ಕರ್ನಾಟಕದ ಕೊಂಕಣ ಕರಾವಳಿಯ ರಾಣಿ ಎಂತಲೆ ಪ್ರೀತಿಯಿಂದ ಕರೆಸಿಕೊಳ್ಳುವ ಉತ್ತರ ಕನ್ನಡ ಜಿಲ್ಲೆಯು ರಾಜ್ಯದ ಪ್ರಮುಖ ಪ್ರವಾಸಿ ಜಿಲ್ಲೆಗಳ ಪೈಕಿ ಒಂದಾಗಿದೆ. ಇಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿದ್ದು ಎಲ್ಲ ವಯೋಮಾನದ ಪ್ರವಾಸಿಗರನ್ನು ಸೆಳೆಯುತ್ತವೆ. ಧಾರ್ಮಿಕವೆ ಆಗಲಿ ಇಲ್ಲವೆ ಮನರಂಜನಾತ್ಮಕವೆ ಇರಲಿ ಎಲ್ಲ ಸದಭಿರುಚಿಯ ಸ್ಥಳಗಳು ಈ ಜಿಲ್ಲೆಯಲ್ಲಿವೆ.
ನಿಮಗಿಷ್ಟವಾಗಬಹುದಾದ : ಇವನು ಸೋಮನಾಥಪುರದ ಚೆನ್ನಕೇಶವ
ಅಷ್ಟೆ ಏಕೆ, ಐತಿಹಾಸಿಕ ಪ್ರಾಮುಖ್ಯತೆಯುಳ್ಳ, ಸಾಹಸಬಯಸುವ ಪ್ರವಾಸಿಗರಿಗೆ ಇಷ್ಟವಾಗುವ ಹಾಗೂ ಧಾರ್ಮಿಕವಾಗಿ ಆಕರ್ಷಿಸುವ ಹಲವಾರು ಸ್ಥಳಗಳನ್ನೂ ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಬಹುದು. ಐತಿಹಾಸಿಕವಾಗಿ ಹೇಳಬೇಕೆಂದರೆ ಶಿರಸಿ ತಾಲೂಕಿನಲ್ಲಿರುವ ಬನವಾಸಿಯು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುವ ಸುಂದರ ಸ್ಥಳವಾಗಿದೆ.
ಚಿತ್ರಕೃಪೆ: Ajaya.n.g
ಬನವಾಸಿ ಕದಂಬರ ಮೂಲ ರಾಜಧಾನಿ. ಕರ್ನಾಟಕದಲ್ಲಿ ಕದಂಬರು ಪ್ರಥಮ ಬಾರಿಗೆ ಪ್ರವರ್ಧಮಾನಕ್ಕೆ ಬಂದು ಬನವಾಸಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು ಎಂದು ನಮಗೆ ಇತಿಹಾಸದ ಮೂಲಕ ತಿಳಿದುಬರುತ್ತದೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನೆಂಬಾತ ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥದಿಂದ ತಿಳಿದುಬರುತ್ತದೆ.
ನಿಮಗಿಷ್ಟವಾಗಬಹುದಾದ : ರಾಷ್ಟ್ರೀಯ ಮಹತ್ವ ಪಡೆದಿರುವ ಕರ್ನಾಟಕದ ಸ್ಮಾರಕಗಳು
ಅಷ್ಟೆ ಅಲ್ಲ ಸಿಂಹಳ (ಇಂದಿನ ಶ್ರೀಲಂಕಾ) ಬೌದ್ಧ ಭಿಕ್ಷುಗಳೂ ಸಹ ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರೆಂದು ತಿಳಿದುಬರುತ್ತದೆ. ಕ್ರಿ.ಶ. ಒಂದನೇಯ ಶತಮಾನದಲ್ಲಿ ಭಾರತದ ಪ್ರವಾಸಕ್ಕೆಂದು ಬಂದಿದ್ದ ಗ್ರೀಕ್ ದೇಶದ ಪ್ರವಾಸಿ ಟಾಲೆಮಿ ಎಂಬಾತನು ತಾನು ಬರೆದಿರುವ ಪುಸ್ತಕದಲ್ಲಿ ಬನವಾಸಿಯನ್ನು "ಬನೌಸಿ" ಎಂದು ಉಲ್ಲೇಖಿಸಿರುವುದು ಕಂಡುಬರುತ್ತದೆ.
ಚಿತ್ರಕೃಪೆ: Shashidhara halady
ಕದಂಬ ವಾಸ್ತುಶೈಲಿಯು ವಿಶಿಷ್ಟವಾಗಿದ್ದು ತನ್ನದೆ ಆದ ಗುಣ ಲಕ್ಷಣ ಹೊಂದಿದೆ. ಬನವಾಸಿಯಲ್ಲಿರುವ ಮಧುಕೇಶ್ವರ ದೇವಸ್ಥಾನವು ಕದಂಬ ಶೈಲಿಯ ವಾಸ್ತು ಶಿಲ್ಪಕ್ಕೆ ಸಾಕ್ಷಿಯಾಗಿದೆ. ಈ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪವೂ ಸಹ ವೈಶಿಷ್ಟ್ಯಪೂರ್ಣವಾಗಿದೆ.
ಚಿತ್ರಕೃಪೆ: Dineshkannambadi
ಮಧುಕೇಶ್ವರನಾಗಿ ಶಿವನು ನೆಲೆಸಿರುವ ಈ ದೇವಾಲಯದಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇತರೆ ಹಲವಾರು ದೇವತೆಗಳ ವಿಗ್ರಹಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ.
ಚಿತ್ರಕೃಪೆ: Clt13
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಪ್ರವರ್ಧಮಾನಕ್ಕೆ ಬಂದ ಕದಂಬರ ಗೌರವಾರ್ಥವಾಗಿ ಕರ್ನಾಟಕ ಸರ್ಕಾರ ಪ್ರತಿ ವರ್ಷವೂ ಕದಂಬೋತ್ಸವವನ್ನು ಆಚರಿಸುತ್ತ ಬಂದಿದೆ. ಈ ಸಂದರ್ಭದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ. ಕರ್ನಾಟಕದ ವಿವಿಧ ಭಾಗಗಳಿಂದ ಸಾಹಿತ್ಯಪ್ರಿಯರು, ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಚಿತ್ರಕೃಪೆ: Karthickbala
ತನ್ನ ಮೂರು ಕಡೆಗಳಲ್ಲಿ ವರದಾ ನದಿ ಹರಿದಿರುವ ಬನವಾಸಿಯು ಸುತ್ತಮುತ್ತಲು ದಟ್ಟವಾದ ವನ್ಯಸಂಪತ್ತಿನಿಂದ ಕೂಡಿದೆ. ಬೆಂಗಳೂರಿನಿಂದ 374 ಕಿ.ಮೀ, ಶಿರಸಿ ಪಟ್ಟಣದಿಂದ 23 ಕಿ.ಮೀ ಗಳಷ್ಟು ದೂರವಿದೆ ಬನವಾಸಿ. ಶಿರಸಿಯಿಂದ ಬಸ್ಸುಗಳು ದೊರೆಯುತ್ತವೆ. ರೈಲಿನಲ್ಲೆ ತೆರಳಬೇಕಿದ್ದಲ್ಲಿ ಹತ್ತಿರದ ಸ್ಥಳವೆಂದರೆ ಹಾವೇರಿ. ಇದು ಬನವಾಸಿಯಿಂದ 70 ಕಿ.ಮೀ ಗಳಷ್ಟು ದೂರದಲ್ಲಿದೆ.