ಕರ್ನಾಟಕದಲ್ಲಿ ಪ್ರವಾಸಿ ಆಕರ್ಷಣೆಯಾಗಿ ಮಂಚೂಣಿಯಲ್ಲಿರುವ ಸ್ಥಳವೆಂದರೆ ಕೊಡಗು ಜಿಲ್ಲೆ. ಇಲ್ಲಿ ನಯನ ಮನೋಹರವಾದ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ವಿಶೇಷವೆಂದರೆ ವರ್ಷದ ಎಲ್ಲಾ ಸಮಯದಲ್ಲೂ ಈ ಸುಂದರ ಕಡಗು ನಾಡಿಗೆ ಭೇಟಿ ನೀಡಬಹುದಾಗಿದೆ. ಈ ಜಿಲ್ಲೆಯಲ್ಲಿರುವ ಇನ್ನೊಂದು ಸುಂದರ ತಾಣ ಹಾಗೂ ಪುಣ್ಯಕ್ಷೇತ್ರವಾದ ಭಾಗಮಂಡಲ ತನ್ನದೆ ಆದ ವಿಶೇಷತೆಯನ್ನು ಹೊಂದಿದೆ.
ಕರ್ನಾಟಕದಲ್ಲಿರುವ ಕಾವೇರಿ ನದಿ ತಟದ ಪುಣ್ಯಕ್ಷೇತ್ರಗಳು
ಭಾಗಮಂಡಲ ಒಂದು ತ್ರಿವೇಣಿ ಸಂಗಮ ಕ್ಷೇತ್ರವಾಗಿ ಪ್ರಸಿದ್ಧವಾಗಿದೆ. ಈ ಸ್ಥಳದಲ್ಲಿ ಕಾವೇರಿ, ಕನ್ನಿಕೆ ಹಾಗೂ ಗುಪ್ತನದಿಯಾದ ಸುಜ್ಯೋತಿ ನದಿಗಳು ಸಂಗಮ ಹೊಂದಿವೆ. ಹೀಗಾಗಿ ಜನರಿಂದ ಇದೊಂದು ಪವಿತ್ರ ಕ್ಷೇತ್ರವಗಿ ಪರಿಗಣಿಸಲ್ಪಟ್ಟಿದೆ. ಮೊದಲಿಗೆ ಜನರು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಮಿಂದು ನಂತರ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯೆಡೆಗೆ ಪ್ರಯಾಣ ಬೆಳೆಸುತ್ತಾರೆ.
ಭಗಂಡೇಶ್ವರ ದೇವಾಲಯ, ಚಿತ್ರಕೃಪೆ: radiant-luv
ಇನ್ನೊಂದು ವಿಚಾರವೆಂದರೆ ಭಾಗಮಂಡಲವು ತ್ರಿವೇಣಿ ಸಂಗಮ ಕ್ಷೇತ್ರವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡುವ ಸಾಕಷ್ಟು ಜನ ಭಕ್ತಾದಿಗಳು ತಮ್ಮ ಹಿರಿಯರ/ಪೂರ್ವಜರಿಗೆ ಸಂಬಂಧಿಸಿದಂತೆ ಕರ್ಮಾಚರಣೆಗಳನ್ನು ಸಾಮಾನ್ಯವಾಗಿ ನಿರ್ವಹಿಸುತ್ತಾರೆ. ತಲಕಾವೇರಿ ಇಲ್ಲಿಂದ ಕೇವಲ ಎಂಟು ಕಿ.ಮೀ ಗಳಷ್ಟು ದೂರವಿದ್ದು ತೆರಳಲು ವಾಹನಗಳು ದೊರೆಯುತ್ತವೆ.
ತ್ರಿವೇಣಿ ಸಂಗಮ, ಚಿತ್ರಕೃಪೆ: Ashok Prabhakaran
ಭಾಗಮಂಡಲದಲ್ಲಿ ಪ್ರಮುಖವಾಗಿ ನೋಡಬಹುದಾದ ಧಾರ್ಮಿಕ ತಾಣವೆಂದರೆ ಭಾಗಂಡೇಶ್ವರ/ಭಗಂಡೇಶ್ವರ ದೇವಾಲಯ. ಶಿವನಿಗೆ ಮುಡಿಪಾದ ಈ ದೇವಾಲಯದಿಂದಲೆ ಸ್ಥಳಕ್ಕೆ ಭಾಗಮಂಡಲ ಎಂಬ ಹೆಸರು ಬಂದಿರುವುದರ ಕುರಿತು ಪ್ರತೀತಿಯಿದೆ. ಈ ದೇವಾಲಯದಲ್ಲಿ ಸುಬ್ರಹ್ಮಣ್ಯ, ಗಣಪತಿ ಹಾಗೂ ವಿಷ್ಣುವಿನ ವಿಗ್ರಹಗಳೂ ಸಹ ಪ್ರತಿಷ್ಠಾಪಿಸಲ್ಪಟ್ಟಿವೆ.
