸ್ತಾರದ ಪ್ರದೇಶದಲ್ಲಿ ಹರಡಿರುವ ದಕ್ಷಿಣ ಭಾರತದ ಗಿರಿಧಾಮಗಳ ರಾಣಿ ಎಂದೆ ಕರೆಯಲ್ಪಡುವ ಉದಕಮಂಡಲ ಅರ್ಥಾತ್ ಊಟಿಯಲ್ಲಿರುವ ಸಸ್ಯೋದ್ಯಾನವು ಸಾಕಷ್ಟು ನಯನಮನೋಹರವಾಗಿದ್ದು ವೈವಿಧ್ಯಮಯ ವನಸ್ಪತಿ ಹಾಗೂ ಗಿಡಮರಗಳಿಂದ ಸಂಪದ್ಭರಿತವಾಗಿದೆ.
ಚಿತ್ರಕೃಪೆ: Adam63

ನಯನಮನೋಹರ ಸಸ್ಯೋದ್ಯಾನಗಳು:
ತಮಿಳುನಾಡು ತೋಟಗಾರಿಕೆ ಇಲಾಖೆಯಿಂದ ನಿರ್ವಹಿಸಲ್ಪಡುವ ಈ ಸಸ್ಯೋದ್ಯಾನವು ಕೊಯಮತ್ತೂರುವಿಗೆ ಹತ್ತಿರದಲ್ಲಿದ್ದು ದೊಡ್ಡಬೆಟ್ಟದ ಕೆಳ ಸ್ತರದ ಭೂಪ್ರದೇಶಗಳಲ್ಲಿ ಸ್ಥಿತವಿದೆ.
ಚಿತ್ರಕೃಪೆ: Swaminathan

ನಯನಮನೋಹರ ಸಸ್ಯೋದ್ಯಾನಗಳು:
ಆವಾಗಾವಾಗ ಇಲ್ಲಿ ಫಲ ಪುಷ್ಪ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತದೆ. ಇಲ್ಲಿ ಪುರಾತನ ಗಿಡಮರಗಳ ಪಳಿಯುಳಿಕೆಗಳು, ಅಪರೂಪದ ಸಸ್ಯ ಪ್ರಭೇದಗಳಿದ್ದು, ಊಟಿಗೆ ಭೇಟಿ ಪ್ರವಾಸಿಗರು ಈ ಸಸ್ಯೋದ್ಯಾನಕ್ಕೆ ಖಂಡಿತವಾಗಿಯೂ ಭೇಟಿ ನೀಡಲೇಬೇಕು.
ಚಿತ್ರಕೃಪೆ: Balaji Kasirajan

ನಯನಮನೋಹರ ಸಸ್ಯೋದ್ಯಾನಗಳು:
ರಾಷ್ಟ್ರೀಯ ಆರ್ಕಿಡೇರಿಯಮ್ ಹಾಗೂ ಸಸ್ಯೋದ್ಯಾನಗಳು ತಮಿಳುನಾಡಿನ ಯೇರ್ಕಾಡ್ ಎಂಬ ಗಿರಿಧಾಮದಲ್ಲಿದೆ. ಇದು ಸೇಲಂ ಜಿಲ್ಲೆಯಲ್ಲಿರುವ ಗಿರಿಧಾಮವಾಗಿದ್ದು ಬೆಂಗಳೂರಿಗೆ ಹತ್ತಿರ ಅಂದರೆ 230 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: Joseph Jayanth

ನಯನಮನೋಹರ ಸಸ್ಯೋದ್ಯಾನಗಳು:
ಇಲ್ಲಿ 3000 ಸಂಖ್ಯೆಯಷ್ಟು ಗಿಡಮರಗಳು ಹಾಗೂ 1800 ರಷ್ಟು ಹೂಬಳ್ಳಿಗಳಿದ್ದು ನೋಡಲು ನಯನ ಮನೋಹರವಾಗಿದೆ.
ಚಿತ್ರಕೃಪೆ: Thangaraj Kumaravel


Click it and Unblock the Notifications















