11 ನೇ ಶತಮಾನದಲ್ಲಿ ನಿರ್ಮಾಣವಾದ ವೀರನಾರಾಯಣ ದೇವಸ್ಥಾನವು ಗದಗಿನಲ್ಲಿರುವ ಅತ್ಯಂತ ಪ್ರಮುಖ ಧಾರ್ಮಿಕ ತಾಣ. ಮಹಾ ವಿಷ್ಣು ಅಥವಾ ನಾರಾಯಣನಿಗೆ ಈ ದೇವಸ್ಥಾನವು ಅರ್ಪಿತವಾಗಿದೆ. ಯುದ್ಧಕ್ಕೆ ಹೊರಟು ನಿಂತ ಭಂಗಿಯಲ್ಲಿ ಇಲ್ಲಿನ ದೇವರ ವಿಗ್ರಹವಿದೆ. ವೀರನಾರಾಯಣನ ಮೂರ್ತಿಯು ಧೋತಿಯನ್ನು ಉಟ್ಟು, ಚಕ್ರ, ಶಂಖ, ಗಧೆ ಮತ್ತು ಪದ್ಮವನ್ನು ತನ್ನ ನಾಲ್ಕೂ ಕೈಗಳಲ್ಲಿ ಹಿಡಿದು ಯುದ್ಧ ನಿರತ ಭಂಗಿಯಲ್ಲಿದೆ. ಪ್ರವಾಸಿಗರು ಲಕ್ಷ್ಮಿ ಮತ್ತು ಗರುಡ ಮೂರ್ತಿಯನ್ನು ಮುಖ್ಯ ದೇವರ ವಿಗ್ರಹದ ಅಕ್ಕಪಕ್ಕದಲ್ಲಿ ಕಾಣಬಹುದು.
ಈ ದೇವಸ್ಥಾನವನ್ನು ಇತಿಹಾಸದಲ್ಲಿ ಆಸಕ್ತಿ ಮತ್ತು ಧಾರ್ಮಿಕ ಪ್ರಜ್ಞೆಯಿರುವ ಪ್ರವಾಸಿಗರು ನೋಡಬಹುದು. ಪಂಚ ನಾರಾಯಣ ಕ್ಷೇತ್ರಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ. 1117ರಲ್ಲಿ ಹೊಯ್ಸಳ ರಾಜ ಬಿಟ್ಟಿದೇವನಿಂದ ನಿರ್ಮಿತವಾಗಿದೆ. ಈ ದೇವಸ್ಥಾನವನ್ನು ಕಟ್ಟಿದ ನಂತರ ವಿಷ್ಣುವರ್ಧನ ಎಂದು ಹೆಸರು ಬದಲಿಸಿಕೊಂಡು ಶ್ರೀ ರಾಮಾನುಜಾಚಾರ್ಯರ ಪ್ರಭಾವದಿಂದಾಗಿ ಜೈನ ಮತದಿಂದ ವೈಷ್ಣವ ಪಂಥಕ್ಕೆ ಮತಾಂತರಗೊಂಡಿದ್ದ. ಕುಮಾರವ್ಯಾಸ ಇದೇ ದೇವಸ್ಥಾನದಲ್ಲಿ ಕುಳಿತು ಮಹಾಭಾರತವನ್ನು ಕನ್ನಡದಲ್ಲಿ ಬರೆದ ಎಂದು ಹೇಳಲಾಗುತ್ತದೆ.
ವೀರನಾರಾಯಣ ದೇವಸ್ಥಾನದಲ್ಲಿ ವಿವಿಧ ರೀತಿಯ ವಾಸ್ತುಶಿಲ್ಪಗಳಿವೆ. ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರದ ವಾಸ್ತುಶಿಲ್ಪದ ಸಮ್ಮಿಶ್ರಣವಿದು. ದೇವಸ್ಥಾನದ ಪ್ರವೇಶದ್ವಾರದಲ್ಲಿರುವ ರಂಗ ಮಂಟಪ ವಿಜಯನಗರ ಶೈಲಿಯದ್ದು. ಗರುಡ ಸ್ತಂಭವು ಹೊಯ್ಸಳ ಶೈಲಿಯದ್ದು. ಒಳ ಮಂಟಪ, ಗರ್ಭಗುಡಿ ಮತ್ತು ಮುಖ್ಯ ಗೋಪುರಗಳು ಚಾಲುಕ್ಯರ ಶೈಲಿಯ ವಾಸ್ತುಶಿಲ್ಪ.