ಅಲಕಾನಂದ ನದಿಯ ಉಪನದಿಯಾದ ಮಂದಾಕಿನಿಯು ಚಾರಬರಿ ಗ್ಲೇಸಿಯರ್(ಮಂಜುಗಡ್ಡೆ/ಹಿಮನದಿ)ಪ್ರದೇಶದಲ್ಲಿ ಉಗಮಗೊಳ್ಳುತ್ತದೆ. ನಂತರ ಮುಂದೆ ಹರಿದು ವಾಸುಕಿ ಗಂಗಾ ನದಿಯನ್ನು ಸೋನಪ್ರಯಾಗದಲ್ಲಿ ಸೇರಿಸಿಕೊಂಡು ಹರಿದು ಸಾಗಿ ರುದ್ರಪ್ರಯಾಗದಲ್ಲಿ ಅಲಕಾನಂದ ನದಿ ಸೇರುತ್ತದೆ. ಇವೆಲ್ಲವೂ ಸೇರಿ ಮುಂದೆ ಹರಿದು ದೇವಪ್ರಯಾಗದಲ್ಲಿ ಬಾಗೀರಥಿ ನದಿಯನ್ನು ಸೇರುತ್ತವೆ.
ಈ ಬಾಗೀರಥಿ ನದಿ ಮುಂದೆ ಧಾರ್ಮಿಕ ಪ್ರಸಿದ್ಧ ಗಂಗೆಯನ್ನು ಸೇರುತ್ತದೆ. ಮಂದಾಕಿನಿ ನದಿಯು ಮುಖ್ಯವಾಗಿ ಮೂರು ಹಂತದ ತಗ್ಗು ಪ್ರದೇಶದಲ್ಲಿ ಧುಮುಕುತ್ತದೆ. ಕೆಲ ಭಾಗದಲ್ಲಿ ನಾಲ್ಕು ಹಾಗೂ ಐದು ಹಂತಗಳೂ ಆಗುತ್ತವೆ. ಇದು ಪ್ರವಾಸಿಗರಿಗೆ ಕಾಯ್ಕಿಂಗ್ ಹಾಗೂ ರಾಫ್ಟಿಂಗ್ಗೆ ಅನುಕೂಲ ಮಾಡಿಕೊಡುತ್ತದೆ. ಕೇದಾರನಾಥ ದೇವಾಲಯದ ಹಿಂಭಾಗ ಒಂದು ಚಿಕ್ಕ ಸೇತುವೆ ನಿರ್ಮಾಣವಾಗಿದೆ. ಇದು ಇದೇ ಮಂದಾಕಿನಿ ನದಿ ದಾಟುವುದಕ್ಕಾಗಿ ನಿರ್ಮಿಸಲಾಗಿದೆ.