ತಿರುಪತಿಗೆ ಅತ್ಯಂತ ಸಮೀಪದಲ್ಲಿಯೇ ಇದೆ ಹನುಮಂತ ದೇವಾಲಯ. ಗೋಗ್ರಂಬಂ ಅಣೆಕಟ್ಟಿನಿಂದ ಮೂರು ಕಿ.ಮೀ. ದೂರದಲ್ಲಿದೆ. ಈ ಸ್ಥಳದಲ್ಲಿ ಶ್ರೀರಾಮಚಂದ್ರ, ಸೀತೆ, ಲಕ್ಷ್ಮಣ ಹಾಗೂ ಹನುಮಂತರೊಡಗೂಡಿ ಕೆಲ ಕಾಲ ವಾಸವಾಗಿದ್ದ ಎಂದು ಹೇಳಲಾಗುತ್ತದೆ. ಈ ತಾಣವು ಜಪಲಿ ಅಂತಲೂ ಜನಪ್ರಿಯವಾಗಿದೆ. ಹನುಮಂತ ಇಲ್ಲಿಯೇ ತಪಸ್ಸನ್ನು ಕೂಡ ಆಚರಿಸಿದ್ದ ಎನ್ನಲಾಗುತ್ತದೆ.
ಇಲ್ಲೊಂದು ಕೊಳವಿದೆ. ಅದನ್ನು ಶ್ರೀರಾಮಕುಂಡ ಎನ್ನಲಾಗುತ್ತದೆ. ಇದು ಕೂಡ ದೇವಾಲಯದ ಆವರಣದಲ್ಲಿಯೇ ಇದೆ. ಹನುಮಂತ ತನ್ನ ಮನಸ್ಸಿನ ಶಾಂತಿಯನ್ನು ಹುಡುಕಿಕೊಂಡ ತಾಣವಾದ ಈ ಸ್ಥಳಕ್ಕೆ ಬಂದವರಿಗೆಲ್ಲಾ ಹನುಮಂತನ ಕೃಪಾಶಿರ್ವಾದ ಸಿಗುತ್ತದೆ ಎಂದು ನಂಬಲಾಗುತ್ತದೆ. ಇಲ್ಲಿ ನಿಂತು ದೇವರಲ್ಲಿ ಬೇಡಿಕೊಂಡರೆ ಬಯಕೆ ಈಡೇರುತ್ತದೆ ಎನ್ನುವ ಧಾರ್ಮಿಕ ನಂಬಿಕೆ ಕೂಡ ಇದೆ. ಶ್ರೀ ಗಣೇಶನ ಮೂರ್ತಿಯನ್ನು ಹೋಲುವ ಮಾದರಿಯ ಮರವೊಂದು ದೇವಾಲಯದ ಪ್ರವೇಶದ್ವಾರ ಬಳಿ ಇದೆ.
ಜನರ ನಂಬಿಕೆ ಪ್ರಕಾರ ಖುದ್ದು ಗಣಪತಿಯೇ ಇದರಲ್ಲಿ ಇದ್ದಾನೆ ಎನ್ನಲಾಗುತ್ತದೆ.