ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ತಲಕಾಡಿನಿಂದ ಅಂದಾಜು 16 ಕಿ.ಮೀ ದೂರದಲ್ಲಿ ಇರುವ ಪ್ರಸಿದ್ಧ ಯಾತ್ರಾ ಸ್ಥಳವಾದ ತಿರುಮಕೂಡಲು ನರಸೀಪುರಕ್ಕೆ ಭೇಟಿ ಕೊಡಬಹುದು. ಈ ಊರು ಪ್ರತಿ ಮೂರು ವರ್ಷಕ್ಕೆ ಒಮ್ಮೆ ನಡೆಯುವ ಕುಂಭ ಮೇಳಕ್ಕಾಗಿ ಪ್ರಸಿದ್ಧಿ ಪಡೆದಿದೆ. ಇದು ದಕ್ಷಿಣ ಭಾರತದಲ್ಲಿ ನಡೆಯುವ ಪ್ರಸಿದ್ಧ ಕುಂಭ ಮೇಳಗಳಲ್ಲಿ ಒಂದಾಗಿದೆ. ಈ ಕುಂಭ ಮೇಳವು ಪ್ರಯಾಗದಲ್ಲಿ ನಡೆಯುವ ಕುಂಭ ಮೇಳದಷ್ಟೆ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಈ ಕ್ಷೇತ್ರವು ದಕ್ಷಿಣ ಕಾಶಿಯೆಂದೆ ಪ್ರಖ್ಯಾತಿ ಪಡೆದಿದೆ.ತಿರುಮಕೂಡಲು ನರಸೀಪುರದಲ್ಲಿನ ಎಲ್ಲಾ ದೇವಾಲಯಗಳಿಗಿಂತ ಯಾತ್ರಾರ್ಥಿಗಳು ಇಲ್ಲಿನ ಸುಪ್ರಸಿದ್ಧ ಗುಂಜಾ ನರಸಿಂಹಸ್ವಾಮಿ ದೇವಾಲಯಕ್ಕೆ ಅತಿ ಹೆಚ್ಚು ಭೇಟಿ ಕೊಡುತ್ತಾರೆ. ಇದು ದ್ರಾವಿಡ ವಾಸ್ತುಶಿಲ್ಪ ಶೈಲಿಯಲ್ಲಿದೆ. ಈ ದೇವಾಲಯವು ಬೃಹತ್ ಗೋಪುರವನ್ನು ಮತ್ತು ನಾಲ್ಕು ಕಂಬಗಳ ಮಂಟಪವನ್ನು ಹೊಂದಿದೆ. ಭಕ್ತಾದಿಗಳು ಗುಂಜಾ ನರಸಿಂಹಸ್ವಾಮಿಯ ವಾರ್ಷಿಕ ರಥೋತ್ಸವಕ್ಕೆ ಭಾರಿ ಸಂಖ್ಯೆಯಲ್ಲಿ ಸೇರುತ್ತಾರೆ.ತಿರುಮಕೂಡಲು ನರಸೀಪುರವು ತನ್ನ ಧಾರ್ಮಿಕ ಕೇಂದ್ರಗಳು ಮತ್ತು ಕಥೆಗಳ ಜೊತೆಗೆ ಪ್ರಾಚ್ಯ ವಸ್ತುಗಳ ದೃಷ್ಟಿಯಿಂದಲು ಮಹತ್ವ ಪೂರ್ಣವಾಗಿದೆ. ನವಶಿಲಾಯುಗದ ಹಲವು ಪಳೆಯುಳಿಕೆಗಳು ಈ ಪಟ್ಟಣದಲ್ಲಿ ಮತ್ತು ಸಮೀಪದ ಪ್ರದೇಶಗಳಲ್ಲಿ ದೊರೆತಿವೆ. ಈ ಪಟ್ಟಣದಲ್ಲಿ ಉತ್ಖನನ ನಡೆಸಿ ಸಮಾಧಿಯ ಅವಶೇಷಗಳು, ಮಡಿಕೆಗಳು, ಚಿತ್ರಗಳು, ಕಲ್ಲಿನ ಸಲಕರಣೆಗಳು, ಲೋಹದ ವಸ್ತುಗಳು, ಗುಂಡುಗಳು ಮತ್ತು ಬಳೆಗಳು, ಪ್ರಾಣಿಗಳ ಅವಶೇಷಗಳು, ಮನುಷ್ಯನ ಅವಶೇಷಗಳು ಮತ್ತು ಮರದ ಅವಶೇಷಗಳನ್ನು ಹೊರತೆಗೆಯಲಾಗಿದೆ.