ತಲಕಾಡಿಗೆ ಪ್ರವಾಸ ಹೊರಟವರು ಒಮ್ಮೆ ಸೋಮನಾಥಪುರಕ್ಕೆ ಬೇಟಿಕೊಡಬಹುದು. ಈ ಊರು ಕಾವೇರಿ ತೀರದಲ್ಲಿ ನೆಲೆಗೊಂಡಿದ್ದು, ಶ್ರೀ ವೇಣುಗೋಪಾಲ ಸ್ವಾಮಿ ಮತ್ತು ಶ್ರೀ ಚೆನ್ನಕೇಶವ ದೇವಾಲಯಗಳೆಂಬ ಎರಡು ದೇವಾಲಯಗಳಿಂದಾಗಿ ಹೆಸರುವಾಸಿಯಾಗಿದೆ. ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಹೊಯ್ಸಳರ ಅರಸ ನರಸಿಂಹನಿಂದ 1296ರಲ್ಲಿ ನಿರ್ಮಾಣಗೊಂಡಿತು. ಚೆನ್ನಕೇಶವ ದೇವಾಲಯ ಅಥವಾ ಕೇಶವ ದೇವಾಲಯವೆಂದು ಪ್ರಸಿದ್ಧವಾಗಿರುವ ಇನ್ನೊಂದು ದೇವಾಲಯವು ಹೊಯ್ಸಳರ ದೊರೆ ಮೂರನೆ ನರಸಿಂಹನ ದಂಡನಾಯಕನಾಗಿದ್ದ ಸೋಮನಾಥನೆಂಬುವನಿಂದ 1268ರಲ್ಲಿ ನಿರ್ಮಾಣಗೊಂಡಿತು.ಚೆನ್ನಕೇಶವ ದೇವಾಲಯವು ಮೂರು ನಕ್ಷತ್ರಾಕಾರದ ವೇದಿಕೆಯ ಮೇಲೆ ನೆಲೆಗೊಂಡಿದೆ. ಇದನ್ನು ತ್ರಿಕೂಟಾಚಲ ಎಂದು ಸಹಾ ಕರೆಯುತ್ತಾರೆ. ಭಕ್ತಾದಿಗಳು ದೇವಾಲಯ ಪ್ರವೇಶಿಸುವಾಗ ಸ್ತಂಭಗಳಿರುವ ಹಜಾರದಲ್ಲಿ ಹಾಯ್ದು ಬರಬೇಕು. ಅದು ಅವರನ್ನು ಮೂರು ನಕ್ಷತ್ರಾಕಾರದ ಪವಿತ್ರ ಗರ್ಭಗುಡಿಗಳಿಗೆ ಕರೆದೊಯ್ಯುತ್ತದೆ. ಇಡೀ ದೇವಾಲಯವು ಶಿಲ್ಪಕಲೆಯ ಸಿಂಗಾರದಿಂದ ಕಂಗೊಳಿಸುತ್ತಿದೆ. ಕೇಶವ ದೇಗುಲದ ಪ್ರತಿ ಗೋಡೆಗಳು ದೇವಾನುದೇವತೆಗಳ, ಸಂಗೀತಗಾರರ, ಸಿಂಹಗಳ, ವಾನರರ, ಆನೆಗಳ, ನರ್ತಕಿಯರ ಮತ್ತು ಗುರುಗಳ ಶಿಲ್ಪಗಳಿಂದ ಕೆತ್ತಲ್ಪಟ್ಟಿದೆ. ಸೋಮನಾಥಪುರದ ಕೇಶವ ದೇಗುಲವು 64 ತೆರೆದ ಸಣ್ಣ ಕೋಣೆಗಳಿಂದ ಆವೃತ್ತವಾಗಿದೆ. ಈ ದೇವಾಲಯದ ಗರ್ಭಗುಡಿಗಳಲ್ಲಿ ಮೂಲತಃ ವೇಣುಗೋಪಾಲ, ಜನಾರ್ಧನ ಮತ್ತು ಕೇಶವ ಸ್ವಾಮಿಗಳ ಕೆತ್ತಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಪ್ರಸ್ತುತ ಇಲ್ಲಿನ ಕೇಶವ ಮೂರ್ತಿಯು ಕಾಣೆಯಾಗಿದ್ದು ಇತರ ಎರಡು ವಿಗ್ರಹಗಳು (ವೇಣುಗೋಪಾಲ ಮತ್ತು ಜನಾರ್ಧನ) ಈಗಲು ಕಾಣಬಹುದು.