ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದಾಗಿರುವ ಪಾಂಡಿಚೆರಿ ಅಥವಾ ಪುದುಚೆರಿಯು ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿರುವುದಕ್ಕೆ ಯಾವುದೆ ಸಂಶಯವಿಲ್ಲ. ಸಾಕಷ್ಟು ಫ್ರೆಂಚ್ ಪ್ರಭಾವವಿರುವ ಈ ಸುಂದರ ಕಡಲ ತಡಿಯ ನಗರವು ತನ್ನದೆ ಆದ ಒಂದು ವಿಶೇಷತೆಯನ್ನು ಹೊಂದಿದೆ.
ಹಿಂದುಗಳು ಹಾಗೂ ಫ್ರೆಂಚ್ ಮೂಲದ ಜನರೂ ಸಹ ಇರುವ ಈ ಆಕರ್ಷಕ ಪಟ್ಟಣವು ತನ್ನದೆ ಆದ ವೈವಿಧ್ಯತೆಯನ್ನು ಹೊಂದಿದೆ. ಸಾಕಷ್ಟು ಆಧುನಿಕತೆಯು ಈ ಪ್ರದೇಶದಲ್ಲಿ ಮನೆ ಮಾಡಿದ್ದು, ವಿದೇಶಿ ಪ್ರವಾಸಿಗರನ್ನೂ ಸಹ ಆಕರ್ಷಿಸುತ್ತದೆ. ಅಷ್ಟೆ ಅಲ್ಲ ಇಲ್ಲಿರುವ ಮೈತ್ರಿ ಮಂದಿರದಂತಹ ಧ್ಯಾನ ಕೇಂದ್ರಗಳು ಅಂತಾರಾಷ್ಟ್ರೀಯ ಖ್ಯಾತಿಗಳಿಸಿದೆ.
ಚಿತ್ರಕೃಪೆ: Prabhupuducherry
ಇವೆಲ್ಲವುಗಳ ಜೊತೆಯಲ್ಲಿ, ಇಲ್ಲಿ ಹಿಂದು ಸಂಸ್ಕೃತಿಯೂ ಸಹ ಹಾಸು ಹೊಕ್ಕಾಗಿದೆ. ಕೆಲವು ದೇವಾಲಯಗಳು ಇಲ್ಲಿದ್ದು ಪ್ರಮುಖವಾಗಿ ಧಾರ್ಮಿಕಾಸಕ್ತರ ಮನ ತಣಿಸುತ್ತವೆ. ಅಂತಹ ಕೆಲವು ದೇವಾಲಯಗಳಲ್ಲಿ ಒಂದಾಗಿದೆ ಗಣೇಶನಿಗೆ ಮುಡಿಪಾದ ಮನಕುಲ ವಿನಾಯಕನ ದೇವಾಲಯ ಅಥವಾ ಮನಕುಲ ವಿನಾಯಗರ್ ದೇವಾಲಯ.
ಹೌದು, ಪಾಂಡಿಚೆರಿಯಲ್ಲಿರುವ ಗಣೇಶನಿಗೆ ಮುಡಿಪಾದ ಈ ದೇವಾಲಯ ಬಲು ಹೆಸರುವಾಸಿ. ಪಾಂಡಿಚೆರಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿ ನೀಡದೆ ಮತ್ತೆ ತಿರುಗಿ ಹೋಗಲಾರರು, ಅಷ್ಟೊಂದು ಜನಪ್ರೀಯತೆ ಪಡೆದಿರುವ ಧಾರ್ಮಿಕ ಪ್ರವಾಸಿ ಆಕರ್ಷಣೆಯಾಗಿದೆ ಈ ದೇವಾಲಯ.
ಚಿತ್ರಕೃಪೆ: Prabhupuducherry
ದೇವಾಲಯಕ್ಕೆ ಸಂಬಂಧಿಸಿದಂತೆ ಇತಿಹಾಸವಿದ್ದು, ಈ ದೇವಾಲಯವು ಇಲ್ಲಿ ಫ್ರೆಂಚರು ಆಗಮಿಸುವುದಕ್ಕೂ ಮುಂಚೆಯೆ ಇಲ್ಲಿತ್ತೆಂದು ತಿಳಿದುಬರುತ್ತದೆ. ಅಂದರೆ ಕ್ರಿ.ಶ. 1666 ಕ್ಕೂ ಮುಂಚೆಯೆ ಈ ದೇವಾಲಯ ಇಲ್ಲಿತ್ತು! ಕ್ರಮೇಣ ಈ ಪ್ರದೇಶದಲ್ಲಿ ಫ್ರೆಂಚರ ಪ್ರಭಾವ ಏರತೊಡಗಿತು.
