ರಾಮಕೃಷ್ಣ ಮಠವು ಹೈದರಬಾದಿನ ದೋಮಲಗುಡ ಪ್ರದೇಶದಲ್ಲಿರುವ ಲೋವರ್ ಟ್ಯಾಂಕ್ ಬಂಡ್ ರಸ್ತೆಯಲ್ಲಿದೆ. 1974ರಲ್ಲಿ ಸ್ಥಾಪನೆಯಾದ ಈ ಮಠವು ಇಂದಿಗು ಲಕ್ಷಾಂತರ ಭಕ್ತಾಧಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಮಠವು ಕೇವಲ ಪೂಜಾಸ್ಥಳವಾಗಿಯಷ್ಟೆ ಅಲ್ಲದೆ, ವಿವೇಕಾನಂದ ಇನ್ಸಿಟ್ಯೂಟ್ ಆಫ್ ಹ್ಯೂಮನ್ ಎಕ್ಸೆಲೆನ್ಸ್, ವಿವೇಕಾನಂದ ಗ್ರಂಥಾಲಯ, ಗೀತಾ ದರ್ಶನ್, ವಿವೇಕಾನಂದ ಯೂನಿವರ್ಸಲ್ ದೇವಾಲಯ ಮತ್ತು ಇತ್ಯಾದಿ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸಿಕೊಂಡು ಬರುತ್ತದೆ. ರಾಮಕೃಷ್ಣ ಮಠದ ಭಕ್ತಾಧಿಗಳು ಮಾನವೀಯತೆಯಿಂದ ಇನ್ನಿತರ ಮಾನವರಿಗೆ ಸೇವೆ ಸಲ್ಲಿಸಲು ತಮ್ಮ ಕೈಲಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತ ಬಂದಿದ್ದಾರೆ.
ಇಲ್ಲಿ ಬಡಬಗ್ಗರಿಗೆ ಅನ್ನದಾನ, ಮಕ್ಕಳಿಗೆ ಶಿಕ್ಷಣ, ಉಚಿತ ನೋಟ್ ಪುಸ್ತಕ ಹಾಗು ಉಪಾಹಾರ ನೀಡುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಆ ಮೂಲಕ ಸ್ವಾಮಿ ವಿವೇಕಾನಂದರು ಬೋಧಿಸಿದ " ವಿದ್ಯಾದಾನ, ಅನ್ನದಾನ ಮತ್ತು ಙ್ಞಾನ ದಾನ " ದ ನಿಯಮಗಳನ್ನು ಈ ಮಠವು ತಪ್ಪದೆ ಪಾಲಿಸುತ್ತಿದೆ. ಈ ಮಠವು ಬಡವರನ್ನು ಕೇವಲ ಶೈಕ್ಷಣಿಕವಾಗಿ ಸಬಲೀಕರಣಗೊಳಿಸುತ್ತಿಲ್ಲ. ಅದರೊಂದಿಗೆ ಅವರನ್ನು ಆಧ್ಯಾತ್ಮಿಕವಾಗಿ ಮತ್ತು ಮಾನಸಿಕವಾಗಿಯು ಸಬಲೀಕರಣಗೊಳಿಸುತ್ತಿದೆ. ಈ ಮಠವು ಯಾವುದೇ ಜಾತಿ , ಮತ, ಧರ್ಮಗಳ ಬೇಧವಿಲ್ಲದೆ ಪ್ರತಿಯೊಬ್ಬರನ್ನು ರಾಮಕೃಷ್ಣರ ತತ್ವ ಮತ್ತು ಸಿದ್ದಾಂತಗಳಿಗೆ ಅನುಯಾಯಿಗಳಾಗಿ ಪಾಲ್ಗೊಳ್ಳಲು ಮುಕ್ತ ಆಹ್ವಾನವನ್ನು ನೀಡುತ್ತಿದೆ. ಈ ಮಠದಲ್ಲಿ ನಡೆಯುವ ಅನೇಕ ಸೇವಾ ಕಾರ್ಯಗಳಲ್ಲಿ ಸಹಸ್ರಾರು ಸ್ವಯಂ ಸೇವಕರು ಸ್ವ ಇಚ್ಛೆಯಿಂದ ಇಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.


Click it and Unblock the Notifications