ಚಿತ್ರಕೃಪೆ: Sharath kumar
ಭಾಗಮಂಡಲವು ಮಳೆಗಾಲದ ಸಮಯದಲ್ಲಿ ಅಕ್ಷರಶಃ ಸುಂದರ ಕನ್ಯೆಯಂತೆ ಕಂಗೊಳಿಸುತ್ತದೆ. ಇಲ್ಲಿನ ಪರಿಸರ ಹಸಿರಾದ ಹಾಸಿಗೆಯಿಂದ ಮೈದುಂಬಿಕೊಂಡಿರುತ್ತದೆ. ಸಮುದ್ರ ಮಟ್ಟದಿಂದ ಎತ್ತರದಲ್ಲಿರುವುದರಿಂದ ಸಾಕಷ್ಟು ತಂಪಾದ ವಾತಾವರಣ ಇಲ್ಲಿರುತ್ತದೆ. ಆದಾಗ್ಯೂ ಇದರ ಸುತ್ತಮುತ್ತಲೂ ಸಹ ಕೆಲವು ಪ್ರೇಕ್ಷಣೀಯ ಸ್ಥಳಗಳಿವೆ.
ಪಡಿ ಇಗ್ಗುತಪ್ಪ ದೇವಾಲಯ, ಚಿತ್ರಕೃಪೆ: Riju K
ಭಾಗಮಂಡಲದಿಂದ ಸ್ವಲ್ಪವೆ ದೂರದಲ್ಲಿರುವ ಕಕ್ಕಾಬೆ ಎಂಬಲ್ಲಿ ಪಾಡಿ ಎಂಬ ಸ್ಥಳವಿದ್ದು ಅಲ್ಲಿ ಇಗ್ಗುತಪ್ಪನ ದೇವಾಲಯವಿದೆ. ಇಗ್ಗುತಪ್ಪ ದೇವರು ಕೊಡವರ ಪ್ರಮುಖ ದೇವನಾಗಿದ್ದು ಈ ದೇವಾಲಯ ತಾಣವು ಕೊಡವರಿಂದ ಅವರ ತಾಯಿನಾಡಿನಲ್ಲಿರುವ ಅತಿ ಪವಿತ್ರ ದೇವಾಲಯವಾಗಿ ಪರಿಗಣಿಸಲ್ಪಟ್ಟಿದೆ. ಕೊಡವರು ಇಗ್ಗುತಪ್ಪನನ್ನು ಮಹಾಗುರು ಹಾಗೂ ಮಳೆಯ ದೇವರು ಎಂದು ನಂಬುತ್ತಾರೆ.
ಚಿತ್ರಕೃಪೆ: Rkrish67
ಭಾಗಮಂಡಲಕ್ಕೆ ಹತ್ತಿರದಲ್ಲಿರುವ ಅಯ್ಯನಗೇರಿ ಎಂಬಲ್ಲಿ ಕೃಷ್ಣನ ಅವತಾರವಾದ ಚಿನ್ನತ್ತಪ್ಪನ ದೇವಾಲಯವಿದೆ. ಈ ಸ್ಥಳ ನಿವಾಸಿಗಳು ಚಿನ್ನತ್ತಪ್ಪನನ್ನು ತಮ್ಮ ಪ್ರಧಾನ ದೇವರಾಗಿ ಅತಿ ಭಕ್ತಿ, ಶೃದ್ಧೆಗಳಿಂದ ಪೂಜಿಸುತ್ತಾರೆ. ಪ್ರವಾಸಿಗರಿಗೆ ಈ ಎರಡೂ ದೇವಾಲಯಗಳು ವಿಶಿಷ್ಟ ಅನುಭವವನ್ನು ನೀಡುತ್ತವೆ ಎಂದರೆ ತಪ್ಪಾಗಲಾರದು.
ಕೊಡಗಿನ ದೃಶ್ಯವೈಭವ ಸಾರುವ ಚಿತ್ರಗಳು
ಇನ್ನೂ ಭಾಗಮಂಡಲವು ಮಡಿಕೇರಿ ಜಿಲ್ಲಾ ಕೇಂದ್ರದಿಂದ 33 ಕಿ.ಮೀ ದೂರವಿದ್ದು ವಿರಾಜಪೇಟೆ ಹಾಗೂ ಸುತ್ತಮುತ್ತಲಿನೆ ಪ್ರದೇಶಗಳೊಂದಿಗೆ ಉತ್ತಮ ರಸ್ತೆಯ ಸಮ್ಪರ್ಕವನ್ನು ಹೊಂದಿದೆ. ಮಡಿಕೇರಿ ನಗರದಿಂದ ಇಲ್ಲಿಗೆ ತೆರಳಲು ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳೆರಡೂ ಲಭ್ಯವಿರುತ್ತವೆ.
ಕೊಡಗು ತಲುಪುವ ಬಗೆ