ಹೀಗೆ ಫ್ರೆಂಚರು ಈ ಪ್ರದೇಶದಲ್ಲಿ ಸಾಕಷ್ಟು ಪ್ರಭಾವಶಾಲಿಗಳಾದಾಗ ಕೆಲವು ಬಾರಿ ಈ ದೇವಾಲಯವನ್ನು ನಾಶಪಡಿಸಲು ಪ್ರಯತ್ನಿಸಿದ್ದರು. ಆದರೆ ಸ್ಥಳೀಯ ಹಿಂದುಗಳ ಅತ್ಯಂತ ಕಡು ವಿರೋಧದಿಂದ ಅಲ್ಲದೆ ಬ್ರಿಟೀಷರಿಂದಲೂ ಸಹ ಅಡೆ-ತಡೆಗಳು ಎದುರಿಸಬಹುದಾದ ಸಂಭವನೀಯತೆಗಳಿದ್ದುದರಿಂದ ಅವರು ದೇವಾಲಯ ನಾಶಪಡಿಸಲು ಸಫಲರಾಗಲಿಲ್ಲ.
ಚಿತ್ರಕೃಪೆ: Suresh kolangi
ಈ ದೇವಾಲಯದಲ್ಲಿ ಗಣೇಶನ ಹದಿನಾರು ಅವತಾರಗಳನ್ನು ಕೆತ್ತಲಾಗಿದೆ. ಪೂರ್ವಕ್ಕೆ ಮುಖ ಮಾಡಿರುವ ಗಣೇಶನನ್ನು ಭುವನೇಶ್ವರ ಗಣಪತಿ ಎಂದು ಕರೆಯಲಾಗಿದ್ದು ಆ ಗಣಪತಿಯೆ ಇಂದು ಮನಕುಲ ವಿನಾಯಕನಾಗಿ ಭಕ್ತರನ್ನು ಹರಸುತ್ತಿದ್ದಾನೆ.
ತಮಿಳಿನಲ್ಲಿ ಮನಲ್ ಎಂದರೆ ಮರಳು ಎಂತಲೂ ಕುಲತು ಎಂದರೆ ನೀರಿನ ಕೊಳ ಎಂತಲೂ ಅರ್ಥ ಬರುತ್ತದೆ. ಇಲ್ಲಿ ಹಿಂದೆ ಕೊಳವೊಂದಿದ್ದಿದುದರಿಂದ ಜನರು ಇದನ್ನು ಮನಲ್ ಕುಲತು ವಿನಾಯಕನ ದೇವಾಲಯ ಎಂದೆ ಕರೆಯುತ್ತಿದ್ದರು. ಕ್ರಮೇಣವಾಗಿ ಆ ದೇವಾಲಯವೆ ಇಂದು ಮನಕುಲ ವಿನಾಯಕನ ದೇವಾಲಯ ಎಂದು ಕರೆಯಲ್ಪಡುತ್ತದೆ.
ಚಿತ್ರಕೃಪೆ: Jonas Buchholz
ಈ ದೇವಾಲಯದಲ್ಲಿರುವ ಬಂಗಾರದ ರಥ ಇನ್ನೊಂದು ಆಕರ್ಷಣೆ. ಹತ್ತು ಅಡಿ ಎತ್ತರ ಹಾಗೂ ಆರು ಅಡಿ ಅಗಲವಿರುವ ಈ ರಥದಲ್ಲಿ ಏಳುವರೆ ಕೆ.ಜಿ.ಗಳಷ್ಟು ಚಿನ್ನವನ್ನು ಬಳಸಲಾಗಿದೆ. ದೇವಾಲಯಕ್ಕೆ ಭಕ್ತರು ನೀಡಿರುವ ಚಂದಾ ಹಣದಿಂದಲೆ ಇದನ್ನು ನಿರ್ಮಿಸಲಾಗಿರುವುದು ವಿಶೇಷ.
ಗಣೇಶ ಕರಾವಳಿಯ ಮಹಾಗಣಪತಿ ದೇವಾಲಯಗಳು!
ಇನ್ನೂ ಪಾಂಡಿಚೆರಿಯನ್ನು ತಲುಪುವುದು ಬಲು ಸುಲಭವಾಗಿದೆ. ಬೆಂಗಳೂರಿನಿಂದ 315 ಕಿ.ಮೀ ಹಾಗೂ ಚೆನ್ನೈ ನಗರದಿಂದ 170 ಕಿ.ಮೀ ಗಳಷ್ಟು ದೂರದಲ್ಲಿರುವ ಪಾಂಡಿಚೆರಿಗೆ ತೆರಳಲು ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಈ ನಗರಗಳಿಂದ ಲಭ್ಯವಿದೆ.