ಕೈಲಾಸನಾಥರ್ ದೇವರ ರೂಪದಲ್ಲಿ ಶಿವನನ್ನು ಆರಾಧಿಸಲಾಗುತ್ತಿರುವ ಈ ದೇವಾಲಯ ತಿಂಗಳೂರಿನ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. ಈ ದೇವಾಲಯದೊಳಗಿರುವ ಚಂದ್ರದೇವತೆಗೆ ಮುಡುಪಾಗಿರುವ ಗುಡಿಯಿಂದಲೇ ತಿಂಗಳೂರಿಗೆ ಆ ಹೆಸರು ಬಂದಿದೆ. ತಮಿಳಿನಲ್ಲಿ ತಿಂಗಳ್ ಎಂದರೆ ಚಂದ್ರ. ಈ ಕುರಿತು ಪುರಾಣದ ಒಂದು ಕಥೆ ಹೀಗಿದೆ: ಅಮೃತಮಥನದ ಬಳಿಕ ವಿಷ್ಣು ಅಮೃತವನ್ನು ದೇವತೆಗಳಲ್ಲಿ ಹಂಚುತ್ತಿರುವ ಅಸುರರಲ್ಲೊಬ್ಬ ದೇವತೆಯ ರೂಪ ಧರಿಸಿ ಅಮೃತವನ್ನು ಸೇವಿಸಿದ. ಇದನ್ನು ಸೂರ್ಯ ಮತ್ತು ಚಂದ್ರರು ಕಂಡು ವಿಷ್ಣುವಿನಲ್ಲಿ ದೂರು ನೀಡಿದರಂತೆ. ಅಮೃತವನ್ನು ಮೋಸದಿಂದ ಸೇವಿಸಿದ ಅಸುರನ ಮೇಲೆ ಕೋಪಗೊಂಡ ವಿಷ್ಣು ತನ್ನ ಚಕ್ರಾಯುಧದಿಂದ ಅಸುರನನ್ನು ಎರಡು ತುಂಡಾಗಿ ಕತ್ತರಿಸಿದನಂತೆ.
ರುಂಡದ ಭಾಗ ಹಾವಿನ ದೇಹಭಾಗದೊಂದಿಗೆ ಒಂದಾಗಿ ರಾಹುವಿನ ರೂಪ ತಳೆಯಿತಂತೆ ಹಾಗೂ ಮುಂಡದಭಾಗ ಅಮೃತ ಸೇವಿಸಿದ್ದ ಕಾರಣ ಬೆಳೆಯುತ್ತಲೇ ಹೋಗಿ ಹಾವಿನ ತಲೆಯನ್ನು ಸೇರಿ ಕೇತುವಿನ ರೂಪ ತಾಳಿತಂತೆ. ಈ ರಾಹು ಕೇತುಗಳಿಗೆ ಸೂರ್ಯ ಮತ್ತು ಚಂದ್ರರ ಮೇಲೆ ಕೋಪ ಮೂಡಿ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿದ್ದರಂತೆ. ಅಂತೆಯೇ ರಾಹು ಚಂದ್ರನನ್ನು ನಿಧಾನವಾಗಿ ನುಂಗಲು ತೊಡಗಿ ಹದಿನೈದು ದಿನಗಳಲ್ಲಿ ಪೂರ್ತಿ ನುಂಗಿತಂತೆ. ಈಗ ಬಿಕ್ಕಟ್ಟಿಗೆ ಸಿಕ್ಕಿಕೊಂಡ ಚಂದ್ರ ಶಿವನ ಮೊರೆ ಹೊಕ್ಕನಂತೆ.
ಚಂದ್ರನ ಮೊರೆ ಆಲಿಸಿದ ಶಿವ ರಾಹು ಚಂದ್ರನನ್ನು ನುಂಗಿದ ಬಳಿಕ ಹದಿನೈದು ದಿನಗಳಲ್ಲಿ ಮತ್ತೆ ಪೂರ್ಣರೂಪ ಧರಿಸಿಕೊಳ್ಳುವ ಶಕ್ತಿಯನ್ನು ದಯಪಾಲಿಸಿದನಂತೆ. ಅಂತೆಯೇ ಪ್ರತಿ ಹದಿನೈದು ದಿನಗಳಿಗೊಮ್ಮೆ ಅಮವಾಸ್ಯೆ ಹುಣ್ಣಿಮೆಗಳು ಜರುಗುತ್ತವೆ. ಅಲ್ಲದೇ ಚಂದ್ರನನ್ನು ತನ್ನ ಶಿಖೆಯಲ್ಲಿ ಧರಿಸಿಕೊಂಡನಂತೆ. ಆದುದರಿಂದ ಚಂದ್ರನನ್ನು ಆರಾಧಿಸಿದವರು ಶಿವನ ಕೃಪೆಗೆ ಒಳಗಾಗುವರು ಎಂಬ ನಂಬಿಕೆಯಿದೆ. *1
ತಮಿಳುನಾಡಿನ ವಿಶಿಷ್ಟ ಶೈಲಿಯಲ್ಲಿ ಕಟ್ಟಲಾದ ಈ ದೇವಾಲಯದ ರಾಜಗೋಪುರ ಐದು ಅಂತಸ್ತುಗಳಷ್ಟು ಎತ್ತರವಿದೆ. ಈ ರಾಜಗೋಪುರವನ್ನು ಎರಡು ಪರ್ಕರ್ಮಗಳು ಸುತ್ತುವರೆದಿವೆ. ಖ್ಯಾತ ತಮಿಳು ಕವಿ ಅಪ್ಪಾರ್ ರವರ ಹಲವು ಸ್ತುತಿಗಳಲ್ಲಿ ಈ ದೇವಾಲಯದ ವರ್ಣನೆಯಿದೆ.
ಶಿವನನ್ನು ಆರಾಧಿಸಿ ಚಂದ್ರದೋಷ ನಿವಾರಣೆಗಾಗಿ ಸಾವಿರಾರು ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಾರೆ. ಕೇವಲ ಚಂದ್ರದೋಷ ಮಾತ್ರವಲ್ಲದೇ ಹಿರಿಯರ ಆರೋಗ್ಯ, ಮಾನಸಿಕ ಅಸಂತುಲತೆ, ಚರ್ಮವ್ಯಾಧಿ, ನರವ್ಯಾಧಿ, ಕಾಮಾಲೆ ರೋಗ ಮೊದಲಾದ ತೊಂದರೆಗಳಿಗೆ ಪರಿಹಾರ ದೊರಕಿಸಿಕೊಳ್ಳಲು ಭಕ್ತರು ಆಗಮಿಸುತ್ತಾರೆ. ಪ್ರತಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪ್ರಸಾದದ ರೂಪದಲ್ಲಿ ಬೆಲ್ಲ, ಬಿಳಿ ಅರಳಿ ಹೂವು ಸೇರಿಸಿದ ಅನ್ನದ ಕಡುಬನ್ನು ನೀಡಲಾಗುತ್ತದೆ. ಅಲ್ಲದೇ ಶಿಶುವಿನ ಪ್ರಥಮ ಆಹಾರವಾಗಿ ’ಅನ್ನ ಪ್ರಾಶನ’ವನ್ನೂ ಈ ದೇವಾಲಯದಲ್ಲಿ ನೆರವೇರಿಸಲಾಗುತ್ತದೆ.