ಪುರಾಣದ ಪ್ರಕಾರ, ಒಂದೊಮ್ಮೆ ಶ್ರೀಕೃಷ್ಣನು ಅಸಿತನೆಂಬ ಕೋಣದ ರೂಪವಿದ್ದ ರಾಕ್ಷಸನನ್ನು ಸಂಹರಿಸುತ್ತಾನೆ. ಇದನ್ನರಿತ ರಾಧೆಯು ಶ್ರೀಕೃಷ್ಣನನ್ನು ಕುರಿತು ಹತ್ಯಾ ದೋಷದ ನಿವಾರಣಾರ್ಥವಾಗಿ ಹಲವು ಪವಿತ್ರ ನದಿಗಳನ್ನು ಹೆಸರಿಸಿ ಅಲ್ಲಿ ಪುಣ್ಯಸ್ನಾನ ಮಾಡಬೇಕೆಂದು ಹೇಳುತ್ತಾಳೆ. ರಾಧೆಯ ಈ ಮಾತನ್ನು ಕೇಳಿ ನಕ್ಕ ಶ್ರೀಕೃಷ್ಣ ನಿಂತ ಜಾಗದಲ್ಲೆ ಭೂಮಿಯನ್ನು ತುಳಿಯುತ್ತಾನೆ. ರಾಧಾ ಹೇಳಿದ ಎಲ್ಲಾ ನದಿಗಳ ನೀರು ಒಂದು ಪುಷ್ಕರಣಿ ರೂಪ ಪಡೆಯುತ್ತದೆ. ಅದರಲ್ಲಿ ಶ್ರೀಕೃಷ್ಣ ಸ್ನಾನ ಮಾಡುತ್ತಾನೆ. ಅದಕ್ಕಾಗಿ ಈ ಪುಷ್ಕರಣಿಯನ್ನು ಶ್ಯಾಮ್ ಕುಂಡ್ ಎಂದು ಕರೆಯುತ್ತಾರೆ.
ಕೃಷ್ಣನ ಈ ಅವತಾರನ್ನು ಕಂಡು ರಾಧೆ ಕೋಪಿತಳಾಗುತ್ತಾಳೆ. ಅವಳು ತನ್ನ ಸಖಿಯರು ಮತ್ತು ಗೋಪಿಕೆಯರ ಜೊತೆ ಸೇರಿ, ಭೂರಂಧ್ರಮಾಡಿ ಅದರಲ್ಲಿ ತಮ್ಮ ಬಳೆಗಳನ್ನು ತುಂಬಿಸಿ ಅದರಲ್ಲಿ ಮಾನಸಿಗಂಗಾದ ನೀರನ್ನು ತುಂಬಿಸುತ್ತಾರೆ. ಅದಕ್ಕಾಗಿಯೇ ರಾಧಾ ಕುಂಡ್ ಅಥವಾ ರಾಧಾ ಪುಷ್ಕರಣಿ ಎನ್ನಲಾಗುತ್ತದೆ, ಇದು ಗೋವರ್ಧನದ ಬಳಿಯಲ್ಲಿದೆ.
ಗೋವರ್ಧನ್ ನಿಂದ ಐದು ಕಿಲೋಮೀಟರ್ ದೂರದಲ್ಲಿರುವ ಇದು, ಭಾರೀ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ಅದರಲ್ಲೂ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಿರುತ್ತದೆ. ಅಲ್ಲದೇ ಈ ಸಮಯದಲ್ಲಿ ವಾರ್ಷಿಕ ಕಾರ್ಯಕ್ರಮಗಳೂ ನಡೆಯುತ್ತದೆ. ಈ ಪವಿತ್ರ ಪುಷ್ಕರಣಿಯಲ್ಲಿ ಮಿಂದರೆ ಎಲ್ಲ ಪಾಪಗಳು ನಾಶವಾಗುತ್ತವೆ ಎಂದು ಭಕ್ತರ ಅಪಾರವಾದ ನಂಬಿಕೆ.