ವೆಂಕಟೇಶ್ವರ ಬೇಡಿದ್ದೆಲ್ಲವನ್ನು ಕರುಣಿಸುವವನಾದರೆ ಆತನ ಪತ್ನಿಯಾದ ಲಕ್ಷ್ಮಿ ದೇವಿಯು ಐಶ್ವರ್ಯ ಭಾಗ್ಯವನ್ನು ನೀಡುವಾಕೆ. ತಿರುಪತಿಯಲ್ಲಿ ವೆಂಕಟೇಶ್ವರ ನೆಲೆಸಿದ್ದರೆ, ಕೋಲಾಪುರದಲ್ಲಿ ಮಹಾಲಕ್ಷ್ಮೀ ದೇವಾಲಯವಿದೆ. ಆದರೆ ಇವೆರಡಕ್ಕೂ ನಿಮಗೆ ಹೋಗಲು ಆಗುತ್ತಿಲ್ಲವೆಂದಾದಲ್ಲಿ ನೀವು ರಾಯಚೂರಿಗೆ ಹೋಗಬಹುದು. ರಾಯಚೂರಿನಲ್ಲಿ ನಿಮಗೆ ವೆಂಕಟೇಶ್ವರ ಹಾಗೂ ಮಹಾಲಕ್ಷ್ಮೀ ಇಬ್ಬರೂ ಒಂದೇ ದೇವಸ್ಥಾನದಲ್ಲಿ ಕಾಣಸಿಗುತ್ತಾರೆ.

ರಾಯಚೂರಿನ ಕಲ್ಲೂರು
ಲಕ್ಷ್ಮಿ ದೇವಿಯು ವೆಂಕಟೇಶ್ವರನ ಸಮೇತನಾಗಿ ನೆಲೆಸಿರುವ ಒಂದು ಅಪರೂಪದ ಸ್ಥಳ ನಮ್ಮ ಕರ್ನಾಟಕದಲ್ಲಿ ಕಂಡುಬರುತ್ತದೆ. ಅದೆ ಕಲ್ಲೂರು ಶ್ರೀಕ್ಷೇತ್ರ. ರಾಯಚೂರು ಜಿಲ್ಲೆಯಲ್ಲಿ ತುಂಡಾದ ಕಲ್ಲುಗಳ ಬೆಟ್ಟಗಳಿಂದ ಕೂಡಿರುವ ಗ್ರಾಮವಿದೆ ಇದನ್ನು ಕಲ್ಲೂರು ಎನ್ನಲಾಗುತ್ತದೆ. ಬೇಡಿದ ವರವನ್ನು ಕರುಣಿಸುವ ಮಹಿಮಾನ್ವಿತೆ ಇಲ್ಲಿದ್ದಾಳೆ. ಇಲ್ಲಿಗೆ ಬಂದ ಭಕ್ತರಿಗೆ ಯಾವತ್ತೂ ನಿರಾಸೆಯಾಗೋದಿಲ್ಲ ಎನ್ನುವುದು ಜನರ ನಂಬಿಕೆ.

ಕಲ್ಲೂರು ಮಹಾಲಕ್ಷ್ಮಿ
PC: Ayushman India
ಕಲ್ಲೂರು, ಕಲ್ಲೂರು ಮಹಾಲಕ್ಷ್ಮಿಯಿಂದಾಗಿಯೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿಯಾಗಿದೆ. ಈ ಲಕ್ಷ್ಮಿ ದೇವಿಯು ಕೊಲ್ಲಾಪುರ ಮಹಾಲಕ್ಷ್ಮಿಯ ಸಾಕ್ಷಾತ್ ಅವತಾರವೆ ಆಗಿದ್ದಾಳೆ. ಸಾಣೆ ಕಲ್ಲಿನಲ್ಲಿ ಒಡಮೂಡಿದ ಲಕ್ಷ್ಮಿ ದೇವಿಯ ವಿಗ್ರಹವು ನೋಡಲು ಆಕರ್ಷಕವಾಗಿರುವುದಷ್ಟೆ ಅಲ್ಲದೆ ಅತ್ಯಂತ ಶಕ್ತಿಶಾಲಿಯೂ ಕೂಡ ಆಗಿದೆ.

ಇಷ್ಟಾರ್ಥ ಸಿದ್ಧಿ
ಮುಖ್ಯವಾಗಿ ಈ ದೇಗುಲಕ್ಕೆ ಸಾಕಷ್ಟು ಜನ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ವಿನಂತಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಏಕೆಂದರೆ ಕಲ್ಲೂರು ಮಹಾಲಕ್ಷ್ಮಿಯು ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ಅಚಲವಾದ ವಿಶ್ವಾಸ ಇಲ್ಲಿನ ಭಾಗದ ಜನರಲ್ಲಿದೆ. ಅದರಂತೆ ಸಾಕಷ್ಟು ಇಷ್ಟಾರ್ಥ ಸಿದ್ಧಿಯಾದ ಉದಾಹರಣೆಗಳು ಸಹ ಇಲ್ಲಿ ದೊರೆಯುತ್ತವೆ.

ಇತಿಹಾಸ
ಸುಮಾರು 300 ವರ್ಷಗಳ ಹಿಂದೆ ಕೋಲಾಪುರ ಮಹಾಲಕ್ಷ್ಮೀಯ ಮಹಾಭಕ್ತರಾಗಿದ್ದ ಲಕ್ಷ್ಮೀಕಾಂತಾಚರ್ ಮನೆಯಲ್ಲಿ ಯಾವುದೇ ಶುಭಕಾರ್ಯವಿದ್ದರೂ ಕೋಲಾಪುರ ಮಹಾಲಕ್ಷ್ಮೀ ದೇವರಲ್ಲಿಗೆ ಹೋಗುತ್ತಿದ್ದರಂತೆ. ಲಕ್ಷ್ಮೀಕಾಂತಾಚಾರ್ಗೆ ಸುಮಾರು ೮೫ ವರ್ಷವಿದ್ದಾಗ ಮನೆಯಲ್ಲಿ ಒಂದು ಶುಭಕಾರ್ಯಕ್ಕೆ ಕೋಲಾಪುರಕ್ಕೆ ಹೋಗಲು ಸಾಧ್ಯವಾಗೋದಿಲ್ಲ.

ಸಾಣೆ ಕಲ್ಲಿನಲ್ಲಿ ದುರ್ಗೇ
PC: MadhwaYuvaParishat
ಕನಸಿನಲ್ಲಿ ಬಂದ ಮಹಾಲಕ್ಷ್ಮೀ ಕ್ಷ್ಮೀ ಕಾಂತಾಚಾರ್ಗೆ ತಾನು ಇಲ್ಲೇ ನೆಲೆಸುವುದಾಗಿ ತಿಳಿಸುತ್ತಾಳೆ. ಅದರಂತೆ ಬೆಳಗ್ಗೆ ಪೂಜೆ ಮಾಡುವಾಗ ದೇವರಕೋಣೆಯಲ್ಲಿದ್ದ ಸಾಣೆ ಕಲ್ಲಿನಲ್ಲಿ ದುರ್ಗೇಯ ಅವತಾರದಲ್ಲಿ ಉದ್ಭವಳಾಗಿದ್ದಾಳೆ.

ತೆಂಗಿನಕಾಯಿ ಹರಕೆ
ಇಷ್ಟಾರ್ಥಗಳನ್ನು ಬೇಡಿ ಕೊಳ್ಳಲು ಅಥವಾ ಹರಕೆ ಹೊತ್ತಲು ಇಲ್ಲಿ ವಿಶೇಷವಾದ ವಿಧಾನವೊಂದನ್ನು ಅನುಸರಿಸಲಾಗುತ್ತದೆ. ಅದಕ್ಕೆ ತೆಂಗಿನಕಾಯಿ ಕಟ್ಟಿಸುವುದು ಎನ್ನಲಾಗುತ್ತದೆ. ಅಂದರೆ ನಿಮಗೆ ಬೇಕಾದ್ದನ್ನು ಬಯಸಿ ಸಂಕಲ್ಪ ಮಾಡಿ, ಅರ್ಚಕರ ಮುಂದೆ ಕುಳಿತು ಕಾಯಿಗಳನ್ನು ಒಪ್ಪಿಸುವುದು. ನಿಮ್ಮ ಪರವಾಗಿ ಕಾಯಿಗಳನ್ನು ದೇಗುಲದ ಛಾವಣಿಯಲ್ಲಿ ಅಲ್ಲಲ್ಲಿ ಜೋಡಿಸಲಾದ ಮೊಳೆಗಳಿಗೆ ದಾರದಿಂದ ಕಟ್ಟಿ ಹಾಕಲಾಗುತ್ತದೆ. ಸಾಮಾನ್ಯವಾಗಿ ಎರಡು ಕಾಯಿಗಳನ್ನು ಮಾತ್ರವೆ ಬಳಸಲಾಗುತ್ತದೆ.

ತೆಂಗಿನಕಾಯಿ ಇಳಿಸಬೇಕು
ಬಯಕೆ ಈಡೇರಿದ್ದಲ್ಲಿ ಖಂಡಿತವಾಗಿಯೂ ನಿಮ್ಮ ಅನುಕೂಲದ ಮೆರೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಕಟ್ಟಿಸಿದ್ದ ಕಾಯಿಯನ್ನು ಇಳಿಸುವ ವಿಧಾನವನ್ನು ಪೂರ್ಣಗೊಳಿಸಬೇಕು. ಈ ಸಂದರ್ಭದಲ್ಲಿ ಮತ್ತೆ ಬಯಸಿದರೆ ಕಾಯಿಯನ್ನು ಇನ್ನೊಮ್ಮೆ ಸಹ ಕಟ್ಟಿಸಬಹುದು. ಮುಖ್ಯವಾಗಿ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಸಕಲ ಇಷ್ಟಾರ್ಥ ಸಿದ್ಧಿಗೊಸ್ಕರ ಕಲ್ಲೂರು ಕ್ಷೇತ್ರಕ್ಕೆ ಜನರು ಭೇಟಿ ನೀಡುತ್ತಾರೆ.

ತಲುಪುವುದು ಹೇಗೆ?
ಕಲ್ಲೂರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ. ರಾಯಚೂರು ನಗರದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿದೆ ಕಲ್ಲೂರು. ರಾಯಚೂರಿನ ಮುಖ್ಯ ಬಸ್ಸು ನಿಲ್ದಾಣದಿಂದ ಕಲ್ಲೂರಿನ ಮೂಲಕವಾಗಿ ಸಾಗುವ ಅನೇಕ ಬಸ್ಸುಗಳು ಪ್ರತಿ 20 ನಿಮಿಷಕ್ಕೊಮ್ಮೆ ದೊರೆಯುತ್ತವೆ. ಅಲ್ಲದೆ ಬಾಡಿಗೆ ಕಾರು ಅಥವಾ ರಿಕ್ಷಾ ಮೂಲಕವೂ ಕಲ್ಲೂರಿಗೆ ತೆರಳಬಹುದಾಗಿದೆ.

ಕಲ್ಲೂರು ಕ್ರಾಸ್
ಬಸ್ಸುಗಳಲ್ಲಿ ತೆರಳಿದಾಗ ನೀವು ಕಲ್ಲೂರು ಕ್ರಾಸ್ ಎಂಬ ಸ್ಥಳದಲ್ಲಿ ಇಳಿಯಬೇಕು. ಇಲ್ಲಿಂದ ಸ್ಥಳೀಯ ರಿಕ್ಷಾ ಮೂಲಕ ಒಂದು ಕಿ.ಮೀ ಗಳಷ್ಟು ಗ್ರಾಮದೊಳಗೆ ತೆರಳಿ ದೇಗುಲವನ್ನು ಮುಟ್ಟಬಹುದು. ಮತ್ತೊಂದು ಮುಖ್ಯವಾದ ಅಂಶವೆಂದರೆ ಕಲ್ಲೂರಿನಲ್ಲಿ ತಂಗಲು ಯಾವುದೆ ವ್ಯವಸ್ಥೆಗಳಿಲ್ಲ. ಅಲ್ಲದೆ ಸಾರ್ವಜನಿಕ ಶೌಚಾಲಯಗಳೂ ಸಹ ಇರುವುದಿಲ್ಲ. ಆದ್ದರಿಂದ ರಾಯಚೂರಿನಲ್ಲೆ ತಂಗಿ ತಿಂಡಿ ತೀರ್ಥ ಇತ್ಯಾದಿಗಳನ್ನು ಮುಗಿಸಿಕೊಂಡು ಕಲ್ಲೂರಿಗೆ ಭೇಟಿ ನೀಡುವುದು ಉತ್ತಮ.


Click it and Unblock the Notifications

















