ಬಂಕೆ ಬಿಹಾರಿ ದೇವಾಲಯವು ಸ್ವಾಮಿ ಹರಿದಾಸರಿಂದ ನಿರ್ಮಾಣಗೊಂಡ ಒಂದು ಹಿಂದೂ ದೇವಾಲಯವಾಗಿದೆ. ಇವರು ಪ್ರಖ್ಯಾತ ಗಾಯಕ ತಾನ್ಸೇನ್ರವರ ಗುರುವಾಗಿದ್ದರು. ಶ್ರೀ ಕೃಷ್ಣನಿಗಾಗಿ ನಿರ್ಮಾಣಗೊಂಡಿರುವ ಮನಮೋಹಕವಾದ ಈ ದೇವಾಲಯವು ರಾಜಸ್ಥಾನಿ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಬಂಕೆ ಎಂದರೆ "ಮೂರು ಭಾಗಗಳಲ್ಲಿ ಬಾಗಿರುವುದು" ಎಂದರ್ಥ. ಬಿಹಾರಿ ಭಾಷೆಯಲ್ಲಿ ಇದಕ್ಕೆ " ಪರಮೋನ್ನತ ಆನಂದಶಾಲಿ" ಎಂದರ್ಥ. ಹೆಸರನ್ನು ಸೂಚಿಸುವಂತೆ ಈ ದೇವಾಲಯದಲ್ಲಿರುವ ಕೃಷ್ಣನ ವಿಗ್ರಹವು ಬಂಕೆ ಭಂಗಿ ಎಂದರೆ ತ್ರಿಭಂಗ ಭಂಗಿಯಲ್ಲಿ ಇದೆ.
ದಂತ ಕತೆಗಳ ಪ್ರಕಾರ ಇಲ್ಲಿನ ಅರ್ಚಕನು ಈ ದೇವಾಲಯದಲ್ಲಿನ ಕೃಷ್ಣನ ವಿಗ್ರಹವನ್ನು ಮೊಘಲರ ದಂಡಯಾತ್ರೆಯ ಅವಧಿಯಲ್ಲಿ ನೆಲ ಮಹಡಿಯಲ್ಲಿ ಅವಿತು ಇಟ್ಟನಂತೆ. ಏಕೆಂದರೆ ಆಗ ಮೊಘಲರು ಹಿಂದೂ ದೇವಾಲಯಗಳ ಮೇಲೆ ಆಕ್ರಮಣ ಮಾಡುತ್ತಿದ್ದರು. ನಂಬಿಕೆಗಳ ಪ್ರಕಾರ ಸ್ವಾಮಿ ಹರಿದಾಸರು ಈ ಸ್ಥಳದ ಮೂಲಕ ಹಾದು ಹೋಗುವಾಗ ಇಲ್ಲಿ ವಿರಮಿಸಲು ನಿರ್ಧರಿಸಿದರಂತೆ. ಹಾಗೆ ಅವರು ವಿರಮಿಸುತ್ತಿದ್ದಾಗ ಕನಸಿನಲ್ಲಿ ಬಂದ ಶ್ರೀ ಕೃಷ್ಣನು ತನ್ನನ್ನು ನೆಲದಡಿಯಿಂದ ಬಿಡುಗಡೆ ಮಾಡೆಂದು ಕೋರಿದನಂತೆ. ಸ್ವಾಮಿ ಹರಿದಾಸರು ನೆಲವನ್ನು ತೋಡಿ ವಿಗ್ರಹವನ್ನು ಹೊರತೆಗೆದರಂತೆ. ನಂತರ ಅದೇ ಸ್ಥಳದಲ್ಲಿ ಒಂದು ದೇವಾಲಯವನ್ನು ನಿರ್ಮಾಣ ಮಾಡಿದರಂತೆ. ಈ ದೇವಾಲಯವು ಹಿಂದೂಗಳಿಗೆ ಪವಿತ್ರವಾದ ದೇವಾಲಯವಾಗಿದೆ. ಹಾಗಾಗಿ ಇಲ್ಲಿಗೆ ಪ್ರತಿದಿನ ಸಾವಿರಾರು ಮಂದಿ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ.